ಉತ್ತರ ಪ್ರದೇಶ ಶಿಕ್ಷಣ ಮಂಡಳಿಯು ತನ್ನ ವಿದ್ಯಾರ್ಥಿಗಳಿಗೆ ಭಾರತದ 50 ಮಹಾಪುರುಷರ ಜೀವನ ಮತ್ತು ಹೋರಾಟದ ಬಗ್ಗೆ ಕಲಿಸಲು ಮುಂದಾಗಿದೆ. ತನ್ನ ಪಠ್ಯಕ್ರಮದಲ್ಲಿ ವಿ.ಡಿ ಸಾವರ್ಕರ್, ದೀನ್ ದಯಾಳ್ ಉಪಾಧ್ಯಾಯ ಸೇರಿದಂತೆ ಇತರ 50 ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಸೇರಿಸಿದೆ. ಆದರೆ ಪಂಡಿತ್ ಜವಾಹರಲಾಲ್ ನೆಹರೂ ಅವರನ್ನು ಪಠ್ಯದಿಂದ ಹೊರಗಿಡಲಾಗಿದೆ.
ನೆಹರೂ ಅವರನ್ನು ಹೊರಗಿಡುವ ನಿರ್ಧಾರವನ್ನು ಸಮರ್ಥಿಸಿಕೊಂಡ ಮಾಧ್ಯಮಿಕ ಶಿಕ್ಷಣ ಸಚಿವರಾದ ಗುಲಾಬ್ ದೇವಿ, “ನೆಹರೂ ಅವರು ದೇಶಕ್ಕಾಗಿ ಸರ್ವೋಚ್ಚ ತ್ಯಾಗ ಮಾಡಿಲ್ಲ. ಆದ್ದರಿಂದ 50 ಮಹಾಪುರುಷರ ಜೀವನ ಚರಿತ್ರೆಗಳ ಪಟ್ಟಿಯಿಂದ ನೆಹರೂ ಅವರನ್ನು ಹೊರಗಿಡಲಾಗಿದೆ” ಎಂದಿದ್ದಾರೆ.
ನಾವು ನಮ್ಮ ಮಹಾನ್ ನಾಯಕರಾದ ಸಾವರ್ಕರ್ ಮತ್ತು ಪಂ ದೀನ್ ದಯಾಳ್ ಉಪಾಧ್ಯಾಯ ಅವರ ಬಗ್ಗೆ ವಿದ್ಯಾರ್ಥಿಗಳಿಗೆ ಕಲಿಸದಿದ್ದರೆ, ನಾವು ಅವರಿಗೆ ಇನ್ನೇನನ್ನು ಕಲಿಸುತ್ತೇವೆ? ನಮ್ಮ ಮಕ್ಕಳಿಗೆ ಭಾರತದ ಮಹಾನ್ ವ್ಯಕ್ತಿಗಳ ಜೀವನ ಮತ್ತು ಹೋರಾಟದ ಬಗ್ಗೆ ಅರಿವು ಮೂಡಿಸುವ ಬದಲು ಭಯೋತ್ಪಾದಕರ ಬಗ್ಗೆ ಹೇಳಬೇಕೇ? ಎಂದು ಸಚಿವರು ಪ್ರಶ್ನಿಸಿದ್ದಾರೆ.
ಮಹಾವೀರ ಸ್ವಾಮಿ, ಮದನ್ ಮೋಹನ್ ಮಾಳವೀಯ, ರಾಜಾ ರಾಮ್ ಮೋಹನ್ ರಾಯ್, ಸರೋಜಿನಿ ನಾಯ್ಡು ಮತ್ತು ನಾನಾ ಸಾಹೇಬ್ ಅವರ ಜೀವನ ಚರಿತ್ರೆಗಳನ್ನು ಸಹ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
“ಈ ವಿಷಯವು ಎಲ್ಲಾ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿದೆ ಮತ್ತು ಅದರಲ್ಲಿ ಉತ್ತೀರ್ಣರಾಗುವುದು ಅವಶ್ಯಕ. ಆದರೆ ಪ್ರೌಢಶಾಲೆ ಮತ್ತು ಮಧ್ಯಂತರ ಪರೀಕ್ಷೆಗಳ ಅಂಕಪಟ್ಟಿಯಲ್ಲಿ ಅಂಕಗಳನ್ನು ಸೇರಿಸಲಾಗುವುದಿಲ್ಲ ಎಂದು ಯುಪಿ ಬೋರ್ಡ್ ಕಾರ್ಯದರ್ಶಿ ದಿಬ್ಯಕಾಂತ್ ಶುಕ್ಲಾ ಹೇಳಿದ್ದಾರೆ.
ಬಿಜೆಪಿ ಪಕ್ಷವು 2022ರ ವಿಧಾನಸಭಾ ಚುನಾವಣೆಗೂ ಮುನ್ನ ತನ್ನ ಪ್ರಣಾಳಿಕೆಯಲ್ಲಿ ಮಹಾಪುರುಷರ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಜೀವನ ಕಥೆಗಳನ್ನು ಶೈಕ್ಷಣಿಕ ಪಠ್ಯಕ್ರಮದಲ್ಲಿ ಸೇರಿಸುವುದಾಗಿ ಭರವಸೆ ನೀಡಿತ್ತು.
ಇದನ್ನೂ ಓದಿ: ಧರ್ಮಸ್ಥಳದ “ನಿರ್ಭಯಾ” ಅತ್ಯಾಚಾರ-ಕೊಲೆ ಕೇಸ್: ಆರೋಪಿ ಸಂತೋಷ್ ರಾವ್ ನಿರ್ದೋಷಿ; ಅಸಲಿ ಅಪರಾಧಿಗಳನ್ನೇಕೆ ಹಿಡಿಯಲಾಗುತ್ತಿಲ್ಲ?!