15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ರಾಜ್ಯಕ್ಕೆ ಬರಬೇಕಿದ್ದ 5,495 ಕೋಟಿ ರೂ. ವಿಶೇಷ ಅನುದಾನಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒಪ್ಪಿಗೆ ನೀಡಲು ನಿರಾಕರಿಸಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಗುರುವಾರ ಜೆಡಿಎಸ್ನ ಕೆ.ಎ ತಿಪ್ಪೇಸ್ವಾಮಿ, ಟಿ.ಎ ಶರವಣ ಅವರ ಪ್ರಶ್ನೆಗಳಿಗೆ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ, ಹಣಕಾಸು ಆಯೋಗದ ಶಿಫಾರಸಿನಂತೆ ಅನುದಾನ ಮತ್ತು ತೆರಿಗೆ ಹಂಚಿಕೆ ಮಾಡಲಾಗುತ್ತದೆ. 2018-19ರಲ್ಲಿ 35,894 ಕೋಟಿ ರೂ. ದೊರೆತಿತ್ತು. ನಂತರ ಪ್ರತಿ ವರ್ಷವೂ ಕಡಿಮೆ ದೊರೆತಿದೆ. ನಾಲ್ಕು ವರ್ಷಗಳ ಹಣಕಾಸಿನ ಸ್ಥಿತಿಗತಿಗೆ ಹೋಲಿಸಿದರೆ ಅದು ತೀರ ಕಡಿಮೆ ಮೊತ್ತ. 14ನೇ ಹಣಕಾಸು ಆಯೋಗದಲ್ಲಿ ರಾಜ್ಯದ ಪಾಲು ಶೇ 4.71 ಇತ್ತು. 15ನೇ ಹಣಕಾಸು ಆಯೋಗದಲ್ಲಿ ಅದು ಶೇ. 3.65ಕ್ಕೆ ಕುಸಿದಿದೆ. ಶೇ 1.06ರಷ್ಟು ಕಡಿಮೆ ನಿಗದಿ ಮಾಡಲಾಗಿದೆ ಎಂದು ವಿವರಿಸಿದ್ದಾರೆ.
15ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ವಿಶೇಷ ಅನುದಾನ ನೀಡುವಂತೆ ರಾಜ್ಯ ಸರ್ಕಾರ ಮಾಡಿದ್ದ ಮನವಿಯನ್ನು ಕೇಂದ್ರ ಪುರಸ್ಕರಿಸಿಲ್ಲ. ಕೇಂದ್ರದ ಮೇಲೆ ಒತ್ತಡ ಹಾಕಲು ರಾಜ್ಯ ನಿರಂತರ ಪ್ರಯತ್ನ ಮಾಡುತ್ತಿದೆ. ಜಿಎಸ್ಟಿಯಲ್ಲೂ ರಾಜ್ಯದ ಪಾಲು ಸಮರ್ಪಕವಾಗಿ ಸಿಗುತ್ತಿಲ್ಲ. ಈ ಕುರಿತು ಹಿಂದಿನ ಬಿಜೆಪಿ ಸರ್ಕಾರ ಧ್ವನಿಯನ್ನೇ ಎತ್ತಲಿಲ್ಲ. ಇದನ್ನು ಹೇಳಿದರೆ ವಿರೋಧ ಪಕ್ಷದ ನಾಯಕರಿಗೆ ಬೇಸರವಾಗುತ್ತದೆ ಎಂದರು.
ರಾಜ್ಯದಿಂದ ಕೇಂದ್ರಕ್ಕೆ ಸಂದಾಯವಾಗುವ ಎಲ್ಲ ರೀತಿಯ ತೆರಿಗೆ ಮಾಹಿತಿ ರಾಜ್ಯ ಸರ್ಕಾರದ ಬಳಿ ಇಲ್ಲ. ನೀಡಬೇಕಿರುವ ಪಾಲನ್ನೂ ಸರಿಯಾಗಿ ನೀಡದಿದ್ದರೆ ಹೇಗೆ? ಉತ್ತರದ ರಾಜ್ಯಗಳಿಗೆ ಹೆಚ್ಚಿನ ನೆರವು ನೀಡಲಾಗಿದೆ. ಕರ್ನಾಟಕಕ್ಕೆ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾರೆ.
16ನೇ ಹಣಕಾಸು ಆಯೋಗದ ಮುಂದೆ ರಾಜ್ಯದ ವಾದ ಸಮರ್ಥವಾಗಿ ಮಂಡಿಸುತ್ತೇವೆ. ವಾದ ಮಂಡನೆಗೆ ಅಗತ್ಯವಾದ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ. ಆಗಿರುವ ತಾರತಮ್ಯ ಸರಿಪಡಿಸಲು ಆಯೋಗಕ್ಕೆ ಕೋರಿಕೆ ಸಲ್ಲಿಸುತ್ತೇವೆ ಎಂದಿದ್ದಾರೆ.
ಅಬಕಾರಿ ಆದಾಯದಲ್ಲಿ ಗಣನೀಯ ಏರಿಕೆಯಾಗಿದೆ. 2022-23ನೇ ಸಾಲಿನಲ್ಲಿ 29,920 ಕೋಟಿ ರೂ. ಬಂದಿದೆ. ವಾಣಿಜ್ಯ ತೆರಿಗೆ ಸೋರಿಕೆ ತಡೆಗೂ ಕ್ರಮ ಕೈಗೊಳ್ಳಲಾಗಿದ್ದು, 1,320 ಕೋಟಿ ರೂ. ವಸೂಲಿ ಮಾಡಲಾಗಿದೆ ಎಂದು ಕಾಂಗ್ರೆಸ್ನ ಎಂ ನಾಗರಾಜು ಅವರ ಪ್ರಶ್ನೆಗೆ ಉತ್ತರಿಸಿದರು.
ಇದನ್ನೂ ಓದಿ; ಶಿವಮೊಗ್ಗ ಕೃಷಿ ವಿವಿ ನೇಮಕಾತಿಯಲ್ಲಿ ರೋಸ್ಟರ್ ವಂಚನೆಯಿಂದ 50 ದಲಿತ ಅಭ್ಯರ್ಥಿಗಳಿಗೆ ಅನ್ಯಾಯ ಆರೋಪ