ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಅಡ್ಡ ಮತದಾನ ಮಾಡಿದ ಹಿಮಾಚಲ ಪ್ರದೇಶದ ಆರು ಮಂದಿ ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ಇಂದು ಘೋಷಿಸಿದ್ದಾರೆ.
“ಕಾಂಗ್ರೆಸ್ ಚಿಹ್ನೆಯ ಮೇಲೆ ಸ್ಪರ್ಧಿಸಿದ್ದ ಆರು ಶಾಸಕರು ಪಕ್ಷಾಂತರ ವಿರೋಧಿ ಕಾನೂನಿನ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ. ಹಾಗಾಗಿ, ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಮಾಚಲ ಪ್ರದೇಶ ವಿಧಾನಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ ಎಂದು ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯಾ ಹೇಳಿದ್ದಾರೆ.
#WATCH | Himachal Pradesh Assembly Speaker Kuldeep Singh Pathania gives details of the judgement.
He says, "All 6 MLAs have been disqualified. They cease to be a member of Himachal Pradesh Legislative Assembly…" pic.twitter.com/92VlEEIEqr
— ANI (@ANI) February 29, 2024
ಕಾಂಗ್ರೆಸ್ ಶಾಸಕ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಹರ್ಷವರ್ಧನ್ ಚೌಹಾಣ್ ಅವರು ಅಡ್ಡ ಮತದಾನ ಮಾಡಿದ್ದ ಆರು ಮಂದಿ ಶಾಸಕರನ್ನು ಪಕ್ಷಾಂತರ ವಿರೋಧಿ ಕಾನೂನಡಿ ವಿಧಾನಸಭೆಯಿಂದ ಅನರ್ಹಗೊಳಿಸುವಂತೆ ಸ್ಪೀಕರ್ಗೆ ಅರ್ಜಿ ಸಲ್ಲಿಸಿದ್ದರು.
ಮಂಗಳವಾರ ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಿದ ಬಳಿಕ ಬಿಜೆಪಿ ಆಡಳಿತವಿರುವ ಹರಿಯಾಣದಲ್ಲಿ ತಂಗಿದ್ದ ಆರು ಮಂದಿ ಕಾಂಗ್ರೆಸ್ ಶಾಸಕರು ನಿನ್ನೆ ವಿಧಾನಸಭೆಗೆ ಆಗಮಿಸಿದ್ದರು. ಈ ವೇಳೆ ಬಿಜೆಪಿ ಶಾಸಕರು ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದರು.
ಸಿಎಂ ಸುಖವಿಂದರ್ ಸಿಂಗ್ ಸುಖು ಬುಧವಾರ ಶಿಮ್ಲಾದಲ್ಲಿ ಎಲ್ಲಾ ಕಾಂಗ್ರೆಸ್ ಶಾಸಕರನ್ನು ‘ಉಪಹಾರ ಸಭೆ’ಗೆ ಕರೆದಿದ್ದರು. ಈ ಸಭೆಗೆ 6 ಮಂದಿ ಗೈರಾಗಿದ್ದರು ಎಂದು ವರದಿಗಳು ಹೇಳಿವೆ.
ಆರು ಶಾಸಕರು ಅಡ್ಡ ಮತದಾನ ಮಾಡುವ ಮೂಲಕ ಬಿಜೆಪಿ ಕಡೆ ವಾಲಿದ್ದರಿಂದ ಹಿಮಾಚಲದ ಕಾಂಗ್ರೆಸ್ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ. ಒಟ್ಟು 68 ಸದಸ್ಯ ಬಲದ ವಿಧಾನಸಭೆಯಲ್ಲಿ ಪ್ರಸ್ತುತ ಕಾಂಗ್ರೆಸ್ 40 ಸ್ಥಾನಗಳನ್ನು ಹೊಂದಿದೆ. ಬಿಜೆಪಿಯ 25 ಶಾಸಕರಿದ್ದಾರೆ. ಉಳಿದ ಮೂರು ಸ್ಥಾನಗಳಲ್ಲಿ ಸ್ವತಂತ್ರ ಶಾಸಕರಿದ್ದಾರೆ. ವಿಧಾನಸಭೆಯಲ್ಲಿ ಬಹುಮತಕ್ಕೆ 35 ಶಾಸಕರ ಬೆಂಬಲ ಬೇಕಿದೆ.
ಸ್ಪೀಕರ್ ಕಚೇರಿಯಲ್ಲಿ ಗೊಂದಲ ಸೃಷ್ಟಿಸಿದ್ದಕ್ಕೆ ನಿನ್ನೆಯಷ್ಟೇ 15 ಮಂದಿ ಬಿಜೆಪಿ ಶಾಸಕರನ್ನು ವಿಧಾನಸಭೆಯಿಂದ ಅಮಾನತ್ತುಗೊಳಿಸಲಾಗಿತ್ತು. ಆ ಬಳಿಕ ಕಾಂಗ್ರೆಸ್ ಸರ್ಕಾರ ರಾಜ್ಯ ಬಜೆಟ್ ಅಂಗೀಕರಿಸಿತ್ತು. ಇದು ಬಿಜೆಪಿ ಸದಸ್ಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
“ಬಿಜೆಪಿ 25 ಶಾಸಕರನ್ನು ಹೊಂದಿದೆ. ರಾಜ್ಯಸಭೆಯ ಮತದಾನದ ನಂತರ ನಮ್ಮ ಬೆಂಬಲಿಗ ಶಾಸಕರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ. ಇದು ಸರ್ಕಾರಕ್ಕೆ ಅಪಾಯವನ್ನುಂಟು ಮಾಡಿದೆ. ಹಾಗಾಗಿ, ಅವರಿಗೆ ಹೇಗಾದರೂ ಮಾಡಿ ಬಜೆಟ್ ಅಂಗೀಕರಿಸಬೇಕಿತ್ತು. ಇಲ್ಲದಿದ್ದರೆ ಸರ್ಕಾರ ಬೀಳುವ ಆತಂಕವಿತ್ತು. ಈ ಕಾರಣಕ್ಕೆ ನಾನು ಸೇರಿದಂತೆ ನಮ್ಮ 15 ಶಾಸಕರನ್ನು ಅಮಾನತು ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಉಳಿಸಲು ನಮ್ಮನ್ನು ಅಮಾನತುಗೊಳಿಸಲಾಗಿದೆ. ನಮ್ಮ ಅಮಾನತು ನಂತರ ಅವರು ಬಜೆಟ್ ಅಂಗೀಕರಿಸಿದ್ದಾರೆ” ಎಂದು ಬಿಜೆಪಿ ಮುಖಂಡ ಜೈರಾಮ್ ಠಾಕೂರ್ ಹೇಳಿದ್ದಾರೆ.
ಇದನ್ನೂ ಓದಿ : ರಾಜ್ಯಸಭೆಯಲ್ಲಿ ಬಹುಮತ ಪಡೆಯುವಲ್ಲಿ ಬಿಜೆಪಿ ನೇತೃತ್ವದ NDA ವಿಫಲ