ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ಜೀವ ಉಳಿಸಿದ ರ್ಯಾಟ್ ಕಾರ್ಯಾಚರಣೆಯ(Rat Miner) ಭಾಗವಾಗಿದ್ದ ವಕೀಲ್ ಹಸನ್ ಅವರ ಮನೆಯನ್ನು ದಿಲ್ಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಬುಧವಾರ ಬೆಳಿಗ್ಗೆ ನೆಲಸಮಗೊಳಿಸಿದೆ.
ಈಶಾನ್ಯ ದಿಲ್ಲಿಯ ಖಜೂರಿ ಖಸ್ ಗ್ರಾಮದಲ್ಲಿ ಜಮೀನಿನ ಒತ್ತುವರಿ ಆರೋಪದಲ್ಲಿ ವಕೀಲ್ ಹಸನ್ ಅವರ ಮನೆಯನ್ನು ತೆರವುಗೊಳಿಸಲಾಗಿದೆ. ಈ ಜಮೀನು ಸರಕಾರಿ ಜಮೀನು ಎಂದು ಡಿಡಿಎ ಹೇಳಿಕೊಂಡಿದೆ.
ಈ ಕುರಿತು ಮಾದ್ಯಮಗಳಿಗೆ ಹೇಳಿಕೆ ನೀಡಿರುವ ಹಸನ್ ಅವರು, ಮನೆ ನೆಲಸಮಗೊಳಿಸುವ ಕುರಿತಂತೆ ಯಾವುದೇ ನೋಟಿಸ್ ದೊರೆತಿಲ್ಲ. ಸಕ್ರಮ ಕಾಲನಿಯಲ್ಲಿ ನಾವು ವಾಸಿಸುತ್ತಿದ್ದೇವೆ. 2012-13ರಲ್ಲಿ ನನ್ನ ಮನೆ ನಿರ್ಮಿಸಿದ್ದೆ. ತೆರವು ವೇಳೆ ನಾನು ಮತ್ತು ನನ್ನ ಪತ್ನಿ ಮನೆಯಲ್ಲಿರಲಿಲ್ಲ. ಡಿಡಿಎ ಅಧಿಕಾರಿಗಳು ಬರುವಾಗ ನಮ್ಮ ಮೂವರು ಮಕ್ಕಳು ಮಾತ್ರ ಮನೆಯಲ್ಲಿದ್ದರು. ಅವರಿಗೆ ತೆರವು ಕಾರ್ಯಾಚರಣೆ ವೇಳೆ ತೊಂದರೆಯಾಗಿದೆ. ಈಗ ಎಲ್ಲಿಗೆ ಹೋಗುವುದೆಂದು ತಿಳಿದಿಲ್ಲ. ನಾನು ಮನೆಯತ್ತ ಬಂದಾಗ ಹತ್ತಿರದ ಠಾಣೆಗೆ ನನ್ನನ್ನು ಕರೆದೊಯ್ಯಲಾಯಿತು. ಅಲ್ಲಿ ನನ್ನ ಫೋನ್ ವಶಪಡಿಸಿಕೊಂಡಿದ್ದಾರೆ. ಬಾಡಿಗೆಗೆ ಮನೆ ಕೂಡ ಈಗ ದೊರೆಯುತ್ತಿಲ್ಲ ಎಂದು ಹಸನ್ ಹೇಳಿಕೊಂಡಿದ್ದಾರೆ.
ಮನೆ ಕೆಡವುವ ಮುನ್ನ ಡಿಡಿಎ ಯಾವುದೇ ನೋಟಿಸ್ ನೀಡಿಲ್ಲ. ನನ್ನ ಮನೆಯನ್ನು ಮಾತ್ರ ನಾನು ಬಹುಮಾನವಾಗಿ ಕೇಳಿದ್ದೆ, ಆದರೆ ಡಿಡಿಎ ಯಾವುದೇ ಸೂಚನೆ ನೀಡದೆ ನನ್ನ ಮನೆಯನ್ನು ಕೆಡವಿದೆ, ಆದರೆ ಈ ಮೊದಲು ಮನೆಯನ್ನು ಮುಟ್ಟುವುದಿಲ್ಲ ಎಂದು ಸರ್ಕಾರ ಭರವಸೆ ನೀಡಿತ್ತು ಎಂದು ಅವರು ಹೇಳಿದರು.
ಈಶಾನ್ಯ ದೆಹಲಿ ಸಂಸದ ಮನೋಜ್ ತಿವಾರಿ ಈ ಕುರಿತು ಪ್ರತಿಕ್ರಿಯಿಸಿದ್ದು, ಹಸನ್ ಅವರಿಗೆ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಪ್ರಯೋಜನ ದೊರೆಯುವಂತೆ ಮಾಡುವುದಾಗಿ ತಿಳಿಸಿದ್ದಾರೆ.
ಟಿಎಂಸಿಯ ರಾಜ್ಯಸಭಾ ಸಂಸದೆ ಸಾಗರಿಕಾ ಘೋಸ್ ಅವರು ಹಸನ್ ಮನೆ ಧ್ವಂಸವನ್ನು ದುರಂತ ಮತ್ತು ನಾಚಿಕೆಗೇಡು ಎಂದು ಬಣ್ಣಿಸಿದ್ದಾರೆ. ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಕ್ಕಿಬಿದ್ದಿದ್ದ 41 ಕಾರ್ಮಿಕರನ್ನು ತನ್ನ ತಂಡದೊಂದಿಗೆ ರಕ್ಷಿಸಿದ ಧೀರ ವಕೀಲ್ ಹಾಸನ್ ಅವರ ಮನೆಯನ್ನು ಕೆಡವಲಾಗಿದೆ. ಒಮ್ಮೆ ಹೀರೋ ಆಗಿದ್ದವರು ಇಂದು ನಿರಾಶ್ರಿತರಾಗಿದ್ದಾರೆ. ನಮ್ಮ ಧೈರ್ಯಶಾಲಿ ನಾಗರಿಕರಿಗೆ ನಾವು ಈ ರೀತಿ ಪ್ರತಿಫಲ ನೀಡುವುದಾ ಎಂದು ಎಂದು ಅವರು ಎಕ್ಸ್ನಲ್ಲಿನ ಪೋಸ್ಟ್ ನಲ್ಲಿ ಪ್ರಶ್ನಿಸಿದ್ದಾರೆ.
ಕಳೆದ ವರ್ಷ ನವೆಂಬರ್ 15ರಂದು ಕುಸಿದ ಸುರಂಗದಿಂದ ಸಿಕ್ಕಿಬಿದ್ದ 41 ಕಾರ್ಮಿಕರನ್ನು ರಕ್ಷಿಸುವ ಎಲ್ಲಾ ಪ್ರಯತ್ನಗಳು ಅಪೇಕ್ಷಿತ ಫಲಿತಾಂಶಗಳನ್ನು ನೀಡದಿದ್ದಾಗ ಹಸನ್ ಅವರ ರ್ಯಾಟ್ ಕಾರ್ಯಾಚರಣೆಯ ತಂಡವನ್ನು ಸಿಲ್ಕ್ಯಾರಾಕ್ಕೆ ಕರೆಸಲಾಯಿತು. ಅವರ ತಂಡವು ಸುರಂಗದಲ್ಲಿ ಸಿಕ್ಕಿಬಿದ್ದಿದ್ದ 41 ಕಾರ್ಮಿಕರನ್ನು ಯಶಸ್ವಿಯಾಗಿ ಸ್ಥಳಾಂತರಿಸಿತ್ತು. ತಮ್ಮ ಅಮೋಘ ಕಾರ್ಯಾಚರಣೆಗೆ ಉತ್ತರಾಖಂಡ ಮುಖ್ಯಮಂತ್ರಿ ಘೋಷಿಸಿದ ಪರಿಹಾರ ಮೊತ್ತವನ್ನು ಸ್ವೀಕರಿಸಲು ಅವರು ನಿರಾಕರಿಸಿದ್ದರು.
उत्तरकाशी में 41 मजदूरों की जान बचाने वाले रेट माइनर वकील हसन के घर को बुलडोजर से तोड़ दिया गया ,
वकील हसन ने देश के लिए इतना कुछ किया और सरकार ने उसका इनाम घर पर बुलडोजर से तोड़कर दिया , pic.twitter.com/vxOz80UjfL
— Nargis Bano (@NargisBano70) February 28, 2024
ಇದನ್ನು ಓದಿ: ‘ಆತ್ಮಸಾಕ್ಷಿಗೂ ದರ ಇದೆಯೇ?’ ಎಂದು ಪೋಸ್ಟ್ ಮಾಡಿ ಪೇಚೆಗೆ ಸಿಲುಕಿದ ಬಿಜೆಪಿ ಶಾಸಕ ಸುರೇಶ್ ಕುಮಾರ್