ನಮ್ಮ ದೇಶದ ವಿಷಯಗಳಲ್ಲಿ ಯಾರೂ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂಬುದು ಈ ದೇಸಿ ಟ್ವಿಟರಿಸ್ಟ್ಗಳ ಯುಎಸ್ಪಿ (Unique Selling Point). ರಿಹಾನ್ನಾ ದೆಹಲಿ ಗಡಿಗಳಲ್ಲಿನ ಬ್ಯಾರಿಕೇಡಿಂಗ್, ಇಂಟರ್ನೆಟ್ ಸ್ಥಗಿತದ ಕುರಿತಾಗಿ ಕಮೆಂಟ್ ಮಾಡಿದ್ದು ಅಷ್ಟೇ. ಅದರ ಹಿಂದಿರುವ ಭೀಕರ ಸತ್ಯ ಅರಗಿಸಿಕೊಳ್ಳದ ಅಂಧಭಕ್ತರು ಟ್ವೀಟ್ಗಳಲ್ಲಿ ರೆಡಿಮೇಡ್ ಉತ್ತರ ಕೊಡುತ್ತಿದ್ದಾರೆ.
ನೀವು ಎಂದಾದರೂ ಈ ಸಚಿನ್ ತೆಂಡೂಲ್ಕರ್ ರಾಜ್ಯಸಭೆಯಲ್ಲಿ ಈ ದೇಶದ ಸಂಕಷ್ಟಗಳ ಬಗ್ಗೆ ಮಾತಾಡಿದ್ದನ್ನು ಕೇಳಿದ್ದೀರಾ? ಅದಿರಲಿ, ಈ ದಾಖಲೆವೀರ ಕ್ರಿಕೆಟಿಗ ಕಲಾಪಗಳಿಗೆ ಹಾಜರಾದದ್ದೇ ಅಪರೂಪ. ಇಂತಹ ಸಚಿನ್ ಕೂಡ ಬರ್ನಿಂಗ್ ಇಶ್ಯೂ ಮೇಲೆ ಟ್ವೀಟ್ ಮಾಡಬೇಕಾಯಿತು!
ಇನ್ನು ಈ ಅಕ್ಷಯಕುಮಾರ್, ಸುನೀಲ್ ಶೆಟ್ಟಿ, ಅಜಯ್ ದೇವಗನ್ ತಮ್ಮ ಸಿನಿಮಾಗಳಲ್ಲಿ ಕೂಡ ರೈತರ ಇಶ್ಯೂ ಹೈಲೈಟ್ ಮಾಡಿದ್ದೆ ಇಲ್ಲ. ಈ ಮೂವರ ಸಿನಿಮಾಗಳ ತಿರುಳುಗಳೂ ಒಂದೇ, ಅಷ್ಟೇ ಕಳಪೆ. ಅಕ್ಷಯಕುಮಾರ್ ಈಗಾಗಲೆ ಬಿಜೆಪಿಯ ’ಪೋಸ್ಟರ್ ಬಾಯ್’ ಎಂಬ ಬಿರುದನ್ನು ಆನಂದಿಸುತ್ತಿರುವ ಮನುಷ್ಯ. ಸೇನೆ, ಧ್ವಜ ಕೆಲವೊಮ್ಮೆ ಪಂಜಾಬಿ ಅಸ್ಮಿತೆಯ ಕಥಾನಕಗಳ ಮೇಲೆ ವರ್ಷಕ್ಕೊಂದು ಬಿಗ್ ಬಜೆಟ್ ಸಿನಿಮಾ ಮಾಡಿ ಅಸ್ತಿತ್ವ ಉಳಿಸಿಕೊಂಡಿರುವ ಸ್ಟಾರ್. ಈತನೂ ಈಗ ರೈತರ ಪರ ಎನ್ನುವಂತೆ, ಸರ್ಕಾರ ಸಮಸ್ಯೆ ಬಗೆಹರಿಸುತ್ತಿದೆ ಎನ್ನುವಂತೆ ಟ್ವೀಟ್ ಮಾಡಿದ್ದಾನೆ. (ಟ್ವೀಟ್ ಮಾಡಿಸಿದ್ದಾರೆ ಎಂದೂ ಓದಿಕೊಳ್ಳಬಹುದು!)
ಅಜಯ್ ದೇವಗನ್ ಮತ್ತು ಸುನೀಲ್ ಶೆಟ್ಟಿ ಈಗ ಸಿನಿಮಾ ನಿರ್ಮಿಸಬಹುದೇ ಹೊರತು ಅವರೇ ಅಭಿನಯಿಸಿದರೆ ಪುಟ್ಟಾಪೂರಾ ಲಾಸ್ ಪಕ್ಕಾ. ’ವಿಮಲ್’ ಎಂಬ ಗುಟ್ಕಾದ ’ರಾಯಭಾರಿ’ ಆಗಿಯಷ್ಟೇ ’ಕೇಸರಿ’ ಸ್ವಾದದ ಬಗ್ಗೆ ಮಾತನಾಡುವ ಅಜಯ್ ದೇವಗನ್, ಮೊದಲ ಸಲ ’ಕೇಸರಿ’ ಪಡೆಯ ಪರವಾಗಿ ಒಂದು ಟ್ವೀಟನ್ನೂ ಮಾಡಬೇಕಾಗಿತು. (ಟ್ವೀಟ್ ಮಾಡಿಸಿದ್ದಾರೆ ಎಂದೂ ಓದಿಕೊಳ್ಳಬಹುದು!)
ಇದನ್ನೂ ಓದಿ: ಅಮೆರಿಕದ ದ್ವಂದ್ವ ನೀತಿ: ಡೆಮಾಕ್ರಸಿಗಾಗಿ ರೈತರಿಗೆ ಬೆಂಬಲ, ಬಂಡವಾಳಶಾಹಿಗಳಿಗಾಗಿ ಕೃಷಿ ಕಾಯ್ದೆಗಳ ಸ್ತುತಿ!
ಭಾರತದ ಶ್ರೀಮಂತ ಅವಿಭಕ್ತ ಕುಟುಂಬಗಳು, ಎನ್ಆರ್ಐಗಳ ಕತೆ-ಚಿತ್ರಕತೆಗಳ ನಿರ್ದೇಶನಕ್ಕೆ ಸಿಮೀತರಾದ ಕರಣ್ ಜೋಹರ್ ಕೂಡ ಭಾರತದ ಒಗ್ಗಟ್ಟಿನ ಕುರಿತು ಟ್ವೀಟ್ ಮಾಡಿದ್ದಾರೆ.
ಚೊಚ್ಚಲ ಮಗುವಿನ ಸಂಭ್ರಮದಲ್ಲಿದ್ದರೆಂದು ಕಾಣುತ್ತದೆ. ಡೌನ್ ಆರ್ಡರ್ನಲ್ಲಿ ಬ್ಯಾಟಿಂಗ್ಗೆ ಇಳಿದ ವಿರಾಟ್ ಕೊಹ್ಲಿ ಸ್ವಲ್ಪ ತಡವಾಗಿ ಇಂತದ್ದೊಂದು ಟ್ವೀಟ್ ಬೌಂಡರಿ ಬೀಸಿದ್ದಾರೆ.
ಗೌತಮ್ ಗಂಭೀರ್ ಈ ಬಗ್ಗೆ ಟ್ವೀಟ್ ಮಾಡಿಲ್ಲ ಅಂತಾ ಕಾಣುತ್ತೆ. ಮೋಸ್ಟ್ಲಿ, ಅವರು ಗಣರಾಜ್ಯ ದಿನದ ಗಲಾಟೆಗೆ ಆಪ್ ಕಾರಣ ಎಂಬ ತಮ್ಮ ಸಂಶೋಧನೆಗೆ ಸಾಕ್ಷ್ಯ ಕಲೆ ಹಾಕುತ್ತಿರಬಹುದು.
ಹೀಗೆ ಇವರೆಲ್ಲ ಒಮ್ಮಿಂದೊಮ್ಮೆಲೆ ತಮ್ಮ ಐಷಾರಾಮಿ ಮಂಪರಿನಿಂದ ಹೊರಬರಲು ರಿಹಾನ್ನಾಳ ಆರು ಪದಗಳ ಟ್ವೀಟ್ ಪುಟಿ ಪುಟಿದು, ಆಕೆಯ ಹಾಡಿನಂತೆ ತೇಲಿ ತೇಲಿ ಬರಬೇಕಾಯಿತು. ಅಷ್ಟಕ್ಕೂ ಇವರೇನೂ ತಾವಾಗಿಯೇ ಟ್ವೀಟ್ ಮಾಡಿದಂತೆ ಕಾಣುತ್ತಿಲ್ಲ. ಬಿಜೆಪಿಯ ಇವರ ’ಉನ್ನತ’ ಹಿತೈಷಿಗಳಿಂದ ಅರ್ಜೆಂಟ್ ಕಾಲ್ ಬಂದ ನಂತರವಷ್ಟೇ ಒಂದು ಟ್ವೀಟ್ ಮಾಡಿ ಮತ್ತೆ ಎಂದಿನಂತೆ ತಮ್ಮ ಮಂಪರಿಗೆ ಜಾರಿದ್ದಾರೆ.
ಹಾಗೆ ನೋಡಿದರೆ, ಬಿಜೆಪಿಯ ಹೊಸ ’ಪೋಸ್ಟರ್ ಗರ್ಲ್’ ಕಂಗನಾ ರಾಣಾವತ್ ಅವರೇ ವಾಸಿ. ಈ ’ಹುಡುಗಿ’ ಸ್ಪಾಂಟೆನಿಯಸ್ ಆಗಿ ರಿಹಾನ್ನಾಗೆ ನೇರಾನೇರ ಪ್ರಶ್ನೆ ಮಾಡಿತ್ತು. ’ರೈತರಲ್ಲ, ಅವರು ಭಯೋತ್ಪಾದಕರು. ಚೀನಾ ಇದರ ಹಿಂದೆ ಇದೆ. ಭಾರತವನ್ನು ದುರ್ಬಲಗೊಳಿಸಿ, ಭಾರತವನ್ನು ತನ್ನ ವಸಾಹತುವನ್ನಾಗಿ ಮಾಡಿಕೊಳ್ಳುವ ಹುನ್ನಾರ ಇಲ್ಲಿದೆ’ ಎಂಬ ಹೊಸ some-ಶೋಧನೆಯನ್ನು ಈ ಚಂದುಳ್ಳಿ ’ಅಂಧಭಕ್ತೆ’ ಮಾಡಿದೆ. ಬಹುಸಮಯ ಪಾಕಿಸ್ತಾನದ ಸುತ್ತಲೆ ಗಿರಕಿ ಹೊಡೆಯುವ sum-ಶೋಧಕ ಅಮಿತ್ ಮಾಳವಿಯನಿಗೆ ಈ ’ಹುಡುಗಿಯನ್ನು’ ನೋಡಿ ನಾಚಿಕೆಯಾಗಬೇಕು!
ಇದನ್ನೂ ಓದಿ: ಹೋರಾಟ ಬೆಂಬಲಿಸಿದ್ದಕ್ಕೆ FIR: ಬೆದರಿಕೆಗೆ ಮಣಿಯಲ್ಲ, ನಾನಿನ್ನೂ ರೈತರ ಪರ ಎಂದ ಗ್ರೇಟಾ ಥನ್ಬರ್ಗ್
ಶಾ ಕೂಡ ಫೀಲ್ಡಿಗೆ!
ಬಂಪರ್ ಬಜೆಟ್ ತಯಾರಿಸಿ ಸುಸ್ತಾಗಿದ್ದ ನಿರ್ಮಲಾ ಸೀತಾರಾಮನ್ ಅವರಿಗೆ, ’ಒನ್ಸ್ ಇನ್ ಎ ಸೆಂಚುರಿ’ ಬಜೆಟ್ ಎಂಬ ಅದಾನಿಯ ಟ್ವೀಟೇ ಟಾನಿಕ್ ಆಗಿ ಒದಗಿ ಬಂದು ಚೇತರಿಕೆ ಕಂಡಿದ್ದರು. ಅವರೂ ಒಂದು ಟ್ವೀಟ್ ಮಾಡಿಯೇ ಬಿಟ್ಟರು. ಕೇಂದ್ರ ಸಚಿವರಾದ ವಿ.ಕೆ.ಸಿಂಗ್, ಕಿಶನ್ ರೆಡ್ಡಿ ಮುಂತಾದವರೆಲ್ಲ ವಿದೇಶಾಂಗ ಸಚಿವಾಲಯದ ಪ್ರಕಟಣೆ ಶೇರ್ ಮಾಡಿ ಎರಡು ಸಾಲು ಗೀಚಿ ಒಗೆದರು.
ಆದರೆ ಮೇಲಿನ ಈ ಎಲ್ಲರ-ಸಿನಿಮಾ, ಕ್ರಿಕೆಟ್ ಮತ್ತು ಪಾಲಿಟಿಕ್ಸ್- ಫಾಲೋವರ್ಗಳ ಸಂಖ್ಯೆ ಒಟ್ಟುಗೂಡಿಸಿದರೂ ರಿಹಾನ್ನಾಳ ಫಾಲೋವರ್ ಸಂಖ್ಯೆ ಮುಂದೆ ಜುಜುಬಿ. ಛೇ, ಇದ್ಯಾಕೋ ಸರಿ ಹೋಗ್ತಿಲ್ಲ ಎಂದು ’ಕ್ರೊನೊಲಜಿ ಸಮಝಿಯೆ’ ಖ್ಯಾತಿಯ ಅಮಿತ್ ಶಾ ಕೂಡ ಟೇಲ್ಎಂಡ್ ಬ್ಯಾಟ್ಸ್ಮನ್ ಆಗಿ ಬಂದು ಗಾಳಿಯಲ್ಲಿ ’ಬ್ಯಾಟು’ ಬೀಸಿದ್ದಾರೆ. (ಅವರು ಬ್ಯಾಟ್ ಬದಲು ದೊಣ್ಣೆ ತಂದಿದ್ದರಂತೆ, ಅದನ್ನು ಅವರ ಕೈಗೆ ಕೊಟ್ಟಿದ್ದು ಜಯ್ ಶಾ ಅಂತೆ!)
ದೊಡ್ಡ ಸಂಖ್ಯೆಯ ಫಾಲೋವರ್ಸ್ ಹೊಂದಿರುವ “ವಿಶ್ವಗುರು” ಮೈದಾನಕ್ಕೆ ಇಳಿದಿದ್ದರೆ ಭಕ್ತಗಣಕ್ಕೆ ರೋಮಾಂಚನ ಆಗುತ್ತಿತ್ತೇನೋ? ಆದರೆ ಈ ವಿಷಯವನ್ನು ಮುಂದಿನ ಮನ್ ಕಿ ಬಾತ್ಗೆ ಸಾಹೇಬರು ರಿಸರ್ವ್ ಮಾಡಿ ಇಟ್ಟಂತಿದೆ. ಗಣರಾಜ್ಯ ದಿನದ ವಿಷಯವನ್ನು ವಾರದ ನಂತರ ಮನ್ ಕಿ ಬಾತ್ನಲ್ಲಿ ಪ್ರಸ್ತಾಪಿಸಿದ್ದು ನೆನೆಪಿದೆಯಲ್ಲ?
ಇದನ್ನೂ ಓದಿ: ’ಮೋದಿ-ಶಾ ನೇರ ಮಾತುಕತೆಗೆ ಬರಲಿ’- ಜಿಂದ್ ಮಹಾಪಂಚಾಯತ್ನ ಮಹಾ ನಿರ್ಣಯ