ರಷ್ಯಾ ಉಕ್ರೇನ್ ಮೇಲೆ ಯುದ್ದ ಸಾರಿದ್ದರಿಂದ ಮೃತಪಟ್ಟ ಕನ್ನಡಿಗ ವಿದ್ಯಾರ್ಥಿ ನವೀನ್ ಗ್ಯಾನಗೌಡರವರ ಪೋಷಕರು ತಮ್ಮ ಮಗನ ಮೃತದೇಹಕ್ಕಾಗಿ ಕಾದು ಕುಳಿತಿದ್ದಾರೆ. ಅದೇ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಪಶ್ಚಿಮದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಮೃತದೇಹ ತರುವುದು ಕಷ್ಟ. ಅದೇ ಜಾಗದಲ್ಲಿ 8-10 ಜನರನ್ನು ಕರೆತರಬಹುದು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಧಾರವಾಡದಲ್ಲಿ ನವೀನ್ ಮೃತದೇಹ ಯಾವಾಗ ಬರಬಹುದು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, “ಮೃತದೇಹ ವಿಮಾನದ ಅತಿ ಹೆಚ್ಚಿನ ಜಾಗವನ್ನು ತೆಗೆದುಕೊಳ್ಳುತ್ತದೆ. ಒಂದು ಮೃತ ದೇಹ ತರುವ ಅದೇ ಜಾಗದಲ್ಲಿ 8-10 ಜನರನ್ನು ಕರೆತರಬಹುದು. ಜೀವಂತ ಇರುವವರನ್ನೆ ಕರೆತರುವುದು ಕಷ್ಟವಾಗಿರುವಾಗ ಮೃತದೇಹ ತರುವುದು ಇನ್ನೂ ಕಷ್ಟ. ಆದರೂ ಭಾರತೀಯ ಸರ್ಕಾರ ಸರ್ವ ಪ್ರಯತ್ನ ಮಾಡುತ್ತಿದೆ. ಸಾಧ್ಯವಾದರ ಮೃತದೇಹ ತರುತ್ತೇವೆ” ಎಂದು ಉತ್ತರಿಸಿದ್ದಾರೆ.
ನವೀನ್ ಮೃತದೇಹ ವಾಪಸ್ ತರಲು ಖುದ್ದು ಪ್ರಧಾನಿಗಳೇ ಶ್ರಮಿಸುತ್ತಿದ್ದಾರೆ. ಅಲ್ಲಿ ಯುದ್ದ ನಡೆಯುತ್ತಿರುವುದು ನಿಮಗೆಲ್ಲಾ ಗೊತ್ತಿದೆ. ವಿದೇಶಾಂಗ ಇಲಾಖೆ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದು ಬೆಲ್ಲದ್ ಹೇಳಿದ್ದಾರೆ.
ಬುಧವಾರ ಎನ್ಡಿಟಿವಿ ಜೊತೆ ಮಾತನಾಡಿದ್ದ ನವೀನ್ ತಂದೆ ಶೇಖರಪ್ಪ ಗ್ಯಾನಗೌಡ “ಇನ್ನೆರೆಡು ದಿನದಲ್ಲಿ ನವೀನ್ ಮೃತದೇಹವನ್ನು ತರಲಾಗುವುದು ಎಂದು ಸರ್ಕಾರ ಭರವಸೆ ನೀಡಿತ್ತು. ನಾನು ಮೃತದೇಹಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕರ್ನಾಟಕ ಸರ್ಕಾರದ ಬಳಿ ಮನವಿ ಮಾಡಿದ್ದೇನೆ” ಎಂದಿದ್ದರು.
ಕರ್ನಾಟಕದ ಹಾವೇರಿ ಮೂಲದ 21 ವರ್ಷದ ನವೀನ್ ಕಾರ್ಕೈವ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದರು. ಬಂಕರ್ನಲ್ಲಿದ್ದ ಅವರು ಟ್ರೈನ್ ಹತ್ತುವ ಮುಂಚೆ ಊಟ ತರುವುದಕ್ಕಾಗಿ ಅಂಗಡಿಗೆ ಹೋದ ಸಂದರ್ಭದಲ್ಲಿ ರಷ್ಯಾ ಸಿಡಿಸಿದ ಶೆಲ್ ದಾಳಿಯಲ್ಲಿ ಮೃತಪಟ್ಟರು ಎಂದು ಆತನ ಸ್ನೇಹಿತ ತಿಳಿಸಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿ ನವೀನ್ ಸಾವಿಗೆ ಭಾರತದ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯೆ ಕಾರಣ: SFI ಆಕ್ರೋಶ