ಹಲಾಲ್ ವಿರುದ್ಧ ಕರಪತ್ರ ಹಂಚಿ ಒಂದು ಸಮುದಾಯದ ವಿರುದ್ಧ ದ್ವೇಷ ಹಬ್ಬಿಸುತ್ತಿರುವ ವಿಶ್ವ ಹಿಂದೂ ಪರಿಷತ್, ಬಜರಂಗದಳದವರು ತಿಳಿಗೇಡಿಗಳು, ಸಮಾಜಘಾತುಕರು. ಅವರಿಗೆ ರೈತರ ಬದುಕು ಗೊತ್ತಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಚಕ್ಕೆರೆ ಗ್ರಾಮದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, “ಬಜರಂಗದಳದವರು ಈಗ ಹಲಾಲ್ – ಜಟ್ಕಾ ಕಟ್ ಎಂಬ ಹೆಸರಿಟ್ಟುಕೊಂಡು ರಾಜಕೀಯ ಮಾಡಲು ಹೊರಟಿದ್ದಾರೆ. ಇವತ್ತು ಅವರು ಹಲಾಲ್ ತೆಗೆದುಕೊಳ್ಳಬೇಡಿ ಎನ್ನುತ್ತಾರೆ. ಅದರ ಬದಲಿಗೆ ಜಟ್ಕಾ ಕಟ್ ತೆಗೆದುಕೊಳ್ಳಿ ಎಂದು ಪ್ರಚಾರ ಮಾಡುತ್ತಿದ್ದಾರೆ. ನಮ್ಮ ರೈತರು ಕಟ್ ಮಾಡುವ ಮಾಂಸ ಕ್ಲೀನ್ ಮಾಡಲು, ಕಟ್ ಮಾಡಲು ಅದೇ ಸಮಾಜದವರೇ ಬರಬೇಕು. ಅವರು ಹಲಾಲ್ ಮಾಡ್ತಾರೊ, ಬಿಡ್ತಾರೊ ಅದು ವಿಷಯವಲ್ಲ. ನಮ್ಮ ರೈತರು ಎಷ್ಟು ಮಾಂಸ ಕಟ್ ಮಾಡುವ ಡಿಮ್ಯಾಂಡ್ ಇದೆ ಅದನ್ನು ಇವರು ಪೂರೈಸುವ ಪರಿಸ್ಥಿತಿಯಲ್ಲಿ ಇಲ್ಲ. ನಿಮ್ಮ ಜಟ್ಕಾ ಕಟ್ ಮಾಡೋಕು, ಇನ್ನೊಂದು ಮಾಡೋಕು ಆ ಸಮುದಾಯದವರೇ ಬೇಕು” ಎಂದರು.
ಈಗ ರೇಷ್ಮೆ, ಮಾವು ಬೆಳೆ ಮಾರಾಟಕ್ಕೂ ಸಹ ಅದೇ ಸಮುದಾಯದವರು ಬರಬೇಕು. ಈ ಬಜರಂಗದಳ ಪೋಲಿಗಳು ಬರ್ತಾವಾ ರೇಷ್ಮೆ ಮತ್ತು ಮಾವು ಖರೀದಿ ಮಾಡಲು? ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಈಗಾಗಲೇ ನಮ್ಮ ರಾಜ್ಯದಲ್ಲಿ ಅಕಾಲಿಕ ಮಳೆಯಿಂದ ಮಾವು ಬೆಳೆ ನಷ್ಟವಾಗಿದೆ. ನಾಳೆ ಮಾವು ಖರೀದಿ ಮಾಡಲು ನಮಗೆ ಅದೇ ಸಮುದಾಯದ ಸಹಕಾರ ಬೇಕು. ಇವು ಯಾವೊ ವಿಶ್ವ ಹಿಂದೂ ಪರಿಷತ್ನವರು, ಬಜರಂಗದಳದವರು ತಮ್ಮ ಹೊಟ್ಟೆಪಾಡಿಗೆ, ದೇಶ ಹಾಳು ಮಾಡೋಕೆ ಇಂತಹ ವಿಚಾರ ಇಟ್ಟುಕೊಂಡು ಹೊರಟಿದ್ದಾರೆ. ಇದಕ್ಕೆಲ್ಲ ನಾನು ಕೇರ್ ಮಾಡುವುದಿಲ್ಲ. ಆದರೆ ರೈತನ ಮಗನಾಗಿ ಇವರನ್ನು ನಂಬಬೇಡಿ, ಇವರು ಸಮಾಜ ಹಾಳು ಮಾಡಲು ಬರುತ್ತಿದ್ದಾರೆ ಎಂದು ರೈತರಿಗೆ ಹೇಳಲು ಬಯಸುತ್ತೇನೆ ಎಂದರು.
ಇಷ್ಟು ವರ್ಷ ಹಲಾಲ್ ಮಾಂಸ ತಿಂದಿದ್ದೇವೆ, ಏನಾಗಿದೆ ನಮಗೆ? ಚೆನ್ನಾಗಿದ್ದೀವಲ್ಲ. ಈಗ ಹಲಾಲ್ ತಿಂದರೆ ತೊಂದರೆ ಆಯ್ತದ? ನಮ್ಮ ದೇವರು ನಮ್ಮನ್ನು ಮೆಚ್ಚಲ್ವ. ಇಷ್ಟು ವರ್ಷ ಹಲಾಲ್ ತಿಂದಾಗ ನಮ್ಮ ಹಿಂದೂ ದೇವರು ಕನಸಲ್ಲಿ ಬಂದು ಇದು ತಪ್ಪು ಎಂದು ಹೇಳಲಿಲ್ಲವಲ್ಲ ಎಂದು ಲೇವಡಿ ಮಾಡಿದರು.
“ಇವರಿಗೆ ಸಂವಿಧಾನದ ಮೇಲೆ ನಂಬಿಕೆಯಿಲ್ಲ. ನನಗೆ ಓಟು ಮುಖ್ಯವಲ್ಲ, ಈ ನಾಡು ಶಾಂತಿಯಿಂದ ಇರಬೇಕು, ನಾಡಿನ ಜನ ನೆಮ್ಮದಿಯಿಂದ ಬದುಕಬೇಕು ಎಂಬುದು ನನ್ನ ಬಯಕೆ. ಕೇಸರಿ ಬಟ್ಟೆ ಹಾಕಿಕೊಂಡು ಹಳ್ಳಿ ಹಳ್ಳಿಗಳಲ್ಲಿ ವಿಷಬೀಜ ಬಿತ್ತಿ ನಮ್ಮ ಜನರ ಬದುಕು ಹಾಳು ಮಾಡುತ್ತಿರುವಾಗ ನಾನು ಮೌನದಿಂದ ಇರುವುದಿಲ್ಲ. ಅಯ್ಯೊ ಹಿಂದುಗಳು ನಮಗೆ ವೋಟು ಹಾಕದಿದ್ರೆ ಎಂಬ ಭಯದಲ್ಲಿ ಕಾಂಗ್ರೆಸ್ನವರಿಗೆ ಈ ವಿಷಯ ಮಾತನಾಡಲು ತಾಕತ್ ಇಲ್ಲ. ಪಾಪಾ ಧೈರ್ಯ ಕಳೆದುಕೊಂಡಿದ್ದಾರೆ ಅವರು. ಆದರೆ ಮತಬ್ಯಾಂಕ್ಗಿಂತ ಹೆಚ್ಚಾಗಿ ನನ್ನ ಜನರ ಬದುಕು ಮುಖ್ಯ ನನಗೆ. ಎಲ್ಲಾ ಸಮಾಜಗಳು ಒಟ್ಟಿಗೆ ಬದುಕಬೇಕು. ಕುವೆಂಪುರವರ ಸಂದೇಶದಂತೆ ಇದು ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಇಲ್ಲಿ ಏಕೆ ಬೆಂಕಿ ಹಚ್ಚಲು ಬಂದಿದ್ದೀರಿ ನೀವು? ಇದನ್ನೆಲ್ಲ ಉತ್ತರ ಪ್ರದೇಶದಲ್ಲಿ ಇಟ್ಟುಕೊಳ್ಳಿ. ನಿಮ್ಮಿಂದ ಈ ರಾಜ್ಯ ಕಟ್ಟಲು ಆಗುವುದಿಲ್ಲ” ಎಂದು ಎಚ್.ಡಿಕೆ ಕಿಡಿಕಾರಿದರು.
ಆಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲದೇ ಜನ ಸತ್ತರು. ಬಿಜೆಪಿ ಸರ್ಕಾರದ ಯೋಗ್ಯತೆಗೆ ಆಸ್ಪತ್ರೆ ನಿರ್ವಹಣೆ ಮಾಡಲು ಅಗಲಿಲ್ಲ. ಆಗ ಎಲ್ಲಿದ್ದರೂ ಈ ವಿಶ್ವ ಹಿಂದೂ ಪರಿಷತ್ – ಭಜರಂಗದಳದವರು? ಎಂದು ಎಚ್ಡಿಕೆ ಪ್ರಶ್ನಿಸಿದರು. ಸಮಾಜ ಒಡೆಯುವ ಶಕ್ತಿಗಳು ಹ್ಯಾಂಡ್ ಬಿಲ್ ಹಂಚುತ್ತಿದ್ದಾರೆ ಇನ್ನು ಸರ್ಕಾರಕ್ಕೆ ಮಾನಮರ್ಯಾದೆ ಇದ್ದರೆ, ಸಿಎಂ ಬೊಮ್ಮಾಯಿಗೆ ಗಂಡಸ್ತನ ಇದ್ದರೆ ಕೂಡಲೆ ಈ ರೀತಿ ಮಾತನಾಡುವವರ ವಿರುದ್ದ ಕ್ರಮ ಕೈಗೊಳ್ಳಬೇಕು. ಏನು ಗೊತ್ತಿಲ್ಲದಂತೆ ಮೌನವಾಗಿರಬಾರದು ಎಂದು ಸವಾಲು ಹಾಕಿದರು.
ನಿಖಿಲ್ ಕುಮಾರಸ್ವಾಮಿ ಮಂಡ್ಯದಿಂದಲೆ ಸ್ಪರ್ಧೆ
ಮುಂದಿನ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿನ ಮಂಡ್ಯದಿಂದಲೇ ಲೋಕಸಭೆಗೆ ಸ್ಪರ್ಧೆ ಮಾಡಿಸುತ್ತೇನೆ. ಮಂಡ್ಯ ಜಿಲ್ಲೆಯ ಜನರು ಮುಂದಿನ ಚುನಾವಣೆಯಲ್ಲಿ ಉತ್ತರ ಕೊಡ್ತಾರೆ. ಇವತ್ತಿನ ಮಂಡ್ಯ ಸಂಸದರ ಹೇಳಿಕೆಗಳು ನೋಡಿದಾಗ ಇದು ನನ್ನ ಮನಸ್ಸಿಗೆ ಬಂದಿದೆ. ಅವತ್ತು ನಮ್ಮ ವಿರುದ್ಧ ಕುತಂತ್ರದ ರಾಜಕಾರಣ ನಡೆಯಿತು. ಕಾಂಗ್ರೆಸ್, ಬಿಜೆಪಿ, ರೈತಸಂಘ ಸೇರಿದ್ದರು. ನನಗೆ ಮಂಡ್ಯ ಜಿಲ್ಲೆಯ ಜನರ ಮೇಲೆ ನಂಬಿಕೆಯಿದೆ ಎಂದು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ತಿಳಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
ಇದನ್ನೂ ಓದಿ; ಹಾಸನ: ಗುರಾಯಿಸಿ ನೋಡಿದ್ದಾಗಿ ಆರೋಪಿಸಿ ದಲಿತ ಯುವಕನಿಗೆ ಮಾರಣಾಂತಿಕ ಹಲ್ಲೆ ಮಾಡಿದ ಸವರ್ಣೀಯರು



ಸಮಾಜಘಾತುಕ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕುಮಾರಣ್ಣನವರು ಹೇಳಿಕೆ ಸತ್ಯವಾದುದು ಕೇಸರಿ ಬಣ್ಣಕ್ಕೆ ಇರುವಂತಹ ಮೌಲ್ಯವನ್ನು ಕೆಲವೊಂದು ಕಿಡಿಗೇಡಿಗಳು ಹಾಳು ಮಾಡುತ್ತಿದ್ದಾರೆ. ಕುಮಾರಣ್ಣನವರ ಈ ಹೋರಾಟಕ್ಕೆ ನಾವೆಲ್ಲರೂ ಧ್ವನಿಗೂಡಿಸಿದ ಸಮರ್ಥಿಸೋಣ ಹಾಗೂ ಕುಮಾರಣ್ಣನವರ ಹೇಳಿಕೆಯ ಪರವಾಗಿ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ವನ್ನು ಪ್ರಾರಂಭಿಸೋಣ.