ಹಣಕಾಸಿನ ವಿಚಾರವಾಗಿ ಪರಸ್ಪರ ದ್ವೇಷದಿಂದ ಸಂಚಿನಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಸೋಮವಾರದಂದು ಬೆಂಗಳೂರಿನ ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ. ಆದರೆ ಕನ್ನಡ ಸುದ್ದಿ ಚಾನೆಲ್ಗಳಾದ ದಿಗ್ವಿಜಯ ನ್ಯೂಸ್ ಮತ್ತು ಪಬ್ಲಿಕ್ ಟಿವಿ ಘಟನೆಗೆ ‘ಕೋಮು ಆಯಾಮ’ವನ್ನು ಸೇರಿಸಿ ಮುಸ್ಲಿಮರ ವಿರುದ್ಧ ದ್ವೇಷ ಹರಡುವ ಹಲವಾರು ವರದಿ ಮಾಡುವ ಮೂಲಕ ‘ಕೋಮು ಗಲಭೆ’ಗೆ ಕುಮ್ಮಕ್ಕು ನೀಡಿವೆ.
ಘಟನೆಯ ವಿವರ
ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಫಯಾಝ್ ಎಂಬುವರು 35 ಲಕ್ಷಕ್ಕೆ ಮನೆಯೊಂದನ್ನು ಮಾರಿದ್ದರು. ಈ ಮನೆಯನ್ನು ಅಝೀಮ್ ಎಂಬ ವ್ಯಕ್ತಿ ಮಾರಾಟ ಮಾಡಿಸಿದ್ದ. ಇದರ ನಂತರ ಮನೆಗೆ 40 ಲಕ್ಷ ನೀಡಬೇಕು ಎಂದು ಫಯಾಝ್ ಹಣಕ್ಕೆ ಬೇಡಿಕೆ ಇಟ್ಟಿದ್ದ. ಹೀಗಾಗಿ ಇಬ್ಬರ ನಡುವೆ ದ್ವೇಷ ಸೃಷ್ಟಿಯಾಗಿತ್ತು. ಈ ಹಿನ್ನಲೆಯಲ್ಲಿ ಫಯಾಝ್, ಮುನಾವರ್ ಮತ್ತು ಅಸ್ಗರ್ ಎಂಬವರು ಸೇರಿ, ಅಝೀಮ್ ಮತ್ತು ಆತನ ಸಂಗಡಿಗರ ವಿರುದ್ದ ದ್ವೇಷದಿಂದ ಸಂಚೊಂದನ್ನು ರೂಪಿಸಿದ್ದರು. ಇದೀಗ ಪೊಲೀಸರು ಮೂವರೂ ಆರೋಪಿಗಳನ್ನು ಬಂಧಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಆರೋಪಿಗಳ ಬಳಿ ಹಲವು ಬಾಟಲ್ಗಳಷ್ಟು ಪೆಟ್ರೋಲ್ ಬಾಂಬ್, ನಾಡಾ ಪಿಸ್ತೂಲ್, ಜೀವಂತ ಗುಂಡು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿಕೊಳ್ಳಲಾಗಿದೆ. ಮೂವರು ಆರೋಪಿಗಳು ಸರಾಯಿ ಪಾಳ್ಯದ ನಿವಾಸಿಗಳು ಎಂದು ವರದಿಯಾಗಿದೆ.
ಕೋಮು ಗಲಭೆಗೆ ಕುಮ್ಮಕ್ಕು ನೀಡಿದ ಪಬ್ಲಿಕ್ ಟಿವಿ ಮತ್ತು ದಿಗ್ವಿಜಯ ಟಿವಿ
ಆರೋಪಿಗಳ ಬಂಧನ ನಡೆಯುತ್ತಿದ್ದಂತೆ ಪಬ್ಲಿಕ್ ಟಿವಿ ತನ್ನ ಒಂದು ವಿಡಿಯೊ ಸುದ್ದಿಯಲ್ಲಿ, “ಬೆಂಗಳೂರಿನಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಗೆ ಸಂಚು. ಹನುಮಾನ್ ಚಾಲಿಸಾಗೆ ಪ್ರತಿಯಾಗಿ ಪೆಟ್ರೋಲ್ ಬಾಂಬ್. ಹಿಂದೂ ದೇವಸ್ಥಾನಗಳ ಮೇಲೆ ಪೆಟ್ರೋಲ್ ಬಾಂಬ್ ಹುನ್ನಾರ. ಹತ್ತು ಬಿಯರ್ ಬಾಟಲಿಗಳಲ್ಲಿ ಪೆಟ್ರೋಲ್ ದಾಳಿಗೆ ಪ್ಲಾನ್ ಮಾಡಿದ್ದಾರೆ” ಎಂದು ಕಪೋಲಕಲ್ಪಿತ ಸುಳ್ಳು ವರದಿ ಮಾಡಿದೆ.
ಇದನ್ನೂ ಓದಿ: ಗಲಭೆಗೆ ಪ್ರಚೋದನೆ: ಪಬ್ಲಿಕ್ ಟಿವಿ ರಂಗನಾಥ್ ವಿರುದ್ಧ ಜಾಮೀನು ರಹಿತ ಕೇಸ್ ದಾಖಲಿಸುವಂತೆ ಕೋರ್ಟ್ ಸೂಚನೆ
ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ಕೂಡಾ, ಯಾವುದೆ ಆಧಾರವಿಲ್ಲದೆ ಕೋಮು ಗಲಭೆಗೆ ಕುಮ್ಮಕ್ಕು ನೀಡುವಂತೆ ಮಾತನಾಡುತ್ತಾ ಮುಸ್ಲಿಂ ದ್ವೇಷ ಹರಡುವಂತೆ ಮಾತನಾಡಿದ್ದಾರೆ. ಅವರು ನಿರೂಪಣೆ ಮಾಡುತ್ತಾ, ಕುರಾನ್, ಹರಾಂ ವಿಚಾರ ಹೇಳುತ್ತಾ, ಘಟನೆಗೆ ಇಡೀ ಮುಸ್ಲಿಂ ಸಮುದಾಯ ಕಾರಣ ಹಾಗೂ ಕೋಮು ಗಲಭೆಗೆ ಅವರೇ ಹೇಳಿಕೊಡುತ್ತಾರೆ ಎಂಬಂತೆ ವೀಕ್ಷಕರನ್ನು ದಾರಿ ತಪ್ಪಿಸಿದ್ದಾರೆ.
ಪಬ್ಲಿಕ್ ಟಿವಿ ಯಾವುದೆ ಆಧಾರವಿಲ್ಲದೆ, ಕೋಮು ದ್ವೇಷ ಹರಡುವ ಇಂತಹ ಹಲವು ವಿಡಿಯೊ ಸುದ್ದಿಗಳನ್ನು ಇದೇ ಪ್ರಕರಣದ ವಿಚಾರವಾಗಿ ಮಾಡಿದೆ. ಅವುಗಳನ್ನು ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಕನ್ನಡ ಮತ್ತೊಂದು ಸುದ್ದಿ ಮಾಧ್ಯಮವಾದ ದಿಗ್ವಿಜಯ ನ್ಯೂಸ್ ಕೂಡಾ ಇದೇ ರೀತಿಯ ಸುದ್ದಿಯನ್ನು ಮಾಡಿದೆ. ಅದನ್ನು ಕೆಳಗೆ ನೋಡಬಹುದು.
ಪೊಲೀಸರು ಹೇಳಿದ್ದೇನು?
ವೈಯಕ್ತಿಕ ದ್ವೇಷ ಹಿನ್ನಲೆಯಲ್ಲಿ ನಡೆದ ಸಂಚನ್ನು ವಿಫಲಗೊಳಿಸಿ ಆರೋಪಿಗಳನ್ನು ಬಂಧಿಸುತ್ತಿದ್ದಂತೆ, ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಘಟನೆಗೆ ಕೋಮು ಆಯಾಮ ನೀಡಿ ಮುಸ್ಲಿಮರ ವಿರುದ್ಧ ದ್ವೇಷ ಹರಡುವಲ್ಲಿ ನಿರತವಾಗಿದ್ದವು. ಈ ವೇಳೆ ಪತ್ರಿಕಾಗೋಷ್ಠಿ ನಡೆಸಿದ ಡಿಸಿಪಿ ಭೀಮಾ ಶಂಕರ್ ಗುಳೇದ್, “ಪ್ರಕರಣವು ವೈಯಕ್ತಿಕ ದ್ವೇಷದ್ದಾಗಿದ್ದು, ಯಾವುದೆ ಕೋಮು ಆಯಾಮದಿಂದ ನಡೆದಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿಸಿಪಿ, “ಫಯಾಝ್ ಎಂಬುವರು 35 ಲಕ್ಷಕ್ಕೆ ಮನೆಯೊಂದನ್ನು ಮಾರಿದ್ದರು. ಈ ಮನೆಯನ್ನು ಅಝೀಮ್ ಎಂಬ ವ್ಯಕ್ತಿ ಮಾರಾಟ ಮಾಡಿಸಿದ್ದ. ಇದರ ನಂತರ ಮನೆಗೆ 40 ಲಕ್ಷ ನೀಡಬೇಕು ಎಂದು ಫಯಾಝ್ ಹಣಕ್ಕೆ ಬೇಡಿಕೆ ಇಟ್ಟಿದ್ದ. ಹೀಗಾಗಿ ಇಬ್ಬರ ನಡುವೆ ದ್ವೇಷ ಸೃಷ್ಟಿಯಾಗಿತ್ತು. ಈ ಹಿನ್ನಲೆಯಲ್ಲಿ ಫಯಾಝ್, ಮುನಾವರ್ ಮತ್ತು ಅಸ್ಗರ್ ಎಂಬವರು ಸೇರಿ, ಅಝೀಮ್ ಮತ್ತು ಆತನ ಸಂಗಡಿಗರ ವಿರುದ್ದ ದ್ವೇಷದಿಂದ ಸಂಚೊಂದನ್ನು ರೂಪಿಸಿದ್ದರು. ಆದರೆ ಪೊಲೀಸರು ಮೂವರೂ ಆರೋಪಿಗಳನ್ನು ಬಂಧಿಸಿದ್ದಾರೆ”ಎಂದು ತಿಳಿಸಿದ್ದಾರೆ.
ಪ್ರಕರಣಕ್ಕೂ, ಹಿಂದೂಗಳ ಕೊಲೆಗೆ ಸಂಚು ಎಂಬ ಮಾಧ್ಯಮ ವರದಿಗೂ ಯಾವುದೇ ಸಂಬಂಧವಿಲ್ಲ ಎಂದು ಭೀಮಾ ಶಂಕರ್ ಗುಳೇದ್ ಹೇಳಿದ್ದು, “ಯಾವುದೇ ದೇವಸ್ಥಾನಕ್ಕೂ ದಾಳಿ ಮಾಡಲು ಸಂಚು ರೂಪಿಸಿರಲಿಲ್ಲ. ಇದು ವೈಯಕ್ತಿಕ ದ್ವೇಷ ಹಿನ್ನಲೆಯಲ್ಲಿ ನಡೆದ ಘಟನೆ. ಯಾವುದೆ ಸಂಘಟನೆಯ ಕೈವಾಡ ಪ್ರಕರಣದಲ್ಲಿ ಇಲ್ಲ. ಅಲ್ಲದೆ ಪೆಟ್ರೋಲ್ ಬಾಂಬ್ ಹಾಕುವ ಯಾವುದೆ ಉದ್ದೇಶ ಇರಲಿಲ್ಲ. ಪೆಟ್ರೋಲ್ ಬಾಂಬ್ ರೆಡಿ ಮಾಡಿಟ್ಟು, ಅದನ್ನು ವಿರೋಧಿ ಗುಂಪಿನ ಮೇಲೆ ಗೂಬೆ ಕೂರಿಸುವ ಉದ್ದೇಶ ಅವರಿಗೆ ಇತ್ತು” ಎಂದು ತಿಳಿಸಿದ್ದಾರೆ.
ಕೋಮು ದ್ವೇಷ ಹರಡಿದ ಪಬ್ಲಿಕ್ ಟಿವಿ ವರದಿಗಾರನ ಮೇಲೆ ಡಿಸಿಪಿ ಆಕ್ರೋಶ
ಪತ್ರಿಕಾಗೋಷ್ಠಿಯ ವೇಳೆ ಪಬ್ಲಿಕ್ ಟಿವಿ ವರದಿಗಾರ ಮುರಳಿ ಎಂಬವರ ಮೇಲೆ ಡಿಸಿಪಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಕೂಡಾ ನಡೆದಿದೆ. ವರದಿಗಾರ ಮುರಳಿ ಎಂಬವರು ಘಟನೆಗೆ, ಕೋಮು ಆಯಾಮ ಇದೆಯೆ ಎಂಬಂತ ಪ್ರಶ್ನೆಗಳನ್ನು ಪದೇ ಪದೇ ಕೇಳಿದಾಗ ಆಕ್ರೋಶ ಭರಿತರಾದ ಡಿಸಿಪಿ, “ಘಟನೆಗೆ ಯಾವುದೆ ಕೋಮು ಆಯಾಮ ಇಲ್ಲ ಎಂಬ ಬಗ್ಗೆ ನಾನು ಬೆಳಿಗ್ಗೆಯೆ ನಿಮಗೆ ಸ್ಪಷ್ಟವಾಗಿ ಹೇಳಿದ್ದೇನೆ. ಆದರೂ ನೀವು ಆ ತರ ಬರೆಯುತ್ತೀರಲ್ಲ. ನಾನು ನಿಮಗೆ ತುಂಬಾ ತುಂಬಾ ನಿರ್ದಿಷ್ಠವಾಗಿ ಹೇಳಿದ್ದೇನೆ” ಎಂದು ಹೇಳಿದ್ದಾರೆ.
“ಈ ಘಟನೆಗೂ ಹಿಂದೂಗಳ ಭಜನೆಗೂ ಯಾವುದೆ ಸಂಬಂಧವಿಲ್ಲ ಎಂದು ಹೇಳಿದ್ದೇನೆ. ಬಾಯಿಗೆ ಬಂದಿದ್ದು ಬರೀತಿರಾ ನೀವು. ಏನು ಬರೆದಿದ್ದೀರಾ ನೀವು? ನೋಡಿ” ಎಂದು ಕಿಡಿ ಕಾರಿದ್ದಾರೆ.
ಇದನ್ನೂ ಓದಿ: 2000 ನೋಟಲ್ಲಿ ‘ಚಿಪ್ ವರದಿ’ಯ ಮೂಲವನ್ನು ಬಿಚ್ಚಿಟ್ಟ ಪಬ್ಲಿಕ್ ಟಿವಿ ನಿರೂಪಕ?
‘ನಾನು ಆಂಕರ್, ನೀವು ವರದಿಗಾರನೊಂದಿಗೆ ವಿಚಾರಿಸಿ’: ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್
ಯಾವುದೆ ಆಧಾರವಿಲ್ಲದೆ ವರದಿ ನಿರೂಪಿಸಿದ ಪತ್ರಕರ್ತ ಅರುಣ್ ಬಡಿಗೇರ್ ಬಳಿ ನಾನುಗೌರಿ.ಕಾಂ ಪ್ರತಿಕ್ರಿಯೆ ಕೇಳಿದಾಗ ಅವರು, “ನಾನು ನಿರೂಪಕ ಮಾತ್ರ, ನೀವು ವರದಿಗಾರನೊಂದಿಗೆ ವಿಚಾರಿಸಿ” ಎಂದು ಹೇಳಿದ್ದಾರೆ.
ಪಬ್ಲಿಕ್ ಟಿವಿ ಸಂಪಾದಕ ಎಚ್.ಆರ್. ರಂಗನಾಥ್ ಮತ್ತು ನಿರೂಪಕ ಅರುಣ್ ಬಡಿಗೇರ್ ವಿರುದ್ದ ಈ ಹಿಂದೆ ಕೂಡಾ ಕೋಮು ಗಲಭೆಗೆ ಪ್ರಚೋದನೆ ನೀಡಿದ್ದರು. ಅವರ ವಿರುದ್ದ ಎಫ್ಐಆರ್ ದಾಖಲಿಸಲು ನ್ಯಾಯಾಲಯ ಆದೇಶ ಕೂಡಾ ನೀಡಿತ್ತು. ಹಿಜಾಬ್ ವಿಚಾರದ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿರುವಾಗ ‘ಭಾರತವು ಹಿಂದೂ ಧರ್ಮದ ಆಧಾರಲ್ಲಿ ನಿರ್ಮಾಣವಾಗಿದೆ’ ಎಂದು ಹೇಳಿದ್ದರು. ಹೀಗಾಗಿ ಪಬ್ಲಿಕ್ ಟಿವಿಯ ಮುಖ್ಯಸ್ಥ ಎಚ್.ಆರ್. ರಂಗನಾಥ್ ಹಾಗೂ ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸುವಂತೆ ನ್ಯಾಯಾಲಯವು ಪೊಲೀಸರಿಗೆ ಸೂಚಿಸಿತ್ತು.