ಬೆಂಗಳೂರಿನ ಹೆಬ್ಬಗೋಡಿ ಪೊಲೀಸರು ಬೆಂಗಾಲಿ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಿ ಅಕ್ರಮವಾಗಿ ಹೊರಹಾಕಲು ಯತ್ನಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಸೋಮವಾರ ದೂರು ದಾಖಲಾಗಿದೆ.
ಬೆಂಗಾಲಿ ಮುಸ್ಲಿಮರು ಶಿಕಾರಿಪಾಳ್ಯದಲ್ಲಿ ನಡೆಸುತ್ತಿದ್ದ ಕಸ ವಿಂಗಡಣೆ ಘಟಕಗಳಿಗೆ ಜೂನ್ 17 ಮತ್ತು 18ರಂದು ಹೆಬ್ಬಗೋಡಿ ಪೊಲೀಸರು ದಾಳಿ ನಡೆಸಿದರು. ಬೆಂಗಳೂರನ್ನು ತೊರೆಯುವಂತೆ ಸೂಚಿಸಿ ಲಾಠಿ ಚಾರ್ಜ್ ಮಾಡಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಾವಿದ್ದ ಜಾಗದ ಮೇಲೆ ಪೊಲೀಸರು ದಾಳಿ ಮಾಡಿದ ಸಮಯದಲ್ಲಿ ತಮ್ಮ ಆಸ್ತಿಗಳಿಗೆ ಹಾನಿಯಾಗಿದೆ ಎಂದು ಮುರ್ಷಿದಾಬಾದ್ನ ಬಂಗಾಳಿ ಮುಸ್ಲಿಮರಾದ ರಬ್ಬಾನಿ ಸರ್ದಾರ್ (52) ಮತ್ತು ಅನೀಸ್ (38) ಅವರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
“ನಾವು ಭಾರತೀಯರಲ್ಲ ಎಂದು ಸಾಬೀತುಪಡಿಸಲು ಪೊಲೀಸರು ಯತ್ನಿಸಿದ್ದಾರೆ. ಪೊಲೀಸ್ ತಂಡಗಳು ನಮ್ಮ ಆಹಾರ ಸಾಮಗ್ರಿಗಳನ್ನು ನಾಶಪಡಿಸಿದ್ದಾರೆ. ಮಹಿಳೆಯರು ಮತ್ತು ಮಕ್ಕಳಿಗೆ ಬೆದರಿಕೆ ಹಾಕಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.
ಕಾರ್ಮಿಕರಿಗೆ ಕಾನೂನು ನೆರವು ನೀಡಿದ ಸ್ವರಾಜ್ ಇಂಡಿಯಾ ಪಕ್ಷದ ಮುಖಂಡರಾದ ಕಲೀಮುಲ್ಲಾ ಪ್ರತಿಕ್ರಿಯೆ ನೀಡಿದ್ದು, “ಪೊಲೀಸರು ಧರ್ಮದ ಕಾರಣಕ್ಕಾಗಿ ಬಂಗಾಳಿ ಮುಸ್ಲಿಮರನ್ನು ಟಾರ್ಗೆಟ್ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.
“ಇದು ದೇಶದ ರಾಜಕೀಯ ಪರಿಸ್ಥಿತಿಯ ಪರಿಣಾಮವಾಗಿದೆ. ಬಂಗಾಳಿ ಮುಸ್ಲಿಮರಾಗಿರುವುದು ಅಪರಾಧವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹೆಬ್ಬಗೋಡಿ ಪೊಲೀಸರು ಹದಿನೈದು ದಿನಗಳಿಗೂ ಹೆಚ್ಚು ಕಾಲ ತಮ್ಮ ವ್ಯಾಪ್ತಿಯಲ್ಲಿರುವ ವಲಸಿಗರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ ಎಂದು ಕಸ ವಿಂಗಡಣಾ ಘಟಕದ ಮಾಲೀಕ ಯಾರ್ ಅಲಿ (46) ದೂರಿದ್ದಾರೆ.
“ನಾನು ನನ್ನ ಎಲ್ಲಾ ಐಡಿಗಳನ್ನು ಹಾಜರುಪಡಿಸಿದರೂ ಅವರು ನನ್ನ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ. ಅಂತಿಮವಾಗಿ ನಾನು ನನ್ನ ಗ್ರಾಮದ ಸ್ಥಳೀಯ ಪೊಲೀಸ್ ಠಾಣೆಯಿಂದ ಪಡೆದ ಪತ್ರವನ್ನು ಸಲ್ಲಿಸಬೇಕಾಯಿತು. ನನಗೆ ನಮ್ಮ ಕ್ಷೇತ್ರದ ಸಂಸದೆ ಪ್ರೊತಿಮಾ ಮೊಂಡಲ್ ಅವರಿಂದಲೂ ಪತ್ರ ಬಂದಿತು. ಆದರೆ ಪೊಲೀಸರು ಇನ್ನೂ ಪ್ರಕರಣವನ್ನು ಮುಂದುವರಿಸುತ್ತಿದ್ದಾರೆ” ಎಂದು ವಿಷಾದಿಸಿದ್ದಾರೆ.
“ನಾವು ಕಸ ಬೇರ್ಪಡಿಸಿ ಹೊಟ್ಟೆಪಾಡು ಮಾಡುತ್ತಿದ್ದೇವೆ. ಆದರೆ ಸರ್ಕಾರ ನಮಗೆ ಬೇರೆ ಕೆಲಸ ಕೊಡುತ್ತದೆಯೇ?” ಎಂದು ಮಹಿಳೆಯೊಬ್ಬರು ಕೇಳಿದ್ದಾರೆ.
“ನಾವು ಕೊಲ್ಕತ್ತದಿಂದ ಬಂದಿದ್ದೇವೆ. ಪೊಲೀಸರು ಲಾಠಿಯೊಂದಿಗೆ ಬಂದು ಗಂಡಸರು, ಹೆಂಗಸರೆನ್ನದೆ ದಾಳಿ ಮಾಡಿದರು. ನೀವ್ಯಾಕೆ ಇಲ್ಲಿದ್ದೀರಿ, ಇಲ್ಲಿಂದ ಹೋಗಿ ಎಂದರು. ನಾವು ಅಡುಗೆ ಮಾಡುತ್ತಿರುವ ಪಾತ್ರೆಗಳನ್ನೂ ಲಾಠಿಯಿಂದ ಉರುಳಿಸಿದರು” ಎಂದು ಮತ್ತೊಬ್ಬ ಮಹಿಳೆ ದೂರಿದ್ದಾರೆ.
ಪೊಲೀಸ್ ಕಾರ್ಯಾಚರಣೆ
ಬೆಂಗಳೂರು ಹೊರವಲಯದಲ್ಲಿರುವ ದಾಖಲೆ ರಹಿತ ನಿವಾಸಿಗಳನ್ನು ಹೊರಗೆ ಕಳುಹಿಸಲು ಪೊಲೀಸರು ಮೇ ತಿಂಗಳಲ್ಲಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಪೊಲೀಸ್ ವ್ಯಾಪ್ತಿಗೆ ಒಳಪಡುವ ಸರ್ಜಾಪುರ, ಅನುಗೊಂಡನಹಳ್ಳಿ ಮತ್ತು ಹೆಬ್ಬಗೋಡಿ ಪೊಲೀಸ್ ವ್ಯಾಪ್ತಿಯಲ್ಲಿನ ಗುಡಿಸಲುಗಳ ಮೇಲೆ ಮೇ ತಿಂಗಳಿನಿಂದಲೂ ಪೊಲೀಸರು ದಾಳಿ ನಡೆಸುತ್ತಿದ್ದಾರೆ.
“ಮೇ 21ರಂದು ಸುಮಾರು ಎರಡು ಡಜನ್ ಪೊಲೀಸರು ಇದ್ದಕ್ಕಿದ್ದಂತೆ ನಮ್ಮ ಶಿಬಿರಕ್ಕೆ ನುಗ್ಗಿ ಲಾಠಿಗಳಿಂದ ದಾಳಿ ಮಾಡಿದರು. ಸಂಜೆ ಸುಮಾರು 4 ಗಂಟೆಯಾಗಿತ್ತು. ತಕ್ಷಣವೇ ಪ್ಯಾಕ್ಅಪ್ ಮಾಡಬೇಕು ಎಂದು ಸೂಚಿಸಿದರು” ಎಂದು ಬಂಗಾಲಿ ತುಬರ್ ಸೇಖ್ (34) ದೂರಿದ್ದರು.
ಬಂಗಾಳಿ ಮಾತನಾಡುವ ಸಾವಿರಾರು ಮುಸ್ಲಿಮರಲ್ಲಿ ಭೀತಿ ಉಂಟಾಗಿದೆ. ಈ ವಲಸೆ ಕಾರ್ಮಿಕರು ನಗರದ ಕಸವನ್ನು ಸಂಗ್ರಹಿಸುವ ಮತ್ತು ಬೇರ್ಪಡಿಸುವ ಮೂಲಕ ಜೀವನ ನಡೆಸುತ್ತಿದ್ದಾರೆ. ಬಾಂಗ್ಲಾ ದೇಶದ ಅಕ್ರಮ ವಲಸಿಗರೆಂದು ಆರೋಪಿಸಿ, ಬಂಗಾಲಿ ಮುಸ್ಲಿಮರ ಮೇಲೆ ನಿರಂತರ ದಾಳಿಗಳನ್ನು ಪೊಲೀಸರು ನಡೆಸುತ್ತಿದ್ದಾರೆ ಎಂಬ ಆರೋಪಗಳು ಬಂದಿವೆ.