ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಎತ್ತಿದ್ದ ಆಕ್ಷೇಪಣೆಗಳನ್ನು ತಿರಸ್ಕರಿಸಿರುದ ಸುಪ್ರೀಂ ಕೋರ್ಟ್ ಬುಧವಾರ ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ ಕ್ರಾಂತಿಕಾರಿ ಕವಿ ವರವರ ರಾವ್ಗೆ ವೈದ್ಯಕೀಯ ಕಾರಣಗಳಿಗಾಗಿ ನಿಯಮಿತ ಜಾಮೀನು ನೀಡಿದೆ.
“ಮೇಲ್ಮನವಿದಾರರ ವೈದ್ಯಕೀಯ ಸ್ಥಿತಿಯು ಸ್ವಲ್ಪ ಸಮಯದವರೆಗೆ ಸುಧಾರಿಸಿಲ್ಲ, ಈ ಹಿಂದೆ (ಬಾಂಬೆ ಹೈಕೋರ್ಟ್) ನೀಡಿದ್ದ ಜಾಮೀನಿನ ಸೌಲಭ್ಯವನ್ನು ಹಿಂತೆಗೆದುಕೊಳ್ಳಲಾಗಿದೆ. ಒಟ್ಟಾರೆ ಸನ್ನಿವೇಶಗಳನ್ನು ಪರಿಗಣಿಸಿ, ಮೇಲ್ಮನವಿದಾರರು ವೈದ್ಯಕೀಯ ಆಧಾರದ ಮೇಲೆ ಜಾಮೀನು ಪಡೆಯಲು ಅರ್ಹರಾಗಿದ್ದಾರೆ” ಎಂದು ನ್ಯಾಯಮೂರ್ತಿಗಳಾದ ಯು.ಯು. ಲಲಿತ್, ಅನಿರುದ್ಧ ಬೋಸ್ ಮತ್ತು ಸುಧಾಂಶು ಧುಲಿಯಾ ಅವರ ಪೀಠವು ಆದೇಶಿಸಿದೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಆರೋಪಪಟ್ಟಿ ಸಲ್ಲಿಸಲಾಗಿದ್ದರೂ ಆರೋಪಗಳ ರಚನೆಗೆ ಪ್ರಕರಣವನ್ನು ಕೈಗೆತ್ತಿಕೊಳ್ಳಲಾಗಿಲ್ಲ ಎಂದು ನ್ಯಾಯಾಲಯವು ಹೇಳಿದೆ. ಈ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ಎರಡೂವರೆ ವರ್ಷ ಜೈಲು ವಾಸ ಅನುಭವಿಸಿದ್ದನ್ನು ಕೂಡ ನ್ಯಾಯಾಲಯ ಗಣನೆಗೆ ತೆಗೆದುಕೊಂಡಿದೆ.
ಇದನ್ನೂ ಓದಿ: ವರವರ ರಾವ್ ಅವರ ಪುಸ್ತಕದಿಂದ, ‘ಹಿಂದುತ್ವ’, ‘ಸಂಘಪರಿವಾರ’ ಸೇರಿದಂತೆ ಹಲವು ಪದಗಳನ್ನು ಕೈಬಿಟ್ಟ ಪ್ರಕಾಶನ ಸಂಸ್ಥೆ!
ಫೆಬ್ರವರಿ 2021 ರಲ್ಲಿ, ಹೈಕೋರ್ಟ್ ಅವರಿಗೆ ಆರು ತಿಂಗಳ ಕಾಲ ವೈದ್ಯಕೀಯ ಜಾಮೀನು ನೀಡಿತ್ತು. ಇದನ್ನು ಕಾಲಕಾಲಕ್ಕೆ ವಿಸ್ತರಿಸಲಾಗಿದ್ದರೂ, ಈ ವರ್ಷದ ಏಪ್ರಿಲ್ನಲ್ಲಿ ಹೈಕೋರ್ಟ್ ಶಾಶ್ವತ ಜಾಮೀನಿಗಾಗಿ ಸಲ್ಲಿಸಿದ್ದ ಅವರ ಮನವಿಯನ್ನು ತಿರಸ್ಕರಿಸಿತ್ತು. ಅಲ್ಲದೆ ಮೂರು ತಿಂಗಳೊಳಗೆ ಶರಣಾಗುವಂತೆ ಕೇಳಿತ್ತು. ಆದರೆ ಇದೀಗ ಸುಪ್ರೀಂಕೋರ್ಟ್ ಅವರ ಶರಣಾಗುವ ಷರತ್ತನ್ನು ತೆಗೆದುಹಾಕಿದ್ದು, ಎನ್ಐಎ ವಿಶೇಷ ನ್ಯಾಯಾಲಯದ ಒಪ್ಪಿಗೆಯಿಲ್ಲದೆ ಮುಂಬೈ ತೊರೆಯಬಾರದು ಎಂದು ನಿರ್ದೇಶಿಸಿದೆ.
ವೈದ್ಯಕೀಯ ಕಾರಣಗಳಿಗಾಗಿ ಮಾತ್ರ ಜಾಮೀನು ನೀಡಲಾಗಿದ್ದು ಅದನ್ನು ಪ್ರಕರಣದ ಅರ್ಹತೆಯ ಪ್ರತಿಬಿಂಬವಾಗಿ ನೋಡಬಾರದು ಎಂದು ಅದು ಸ್ಪಷ್ಟಪಡಿಸಿದೆ. ಈ ಆದೇಶವು ಇತರ ಆರೋಪಿಗಳ ಪ್ರಕರಣಗಳಿಗೆ ಪೂರ್ವನಿದರ್ಶನವಾಗುವುದಿಲ್ಲ ಎಂದು ಪೀಠ ಹೇಳಿದೆ.
ವರವರ ರಾವ್ ಪರ ವಾದ ಮಂಡಿಸಿದ ಹಿರಿಯ ವಕೀಲ ಆನಂದ್ ಗ್ರೋವರ್, “ವಿಚಾರಣೆಗೆ ಕನಿಷ್ಠ 10 ವರ್ಷಗಳು ಬೇಕು. ವರವರ ಅವರು ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದು ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಗಳನ್ನು ಹೊಂದಿದ್ದಾರೆ”ಎಂದು ನ್ಯಾಯಾಲಯದಲ್ಲಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಎನ್ಐಎ ಪರ ವಕೀಲರಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು,“ಪ್ರಕರಣ ಕೇವಲ ಒಂದೂವರೆ ವರ್ಷ ತೆಗೆದುಕೊಳ್ಳುತ್ತದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಳದಿಂಗಳು ಕತ್ತಲೆಗೆ ಜಾರಿದಾಗ : ಕ್ರಾಂತಿಕಾರಿ ಕವಿ ವರವರ ರಾವ್ ಜೀವನ ಚಿತ್ರಣ
ಎಸ್ಸಿ ಆದೇಶಕ್ಕೆ ಪ್ರತಿಕ್ರಿಯಿಸಿದ ವರವರ ರಾವ್ ಅವರ ಸೋದರಳಿಯ ಎನ್. ವೇಣುಗೋಪಾಲ್, “ನಮ್ಮ ಆತಂಕ ಈಗ ಕಡಿಮೆಯಾಗಿದೆ. ಆದರೆ ಅವರು ಮುಂಬೈನಲ್ಲಿ ವಾಸಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅವರ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ, ಅದನ್ನು ಅವರು ತೆಲಂಗಾಣದಲ್ಲಿ ಪಿಂಚಣಿ ಯೋಜನೆಯ ಮೂಲಕ ಅದನ್ನು ಪಡೆಯಬಹುದು” ಎಂದು ಹೇಳಿದ್ದಾರೆ