ಮಂಡ್ಯ ಜಿಲ್ಲಾ ಸಮಾನ ಮನಸ್ಕರ ವೇದಿಕೆ ವತಿಯಿಂದ ಗಣರಾಜ್ಯೋತ್ಸವ ಮತ್ತು ಗಾಂಧಿ ನೆನಪಿನಲ್ಲಿ ಜ.29ರಂದು ಶ್ರೀರಂಗಪಟ್ಟದಲ್ಲಿ ಸಾಮರಸ್ಯ ಸಹಬಾಳ್ವೆ ಸಂಗಮ ಸಮಾವೇಶ ನಡೆಯಲಿದ್ದು, ಖ್ಯಾತ ಮಾನವ ಹಕ್ಕು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಭಾಗವಹಿಸಲಿದ್ದಾರೆ. ಅಲ್ಲದೆ ಸಹಬಾಳ್ವೆ ಕರ್ನಾಟಕ ಸಂಘಟನೆಯ ವತಿಯಿಂದ ರಾಜ್ಯದ ಹಲವೆಡೆ ಮನೆ-ಮನಕ್ಕೂ ಸಹಬಾಳ್ವೆ ಸಂದೇಶ ಮತ್ತು ಸ್ನೇಹ ಕೂಟಗಳನ್ನು ಹಮ್ಮಿಕೊಳ್ಳಲಾಗಿದೆ.
ರಾಜ್ಯದಲ್ಲಿ ಮತ್ತು ದೇಶದಲ್ಲಿ ದ್ವೇಷ ಬಿತ್ತಲಾಗುತ್ತಿದೆ. ರಾಜಕೀಯ ಲಾಭಕ್ಕಾಗಿ ಮಹನೀಯರ ಚಾರಿತ್ರ್ಯವಧೆ ಮಾಡಲಾಗುತ್ತಿದೆ. ಸುಳ್ಳುಗಳನ್ನು ಬಿತ್ತಿ ಸಮುದಾಯಗಳನ್ನು ಎತ್ತಿ ಕಟ್ಟಲಾಗುತ್ತಿದೆ. ಇಂತಹ ದುಷ್ಕೃತ್ಯಗಳಿಗೆ ಜಿಲ್ಲೆಯನ್ನು ಬಲಿಕೊಡುತ್ತಿರುವುದು ದುರಂತ. ಇಂತಹ ವಿಷಮ ಸ್ಥಿತಿಯಲ್ಲಿ ಜಿಲ್ಲೆಯ ನೈಜ ಇತಿಹಾಸವನ್ನು, ಕೋಮು ಸೌಹಾರ್ದತೆಯನ್ನು ಜನರಿಗೆ ತಿಳಿಸಲು ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮತಾಂಧರು ಇತ್ತೀಚಿಗೆ ಶ್ರೀರಂಗಪಟ್ಟಣದಲ್ಲಿ ಸಾಮರಸ್ಯ ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಟಿಪ್ಪುವನ್ನು ಕೊಂದವರು ಉರಿಗೌಡ, ನಂಜೇಗೌಡ ಎಂಬ ಸುಳ್ಳನ್ನು ಪಸರಿಸಲಾಗುತ್ತಿದೆ. ಅಸಲಿಗೆ ಅಂತಹ ವ್ಯಕ್ತಿಗಳು ಬದುಕಿದ್ದ ಯಾವುದೇ ದಾಖಲೆಗಳಿಲ್ಲ. (ಮರುದು ಪಾಂಡ್ಯರು (ಪೆರಿಯ ಮರುದು ಮತ್ತು ಚಿನ್ನ ಮರುದು) 18ನೇ ಶತಮಾನದ ಅಂತ್ಯದಲ್ಲಿ ತಮಿಳುನಾಡಿನ ಶಿವಗಂಗೈ ಪ್ರಾಂತ್ಯದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಿದ್ದರು. ಇವರನ್ನು ಸೆರೆಹಿಡಿದು ಗಲ್ಲಿಗೇರಿಸಲಾಯಿತು ಎಂದು ಇತಿಹಾಸದ ಪುಟಗಳು ಹೇಳುತ್ತವೆ. ಅವರ ಫೋಟೊಗಳನ್ನು ಬಳಿಸಿ ಅವರಿಗೆ ಉರಿಗೌಡ, ನಂಜೇಗೌಡ ಎಂಬ ಹೆಸರು ಕೊಟ್ಟು ಸುಳ್ಳು ಸೃಷ್ಟಿಸಲಾಗುತ್ತಿದೆ.) ಈ ಕುರಿತು ಜನರಿಗೆ ಸತ್ಯದರ್ಶನ ಮಾಡುವುದಕ್ಕಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
ಭಾನುವಾರ ಬೆಳಿಗ್ಗೆ 10.30 ಗಂಟೆಗೆ ಶ್ರೀರಂಗಪಟ್ಟದ ಶ್ರೀರಂಗನಾಥ ದೇವಸ್ಥಾನದ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಾಮಾಜಿಕ ಕಾರ್ಯಕರ್ತ ಶಶಿಕಾಂತ್ ಸೆಂಥಿಲ್, ಗಾಂಧಿವಾದಿ ಡಾ.ಸುಜಯ್ ಕುಮಾರ್, ವಿಶ್ರಾಂತ ಕುಲಪತಿ ಸಬಿಹಾ ಭೂಮಿಗೌಡ, ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಕರ್ನಾಟಕ ರಾಜ್ಯ ರೈತಸಂಘದ ಮುಖಂಡ ಬಡಗಲಪುರ ನಾಗೇಂದ್ರ, ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಕೆ.ಎಲ್.ಅಶೋಕ್, ಶಾಂತಿ ಪ್ರಕಾಶನದ ಮುಖ್ಯಸ್ಥರಾದ ಮಹಮದ್ ಕುಂಞ, ಸಮಾನ ಮನಸ್ಕರ ವೇದಿಕೆಯ ಪ್ರೊ.ಹುಲ್ಕೆರೆ ಮಹದೇವು ಹಾಗೂ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದುರವರು ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ಗೌರಿ ದಿನ: ‘ಹೊಸ ಭಾರತ’ದಲ್ಲಿ ಪತ್ರಿಕೋದ್ಯಮಕ್ಕಿರುವ ಬೆದರಿಕೆಗಳು ಕುರಿತು ಉಪನ್ಯಾಸ, ‘ಗೌರಿ’ ಸಿನಿಮಾ ಪ್ರದರ್ಶನ


