ಮಹಿಳೆಯೊಬ್ಬಳು ಕೋವಿಡ್-19 ಸೋಂಕಿಗೆ ಒಳಗಾಗುವ ತೀವ್ರ ಭಯದಿಂದ ಮೂರು ವರ್ಷಗಳ ಕಾಲ ತನ್ನನ್ನು ಮತ್ತು ತನ್ನ ಅಪ್ರಾಪ್ತ ಮಗನನ್ನು ಮನೆಯೊಳಗೆ ಬೀಗ ಹಾಕಿಕೊಂಡು ಗೃಹಬಂಧನದಲ್ಲಿದ್ದರು. ಅವರನ್ನು ಈಗ ರಕ್ಷಣೆ ಮಾಡಲಾಗಿದ್ದು, ಈ ಘಟನೆ ಗುರುಗ್ರಾಮ್ನ ಚಕ್ಕರ್ಪುರದಲ್ಲಿ ನಡೆದಿದೆ. ಖಾಸಗಿ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿರುವ ಈ ಮಹಿಳೆಯ ಪತಿ ಸುಜನ್ ಮಾಝಿ ಅವರು, ಚಕ್ಕರ್ಪುರ ಪೊಲೀಸರನ್ನು ಸಂಪರ್ಕಿಸಿದಾಗ ಈ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಸುಜನ್ ಮಾಝಿ ಅವರ ಕೋರಿಕೆಯ ಮೇರೆಗೆ, ಪೊಲೀಸರು, ಆರೋಗ್ಯ ಅಧಿಕಾರಿಗಳು ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸದಸ್ಯರ ತಂಡ ಮಂಗಳವಾರ ನಿವಾಸಕ್ಕೆ ತಲುಪಿ, ಮುಖ್ಯ ಬಾಗಿಲು ಮುರಿದು ಮುನ್ಮುನ್ ಮಾಝಿ ಮತ್ತು ಆಕೆಯ 10 ವರ್ಷದ ಮಗನನ್ನು ರಕ್ಷಿಸಿದ್ದಾರೆ. ಇನ್ನು ಮನೆಯೊಳಗಿನ ಕಸದ ರಾಶಿಯೇ ತುಂಬಿದೆ. ಬಟ್ಟೆ, ಕೂದಲು, ಕಸ, ಮಣ್ಣು ಮತ್ತು ದಿನಸಿಗಳು ಸುತ್ತಲೂ ಹರಡಿಕೊಂಡಿವೆ.
ಮುನ್ಮುನ್ ಮಾಝಿ ಅವರು, ಮನೆಯಲ್ಲಿಯೇ ಮಗುವಿನ ಮತ್ತು ಅವಳ ಕೂದಲನ್ನು ಕತ್ತರಿಸುತ್ತಿದ್ದರು ಎಂದು ತಿಳಿದು ಬಂದಿದೆ. ಇದೇ ವೇಳೆ ಮನೆಯಲ್ಲಿ ಗ್ಯಾಸ್ ಸ್ಟೌ ಬದಲು ಇಂಡಕ್ಷನ್ ಮೂಲಕ ಅಡುಗೆ ಮಾಡಲಾಗಿತ್ತು. ಮೂರು ವರ್ಷಗಳಿಂದ ಮನೆಯಲ್ಲಿದ್ದ ಕಸವನ್ನು ಕೂಡ ಹೊರಗೆ ಹಾಕಿರಲಿಲ್ಲ, ಈ ವೇಳೆ ಮನೆಗೆ ಯಾರೂ ಭೇಟಿ ನೀಡಿರಲಿಲ್ಲ. ಮಗು ಮನೆಯ ಗೋಡೆಗಳ ಮೇಲೆ ಪೇಂಟಿಂಗ್ ಮಾಡುತ್ತಿತ್ತು ಮತ್ತು ಪೆನ್ಸಿಲ್ನಿಂದ ಮಾತ್ರ ಅಧ್ಯಯನ ಮಾಡುತ್ತಿತ್ತು. ಆಘಾತಕಾರಿ ಸಂಗತಿಯೆಂದರೆ, ಮಹಿಳೆಯ ಮಗ ಕಳೆದ ಮೂರು ವರ್ಷಗಳಿಂದ ಸೂರ್ಯನನ್ನೇ ನೋಡಿರಲಿಲ್ಲ.
ಇದನ್ನೂ ಓದಿ: ಕೋವಿಡ್ ಸಂಬಂಧಿತ ನಿರ್ಬಂಧ ಹೇರುವ ಯೋಜನೆ ಇಲ್ಲ: ಕೇಂದ್ರ ಸರ್ಕಾರ
ಇಷ್ಟು ದಿನಗಳ ಕಾಲ ತಾಯಿ ಮಗ ಮನೆಯೊಳಗೆ ಬೀಗ ಹಾಕಿಕೊಂಡು ವಾಸಿಸುತ್ತಿರುವ ಬಗ್ಗೆ ಅಕ್ಕಪಕ್ಕದವರಿಗೆ ಸುಳಿವು ಸಿಕ್ಕಿರಲಿಲ್ಲ.
ಈ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ”ಕೋವಿಡ್ -19 ಕಾರಣದಿಂದಾಗಿ ಮಹಿಳೆ ಭಯಭೀತರಾಗಿದ್ದರು ಮತ್ತು ಮನೆಯಿಂದ ಹೊರಗೆ ಕಾಲಿಟ್ಟರೆ ಮಗ ಸಾಯುತ್ತಾನೆಂದು ನಂಬಿದ್ದರು” ಎಂದು ಅವರು ತಿಳಿಸಿದ್ದಾರೆ.
2020ರಲ್ಲಿ ಮೊದಲ ಲಾಕ್ಡೌನ್ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಕಚೇರಿಗಾಗಿ ಮಹಿಳೆಯ ಪತಿ ಮನೆಯಿಂದ ಹೊರಬಂದಿದ್ದರು. ಹಾಗಾಗಿ ಆ ಮಹಿಳೆ ತನ್ನ ಪತಿಯನ್ನು ಸಹ ಮನೆಯೊಳಗೆ ಬಿಟ್ಟುಕೊಳ್ಳದೇ ತನ್ನ ಮಗನೊಂದಿಗಿನ ಮೂರು ವರ್ಷಗಳ ಬಂಧನದಲ್ಲಿದ್ದರು.
ಮುನ್ಮುನ್ ಮಾಝಿ ಅವರು, ವೀಡಿಯೊ ಕರೆಗಳ ಮೂಲಕ ತಮ್ಮ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದರು. ಅದು ಬಿಟ್ಟರೆ ಮನೆಯವರೊಂದಿಗಾಗಲಿ ಹೊರ ಜಗತ್ತಿನ ಯಾರೊಂದಿಗೂ ಆಕೆ ಸಂಪರ್ಕದಲ್ಲಿರಲಿಲ್ಲ. ಇನ್ನು, ಮನೆಯ ಮಾಸಿಕ ಬಾಡಿಗೆ ಕಟ್ಟುವುದು, ವಿದ್ಯುತ್ ಬಿಲ್ ಕಟ್ಟುವುದು, ಮಗನ ಶಾಲಾ ಶುಲ್ಕ ಕಟ್ಟುವುದು, ದಿನಸಿ ಸಾಮಾನು, ತರಕಾರಿ ಕೊಂಡುಕೊಳ್ಳುವುದು, ಪಡಿತರ ಚೀಲಗಳನ್ನು ಮುಖ್ಯ ಬಾಗಿಲಿನ ಹೊರಗೆ ಇಡುತ್ತಿದ್ದರು.
ಇದೀಗ ಆ ತಾಯಿ ಮಗನ ರಕ್ಷಣೆ ಮಾಡಲಾಗಿದ್ದು, ಇಬ್ಬರನ್ನು ಸಿವಿಲ್ ಆಸ್ಪತ್ರೆಗೆ ಸಾಗಿಸಲಾಗಿದೆ.