ಸರ್ಕಾರಿ ಸ್ವಾಮ್ಯದ ಜೀವ ವಿಮಾ ನಿಗಮ (ಎಲ್ಐಸಿ)ವು ಅದಾನಿ ಸಮೂಹದ ಐದು ದೊಡ್ಡ ಕಂಪನಿಗಳಲ್ಲಿ ಹೂಡಿದ್ದ ಷೇರುಗಳ ಮಾರುಕಟ್ಟೆ ಮೌಲ್ಯವು ಮೊದಲ ಬಾರಿಗೆ ಅದರ ಖರೀದಿ ಮೌಲ್ಯಕ್ಕಿಂತ ಕಡಿಮೆಯಾಗಿದ್ದು ನಿವ್ವಳ ನಷ್ಟಕ್ಕೆ ಸಿಲುಕಿದೆ.
ಗುರುವಾರದ ಅಂತ್ಯದ ವೇಳೆಗೆ ಅದಾನಿ ಗ್ರೂಪ್ ಕಂಪನಿಗಳಲ್ಲಿ (ಅಂಬುಜಾ ಸಿಮೆಂಟ್ಸ್ ಮತ್ತು ಎಸಿಸಿ ಹೊರತುಪಡಿಸಿ) ಎಲ್ಐಸಿ ಹೊಂದಿರುವ ಮಾರುಕಟ್ಟೆ ಮೌಲ್ಯವು ರೂ 26,861 ಕೋಟಿಗಳಿಗೆ ಕುಸಿದೆ. ಅದರ ಖರೀದಿ ಮೌಲ್ಯ ರೂ 30,127 ಕೋಟಿಗಿಂತ ಶೇಕಡ 11ರಷ್ಟು ಕಡಿಮೆಯಾಗಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
LIC ಅದಾನಿ ಗ್ರೂಪ್ ಕಂಪನಿಗಳಲ್ಲಿ ಅತಿದೊಡ್ಡ ದೇಶೀಯ ಸಾಂಸ್ಥಿಕ ಷೇರುದಾರರಾಗಿದೆ. ಅದು 2022 ರ ಡಿಸೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ ಅದಾನಿ ಪೋರ್ಟ್ಸ್ನಲ್ಲಿ 9.14%, ಅದಾನಿ ಟೋಟಲ್ ಗ್ಯಾಸ್ನಲ್ಲಿ 5.96%, ಅದಾನಿ ಎಂಟರ್ಪ್ರೈಸಸ್ನಲ್ಲಿ 4.23%, ಅದಾನಿ ಟ್ರಾನ್ಸ್ಮಿಷನ್ನಲ್ಲಿ3.65% ಮತ್ತು ಅದಾನಿ ಗ್ರೀನ್ ಎನರ್ಜಿಯಲ್ಲಿ 1.28% ರಷ್ಟು ಪಾಲು ಹೊಂದಿದೆ.
ಡಿಸೆಂಬರ್ ಅಂತ್ಯದ ವೇಳೆದ ಅದಾನಿ ಗ್ರೂಪ್ನಲ್ಲಿನ ಎಲ್ಐಸಿ ಹೂಡಿಕೆಯ ಮಾರುಕಟ್ಟೆ ಮೌಲ್ಯ 72,193 ಕೋಟಿ ರೂಗಳಾಗಿತ್ತು. ಆದರೆ ಅದಾನಿ ಸಮೂಹ ವಂಚನೆ ಮತ್ತು ಅಕ್ರಮದಲ್ಲಿ ಭಾಗಿಯಾಗಿದೆ ಎಂದು ಹಿಂಡೆನ್ಬರ್ಗ್ ವರದಿ ಪ್ರಕಟವಾದ ನಂತರ ಜನವರಿ 27ರ ಹೊತ್ತಿಗೆ 56,142 ಕೋಟಿ ರೂಗಳಿಗೆ ಕುಸಿದಿತ್ತು. ಆಗಲೂ ಎಲ್ಐಸಿ ನಷ್ಟದಲ್ಲಿಲ್ಲ ಎಂದೇ ಹೇಳಲಾಗಿತ್ತು. ಆದರೆ ಈಗ ಎಲ್ಐಸಿಯ ಮಾರುಕಟ್ಟೆ ಮೌಲ್ಯ 26,861 ಕೋಟಿ ರೂಗಳಿಗೆ ಕುಸಿದು ನಷ್ಟಕ್ಕೆ ಒಳಗಾಗಿದೆ. ಒಟ್ಟಾರೆಯಾಗಿ ಐದು ದೊಡ್ಡ ಅದಾನಿ ಗ್ರೂಪ್ ಕಂಪನಿಗಳಲ್ಲಿ ಎಲ್ಐಸಿ ಹೊಂದಿರುವ ಮಾರುಕಟ್ಟೆ ಮೌಲ್ಯದಲ್ಲಿ 62.8 ಪ್ರತಿಶತದಷ್ಟು ಕುಸಿತ ಕಂಡಿದೆ.
ಅದಾನಿ ಹಗರಣ ಹೊರಬರುತ್ತಿದ್ದಂತೆ ಎಲ್ಐಸಿ ಮತ್ತು ಎಸ್ಬಿಐ ರೀತಿಯ ಸರ್ಕಾರಿ ವಲಯದ ಸಂಸ್ಥೆಗಳು ಅದಾನಿ ಕಂಪನಿಯಲ್ಲಿ ಹೂಡಿಕೆ ಮಾಡಿರುವ ಹಣ ನಷ್ಟಕ್ಕೆ ಸಿಲುಕುತ್ತದೆ ಎಂಬ ಆತಂಕಗಳು ವ್ಯಕ್ತವಾಗಿದ್ದವು. ಆದರೆ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್, “ಹಾಗೇನೂ ಆಗುವುದಿಲ್ಲ, ಇದು ಟೀ ಲೋಟದೊಳಗಿನ ಗಾಳಿಯಷ್ಟೆ, ಇದರಿಂದ ದೇಶದ ಆರ್ಥಿಕ ಬುನಾದಿಗೆ ಹೊಡೆತವಾಗುವುದಿಲ್ಲ” ಎಂದಿದ್ದರು. ಆದರೆ ಈಗ ಎಲ್ಐಸಿ ಹೂಡಿಕೆ ಹಣದಲ್ಲಿ ನಷ್ಟಕ್ಕೆ ಒಳಗಾಗಿದೆ. ಅದು ಮತ್ತಷ್ಟು ನಷ್ಟಕ್ಕೆ ಸಿಲುಕುವ ಅಪಾಯವಿದೆ ಎಂದು ಹಲವರು ಸರ್ಕಾರದ ನೀತಿಗಳ ವಿರುದ್ಧ ಕಿಡಿಕಾರಿದ್ದಾರೆ.
ಟಿಎಂಸಿ ಸಂಸದೆ ಮೊಹುವ ಮೊಹಿತ್ರ ಟ್ವೀಟ್ ಮಾಡಿ, “ಅದಾನಿ ಕಂಪನಿಗಳಲ್ಲಿ ಎಲ್ಐಸಿ ಹೂಡಿದ್ದ ಹಣದಲ್ಲಿ 3200 ಕೋಟಿ ರೂ ನಷ್ಟವಾಗಿದೆ. ದೇಶದ ಜನರ ಹಿತಾಸಕ್ತಿ ಬಲಿ ಕೊಟ್ಟು ಅದಾನಿ ಕಂಪನಿಗಳಲ್ಲಿ ಹೂಡಿಕೆ ಮಾಡಲು ಒತ್ತಾಯಿಸಿದವರು ಯಾರು ಎಂಬುದನ್ನು ನಿರ್ಮಲಾ ಸೀತಾರಾಮನ್ ಉತ್ತರಿಸಬೇಕು” ಎಂದು ಆಗ್ರಹಿಸಿದ್ದಾರೆ.
₹3200 cr loss in Adani shares for @LICIndiaForever so far.@nsitharaman #IRDAI what pressure is there to support Adani at cost of Indian public?
We need answers. pic.twitter.com/wU3Ge9XC9s— Mahua Moitra (@MahuaMoitra) February 24, 2023
ಹಿಂಡೆನ್ಬರ್ಗ್ ವರದಿಯ ನಂತರ LIC ಯ ನಮ್ಮ ಹಣ 72,000 ಕೋಟಿ ರೂಗಳಿಂದ 26,000 ಕೋಟಿ ರೂಗಳಿಗೆ ಕುಸಿದಿದೆ. ಆದರೂ LIC ಅಧ್ಯಕ್ಷರು ಅದಾನಿ ಕಂಪನಿಗಳಿನ ಹೂಡಿಕೆ ವಿಸ್ತರಣೆ ಮಾಡಿದ್ದಾರೆ. ಸಾರ್ವಜನಿಕ ಹಣವನ್ನು ಹೀಗೆ ಅದಾನಿ ಮೇಲೆ ಹಾಕುವುದು ಏಕೆ ಎಂದು ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಪ್ರಶ್ನಿಸಿದ್ದಾರೆ.
ಇನ್ನು ಹಿಂಡೆನ್ಬರ್ಗ್ ವರದಿಯ ನಂತರ ಅದಾನಿ ಸಂಪತ್ತಿನಲ್ಲಿ ಗಣನೀಯ ಕುಸಿತ ಉಂಟಾಗಿದೆ. ತಿಂಗಳ ಹಿಂದಷ್ಟೆ ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಶ್ರೀಮಂತರಾಗಿದ್ದ ಅವರು ಈಗ $42.2 ಶತಕೋಟಿ ನಿವ್ವಳ ಮೌಲ್ಯದೊಂದಿಗೆ 26 ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಆರೋಗ್ಯಕರ ಚರ್ಚೆಗೆ ಅವಕಾಶವಿಲ್ಲ: ನಟ ನಾಸಿರುದ್ದೀನ್ ಶಾ