- ಗಿರೀಶ್ ತಾಳಿಕಟ್ಟೆ |
ಮಂಡ್ಯದ ಗಂಡು ಅಂಬಿ ಈಗ ಫುಲ್ ರಿಲೀಫ್ ಮೂಡ್ನಲ್ಲಿದ್ದಾರೆ. ತನಗೆ ಆಗಿಬರದ ಪೊಲಿಟಿಕ್ಸ್ನ ಸುಳಿಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದ ಅಂಬರೀಷ್, ಆ ಜೇಡರಬಲೆಯಿಂದ ಆಚೆ ಬಂದ ನಂತರ ಸಿಕ್ಕಾಪಟ್ಟೆ ಜಾಲಿ ಮೂಡಿನಲ್ಲಿರುವಂತಿದೆ. ತನ್ನನ್ನೇ ತಾನು ಗೇಲಿ ಮಾಡಿಕೊಳ್ಳುತ್ತಾ, ತಮಾಷೆಗೆ ಎದುರಿನವರ ಕಾಲೆಳೆಯುತ್ತಾ ಹಳೇ ಅಂಬರೀಷ್ ಆಗಿ ಸ್ಯಾಂಡಲ್ವುಡ್ನಲ್ಲಿ ಹಗುರಾಗುತ್ತಿರೋದು ಅವರ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯ ಬೆಳವಣಿಗೆ. ಈ ಅಸೆಂಬ್ಲಿ ಎಲೆಕ್ಷನ್ನಲ್ಲಿ ಕಾಂಗ್ರೆಸ್ ಪಕ್ಷ ಅಂಬಿಗೆ ಟಿಕೇಟ್ ಘೋಷಿಸಿದರೂ, ಹಳೆ ಮುನಿಸುಗಳನ್ನು ಮುಂದೆಮಾಡಿ ಗೌಡಿಕೆ ಗತ್ತಿನಲ್ಲಿ ಗುಟುರು ಹಾಕಿದ ಅಂಬಿ ಸದ್ಯದ ಮಟ್ಟಿಗೆ ರಾಜಕಾರಣದಿಂದ ಹೊರಗುಳಿಯುವ ನಿರ್ಧಾರ ಕೈಗೊಂಡದ್ದು ಅವರ ವೈಯಕ್ತಿಕ ಬದುಕಿನ ದೃಷ್ಟಿಯಿಂದ ಬಹಳ ಆರೋಗ್ಯಕರ ನಿರ್ಧಾರ ಅಂತಲೇ ಹೇಳಬೇಕು. ಯಾಕೆಂದರೆ ಒಬ್ಬ ನಟನಾಗಿ ಅಂಬಿ ಅದೆಷ್ಟು ಅಭಿಮಾನಿಗಳನ್ನು, ಜನರ ಪ್ರೀತಿಯನ್ನು ಗಳಿಸಿಕೊಂಡಿದ್ದರೋ, ಒಬ್ಬ ರಾಜಕಾರಣಿಯಾಗಿ, ಜನಪ್ರತಿನಿಧಿಯಾಗಿ ಅಷ್ಟೇ ಮೂದಲಿಕೆಗೆ ಗುರಿಯಾಗುತ್ತಾ ಬಂದಿದ್ದರು. ಶಾಸಕ, ಸಚಿವರಾಗಿ ಅಂಬಿ ಜನರ ಕೈಗೆ ಸಿಗುವುದೇ ಇಲ್ಲವೆನ್ನುವ ಆಪಾದನೆಗಳು ದಂಡಿಯಾಗಿ ಕೇಳಿಬರುತ್ತಿದ್ದವು. ಹಾಗೆ ನೋಡಿದರೆ, ಅಂಬಿಯ ವ್ಯಕ್ತಿತ್ವಕ್ಕೆ ಇವತ್ತಿನ ಈ ಹಾಳು ಪೊಲಿಟಿಕ್ಸ್ ಒಗ್ಗುವಂತದ್ದೇ ಆಗಿರಲಿಲ್ಲ. ಮುಂದೆ ಹೇಗೋ, ಏನೋ, ಸದ್ಯಕ್ಕೆ ಎಲೆಕ್ಷನ್ ರಾಜಕಾರಣದ ಜಂಜಡದಿಂದ ಹೊರಬಂದ ತರುವಾಯ ಸಿನಿಮಾಗಳಲ್ಲಿ, ಸಿನಿಮಾ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗುತ್ತಾ ತನ್ನ ಹಳೆಯ ಕೀಟಲೆ ದಿನಗಳತ್ತ ಅಂಬಿ ಮರುಪಯಣಿಸುತ್ತಿರೋದು Really a Good Sign!
ಸದ್ಯ, ಗುರುದತ್ ಗಾಣಿಗ ನಿರ್ದೇಶಿಸುತ್ತಿರುವ `ಅಂಬಿ ನಿಂಗ್ ವಯಸ್ಸಾಯ್ತೊ’ ಸಿನಿಮಾದ ಶೂಟಿಂಗ್ನಲ್ಲಿ ಅಂಬಿ ಫುಲ್ ಬ್ಯುಸಿಯಾಗಿದ್ದಾರೆ. ತಮಿಳಿನ `ಪಾ ಪಾಂಡಿ’ ಸಿನಿಮಾದ ರೀಮೇಕ್ ಆಗಿರುವ ಈ ಸಿನಿಮಾದಲ್ಲಿ ಅಂಬಿ ಪಾತ್ರದ ಯೌವ್ವನದ ದಿನಗಳ ರೂಪದಲ್ಲಿ ಸುದೀಪ್ ನಟಿಸುತ್ತಿದ್ದರೆ, ಅಂಬಿಗೆ ಜೋಡಿಯಾಗಿ 14 ವರ್ಷಗಳ ನಂತರ ನಟಿ ಸುಹಾಸಿನಿ ಹೆಜ್ಜೆ ಹಾಕಿದ್ದಾರೆ. ಇದರ ನಡುವೆ ಹೊಸಬರ ಚಿತ್ರಗಳ ಮುಹೂರ್ತ, ಸಿನಿಮಾ ಕಾರ್ಯಕ್ರಮಗಳು, ಪ್ರಶಸ್ತಿ ಸಮಾರಂಭಗಳಲ್ಲೂ ಅಂಬಿ ದಿಲ್ಖುಷ್ ಆಗಿ ಭಾಗವಹಿಸುತ್ತಿದ್ದಾರೆ. ಮೊನ್ನೆಮೊನ್ನೆಯಷ್ಟೇ, ನಟ ಯಶ್ಗೆ ಅಡ್ಡ ಹಾಕಿಕೊಂಡು `ಬಡ್ಡೇತದೆ, ನಿನ್ನ ಮುಖದ ಮೇಲೆ ಗಡ್ಡ ಸರಿ ಕಾಣಕ್ಕಿಲ್ಲ, ಗಡ್ಡ ಯಾವಾಗ್ಲಾ ತಗೀತೀಯಾ?’ ಅಂತ ಆತ್ಮೀಯವಾಗಿ ಗದರಿಕೊಂಡಿದ್ದ ಅಂಬಿ ಇತ್ತೀಚೆಗೆ ನಡೆದ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಬಿಗ್ಬಾಸ್ ಬಾರ್ಬಿ ಡಾಲ್ ನಿವೇದಿತಾ ಗೌಡಳ ಜೊತೆಗೆ ಅವಳದೇ ಧಾಟಿಯಲ್ಲಿ ಮಾತಾಡಿ, ಕಾಲೆಳೆದು ಕಿಚಾಯಿಸಿದ್ದರು. ಪಕ್ಕಾ ಪೊಲಿಟಿಷಿಯನ್ ಅವತಾರದಲ್ಲಿದ್ದಾಗ ಇಂಥಾ ಕಾರ್ಯಕ್ರಮಗಳಿಗಿರಲಿ, ಸರ್ಕಾರಿ ಸಮಾರಂಭಗಳಿಗೇ ಚಕ್ಕರ್ ಹೊಡೆಯುತ್ತಿದ್ದ ಅವರು ಈಗ ಕೊಂಚ ಬದಲಾಗಿದ್ದಾರೆ, ಬದಲಾಗುತ್ತಿದ್ದಾರೆ.
ಇದೀಗ ಅಂಬಿಯ ಮಗ ಅಭಿಷೇಕ್ ಗೌಡ ಕೂಡಾ `ಅಮರ್’ ಸಿನಿಮಾದ ಮೂಲಕ ಹೀರೋ ಆಗಲು ಸಜ್ಜಾಗಿದ್ದಾನೆ. ನಾಗಶೇಖರ್ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ಅಭಿಷೇಕ್ಗೆ ನಾಯಕಿಯಾಗಿ ತಾನ್ಯ ನಟಿಸುತ್ತಿದ್ದಾರೆ. ಜೆಪಿ ನಗರದ ದೇವಸ್ಥಾನದಲ್ಲಿ ಮುಹೂರ್ತವೂ ಮುಗಿದಿದೆ. ಇನ್ನೇನು ಚಿತ್ರೀಕರಣ ಶುರುವಾಗಬೇಕು ಅಷ್ಟೇ. ಅಂದಹಾಗೆ, ಹೀರೊ ಆಗಲು ಹೊರಟಿರುವ ಮಗನಿಗೆ ಅಂಬಿ ಒಂದು ಕಿವಿಮಾತು ಹೇಳಿದ್ದಾರೆ. ಅದೇನು ಗೊತ್ತಾ, `ನನ್ನ ಥರಾ ಯಾವತ್ತೂ ಸೆಟ್ಗೆ ಲೇಟಾಗಿ ಹೋಗ್ಬೇಡ’ ಅಂತ! ಅಂಬಿ ಶೂಟಿಂಗ್ ಸ್ಪಾಟ್ಗೆ ಲೇಟಾಗಿ ಬರೋದ್ರಲ್ಲಿ ಸಿಕ್ಕಾಪಟ್ಟೆ ಫೇಮಸ್ಸು. ಅದು ಇವತ್ತು ನಿನ್ನೆಯ ಅಭ್ಯಾಸವಲ್ಲ, ಮೊದಲ ಸಿನಿಮಾದ ಮೊದಲ ದಿನದಿಂದಲೇ ಅಂತದ್ದೊಂದು ಅದ್ಭುತ ಸಂಪ್ರದಾಯವನ್ನ ಪಾಲಿಸಿಕೊಂಡು ಬರ್ತಿದಾರೆ. ನಾಗರಹಾವು ಸಿನಿಮಾದ ಶೂಟಿಂಗ್ನ ಮೊದಲ ದಿನ ಅಂಬಿ ಸೆಟ್ಗೆ ತಡವಾಗಿ ಬಂದಿದ್ದರಂತೆ. ಆಗ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಸಿಟ್ಟಿನಿಂದ ಯಾಕಯ್ಯ ಲೇಟು ಅಂತ ಕೇಳಿದಾಗ, ಅಂಬಿ ಗುರುವಿನ ಎದುರು ನುಲಿದಾಡುತ್ತಾ `ದಾರೀಲಿ ಟೈರ್ ಪಂಕ್ಚರ್ ಆಗ್ಬಿಟ್ಟಿತ್ತು, ಸಾರ್, ಅದ್ಕೆ ಒಸಿ ಲೇಟಾಯ್ತು’ ಅಂತ ಏನೋ ಕಥೆ ಕಟ್ಟಲು ಹೋದರಂತೆ. ಆಗ ಪುಟ್ಟಣ್ಣ ಪಕ್ಕದಲ್ಲಿದ್ದ ತನ್ನ ತಮಿಳು ಅಸಿಸ್ಟೆಂಟ್ ಕಡೆ ತಿರುಗಿ ಅದೇ ಸಿಟ್ಟಿನಲ್ಲಿ `ನಾ ಕಥೆ ಏಡಕ್ಕೆ ವಂದಿರ್ಕೆ, ಕೇಕ್ಕೆ ವಂದಿಲ್ಲೈ’ (ನಾ ಕಥೆ ಹೇಳ್ಲಿಕ್ಕೆ ಬಂದಿದೀನಿ, ಕಥೆ ಕೇಳಕ್ಕೆ ಅಲ್ಲ!) ಎಂದು ಶೂಟಿಂಗ್ನಲ್ಲಿ ಬ್ಯುಸಿಯಾದರಂತೆ. ಅವತ್ತಿಂದ ಇಲ್ಲಿಯವರೆಗೂ ಅಂಬಿ ಶೂಟಿಂಗ್ ಸ್ಪಾಟ್ಗೆ ಆನ್ಟೈಂ ಬಂದಿದ್ದೇ ಅಪರೂಪ. ಅಂಥಾ ತನ್ನ ಗುಣವನ್ನು ನೀನು ಕಲೀಬೇಡ ಎಂದು ಮಗನಿಗೆ ಟಿಪ್ಸ್ ಕೊಟ್ಟಿದ್ದಾರೆ ಮಂಡ್ಯದ ಗಂಡು.


