ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಮುಂದುವರಿದಿದ್ದು, ಮಂಗಳವಾರ ರಾತ್ರಿ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮಣಿಪುರದ ಕಾಂಗ್ಪೋಕ್ಪಿ ಜಿಲ್ಲೆಯ ಐಗಿಜಾಂಗ್ ಗ್ರಾಮದಲ್ಲಿ ಗುಂಡಿನ ದಾಳಿ ಮತ್ತು ಬೆಂಕಿ ಹಚ್ಚಿದ ಘಟನೆಯ ಕಾರಣ ಈ ಸಾವುಗಳು ಸಂಭವಿಸಿದೆ.
‘ದಿ ಹಿಂದೂ’ ಪತ್ರಿಕೆಯ ವರದಿ ಪ್ರಕಾರ ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
“ಮಂಗಳವಾರ ರಾತ್ರಿ 10:30ರ ಸುಮಾರಿಗೆ ಈ ಘಟನೆ ನಡೆದಿದೆ” ಎಂದು ಇಂಫಾಲ್ ಪೂರ್ವದ ಪೊಲೀಸ್ ಅಧೀಕ್ಷಕರು ತಿಳಿಸಿರುವುದಾಗಿ ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಐಗಿಜಾಂಗ್ ಗ್ರಾಮವು ಕುಕಿ ಸಮುದಾಯದ ಬಾಹುಳ್ಯವನ್ನು ಹೊಂದಿದೆ. ಆದರೆ ವಶಪಡಿಸಿಕೊಂಡ ಒಂಬತ್ತು ಮೃತದೇಹಗಳು ಮೈತೇಯಿ ಸಮುದಾಯದ ಪುರುಷದ್ದಾಗಿವೆ ಎಂದು ವರದಿಯಾಗಿದೆ.
ಸಾವಿಗೀಡಾದವರು ‘ಸ್ಥಳೀಯ ಸ್ವಯಂಸೇವಕರು’ ಎಂದು ಪೊಲೀಸರು ಹೇಳಿದ್ದಾರೆ. ಐಗ್ಜಾಂಗ್ ಪ್ರದೇಶವು ಕಾಂಗ್ಕೋಪಿ ಮತ್ತು ಇಂಫಾಲ್ ಪೂರ್ವ ಜಿಲ್ಲೆಗಳ ಗಡಿಯಲ್ಲಿದೆ. ಕಳೆದ ಹಲವು ದಿನಗಳಿಂದ ಹಿಂಸಾಚಾರ ಮುಂದುವರಿದಂತೆ, ಈ ಗಡಿ ಪ್ರದೇಶದ ಮೈತೇಯಿ ಪ್ರಾಬಲ್ಯದ ಭಾಗಗಳನ್ನು ‘ರಕ್ಷಿಸಲು’ ಅನೇಕ ಮೈತೇಯಿ ಪುರುಷರು ಹತ್ತಿರದ ಪ್ರದೇಶಗಳಿಂದ ಇಲ್ಲಿಗೆ ಬಂದಿದ್ದಾರೆ ಎಂದು ವರದಿಯಾಗಿದೆ.
“ರಾತ್ರಿ 10:30ರ ಸುಮಾರಿಗೆ ಗ್ರಾಮದಲ್ಲಿ ಗುಂಡಿನ ದಾಳಿ ನಡೆಯಿತು. ಒಂಬತ್ತು ಜನರು ಸಾವನ್ನಪ್ಪಿದರು. 10 ಜನರು ಗಾಯಗೊಂಡರು. ಎಲ್ಲಾ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ” ಎಂದು ಇಂಫಾಲ್ ಪೂರ್ವ ಪೊಲೀಸ್ ವರಿಷ್ಠಾಧಿಕಾರಿ ಕೆ. ಶಿವಕಾಂತ ಸಿಂಗ್ ತಿಳಿಸಿದ್ದಾರೆ.
ಮಂಗಳವಾರ ತಡರಾತ್ರಿ ಖಮೆನ್ಲೋಕ್ನಲ್ಲಿ ಕುಕಿ ಉಗ್ರಗಾಮಿಗಳು ಹಲವಾರು ಬಾಂಬ್ಗಳನ್ನು ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆಂದು ‘ದಿ ಹಿಂದೂ’ ವರದಿ ತಿಳಿಸಿದೆ.
ಇದನ್ನೂ ಓದಿರಿ: ಇ.ಡಿ. ವಶಕ್ಕೆ ತಮಿಳುನಾಡು ಸಚಿವ ಬಾಲಾಜಿ; ದುರುದ್ದೇಶಪೂರಿತ ಎಂದ ಡಿಎಂಕೆ, ಕಾಂಗ್ರೆಸ್
“ಕುಕಿ ಬುಡಕಟ್ಟು ಉಗ್ರಗಾಮಿಗಳು ಮತ್ತು ಬುಡಕಟ್ಟು ಅಲ್ಲದ ಮೈತೇಯಿಗಳಿಗೆ ಖಮೆನ್ಲೋಕ್ ಮುಖ್ಯ ಯುದ್ಧಭೂಮಿಯಾಗಿ ಮಾರ್ಪಟ್ಟಿದೆ. ಹಲವಾರು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಉಗ್ರಗಾಮಿ ಗುಂಪುಗಳೊಂದಿಗೆ ಕೆಲವು ದಿನಗಳಿಂದ ನಡೆಯುತ್ತಿರುವ ಘರ್ಷಣೆಯಲ್ಲಿ ಅನೇಕರು ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡಿದ್ದಾರೆ” ಎಂದು ವರದಿ ತಿಳಿಸಿದೆ.
ಮಣಿಪುರದಲ್ಲಿ ಮೇ 3 ರಂದು ಪ್ರಾರಂಭವಾದ ಜನಾಂಗೀಯ ಹಿಂಸಾಚಾರದಿಂದಾಗಿ 115 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 40,000 ಜನರು ತಮ್ಮ ನಿವಾಸಗಳನ್ನು ತೊರೆದು ಸ್ಥಳಾಂತರಗೊಂಡಿದ್ದಾರೆ. ಬಹುಸಂಖ್ಯಾತ ಮೈತೇಯಿ ಸಮುದಾಯವು ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕೆ ಬೇಡಿಕೆ ಇಟ್ಟ ನಂತರ ರಾಜ್ಯದಲ್ಲಿ ಉದ್ವಿಗ್ನತೆ ಸೃಷ್ಟಿಯಾಯಿತು. ಗುಡ್ಡಗಾಡು ಬುಡಕಟ್ಟು ಸಮುದಾಯಗಳು, ಮುಖ್ಯವಾಗಿ ಕುಕಿಗಳು ಈ ಬೇಡಿಕೆಯನ್ನು ವಿರೋಧಿಸುತ್ತಾ ಬಂದಿದ್ದಾರೆ.
ಸೋಮವಾರದಂದು 22 ವರ್ಷದ ಮುಅನ್ಸಾಂಗ್ ನೌಲಕ್ ಎಂಬವರನ್ನು ಟೋರ್ಬಂಗ್ನ ಲೋಕಲೈಫೈ ಗ್ರಾಮದಲ್ಲಿ ಗುಂಪೊಂದು ಗುಂಡಿಕ್ಕಿ ಕೊಂದಿದೆ.