ರಾಜ್ಯದಲ್ಲಿ ನಾಲ್ಕು ವರ್ಷಗಳಲ್ಲಿ (2019 2022) 6,810 ಮಕ್ಕಳು ಅಸಹಜವಾಗಿ ಮೃತಪಟ್ಟಿದ್ದಾರೆ. 2022ರಲ್ಲಿ ಮೃತಪಟ್ಟವರ ಸಂಖ್ಯೆ ಅತಿ ಹೆಚ್ಚಿದೆ. ಇವುಗಳಲ್ಲಿ ತಾಯಿ ಮಕ್ಕಳ ಆತ್ಮಹತ್ಯೆ, ಕೃಷಿ ಹೊಂಡದಲ್ಲಿ ಬಿದ್ದು ಸಾವು ಮತ್ತು ಮಕ್ಕಳ ಆತ್ಮಹತ್ಯೆ ಪ್ರಕರಣಗಳೂ ಸೇರಿವೆ.
2019 2022ರ ಅವಧಿಯಲ್ಲಿ, ರಾಜಧಾನಿ ಬೆಂಗಳೂರು ನಗರದಲ್ಲೇ ಹೆಚ್ಚು ಮಕ್ಕಳು ಮೃತಪಟ್ಟಿದ್ದಾರೆ. ಬೆಳಗಾವಿ ಮತ್ತು ತುಮಕೂರು ಜಿಲ್ಲೆಗಳು ಕ್ರಮವಾಗಿ ಎರಡು, ಮೂರನೇ ಸಾಲಿನಲ್ಲಿವೆ. ರಾಜ್ಯದಲ್ಲಿರುವ ಅಷ್ಟೂ ಜಿಲ್ಲೆಗಳ ವ್ಯಾಪ್ತಿಯ, ರೈಲ್ವೆ ಪೊಲೀಸ್ ಠಾಣೆಗಳಲ್ಲಿ 406 ಪ್ರಕರಣಗಳು ದಾಖಲಾಗಿವೆ.
ಈ ಮಾಹಿತಿಗಾಗಿ ಮೈಸೂರಿನ ಒಡನಾಡಿ ಸೇವಾ ಸಂಸ್ಥೆ ಆರ್ಟಿಐ ಅಡಿ ರಾಜ್ಯ ಅಪರಾಧ ದಾಖಲಾತಿ ವಿಭಾಗದಿಂದ ಅಂಕಿಅಂಶಗಳನ್ನು ಪಡೆದಿದೆ. ಕೋವಿಡ್ ಸಾಂಕ್ರಾಮಿಕ ಇದ್ದ ಎರಡು ವರ್ಷಗಳಲ್ಲಿ ಸಾವಿನ ಪ್ರಮಾಣ ಕಡಿಮೆ ಇತ್ತು, ಆನಂತರದಲ್ಲಿ ಹೆಚ್ಚಾಗಿದೆ ಎಂದು ಹೇಳಿದೆ.
ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಹಾಸನ, ಹಾವೇರಿ, ಕೊಡಗು, ಕೋಲಾರ, ಕೊಪ್ಪಳ, ಮಂಡ್ಯ, ಮೈಸೂರು ಗ್ರಾಮಾಂತರ, ರಾಯಚೂರು, ರಾಮನಗರ, ಶಿವಮೊಗ್ಗ, ಉತ್ತರಕನ್ನಡ, ಯಾದಗಿರಿ, ಕಲಬುರಗಿ ಗ್ರಾಮಾಂತರದಲ್ಲಿ ಪ್ರಕರಣಗಳ ಸಂಖ್ಯೆ ಮೂರಂಕಿಯಷ್ಟಿದೆ. ಕೆಲವು ಜಿಲ್ಲೆಗಳಲ್ಲಿ 100 ದಾಟಿದ್ದರೆ, ಇನ್ನೂ ಕೆಲವು ಜಿಲ್ಲೆಗಳಲ್ಲಿ 200 ದಾಟಿದೆ.
ಚಾಮರಾಜನಗರ, ಚಿಕ್ಕ ಮಗಳೂರು, ಗದಗ, ಕೆಜಿಎಫ್, ಮಂಗಳೂರು ನಗರ, ಮೈಸೂರು ನಗರ, ಉಡುಪಿ, ವಿಜಯನಗರದಲ್ಲಿ ಹಾಗೂ ಬೆಳಗಾವಿ ನಗರ, ಕಲಬುರಗಿ ನಗರ, ಹುಬ್ಬಳ್ಳಿ ಧಾರವಾಡ ನಗರದಲ್ಲಿ ಸಾವಿನ ಸಂಖ್ಯೆ ಎರಡಂಕಿಯಷ್ಟಿವೆ.
ಇದನ್ನೂ ಓದಿ: ವಯಸ್ಕ ಪೋಷಕರ ಆರೈಕೆ ಮಕ್ಕಳ ಹೊಣೆ: ಹೈಕೋರ್ಟ್