ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿ (ಸಿಎಮ್ಡಿಆರ್ಎಫ್) ಅಡಿ ಹಣ ಬಿಡುಗಡೆ ಮಾಡುವಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸ್ವಜನಪಕ್ಷಪಾತ ಮತ್ತು ಅವ್ಯವಹಾರ ಮಾಡಿದ್ದಾರೆ ಎನ್ನುವ ಆರೋಪಗಳ ಮೇಲೆ ಇತರ 18 ಜನರ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ಲೋಕಾಯುಕ್ತದ ತ್ರಿಸದಸ್ಯ ಪೀಠ ಸೋಮವಾರ ವಜಾಗೊಳಿಸಿದೆ.
ಈ ಪ್ರಕರಣದಲ್ಲಿ ಸಿಎಂ ಮತ್ತು ಇತರರ ವಿರುದ್ಧದ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಆರೋಪಗಳಲ್ಲಿ ಯಾವುದೇ ಪುರಾವೆಗಳಿಲ್ಲ ಎಂದು ಲೋಕಾಯುಕ್ತ ಪೀಠವು ಹೇಳಿದೆ.
ಈ ಪ್ರಕರಣದ ಆದೇಶವನ್ನು ಒಂದು ವರ್ಷಕ್ಕೂ ಹೆಚ್ಚು ಅವಧಿಗೆ ಕಾಯ್ದಿರಿಸಿದ ನಂತರ ಇದೀಗ ಲೋಕಾಯುಕ್ತರ ನಿರ್ಧಾರ ಹೊರಬಿದ್ದಿದೆ. ಸಾಂವಿಧಾನಿಕ ಸಂಸ್ಥೆಯ ಇಬ್ಬರು ನ್ಯಾಯಮೂರ್ತಿಗಳ ನಡುವಿನ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಪ್ರಕರಣವನ್ನು ಈ ವರ್ಷದ ಮಾರ್ಚ್ನಲ್ಲಿ ಲೋಕಾಯುಕ್ತದ ಪೂರ್ಣ ಪೀಠಕ್ಕೆ ಉಲ್ಲೇಖಿಸಲಾಗಿತ್ತು.
ಲೋಕಾಯುಕ್ತ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಮತ್ತು ಉಪ ಲೋಕಾಯುಕ್ತ ನ್ಯಾಯಮೂರ್ತಿ ಹರುನ್ ಅಲ್ ರಶೀದ್ ಮತ್ತು ನ್ಯಾಯಮೂರ್ತಿ ಬಾಬು ಮ್ಯಾಥ್ಯೂ ಪಿ ಜೋಸೆಫ್ ಅವರಿದ್ದ ಪೀಠ ಸೋಮವಾರ ತೀರ್ಪು ನೀಡಿದ್ದು, ಸಿಎಂಡಿಆರ್ಎಫ್ನಿಂದ ಹಣ ಬಿಡುಗಡೆ ಮಾಡುವ ಅಧಿಕಾರ ಮುಖ್ಯಮಂತ್ರಿಗೆ ಇದೆ ಎಂದು ಹೇಳಿದ್ದಾರೆ.
ಸಿಎಂಡಿಆರ್ಎಫ್ನಿಂದ ಹಣ ಬಿಡುಗಡೆ ಮಾಡುವಲ್ಲಿ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ ಮಾಡಿದ್ದಾರೆ ಎಂದು 2018ರಲ್ಲಿ ಕೇರಳ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಆರ್ಎಸ್ ಶಶಿಕುಮಾರ್ ಅವರು ಮುಖ್ಯಮಂತ್ರಿ ಮತ್ತು ಹಿಂದಿನ ಎಲ್ಡಿಎಫ್ ಕ್ಯಾಬಿನೆಟ್ನ ಸದಸ್ಯರು ಸೇರಿದಂತೆ 18 ಇತರರ ವಿರುದ್ಧ ಆರೋಪ ಮಾಡಿದ್ದರು.
ಅರ್ಜಿದಾರರು ಮುಖ್ಯವಾಗಿ 2017ರ ಕ್ಯಾಬಿನೆಟ್ನ ಕೆಲವು ನಿರ್ಧಾರಗಳನ್ನು ಪ್ರಶ್ನಿಸಿದ್ದಾರೆ, ಅಲ್ಲಿ ದಿವಂಗತ ಎನ್ಸಿಪಿ ರಾಜ್ಯಾಧ್ಯಕ್ಷ ಉಜವೂರ್ ವಿಜಯನ್ ಅವರ ಕುಟುಂಬದ ಚಿಕಿತ್ಸೆ ಮತ್ತು ಅವರ ಮಕ್ಕಳ ಶೈಕ್ಷಣಿಕ ವೆಚ್ಚಗಳಿಗಾಗಿ ಹಣಕಾಸಿನ ನೆರವು, ದಿವಂಗತ ಸಿಪಿಎಂ ಶಾಸಕ ಕೆಕೆ ರಾಮಚಂದ್ರನ್ ಅವರ ಕುಟುಂಬಕ್ಕೆ ನೀಡಿದ ಹಣ ಮತ್ತು ಅವರ ಮಗನಿಗೆ ಉದ್ಯೋಗ ಮತ್ತು ಆಗಿನ ರಾಜ್ಯ ಗೃಹ ಸಚಿವರಿಗೆ ಎಸ್ಕಾರ್ಟ್ ಡ್ಯೂಟಿ ಮಾಡುವಾಗ ಮೋಟಾರು ಅಪಘಾತದಲ್ಲಿ ಸಾವನ್ನಪ್ಪಿದ ಸಿವಿಲ್ ಪೊಲೀಸ್ ಅಧಿಕಾರಿಯ ಸಂಬಂಧಿಕರಿಗೆ ಆರ್ಥಿಕ ನೆರವು ನೀಡಲಾಯಿತು. ಈ ವಿಚಾರಗಳನ್ನು ಅರ್ಜಿದಾರರು ಪ್ರಸ್ತಾಪಿಸಿದ್ದಾರೆ.
ಸೋಮವಾರ ಅವರ ಅರ್ಜಿಯನ್ನು ವಜಾಗೊಳಿಸಿದ ನಂತರ, ತೀರ್ಪಿನ ವಿರುದ್ಧ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಶಶಿಕುಮಾರ್ ಹೇಳಿದ್ದಾರೆ.
”ಲೋಕಾಯುಕ್ತದ ಮೂವರೂ ನ್ಯಾಯಾಧೀಶರು (ರಾಜಕೀಯವಾಗಿ) ಪ್ರಭಾವಿತರಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ. ನ್ಯಾಯಾಧೀಶರ ಕಡೆಯಿಂದ ಅಪ್ರಾಮಾಣಿಕತೆ ಕಂಡುಬಂದಿದೆ. ಇದು ಸತ್ಯವಾದ ತೀರ್ಪು ಅಲ್ಲ. ಸದ್ಯದಲ್ಲೇ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಿದ್ದು, ಅಲ್ಲಿಯೂ ನನಗೆ ನ್ಯಾಯ ಸಿಗದಿದ್ದರೆ ಸುಪ್ರೀಂ ಕೋರ್ಟ್ನ ಮೊರೆ ಹೋಗುತ್ತೇನೆ” ಎಂದು ಶಶಿಕುಮಾರ್ ಹೇಳಿದ್ದಾರೆ.
ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಲೋಕಾಯುಕ್ತರ ಆದೇಶವನ್ನು ಸ್ವಾಗತಿಸಿದ್ದಾರೆ. ”ಲೋಕಾಯುಕ್ತರ ಮುಂದೆ ಅರ್ಜಿ ಸಲ್ಲಿಸಿದ ವ್ಯಕ್ತಿ (ಕೇರಳ) ವಿಶ್ವವಿದ್ಯಾಲಯದ ಕಾಂಗ್ರೆಸ್ ಸಂಘಟನೆಯ ನಾಯಕರಾಗಿದ್ದರು. ಅಂತಹ ಅರ್ಜಿಗಳು ಸತ್ಯದಿಂದ ದೂರವಿರುತ್ತವೆ ಮತ್ತು ರಾಜಕೀಯ ಪ್ರೇರಿತವಾಗಿವೆ. ಈ ಹಿಂದೆ ವಿಶ್ವವಿದ್ಯಾನಿಲಯಗಳಿಗೆ ಸಂಬಂಧಿಸಿದಂತೆ ಅವರು ಸಲ್ಲಿಸಿದ್ದ ಅರ್ಜಿಗಳು ಸಹ ಇದೇ ರೀತಿಯಾಗಿದ್ದು, ಅವುಗಳನ್ನು ವಜಾಗೊಳಿಸಲಾಗಿದೆ” ಎಂದು ಸಿಪಿಐ(ಎಂ) ಹೇಳಿಕೆ ತಿಳಿಸಿದೆ.
ಇದನ್ನೂ ಓದಿ: ಮಧ್ಯಪ್ರದೇಶ ದೇಶದ ‘ಭ್ರಷ್ಟಾಚಾರದ ರಾಜಧಾನಿ’: ರಾಹುಲ್ ಆರೋಪ