Homeಸಾಹಿತ್ಯ-ಸಂಸ್ಕೃತಿಕಥೆಬಿ.ಎಲ್.ವೇಣು ಅವರ ದುವಾ ಕಥೆ

ಬಿ.ಎಲ್.ವೇಣು ಅವರ ದುವಾ ಕಥೆ

- Advertisement -
- Advertisement -

| ಬಿ.ಎಲ್.ವೇಣು |

ಮೂಲತಃ ಚಿತ್ರದುರ್ಗದವರಾದ ಬಿ.ಎಲ್.ವೇಣುರವರು ಕಾದಂಬರಿಕಾರರಾಗಿ, ಕಥೆಗಾರರಾಗಿ, ಚಿತ್ರಸಾಹಿತಿಯಾಗಿ ಅಪಾರ ಮನ್ನಣೆ ಗಳಿಸಿದವರು. ತಂದೆ-ತಾಯಿ ಇಬ್ಬರೂ ರಂಗಕಲೆ ಹಿನ್ನೆಲೆಯವರಾಗಿದ್ದರಿಂದ ಸಾಹಿತ್ಯಾಸಕ್ತಿ ಅವರಲ್ಲಿ ಸಹಜವಾಗಿಯೇ ಬೆಳೆದುಬಂದಿದೆ. ಚಾರಿತ್ರಿಕ ಹಿನ್ನೆಲೆಯ ನೆಲದಿಂದ ಬಂದ ಅವರು ಗಂಡುಗಲಿ ಮದಕರಿನಾಯಕ, ರಾಜಾಬಿಚ್ಚುಕತ್ತಿ ಭರಮಣ್ಣನಾಯಕ, ಕಲ್ಲರಳಿ ಹೂವಾಗಿ, ಕ್ರಾಂತಿಯೋಗಿ ಮರುಳಸಿದ್ಧ, ಹೆಬ್ಬುಲಿ ಹಿರೇಮದಕರಿನಾಯಕ ಮುಂತಾದ 5 ಐತಿಹಾಸಿಕ ಕಾದಂಬರಿಗಳು ಸೇರಿದಂತೆ 26 ಕಾದಂಬರಿಗಳನ್ನು ಹಲವಾರು ನಾಟಕಗಳನ್ನು ರಚಿಸಿದ್ದಾರೆ. ಅವರ `ಪ್ರೇಮಪರ್ವ’ ಕಾದಂಬರಿಯು ಚಲನಚಿತ್ರವಾಗಿ ಲವ್‍ಸ್ಟೋರಿಗಳ ಟ್ರೆಂಡ್‍ಗೆ ನಾಂದಿ ಹಾಡಿತಲ್ಲದೆ, ನಾಲ್ಕು ಭಾಷೆಗಳಲ್ಲಿ ತೆರೆಕಂಡಿತು. ಪುಟ್ಟಣ್ಣ ಕಣಗಾಲರ `ಅಮೃತಘಳಿಗೆ’ ಸಿನಿಮಾ ಮೂಲಕ ಸಂಭಾಷಣೆ ಬರೆಯಲು ಶುರು ಮಾಡಿದ ಅವರು 60ಕ್ಕೂ ಹೆಚ್ಚು ಸಿನಿಮಾಗಳಿಗೆ ಚಿತ್ರಸಾಹಿತಿಯಾಗಿ ದುಡಿದಿದ್ದಾರೆ. ನಿರ್ದೇಶಕ ಭಾರ್ಗವ, ನಟ ವಿಷ್ಣುವರ್ಧನ್ ಮತ್ತು ಬಿ.ಎಲ್.ವೇಣುರವರ ಜೋಡಿ ಎಂಬತ್ತರ ದಶಕದಲ್ಲಿ ಯಶಸ್ವಿ ಸಿನಿ ಜೋಡಿಯಾಗಿ ಗುರುತಿಸಿಕೊಂಡಿತ್ತು. ಸಾಹಿತ್ಯ, ಸಿನಿಮಾ ಎರಡೂ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಅವರು ಈಗಲೂ ಕೃತಿಗಳ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಹೊರಗಡೆ ತಲೆ ಎತ್ತಿ ತಿರುಗಾಡಲೂ ಶರಮ್ ಆಗ್ತದೆ. ಮಾನಸಿಕ ಹಿಂಸೆಯಿಂದಾಗಿ ಬದುಕೇ ಬೇಡವೆನ್ನಿಸಿದೆ. ನನ್ನನ್ನೇ ಉಗ್ರನಂತೆ ನೋಡುತ್ತಿದ್ದಾರೇನೋ ಎಂಬ ಅಳಕು. ಯಾರೋ ಮಾಡುವ ಗಲತ್ತಿಗೆ ನಾನೇಕೆ ಶರಮ್ ಆಗಬೇಕು? ಇತಿಹಾಸದಲ್ಲಿ ಸಂಭವಿಸಿದ್ದಕ್ಕೆಲ್ಲಾ ಹೊಣೆಗಾರನಾಗಬೇಕೇಕೆ? ನನ್ನ ಯಾವ ಪ್ರಶ್ನೆಗಳಿಗೂ ಉತ್ತರ ಸಿಗುತ್ತಿಲ್ಲವೆಂಬ ಸಂಕಟ. ಪ್ರೇಯರ್ ಮಾಡಲು ಬಂದ ಇಸ್ಮಾಯಿಲ್ ತಂಪು ಆವರಿಸಿದ ಮಸೀದಿಯಲ್ಲೂ ಬೆವರೊಡೆದ. ಮನಸ್ಸು ಬಲೆಯಲ್ಲಿ ಸಿಕ್ಕ ಜೇಡ. ಮಸೀದಿ ಕೆಡವಿದರು. ಕೆಡವಿದವರೇ ಗದ್ದಲವೆಬ್ಬಿಸಿ ಅನೇಕರನ್ನು ಸಾಯಬಡಿದರು. ಪ್ರಾಣ್ ಬಚಾವ್ ಮಾಡಿಕೊಳ್ಳಲು ಹೊಡೆದಾಡಿದ್ದೆವು. ತಲವಾರ್ ಹಿಡಿದುಬಂದವರು ಇವರ ಮನೇಲಿ ವೆಪನ್ಸ್ ಅದಾವೆ ಅಂದರು. ಮಸೀದಿನಾಗೂ ಇಟ್ಕಂಡವರೆ ಅಂದರು. ಮಸೀದಿಗೂ ನುಗ್ಗಿದರು. ಇದೆಲ್ಲಾ ಪುರಾನಿ ಕಹಾನಿಯಾದರೂ ನಾವಿಲ್ಲೇ ಬದುಕಿದ್ದೇವೆ. ನಮ್ಮ ದೇಶದಲ್ಲೇ ಪರಕೀಯರಂತೆ! ಚರಿತ್ರೆ ಪುಟಗಳಲ್ಲೆಂದೋ ನಮ್ಮವರು ದರ್ಬಾರ್ ಮಾಡಿದ ನೆಲದಲ್ಲಿಂದು ಗುಲಾಮರಂತೆ ಬದುಕುವುದೂ ಕಷ್ಟವಾಗಿದೆ. ನೀವೆಲ್ಲಾ ಕನ್ವರ್ಟೆಡ್ ಮುಸ್ಲಿಮರು ಅಂತಾರೆ. ಹಿಂದೆ ನಮ್ಮವರೇ ಆಗಿದ್ದೀರಿ ಅಂತ ಜೋಕ್ಸ್ ಹೊಡಿತಾರೇ ವಿನಹ ತಮ್ಮವರಂತೆ ಕಂಡಿದ್ದಿಲ್ಲ. ನವಾಬರು ಆರನೂರು ವರ್ಷ ಆಳಿದರೂ ದೇಶವನ್ನು ದೋಚಲಿಲ್ಲ. ಇಲ್ಲಿಯೇ ಮೀನಾರು ಮಸೀದಿ ಮಹಲುಗಳನ್ನು ಕಟ್ಕೊಂಡು ಬೇಪಾರ್ ಮಾಡ್ಕೊಂಡು ಬದುಕಿದರು. ಬ್ರಿಟಿಷರಂಗೆ ದೇಶವನ್ನೇ ಲೂಟ್ ಮಾಡಿ ಹೊತ್ತೊಯ್ಯಲಿಲ್ಲ. ಬ್ರಿಟಿಷರನ್ನು ಓಡಿಸೋಕೆ ನಾವೂ ನಮ್ಮದೇ ವತನ್ ಅನ್ನೋ ಭಾವನೆಯಿಂದ್ಲೇ ಹೋರಾಡಿದೆವು. ಅವರು ಹೋಗಬೇಕಾದರೆ ದೇಶನಾ ಎರಡು ಭಾಗ ಮಾಡಿ ಮನಸ್ಸುಗಳನ್ನೂ ಒಡೆದರು. ದೇಶದ ಮೇಲೆ ಮೊಹಬತ್ ಇಲ್ಲದಿದ್ದರೆ ನಾವೇಕೆ ಇಲ್ಲಿ ಉಳೀತಿದ್ದೆವು? ನಮ್ಮ ಪಾಡಿಗೆ ನಾವು ಬೆವರು ಬಸಿದು ದುಡ್ಕೊಂಡು ಬದುಕ್ತಿದ್ದೀವಿ. ಯಾವನೋ ಸಾಬರವನು ಶತ್ರು ದೇಶದ ಜೊತೆ ದೋಸ್ತಿ ಮಾಡ್ಕೊಂಡು ಬಾಂಬ್ ಉಡಾಯಿಸಿ ಸೈನಿಕರ ಜೀವ ತೆಗೆದರೆ ಸಾರಾಸಗಟಾಗಿ ಅನುಮಾನಿಸೋದು ಹೀಯಾಳಿಸೋದು ಸರೀನಾ? ಹಿಂದು ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರುದ್ಯಾನ ಎಲ್ಲಿದೆ? ಮಾಧ್ಯಮಗಳಲ್ಲಿ ಬೇರೆ ಟೀಕೆ, ತೀರ್ಪು! ಗಡ್ಡಬಿಟ್ಟೋರೆಲ್ಲಾ ಘಾತಕರೆಂಬ ಇರಿಯುವ ನೋಟ. ದೇಶವನ್ನೇ ಬಿಟ್ಟು ತೊಲಗಿ ಎಂಬಷ್ಟು ದ್ವೇಷ. ಬುದ್ಧ ಬಸವ ಗಾಂಧಿ ಹುಟ್ಟಿದ ದೇಶದಲ್ಲೇ ನಿಮ್ಮ ಹಾಗೆ ಹುಟ್ಟಿದ್ದೇವಲ್ಲ. ಗಾಂಧಿಯನ್ನು ಕೊಂದಿದ್ದು ಯಾರು? ಮುಸಲ್ಮಾನರಾ? ಬ್ರಿಟಿಷರಾ? ಹೇಳಿ? ಪಾಕಿಸ್ತಾನಕ್ಕೇ ನುಗ್ಗಿ ಬಗ್ಗುಬಡಿದು, ವಾಜಪೇಯಿರಂತಹ ಸಜ್ಜನನಿಂದ ‘ದುರ್ಗಿ’ ಅಂತ ತಾರೀಫ್ ಮಾಡಿಸಿಕೊಂಡ ಇಂದಿರಾಗಾಂಧಿನಾ, ಜಂಟ್ಲಮೆನ್ ರಾಜೀವಗಾಂಧಿನಾ ಕೊಂದಿದ್ದು ನಾವಾ? ಹಿಂದುಗಳಲ್ಲೂ ಭಯೋತ್ಪಾದಕರಿಲ್ಲವೆ ಅಂತ ಕೇಳಿದ್ರೆ ಉರ್ಕೊಂಡು ಬೀಳ್ತಿರಲ್ವೆ. ಭಯೋತ್ಪಾದಕರಿಗೆ ಯಾವ ಜಾತಿ? ಯಾವ ಧರ್ಮ? ಅವರಿಗೆ ಬೇಕಿರೋದು ಗೆಲವೂ ಅಲ್ಲ. ಎದುರಿಗೆ ನಿಂತು ಹೋರಾಡೋರಿಗೆ ಸೋಲು ಗೆಲವು ಮುಖ್ಯ. ಮೋಸಗಾರರಿಗೆ ಬೇಕಿರೋದು ನೆತ್ತರು. ಮೊನ್ನೆ ಅಸುನೀಗಿದ ನಲವತ್ತು ನಾಲ್ಕಕ್ಕೂ ಹೆಚ್ಚು ಸೈನಿಕರಲ್ಲಿ ನಸೀರ್ ಅಹ್ಮದ್ ಕೂಡ ಇದ್ದನಲ್ಲ. ಅವನದ್ದು ದೇಶನಿಷ್ಠೆಯಲ್ಲವೆ? ಜೀವ ಅಲ್ಲವೆ? ಕುಟುಂಬಸ್ಥನಲ್ಲವೆ? ನೆನಪಿಸಿಕೊಳ್ಳೋರೇ ಇಲ್ಲ! ಹಡಬೆ ಚಾನಲ್‍ನವರೂ ತುಟಿಬಿಚ್ಚಲಿಲ್ಲ! ಯಾರಿಗೂ ನಾವು ನೀವೆಲ್ಲಾ ಒಟ್ಟಿಗೆ ಬಾಳೋದು ಬೇಕಿಲ್ಲ. ದೇಶದ ಶಕ್ತಿ ಹೆಚ್ಚೋದೂ ಬೇಕಿಲ್ಲ.

ರಾಜಕಾರಣಿಗಳ ಪಾಲಿಗೆ ನಾವು ಕೇವಲ ಮತಬ್ಯಾಂಕ್. ನಾವೇನು ಅರ್ಜಿ ಹಾಕ್ಕೊಂಡು ಹುಟ್ಟಿದ್ದೆವಾ? ಕನ್ನಡ ಮಾತನಾಡೋರೆಲ್ಲಾ ಕನ್ನಡಿಗರು ಅನ್ನೋದಾದ್ರೆ ನಾವೂ ಕನ್ನಡಿಗರು. ಹಿಂದಿ ಒಂದಿಷ್ಟು ಗೊತ್ತು. ಉರ್ದು ಗೊತ್ತೇ ಇಲ್ಲ. ನಮ್ಮ ಮಕ್ಕಳೂ ಕಾನ್ವೆಂಟಿಗೇ ಹೋಗೋದು. ಹೀಗೆಲ್ಲಾ ಪ್ರಮಾಣೀಕರಿಸಬೇಕಾದ್ದೂ ಎಂತಹ ಪರಿಶಾನಿ ನೋಡಿ. ದಾಡಿ ಬಿಟ್ಟರೂ ತಪ್ಪು ಬುರ್ಕಾ ತೊಟ್ಟರೂ ತಪ್ಪು. ಒಂದು ಹಿಡಿಯಷ್ಟು ಪ್ರೀತಿ ತೋರಿಸಿದರೂ ಸಾಗರದಷ್ಟು ಪ್ರೀತಿ ಕೊಡೋರು ಕಣ್ರಿ ನಾವು. ಸಲೀಮ್ ಅನಾರ್ಕಲಿ, ಲೈಲಾ ಮಜ್ನು, ಶಿರಿನ್ ಪರಿಹಾದ್ ರಕ್ತವೇ ನಮ್ಮಲ್ಲೂ ಹರೀತಿದೆ. ನಮ್ಮಲ್ಲೂ ಸೂಫಿ ಸಂತರು, ಕಲಾಂನಂತಹ ವಿಜ್ಞಾನಿಗಳು ಹುಟ್ಟಿದ್ದಾರೆ. ಬ್ರಿಟಿಷರ ವಿರುದ್ಧ ಲಡಾಯಿಗೈದ ಟಿಪ್ಪುನಂತಹ ಶೂರರೂ ಹುಟ್ಟಿದ್ದಾರೆ. ಟಿಪ್ಪು ಹೋರಾಡಿದ್ದು ತನ್ನ ಪಟ್ಟಪದವಿಗಳಿಗಾಗಿ ಅಂತ ವಾದ ಹೂಡೋದು ಯಾವ ನ್ಯಾಯ? ಹಾಗಾದರೆ ಝಾನ್ಸಿರಾಣಿ, ಕಿತ್ತೂರ ರಾಣಿ, ಅಬ್ಬಕ್ಕ ಹೋರಾಡಿದ್ದೇಕೆ? ಇವರೆಲ್ಲಾ ಬ್ರಿಟಿಷರೊಂದಿಗೆ ರಾಜಿಯಾಗಿ ಹಾಯಾಗಿರಬಹುದಿತ್ತಲ್ಲ. ಹಾಗಾಗಿದ್ದಿದ್ದರೆ ಭಾರತ ದೇಶ ಎಂದಿಗೂ ನಮ್ಮದಾಗುತ್ತಿರಲಿಲ್ಲ. ಗಾಂಧೀಜಿ ಬರುವವರೆಗೂ ಹೋರಾಟದ ಕಾವನ್ನು ಕಾಪಾಡಿಕೊಂಡು ಬಂದ ದೇಶಪ್ರೇಮಿಗಳಲ್ಲವೆ ಇವರು? ಈಗೀಗ ಊಟ ಸೇರ್ತಾ ಇಲ್ಲ. ನಿದ್ರೆ ಬರ್ತಾ ಇಲ್ಲ. ಹೊರಗೆ ಹೆಜ್ಜೆ ಇಡಲೂ, ಕಚೇರಿಯಲ್ಲಿ ದುಡಿಯಲೂ ಮುಜುಗರ. ಯಾರೇನಂದರೂ ಸಹನೆಗೆಡುವಂತಿಲ್ಲ. ಬೈದವರನ್ನ ಬಂಧುಗಳಯ್ಯಾ ಅಂತ ಬಸವಣ್ಣೋರೇ ಅಂದಾಗ ನಮ್ಮಂಥವರ ಪಾಡೇನು. ನಾವೂ ದೇಶವಾಸಿಗಳಲ್ಲವೆ. ಭಾಯಿ ಔರ್ ಬೆಹನ್‍ಗಳಲ್ಲವೆ? ಸೈನಿಕರಲ್ಲಿ ಜಾತಿಮತ ಹುಡುಕೋದು ಸಣ್ಣತನವಲ್ಲವೆ

ನಮ್ಮವರೂ ಸೇನೆಯಲ್ಲಿಲ್ಲವೆ? ಯಾರೂ ಸತ್ತೇ ಇಲ್ಲವೆ!? ಪಾಕಿಸ್ತಾನದ ಮೇಲೆ ಯುದ್ಧ ಮಾಡಿ ವಿಷವೃಕ್ಷವನ್ನ ಒಂದೇ ಸಲ ಕಿತ್ತು ಹಾಕಿ ನೆಮ್ಮದಿಯಾಗಿ ಬಾಳಲಾದರೂ ಅವಕಾಶ ಕೊಡಿ. ಮುಖ್ಯವಾಹಿನಿಗೆ ಬನ್ನಿರೆಂಬ ವಾಹಿನಿಗಳೇ ವಿಷಜಂತುಗಳಂತೆ ನೋಡುವುದು ಸುಳ್ಳೇ? ನಮ್ಮಲ್ಲಿಯೇ ಬಡಾ ಆದ್ಮಿಗಳು ಮಿಲಿಯನಿಯರ್ಸ್ ಹಾಯಾಗಿ ಮಹಲುಗಳಲ್ಲಿದ್ದಾರೆ. ಮಿಡ್ಲ್‍ಕ್ಲಾಸ್‍ಗಳ ಗತಿಯೇನು? ಸೇನೆಗೆ ಸೇರಿ ದೇಶಪ್ರೇಮವನ್ನು ಸಾಬೀತು ಮಾಡುವ ವಯಸ್ಸೂ ನನ್ನದಲ್ಲ. ಪರರನ್ನು ಕೊಂದರೆ ಜನ್ನತ್ ಸಿಗುವುದೆಂದು ನಂಬಿದವನೂ ಅಲ್ಲ. ವಾರ್‍ಗಿಂತ ಪ್ಯಾರ್ ಈವತ್ತು ಮುಖ್ಯ. ಹೊರದೇಶಗಳಿಗಿಂತ ನಾವಿಲ್ಲಿ ಸುಖವಾಗಿಯೂ ಸುರಕ್ಷಿತವಾಗಿಯೂ ಇದ್ದೇವೆ. ಆದರೆ ಬಾಳಲು ಸುಖ ಸುರಕ್ಷತೆಗಿಂತ ನಂಬಿಕೆ ಮುಖ್ಯ ಕಣ್ರಿ. ದೇಶಭಕ್ತರೆಂದು ಪ್ರೂವ್ ಮಾಡಲು ಎಲ್ಲರ ಜೊತೆ ಪಾಕ್ ಧ್ವಜ ಸುಟ್ಟೆವು. ಮಡಿದ ಧೀರರಿಗಾಗಿ ಕ್ಯಾಂಡಲ್ ಹಿಡಿದೆವು. ಕವಿತೆ ಬರೆದು ಹಾಡಿದೆವು. ಭಾರತಮಾತಾಕಿ ಜೈ ಅಂತ ಕೂಗಿದ್ದಾಯಿತು. ರಾಮಮಂದಿರ ಕಟ್ಟೋಣ ಅಂದಿದ್ದಾಯಿತು. ಹೇಗೆ ನಂಬಿಸೋದು ನಿಮ್ಮನ್ನು! ನೀವೇ ಹೇಳಿ ಕೊಡ್ರಪ್ಪಾ? ಬೆಂಕಿ ಮಧ್ಯೆ ಬದುಕೋದು ಹೇಗೆ. ನಮಗೆ ಬದುಕಲಾದರೂ ಯಾವ ದೇಶವಿದೆ? ಈ ದೇಶ ನಮ್ಮದೂ ಅಲ್ಲವೆ? ಕಾಪಾಡೋದು ಜನ್ನತ್. ನೆರೆಗೆ ಹೊರೆಯಾಗದಿದ್ದರದೇ ಜನ್ನತ್. ನೀವು ತಿನ್ನೋದು ಉಡೋದನ್ನೇ ಅಲ್ಲವೆ ನಾವೂ ಉಡೋದು ತಿನ್ನೋದು. ದಲಿತರೂ ನಿಮ್ಮವರೆ. ನೀವು ಅವರನ್ನು ಮುಟ್ಟೋಕೇ ಹಿಂಜರಿತೀರಲ್ಲ. ನಾವೆಂದೂ ಹಾಗೆ ವರ್ತಿಸಿದವರಲ್ಲ. ನಿಮ್ಮ ದೇವಾಲಯಗಳಿಗೆ ನಾವು ಬಂದಂಗೆ ನೀವು ಮಸೀದಿಗಳಿಗೇಕೆ ಬರೋದಿಲ್ಲ! ಮಸೀದಿಗಳಿಗೆಂದೂ ನಾವು ಬೀಗವೇ ಹಾಕಿದವರಲ್ಲ. ದೇವರು ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆವ ಕೋಮುವಾದಿ ರಾಜಕಾರಣಿಗಳನ್ನು ನಂಬದಿರಿ. ನಿಮ್ಮೊಡನೆ ಒಟ್ಟಾಗೇ ಬಾಳುತ್ತಿರುವ ನಮ್ಮನ್ನು ನಂಬಿ ಪ್ಲೀಸ್. ನಂಬಿದರೆ ನಂಬಿ ಬಿಟ್ಟರೆ ಬಿಡಿ. ನೀವು ಪ್ರೀತಿಸಿ ದ್ವೇಷಿಸಿ, ನಮ್ಮ ಸಾವು ಬದುಕು ಈ ನೆಲದಲ್ಲಿಯೇ. ಅಚ್ಚೆದಿನ್ ಬಾರದಿದ್ದರೆ ಬೇಡ, ಬುರೆದಿನ್ ಬಾರದಿದ್ದರೆ ಬಸ್-ಸಾಕಪ್ಪ. ಖುದಾನಲ್ಲಿ ನನ್ನ ದುವಾ ಇದೆ. ಬೊಗಸೆಯಿಂದ ಮುಖ ವರೆಸಿಕೊಂಡ ಇಸ್ಮಾಯಿಲ್ಗೆ ಕೆನ್ನೆಯ ಮೇಲಿಳಿದ ಕಣ್ಣೀರು ತಾಕಿದವು. ಎರಡೂ ಭುಜಗಳತ್ತ ನೋಡಿದ ಶಾಸ್ತ್ರ ಮಾಡಿ ನಿಟ್ಟುಸಿರಿನೊಂದಿಗೆ ಪ್ರೇಯರ್ ಮುಗಿಸಿ ಮೇಲೆದ್ದ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...