Homeಎಕಾನಮಿಐದು ಟ್ರಿಲಿಯನ್ ಡಾಲರ್ ನಲ್ಲಿ ಎಷ್ಟು ಸೊನ್ನೆಯಿವೆ ಹೇಳಿ ನೋಡೋಣ??

ಐದು ಟ್ರಿಲಿಯನ್ ಡಾಲರ್ ನಲ್ಲಿ ಎಷ್ಟು ಸೊನ್ನೆಯಿವೆ ಹೇಳಿ ನೋಡೋಣ??

- Advertisement -
- Advertisement -

ಇದು ಇತ್ತೀಚೆಗೆ ಅರ್ಥಶಾಸ್ತ್ರಜ್ಞ ಮತ್ತು ಕಾಂಗ್ರೆಸ್ ವಕ್ತಾರರಾದ ಗೌರವ್ ವಲ್ಲಭ್ ಅವರು ಬಿಜೆಪಿಯ ವಕ್ತಾರ ಸಂಬಿತ್ ಪಾತ್ರಾ ಅವರಿಗೆ ಟಿವಿಯ ಪಬ್ಲಿಕ್ ಡಿಬೇಟ್ ಒಂದರಲ್ಲಿ ಕೇಳಿ ಅವರನ್ನು ಕಕ್ಕಾಬಿಕ್ಕಿಯಾಗುವಂತೆ ಮಾಡಿದ ಪ್ರಶ್ನೆ. ಅದೇ ಕಾರಣಕ್ಕೆ ಈ ಡಿಬೇಟಿನ ವಿಡಿಯೋ ವೈರಲ್ ಆಗಿದ್ದೂ ಅಲ್ಲದೆ ಕಾಂಗ್ರೆಸ್‍ನ ಗೌರವ್ ವಲ್ಲಭ್‍ಗೆ ಒಳ್ಳೆಯ ಹೆಸರೂ ತಂದುಕೊಟ್ಟಿತು. ಅದೇ ಚರ್ಚೆಯಲ್ಲಿ ಸಂಬಿತ್ ಪಾತ್ರಾ ಇನ್ನು ಐದು ವರ್ಷಗಳಲ್ಲಿ ಭಾರತದ ಜಿಡಿಪಿಯನ್ನು (ಒಟ್ಟು ರಾಷ್ಟ್ರೀಯ ಉತ್ಪನ್ನ) ಐದು ಟ್ರಿಲಿಯನ್ ಡಾಲರ್ ಮಾಡೇ ಮಾಡ್ತೀವಿ ಎಂದು ಪ್ರಧಾನಿ ಮೋದಿಯವರ ಮಾತನ್ನು ಪುನರುಚ್ಚರಿಸಿದಾಗ ಈ ಪ್ರಶ್ನೆ ಮೂಡಿಬಂಂತು.

ಐದು ಟ್ರಿಲಿಯನ್ ಡಾಲರ್ ಅಂದರೆ ಎಷ್ಟು ಅಂತಾನೇ ಗೊತ್ತಿಲ್ದೆ, ದೇಶವನ್ನು ಈ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಹೇಗೆ ಮಾಡ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಲಾಗದೆ ಸಂಬಿತ್ ಪಾತ್ರಾ ಆ ಚರ್ಚೆಯಲ್ಲಿ ತೀವ್ರ ಮುಖಭಂಗ ಅನುಭವಿಸಬೇಕಾಯಿತು.

ಇದನ್ನೂ ಓದಿ: ಟಿವಿ ಚರ್ಚೆಯಲ್ಲಿ ಬಿಜೆಪಿಯ ಸಂಬಿತ್ ಪಾತ್ರನಿಗೆ ಮುಖಭಂಗ ಮಾಡಿದ ಗೌರವ್ ವಲ್ಲಭ್ ಯಾರು ಗೊತ್ತೆ?

ಕಡೆಗೆ, ಗೌರವ್ ವಲ್ಲಭ್‍ರವರೇ ಐದು ಟ್ರಿಲಿಯನ್ ಅಂದ್ರೆ ಐದರರ ಮುಂದೆ ಹನ್ನೆರಡು ಸೊನ್ನೆಗಳು ಇರ್ತಾವೆ ಎಂದು ಹೇಳಿಕೊಡಬೇಕಾಯಿತು. ಸರಿ ಸೊನ್ನೆ ಕಥೆ ಬಿಟ್ಟು ಬಿಡೋಣ.. ಮೋದಿ ಹೇಳಿದ್ದು ನಿಜವೆ ತಿಳಿಯಬೇಕಲ್ಲವೇ?
ಈಗ ಇದೇ ನೆಪದಲ್ಲಿ ನಾವು ಈ ಐದು ಟ್ರಿಲಿಯನ್ ಡಾಲರ್ ಜಿಡಿಪಿ ಅಂದ್ರೆ ಎಷ್ಟು? ಅಷ್ಟು ಜಿಡಿಪಿನ ಕೇಂದ್ರ ಸರ್ಕಾರ ಹೇಳುತ್ತಿರುವಂತೆ ಐದು ವರ್ಷಗಳಲ್ಲಿ ಸಾಧಿಸಲು ಸಾಧ್ಯವೆ? ಈ ಹೇಳಿಕೆಯೊಳಗೆ ಏನಾದ್ರೂ ಲೆಕ್ಕಾಚಾರದ ಗಿಮಿಕ್ ಇದೆಯೇ ನೋಡೋಣ.

ನಮಗೆ ಗೊತ್ತಿರುವಂತೆ ದೊಡ್ಡ ಸಂಖ್ಯೆಗಳನ್ನು ಅಳೆಯಲು ಮಿಲಿಯನ್, ಬಿಲಿಯನ್, ಟ್ರಿಲಿಯನ್, ಕ್ವಾಡ್ರಿಲಿಯನ್, ಕ್ವಿಂಟಿಲಿಯನ್ ಎಂಬಿತ್ಯಾದಿ ಮಾಪಕಗಳನ್ನು ಬಳಸುತ್ತಾರೆ.
ಒಂದು ಮಿಲಿಯನ್ ಎಂದರೆ ಹತ್ತು ಲಕ್ಷ, ಒಂದು ಬಿಲಿಯನ್ ಎಂದರೆ ನೂರು ಕೋಟಿ, ಒಂದು ಟ್ರಿಲಿಯನ್ ಎಂದರೆ ಒಂದು ಲಕ್ಷ ಕೋಟಿ ಇತ್ಯಾದಿ.
(ಸೊನ್ನೆಗಳ ಲೆಕ್ಕದಲ್ಲಿ ಮಿಲಿಯನ್‍ನಲ್ಲಿ ಒಂದರ ಮುಂದೆ ಆರು ಸೊನ್ನೆಗಳು, ಬಿಲಿಯನ್‍ನಲ್ಲಿ ಒಂಬತ್ತು ಸೊನ್ನೆಗಳು, ಟ್ರಿಲಿಯನ್‍ನಲ್ಲಿ ಹನ್ನೆರಡು ಸೊನ್ನೆಗಳು ಹೀಗೆ ಮುಂದೆಮುಂದೆ ಹೋದಂತೆ ಮೂರು ಸೊನ್ನೆಗಳು ಹೆಚ್ಚಾಗುತ್ತಾ ಹೋಗುತ್ತವೆ)

ಅಂದರೆ, ಐದು ಟ್ರಿಲಿಯನ್ ಡಾಲರ್ ಎಂದರೆ ಐದು ಲಕ್ಷ ಕೋಟಿ ಡಾಲರ್ ಎಂದರ್ಥ. ರೂಪಾಯಿಗಳ ಲೆಕ್ಕದಲ್ಲಿ ಒಂದು ಡಾಲರಿಗೆ ಈಗ ಎಪ್ಪತ್ತೆರಡು ರೂಪಾಯಿಗಳು ಅಂದರೆ ಐದು ಲಕ್ಷ ಕೋಟಿ ಡಾಲರುಗಳು ಮೂನ್ನೂರ ಅರವತ್ತು ಲಕ್ಷ ಕೋಟಿ ರೂಪಾಯಿಗಳಿಗೆ ಸಮ.

ಇನ್ನು ಐದು ವರ್ಷಗಳಲ್ಲಿ ಅಂದರೆ 2023-24ರ ಆರ್ಥಿಕ ವರ್ಷದ ವೇಳೆಗೆ ನಮ್ಮ ದೇಶದ ಜಿಡಿಪಿ ಮುನ್ನೂರ ಅರವತ್ತು ಲಕ್ಷ ಕೋಟಿ ರೂಪಾಯಿಗಳಾಗುವಂತೆ (ಆಕಸ್ಮಾತ್, ರೂಪಾಯಿ ಎದುರಿಗೆ ಡಾಲರ್ ಬೆಲೆ ಹೆಚ್ಚಾದರೆ ಆಗ ಇದೂ ಕೂಡ ಇನ್ನೂ ಹೆಚ್ಚಾಗುತ್ತದೆ) ಮಾಡುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ.

ಇದನ್ನು ಕುತೂಹಲಕ್ಕಾಗಿ ಸಂಖ್ಯೆಯಲ್ಲಿ ಬರೆದರೆ 360,000,000,000,000 !!!!
ಅಬ್ಬಾ!!! ಎನಿಸುತ್ತದೆಯಲ್ಲವೆ?

ದೇಶದ ಜಿಡಿಪಿ ಇಷ್ಟು ಅಂದರೆ, 2023-24ರ ಆರ್ಥಿಕ ವರ್ಷಕ್ಕೆ ದೇಶದಲ್ಲಿ ಒಟ್ಟು ಮುನ್ನೂರ ಅರವತ್ತು ಲಕ್ಷ ಕೋಟಿ ರೂಪಾಯಿಗಳಷ್ಟು (ಅಥವಾ ಮುನ್ನೂರ ಅರವತ್ತು ಟ್ರಿಲಿಯನ್ ರೂಪಾಯಿಗಳು) ಮೌಲ್ಯದ ವಸ್ತುಗಳು ಮತ್ತು ಸೇವೆಗಳನ್ನು ಉತ್ಪಾದಿಸುತ್ತೇವೆ ಎಂದು ಅರ್ಥ!!!

ನಮಗೀಗಾಗಲೇ ಗೊತ್ತಿರುವಂತೆ Gross Domestic Product ಅಥವಾ GDP (ಒಟ್ಟು ರಾಷ್ಟ್ರೀಯ ಉತ್ಪನ್ನ) ಎಂದರೆ ಒಂದು ಆರ್ಥಿಕ ವರ್ಷದಲ್ಲಿ (ಏಪ್ರಿಲ್ ನಿಂದ ಮುಂದಿನ ಮಾರ್ಚ್) ದೇಶದಲ್ಲಿ ಉತ್ಪನ್ನವಾದ ಎಲ್ಲಾ ವಸ್ತು ಮತ್ತು ಸೇವೆಗಳ ಒಟ್ಟು ಮೌಲ್ಯ.

ಹಾಗಿದ್ದರೆ, ನಮ್ಮ ಈಗಿನ ಜಿಡಿಪಿ ಎಷ್ಟಿದೆ? ಇನ್ನು ಐದು ವರ್ಷಗಳಲ್ಲಿ ಇದು ಮುನ್ನೂರ ಅರವತ್ತು ಲಕ್ಷ ಕೋಟಿ ರೂಪಾಯಿಗಳಷ್ಟಾಗಬೇಕಾದರೆ ನಮ್ಮ ಜಿಡಿಪಿ ಪ್ರತಿ ವರ್ಷ ಯಾವ ದರದಲ್ಲಿ ಬೆಳೆಯಬೇಕಾಗುತ್ತದೆ ಎಂಬುದನ್ನು ನೋಡೋಣ.

ಈ ಕೆಳಗಿನ ಟೇಬಲ್ ನಲ್ಲಿ ಕಡೆಯ ಐದು ವರ್ಷಗಳ ಜಿಡಿಪಿ ಮತ್ತು ಜಿಡಿಪಿ ಬೆಳವಣಿಗೆ ದರ ತೋರಿಸಲಾಗಿದೆ.(ಲಕ್ಷ ಕೋಟಿ ರೂಗಳಲ್ಲಿ ಅಥವಾ ಟ್ರಿಲಿಯನ್ ರೂಗಳಲ್ಲಿ)

ವರ್ಷ.         ಜಿಡಿಪಿ        ಬೆಳವಣಿಗೆ ದರ

2014 – 15.   105.27.   7.4%
2015 – 16.   113.86.   7.99%
2016 – 17.   121.96.   7.1%
2017 – 18.   131.8.     7.37%
2018 – 19.   140.78.   6.8%

ಮೇಲಿನ ಟೇಬಲ್ ನಲ್ಲಿ ಕೊಟ್ಟಿರುವುದು ಸ್ಥಿರ ಬೆಲೆಯ ಜಿಡಿಪಿ (GDP at constant prices or Real GDP). ನಮ್ಮ ದೇಶವು ತನ್ನ ಜಿಡಿಪಿ ಲೆಕ್ಕಾಚಾರಕ್ಕೆ ಈ ವಿಧಾನವನ್ನೇ ಅನುಸರಿಸುತ್ತಿದೆ. ಏಕೆಂದರೆ, ಈ ವಿಧಾನದಲ್ಲಿ ಹಣದುಬ್ಬರದ ಪರಿಣಾಮವನ್ನು ಪರಿಗಣಿಸಿ ರಾಷ್ಟ್ರೀಯ ಉತ್ಪನ್ನದ ಮೌಲ್ಯವನ್ನು ಲೆಕ್ಕ ಹಾಕಲಾಗುತ್ತದೆ. ಹಾಗಾಗಿ, ದೇಶದ ಅಭಿವೃದ್ದಿ ದರದ ವಾಸ್ತವ ಚಿತ್ರಣವನ್ನು ಈ ವಿಧಾನ ಕೊಡುತ್ತದೆ.

ಮೇಲಿನ ಅಂಕಿಅಂಶಗಳ ಪ್ರಕಾರ 2018-19ರಲ್ಲಿ ದೇಶದ ಜಿಡಿಪಿ 140.78 ಲಕ್ಷ ಕೋಟಿ ರೂಪಾಯಿಗಳಿವೆ (140.78 ಟ್ರಿಲಿಯನ್ ರೂಪಾಯಿಗಳು). ಇದು 2023-24 ರಲ್ಲಿ 360 ಲಕ್ಷ ಕೋಟಿ ರೂಪಾಯಿಗಳಾಗಬೇಕಾದರೆ ನಮ ದೇಶದ ಜಿಡಿಪಿ ಪ್ರತಿ ವರ್ಷ ಶೇ.20% ರಷ್ಟು ವೇಗದಲ್ಲಿ ಬೆಳೆಯಬೇಕಾಗುತ್ತದೆ. 2010-11ರ ವರ್ಷ ಬಿಟ್ಟರೆ ಇನ್ಯಾವ ವರ್ಷವೂ ಶೇ.10% ಬೆಳವಣಿಗೆಯನ್ನೂ ಮುಟ್ಟದ ನಮ್ಮ ದೇಶದ ಜಿಡಿಪಿ ಶೇ ಇಪ್ಪತ್ತರ ಬೆಳವಣಿಗೆ ಹೊಂದಲು ಸಾಧ್ಯವಿದೆಯೇ ಯೋಚಿಸಿ.

ಯಾವುದೇ ಕಾರಣಕ್ಕೂ ಇದು ಸಾಧ್ಯವಿಲ್ಲ. ಇತ್ತೀಚೆಗೆ ಸುಬ್ರಮಣಿಯನ್ ಸ್ವಾಮಿ ಕೂಡ “ಬಹುತೇಕ ಐದು ಟ್ರಿಲಿಯನ್ ಡಾಲರ್ ಜಿಡಿಪಿಯ ಗುರಿಯನ್ನು ಸ್ಥಿರ ಬೆಲೆಯ ಜಿಡಿಪಿಯಲ್ಲಿಯೇ ಹಾಕಿರುತ್ತಾರೆ. ಈ ಗುರಿ ಮುಟ್ಟಲು ಶೇ ಹದಿನೆಂಟಕ್ಕಿಂತ ಹೆಚ್ಚಿನ ಬೆಳವಣಿಗೆ ಪ್ರತಿ ವರ್ಷ ಬೇಕಾಗುತ್ತದೆ. ಇದು ಅಸಾಧ್ಯವಾದ ಗುರಿ” ಎಂದು ಹೇಳಿದ್ದಾರೆ.
ಆದರೆ ಇಲ್ಲೊಂದು ಸಣ್ಣ ಆದರೆ ಚಾಣಾಕ್ಷ ಮರ್ಮವಿದೆ.

ಅದೆಂದರೆ, ಈ ಐದು ಟ್ರಿಲಿಯನ್ ಡಾಲರ್ ಜಿಡಿಪಿಯನ್ನು ಪ್ರಧಾನಿ ಮೋದಿ ಪ್ರಸ್ತುತ ಬೆಲೆಯ ಜಿಡಿಪಿ ಲೆಕ್ಕಾಚಾರದಲ್ಲಿ ಹೇಳಿರುವ ಸಾಧ್ಯತೆಯೇ ಹೆಚ್ಚು. ಈ ಪ್ರಸ್ತುತ ಬೆಲೆಯ ಜಿಡಿಪಿ (GDP at current prices or Nominal GDP) ಅಥವಾ ನಾಮಮಾತ್ರ ಜಿಡಿಪಿಯ ಲೆಕ್ಕಾಚಾರದಲ್ಲಿ ಈ ಐದು ಟ್ರಿಲಿಯನ್ ಡಾಲರ್ ಜಿಡಿಪಿ ತಲುಪಲು ಸ್ವಲ್ಪಮಟ್ಟಿಗೆ ಸಾಧ್ಯವಿರುವಂತೆ ತೋರುತ್ತದೆ.

ಉದಾಹರಣೆಗೆ, 2018-19ರ ಸ್ಥಿರ ಬೆಲೆಯಲ್ಲಿ ಜಿಡಿಪಿ 140.78 ಟ್ರಿಲಿಯನ್ ಆದರೆ, ಅದೇ ವರ್ಷ ಪ್ರಸ್ತುತ ಬೆಲೆಯಲ್ಲಿ ಇದು 190.10 ಟ್ರಿಲಿಯನ್ ರೂಪಾಯಿಗಳಾಗುತ್ತದೆ. ಈ GDP at current prices ವಿಧಾನ ಹಣದುಬ್ಬರವನ್ನು ಪರಿಗಣಿಸದೆ ಕೇವಲ ಇವತ್ತಿನ ಬೆಲೆಯನ್ನು ಮಾತ್ರ ಪರಿಗಣಿಸುವುದರಿಂದ ಇದು ಯಾವಾಗಲೂ GDP at constant prices ಗಿಂತ ಹೆಚ್ಚಾಗಿಯೇ ಇರುತ್ತದೆ.

ಹಾಗಾಗಿಯೇ 2014-15 ರಿಂದ 2018-19ರ ಅವಧಿಯಲ್ಲಿ ಸ್ಥಿರ ಬೆಲೆಯ ಜಿಡಿಪಿ ಅಂದಾಜು ಶೇ 7.5 ರ ದರದಲ್ಲಿ ಬೆಳೆದಿದ್ದರೆ, ಅದೇ ಅವಧಿಯಲ್ಲಿ ಪ್ರಸ್ತುತ ಬೆಲೆಯ ಜಿಡಿಪಿ ಶೇ.11ರ ದರದಲ್ಲಿ ಬೆಳೆದಿದೆ.

ಇದನ್ನು ಒಂದು ಸಣ್ಣ ಉದಾಹರಣೆಯೊಂದಿಗೆ ಅರ್ಥ ಮಾಡಿಕೊಳ್ಳೋಣ. ಕಲ್ಬುರ್ಗಿಯ ರೈತನೊಬ್ಬ ಈ ವರ್ಷ ಹತ್ತು ಕ್ವಿಂಟಾಲ್ ತೊಗರಿ ಬೇಳೆ ಬೆಳೆಯುತ್ತಾನೆಂದುಕೊಳ್ಳಿ. ಒಂದು ಕ್ವಿಂಟಾಲಿಗೆ ಆತನಿಗೆ ಐದು ಸಾವಿರದಂತೆ ಆತನಿಗೆ ಒಟ್ಟು ಐವತ್ತು ಸಾವಿರ ಬಂದರೆ, ಜಿಡಿಪಿಗೆ ಆತನ ಕೊಡುಗೆ ಐವತ್ತು ಸಾವಿರ ರೂಪಾಯಿಗಳಾಗುತ್ತದೆ.

ಅದೇ ರೈತ ಮುಂದಿನ ವರ್ಷ ಕೇವಲ ಎಂಟು ಕ್ವಿಂಟಾಲ್ ಬೇಳೆ ಬೆಳೆಯುತ್ತಾನೆಂದುಕೊಳ್ಳಿ. ಆದರೆ ಮುಂದಿನ ವರ್ಷ ಬೆಲೆ ಹೆಚ್ಚಾಗಿರುವುದರಿಂದ (ಹಣದುಬ್ಬರ) ಆತನಿಗೆ ಒಂದು ಕ್ವಿಂಟಾಲಿಗೆ ಏಳುಸಾವಿರದ ಹಾಗೆ ಒಟ್ಟು ಐವತ್ತಾರು ಸಾವಿರ ರೂಪಾಯಿಗಳು ಸಿಗುತ್ತವೆ. ಅದರಿಂದ ಜಿಡಿಪಿಗೆ ಆತನ ಕೊಡುಗೆ ಐವತ್ತಾರು ಸಾವಿರ ರೂಪಾಯಿಗಳಾಗುತ್ತವೆ.

ಅಂದರೆ, ಈ ವರ್ಷದಿಂದ ಮುಂದಿನ ವರ್ಷಕ್ಕೆ ಆ ರೈತನ ಉತ್ಪಾದನೆ ಕಡಿಮೆಯಾಗಿದ್ದರೂ ಕೂಡ ಪ್ರಸ್ತುತ ದರದ ಜಿಡಿಪಿ ಲೆಕ್ಕಾಚಾರದಲ್ಲಿ ಆತನ ಕೊಡುಗೆ ಜಿಡಿಪಿಗೆ ಜಾಸ್ತಿಯೇ ಆಗುತ್ತದೆ. ಹೀಗಿರುವುದರಿಂದಲೇ, ಪ್ರಸ್ತುತ ದರದ ಜಿಡಿಪಿ ಲೆಕ್ಕಾಚಾರ ದೇಶದ ಅಭಿವೃದ್ದಿಯ ವಾಸ್ತವ ಚಿತ್ರಣ ಕೊಡುವುದಿಲ್ಲ. ಅದಕ್ಕಾಗಿಯೇ ಅದನ್ನು ನಾಮಮಾತ್ರ ಅಥವಾ Nominal ಜಿಡಿಪಿ ಎಂದು ಕರೆಯುವುದು.

ಹೀಗಿರುವುದರಿಂದಲೇ, ಯಾವುದೇ ದೇಶದ ನಾಮಮಾತ್ರ ಜಿಡಿಪಿ ನಿಜವಾದ ಜಿಡಿಪಿಗಿಂತ ಹೆಚ್ಚಾಗಿಯೇ ಇರುತ್ತದೆ. ಬಹುತೇಕ ಮೋದಿಯವರು ಐದು ಟ್ರಿಲಿಯನ್ ಡಾಲರ್ ಜಿಡಿಪಿ ಬಗ್ಗೆ ಮಾತಾಡಿರುವುದು ಈ ನಾಮಮಾತ್ರ. ಜಿಡಿಪಿ ಲೆಕ್ಕಾಚಾರದಲ್ಲಿಯೇ. ಆದರೆ ಕಠೋರ ವಾಸ್ತವ ಏನೆಂದರೆ, ಈ ಜಿಡಿಪಿ ಐದು ಟ್ರಿಲಿಯನ್ ಡಾಲರ್ ಮುಟ್ಟಬೇಕಾದರೂ ನಾಮಮಾತ್ರ ಜಿಡಿಪಿ ಕೂಡ ಶೇ.13 ಕಿಂತ ಹೆಚ್ಚಿನ ವೇಗದಲ್ಲಿ ಬೆಳೆಯಬೇಕಾಗಿದೆ. ಇದು ಕೂಡ ಬಹುತೇಕ ಅಸಾಧ್ಯವಾದದ್ದೇ ಆಗಿದೆ.

ಈ ಹದಿಮೂರು ಪರ್ಸೆಂಟ್ ನಾಮಮಾತ್ರ ಜಿಡಿಪಿಯ ಬೆಳವಣಿಗೆಯೂ ಅಸಾಧ್ಯ ಎನಿಸಿರುವುದರಿಂದಲೇ ಮತ್ತು ಇದನ್ನ ಚೂರು ಲೆಕ್ಕ ಹಾಕಿಬಿಟ್ರೆ ಜನಕ್ಕೆ ಇದು ಸುಳ್ಳು ಎಂದು ಗೊತ್ತಾಗಿಬಿಡುತ್ತದೆ ಎಂಬ ಕಾರಣದಿಂದಲೇ ಇತ್ತೀಚೆಗೆ ಕೇಂದ್ರ ವಾಣಿಜ್ಯ ಸಚಿವ ಪೀಯುಷ್ ಗೋಯಲ್ “ಈ ಹನ್ನೆರಡು ಹದಿಮೂರು ಪರ್ಸೆಂಟ್ ಅಂದ್ಕೊಂಡು ಗಣಿತ ಲೆಕ್ಕಾಚಾರ ಮಾಡ್ತಾ ಕೂತ್ಕೋಬೇಡಿ, ಈ ಗಣಿತದ ಲೆಕ್ಕಾಚಾರದಿಂದೇನು ಐನ್‍ಸ್ಟೀನ್‍ಗೆ ಗುರುತ್ವಾಕರ್ಷಣೆನ ಕಂಡುಹಿಡಿಯಕ್ಕೆ ಆಗಲಿಲ್ಲ” ಎಂದು ಹೇಳಿ ಹಾಸ್ಯಾಸ್ಪದರಾಗಿರುವುದು.

ಕಡೆಗೂ, ನಾಮಮಾತ್ರ ಜಿಡಿಪಿಯಲ್ಲೇ ಶೇ. ಹತ್ತರಂತೆ ಒಂದು ಮುನ್ನೂರು ಲಕ್ಷ ಕೋಟಿಯಷ್ಟು ತಲುಪಿ, “ಇಂಥಾ ಆರ್ಥಿಕ ಹಿಂಜರಿಕೆಯ ಸಮಯದಲ್ಲಿ ಇಷ್ಟು ಸಾಧಿಸಲಿಕ್ಕೆ ಮೋದಿಯವರ ಕೈಲಿ ಮಾತ್ರ ಸಾಧ್ಯ ಆಗಿದೆ. ಮುಂದಿನ ಐದು ವರ್ಷಗಳಲ್ಲಿ ಹತ್ತು ಟ್ರಿಲಿಯನ್ ಡಾಲರ್ ಮಾಡ್ತೀವಿ” ಅಂತ ಚೆನ್ನಾಗಿ ಪಬ್ಲಿಸಿಟಿ ಕೊಟ್ಟು ಈ ನಾಮಮಾತ್ರ ಜಿಡಿಪಿಯ ವೃದ್ದಿಯನ್ನೇ ನಿಜವಾದ ಅಭಿವೃದ್ದಿ ಎಂದು ಜನರನ್ನು ಮತ್ತೆ ನಂಬಿಸಿದರೂ ಆಶ್ಚರ್ಯವಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷದತ್ತ ಅಣ್ಣಾಮಲೈ : ದ್ರಾವಿಡ ಮಣ್ಣಿನಲ್ಲಿ ವಿಫಲವಾದ ಹಿಂದುತ್ವ ರಾಜಕೀಯ

ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಬಿಜೆಪಿ ತೊರೆದಿದ್ದು, ಹೊಸ ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಮಂಗಳವಾರ...

45 ಲೀಟರ್ ಟ್ಯಾಂಕಿಗೆ 52 ಲೀಟರ್ ಬಿಲ್ ಕೊಟ್ಟ ಚತುರ ಕಳ್ಳರು: ಕಾನ್ಪುರದಲ್ಲಿ ಪೆಟ್ರೋಲ್ ಬಂಕ್ ವಂಚನೆ ಪತ್ತೆ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೊಸ ಕಾರು ಖರೀದಿಸಿದ ಮಾಲೀಕರೊಬ್ಬರು ಸ್ಥಳೀಯ ಪೆಟ್ರೋಲ್ ಬಂಕ್‌ಗೆ ಹೋದಾಗ ಅವರಿಗೆ ಒಂದು ಶಾಕಿಂಗ್ ಅನುಭವವಾಗಿದೆ. ಅವರ ಕಾರಿನ ಗರಿಷ್ಠ ಇಂಧನ ಟ್ಯಾಂಕ್ ಸಾಮರ್ಥ್ಯ ಕೇವಲ 45 ಲೀಟರ್...

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...