ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಹಾರಾಷ್ಟ್ರದಲ್ಲಿ ನಡೆದ ರ್ಯಾಲಿಯಲ್ಲಿ ಕಾಂಗ್ರೆಸ್ ಮತ್ತು ಎನ್ಸಿಪಿ ಪಕ್ಷವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
“370 ನೇ ವಿಧಿಯನ್ನು ರದ್ದುಗೊಳಿಸುವ ಪ್ರಸ್ತಾಪವನ್ನು ಪ್ರಧಾನಿ ಮೋದಿ ತಂದಾಗ, ಕಾಂಗ್ರೆಸ್ ಮತ್ತು ಎನ್ಸಿಪಿ ಎರಡೂ ವಿರೋಧಿಸಿವೆ. ರಾಹುಲ್ ಗಾಂಧಿ ಮತ್ತು ಶರದ್ ಪವಾರ್ ಅವರು ಮಹಾರಾಷ್ಟ್ರದ ಜನರಿಗೆ 370 ನೇ ವಿಧಿಯನ್ನು ತೆಗೆದುಹಾಕಿದ್ದರೆ ಏಕೆ ವಿರೋಧ ಮಾಡಿದರು ಎಂದು ಉತ್ತರಿಸಬೇಕೆಂದು ನಾನು ಬಯಸುತ್ತೇನೆ”ಎಂದು ಸಾಂಗ್ಲಿ ಜಿಲ್ಲೆಯ ಜಾಟ್ನಲ್ಲಿ ನಡೆದ ರ್ಯಾಲಿಯಲ್ಲಿ ಅವರು ಹೇಳಿದ್ದಾರೆ.
ಈ ಎರಡೂ ಪಕ್ಷಗಳು ಕಾಶ್ಮೀರದ ವಿಷಯವನ್ನಿಟ್ಟುಕೊಂಡು ಓಟ್ಬ್ಯಾಂಕ್ ರಾಜಕಾರಣ ಮಾಡುತ್ತಿವೆ ಎಂದು ಅಮಿತ್ ಶಾ ಆರೋಪಿಸಿದ್ದಾರೆ.
“ಪ್ರಧಾನಿ ಮೋದಿ ಇತ್ತೀಚೆಗೆ ವಿಶ್ವಸಂಸ್ಥೆಯಿಂದ ಮರಳಿದ್ದಾರೆ. 370 ನೇ ವಿಧಿಯನ್ನು ರದ್ದುಗೊಳಿಸುವ ನಿರ್ಧಾರವನ್ನು ಇಡೀ ಜಗತ್ತು ಒಪ್ಪಿಕೊಂಡಿದೆ. ಮತ್ತೊಂದೆಡೆ, ಪಾಕಿಸ್ತಾನವು ಒಂದು ಮೂಲೆಯಲ್ಲಿ ಏಕಾಂಗಿಯಾಗಿ ನಿಂತಿದೆ” ಎಂದು ಶಾ ಚುನಾವಣಾ ರ್ಯಾಲಿಯಲ್ಲಿ ಮಾತಾಡಿದ್ದಾರೆ.
ಪ್ರಧಾನಿ ಮೋದಿಯವರ ಕಾವಲಿನಲ್ಲಿ, ಭಾರತದ ರಾಷ್ಟ್ರೀಯ ಭದ್ರತೆ ಬಲಗೊಂಡಿದೆ. “ಒಬ್ಬ ಭಾರತೀಯ ಸೈನಿಕ ಹುತಾತ್ಮರಾದರೆ 10 ಶತ್ರುಗಳು ಕೊಲ್ಲಲ್ಪಡುತ್ತಾರೆ” ಎಂದು ಇಡೀ ಜಗತ್ತಿಗೆ ತಿಳಿದಿದೆ ಎಂದು ಅವರು ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಬಾಲಕೋಟ್ ವಾಯುದಾಳಿಯನ್ನು ಉಲ್ಲೇಖಿಸಿ ಮಾತನಾಡಿದ್ದಾರೆ.
1971 ರಲ್ಲಿ ನಡೆದ ಭಾರತ-ಪಾಕಿಸ್ತಾನ ಯುದ್ಧದ ನಂತರ ಭಾರತದ ವಿಜಯದ ಬಗ್ಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯನ್ನು ಅಭಿನಂದಿಸಿದ ಮೊದಲ ವ್ಯಕ್ತಿ ಅಟಲ್ ಬಿಹಾರಿ ವಾಜಪೇಯಿ ಎಂದು ಅವರು ಹೇಳಿದರು. “ನಾವು ಆಗ ವಿರೋಧ ಪಕ್ಷದಲ್ಲಿದ್ದೆವು, ಆದರೆ ನಮಗೆ ರಾಷ್ಟ್ರವು ಮೊದಲು ಬರುತ್ತದೆ” ಎಂದು ಅವರು ಹೇಳಿದ್ದಾರೆ.
ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರದ ಅವಧಿಯಲ್ಲಿ ಪಾಕಿಸ್ತಾನದ ಭಯೋತ್ಪಾದಕರು ನಮ್ಮ ಗಡಿಯ ಮೂಲಕ ನಿಯಮಿತವಾಗಿ ಪ್ರವೇಶಿಸಿ ನಮ್ಮ ಸೈನಿಕರನ್ನು ಕೊಲ್ಲುತ್ತಿದ್ದರು. “ಪ್ರಧಾನಿ ಮೋದಿ ರಾಷ್ಟ್ರವನ್ನು ರಕ್ಷಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ” ಎಂದು ಅವರು ಹೇಳಿದ್ದಾರೆ.
ಅಕ್ಟೋಬರ್ 21 ರಂದು ಮಹಾರಾಷ್ಟ್ರ ಚುನಾವಣೆ ನಡೆಯಲಿದ್ದು ಮತ್ತು ಅಕ್ಟೋಬರ್ 24 ರಂದು ಫಲಿತಾಂಶ ಹೊರಬರಲಿದೆ.
ಇಂದಿನ ಅಮಿತ್ ಶಾರವರ ಭಾಷಣ ಕೇಳಿದರೆ ಸೈನಿಕರು, ಬಾಲಾಕೋಟ್, ಪಾಕಿಸ್ತಾನ ಮತ್ತು ಕಾಶ್ಮೀರದ ವಿಷಯವನ್ನೇ ಬಿಜೆಪಿ ಪದೇ ಪದೇ ಪ್ರಸ್ತಾಪ ಮಾಡುತ್ತದೆ ಎಂಬುದು ಗೋಚರಿಸುತ್ತಿದೆ. ಬಿಜೆಪಿಯ ಚುನಾವಣೆ ವಿಷಯ ಆರ್ಥಿಕತೆ, ನಿರುದ್ಯೋಗವಾಗಿರದೇ ಮೇಲಿನ ಅಂಶಗಳೇ ಆಗಿರುತ್ತವೆ ಎಂಬುದನ್ನು ಇದು ತೋರಿಸುತ್ತಿದೆ ಎಂದು ಪ್ರತಿಪಕ್ಷಗಳು ಆಪಾದಿಸಿವೆ.