ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಕಲಿ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್ಸಿಸಿ) ಶಿಬಿರದಲ್ಲಿ ಬಾಲಕಿಯೊಬ್ಬಳು ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದು, ಕನಿಷ್ಠ ಒಂದು ಡಜನ್ ಇತರೆ ಬಾಲಕಿಯರನ್ನು ಲೈಂಗಿಕವಾಗಿ ನಿಂದಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಶಿಬಿರದ ಆಯೋಜಕರು, ಶಾಲೆಯ ಪ್ರಾಂಶುಪಾಲರು, ಇಬ್ಬರು ಶಿಕ್ಷಕರು ಮತ್ತು ವರದಿಗಾರ ಸೇರಿದಂತೆ 11 ಜನರನ್ನು ಬಂಧಿಸಲಾಗಿದೆ.
ಖಾಸಗಿ ಶಾಲೆಯಲ್ಲಿ ಯಾವುದೇ ಎನ್ಸಿಸಿ ಘಟಕವಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ. ಅಂತಹ ಶಿಬಿರವನ್ನು ಆಯೋಜಿಸುವುದರಿಂದ ಅರ್ಹತೆ ಪಡೆಯಬಹುದು ಎಂದು ಒಂದು ಗುಂಪು ಶಾಲೆಯ ಆಡಳಿತವನ್ನು ಸಂಪರ್ಕಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಿಬಿರಕ್ಕೆ ಗುಂಪನ್ನು ನೇಮಿಸುವ ಮೊದಲು ಹಿನ್ನೆಲೆ ಪರಿಶೀಲನೆ ನಡೆಸಲು ಶಾಲೆಯು ವಿಫಲವಾಗಿದೆ.
ಈ ತಿಂಗಳ ಆರಂಭದಲ್ಲಿ ನಡೆದ ಮೂರು ದಿನಗಳ ಶಿಬಿರದಲ್ಲಿ 17 ಬಾಲಕಿಯರು ಸೇರಿದಂತೆ 41 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮೊದಲ ಮಹಡಿಯಲ್ಲಿರುವ ಶಾಲಾ ಸಭಾಂಗಣದಲ್ಲಿ ಬಾಲಕಿಯರಿಗೆ ವಸತಿ ಕಲ್ಪಿಸಲಾಗಿದ್ದು, ಬಾಲಕರನ್ನು ನೆಲ ಮಹಡಿಯಲ್ಲಿ ಇರಿಸಲಾಗಿತ್ತು. ಶಿಬಿರದ ಮೇಲ್ವಿಚಾರಣೆಗೆ ಶಿಕ್ಷಕರನ್ನು ನಿಯೋಜಿಸಿಲ್ಲ. ಆಮಿಷವೊಡ್ಡಿ ಸಭಾಂಗಣದಿಂದ ಹೊರಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಬಾಲಕಿಯರು ಆರೋಪಿಸಿದ್ದಾರೆ.
“ಶಾಲಾ ಅಧಿಕಾರಿಗಳು ಲೈಂಗಿಕ ಅಪರಾಧಗಳ ಬಗ್ಗೆ ತಿಳಿದಿದ್ದರು. ಆದರೆ, ಪೊಲೀಸರಿಗೆ ತಿಳಿಸುವ ಬದಲು ವಿಷಯವನ್ನು ಮುಚ್ಚಿಹಾಕಲು ನಿರ್ಧರಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸದಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ ತಂಗದುರೈ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನಕಲಿ ಎನ್ಸಿಸಿ ಶಿಬಿರದ ಹಿಂದಿರುವ ಗುಂಪು ಇತರ ಶಾಲೆಗಳಲ್ಲಿ ಇದೇ ರೀತಿಯ ಶಿಬಿರಗಳನ್ನು ನಡೆಸಿದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳ ವಿರುದ್ಧ ಮಕ್ಕಳ ಲೈಂಗಿಕ ಅಪರಾಧಗಳ ವಿರುದ್ಧ ಕಠಿಣ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಬಾಲಕಿಯರ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಕ್ರಮ ಕೈಗೊಂಡಿದೆ.
ಕೋಲ್ಕತ್ತಾದ ಆರ್ಜಿ ಕರ್ ಆಸ್ಪತ್ರೆಯಲ್ಲಿ 31 ವರ್ಷದ ಟ್ರೈನಿ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಹತ್ಯೆಯ ಬಗ್ಗೆ ರಾಷ್ಟ್ರವ್ಯಾಪಿ ಆಕ್ರೋಶದ ನಡುವೆ ಈ ಪ್ರಕರಣವು ಬೆಳಕಿಗೆ ಬಂದಿದೆ.
ಇದನ್ನೂ ಓದಿ; ಕೋಲ್ಕತ್ತಾ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ: ಸ್ವಯಂ ಪ್ರೇರಿತ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್


