ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಮೂರನೇ ಪಟ್ಟಿಯನ್ನು ಸೋಮವಾರ (ಸೆ. 9) ಬಿಡುಗಡೆ ಮಾಡಿದ್ದು, ಕಥುವಾ ಬಾಲಕಿಯ ಅತ್ಯಾಚಾರ ಆರೋಪಿಗಳನ್ನು ಬೆಂಬಲಿಸಿ ರ್ಯಾಲಿ ನಡೆಸಿದ್ದ ಚೌಧರಿ ಲಾಲ್ ಸಿಂಗ್ಗೆ ಬಸೋಹ್ಲಿ ಕ್ಷೇತ್ರದಿಂದ ಟಿಕೆಟ್ ಕೊಟ್ಟಿದೆ.
कांग्रेस अध्यक्ष श्री @kharge की अध्यक्षता में आयोजित 'केंद्रीय चुनाव समिति' की बैठक में जम्मू-कश्मीर विधानसभा चुनाव के लिए कांग्रेस उम्मीदवारों की तीसरी लिस्ट। pic.twitter.com/YNQTN00fv6
— J&K Congress (@INCJammuKashmir) September 9, 2024
2018ರಲ್ಲಿ, ಬಿಜೆಪಿ-ಪಿಡಿಪಿ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದ ಲಾಲ್ ಸಿಂಗ್, ಎಂಟು ವರ್ಷದ ಅಲೆಮಾರಿ ಬುಡಕಟ್ಟು ಬಾಲಕಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಬೆಂಬಲಿಸಿ ಸ್ಥಳೀಯ ಹಿಂದುತ್ವ ನಾಯಕರು ಆಯೋಜಿಸಿದ್ದ’ಹಿಂದೂ ಏಕತಾ’ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಇದು ಲಾಲ್ ಸಿಂಗ್ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು.
ಅತ್ಯಾಚಾರ ಆರೋಪಿಗಳಾದ ಪರ್ವೇಶ್ ಕುಮಾರ್, ಸಂಜಿ ರಾಮ್ ಮತ್ತು ದೀಪಕ್ ಖಜುರಿಯಾ ಪರ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಲಾಲ್ ಸಿಂಗ್, ಪೊಲೀಸ್ ತನಿಖೆಯನ್ನು ಪ್ರಶ್ನಿಸಿದ್ದರು ಮತ್ತು ಅತ್ಯಾಚಾರ ಆರೋಪ ‘ಹಿಂದೂಗಳ ವಿರುದ್ಧದ ಪಿತೂರಿಯ ಪ್ರಯತ್ನ’ ಎಂದಿದ್ದರು. ಲಾಲ್ ಸಿಂಗ್ ಅವರ ಈ ಹೇಳಿಕೆ, ಆಗಿನ ಜಮ್ಮು ಕಾಶ್ಮೀರ ಸರ್ಕಾರದ ವಿರುದ್ದ ಜನಾಕ್ರೋಶಕ್ಕೆ ಕಾರಣವಾಗಿತ್ತು.
ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ, ಲಾಲ್ ಸಿಂಗ್ ‘ಡೋಗ್ರಾ ಸ್ವಾಭಿಮಾನ್ ಸಂಘಟನೆ’ ಎಂಬ ಪಕ್ಷ ಕಟ್ಟಿದ್ದರು. ನಂತರ, ಲೋಕಸಭೆ ಚುನಾವಣೆಯ ಸಂದರ್ಭ ಮಾರ್ಚ್ 20, 2024ರಂದು ಅವರು ಕಾಂಗ್ರೆಸ್ಗೆ ಮರು ಸೇರ್ಪಡೆಯಾಗಿದ್ದರು ಮತ್ತು ತನ್ನ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನ ಮಾಡಿದ್ದರು.
ಕಾಂಗ್ರೆಸ್ಗೆ ಮರು ಸೇರ್ಪಡೆಯಾದ ಬಳಿಕ, ಲೋಕಸಭಾ ಚುನಾವಣೆಗೆ ಲಾಲ್ ಸಿಂಗ್ಗೆ ಉದಂಪುರ-ದೋಡಾ ಕ್ಷೇತ್ರದಿಂದ ಟಿಕೆಟ್ ನೀಡಲಾಗಿತ್ತು. ಆದರೆ, ಅವರು 1.24 ಲಕ್ಷ ಮತಗಳ ಅಂತರದಿಂದ ಸೋತಿದ್ದರು.
ಲಾಲ್ ಸಿಂಗ್ ಅವರು ಈ ಹಿಂದೆ ಮೂರು ಬಾರಿ ಗೆದ್ದಿರುವ ಬಸೋಹ್ಲಿ ಕ್ಷೇತ್ರದಿಂದ ಟಿಕೆಟ್ ಪಡೆದಿದ್ದಾರೆ. ಅವರು ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ, ಉದ್ಯಮಿ ದರ್ಶನ್ ಸಿಂಗ್ ವಿರುದ್ಧ ಕಣಕ್ಕಿಳಿದಿದ್ದಾರೆ.
ಕಾಂಗ್ರೆಸ್ಗೆ ಮರು ಸೇರ್ಪಡೆಯಾದ ಲಾಲ್ ಸಿಂಗ್
2014ಕ್ಕಿಂತ ಮೊದಲು ಲಾಲ್ ಸಿಂಗ್ ಕಾಂಗ್ರೆಸ್ನಲ್ಲೇ ಇದ್ದರು. ಎರಡು ಬಾರಿ ಪಕ್ಷದ ಟಿಕೆಟ್ನಲ್ಲಿ ಉಂದಪುರ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಸಂಸದರಾಗಿದ್ದರು. 2014ರಲ್ಲಿ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದಾಗ ಬಿಜೆಪಿ ಸೇರ್ಪಡೆಗೊಂಡು ಮೆಹಬೂಬಾ ಮುಫ್ತಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದರು.
ಜನವರಿ 2023ರಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೋ ಯಾತ್ರೆ ಜಮ್ಮು ಪ್ರವೇಶಿಸಿದಾಗ, ಲಾಲ್ ಸಿಂಗ್ ಕೂಡ ಯಾತ್ರೆಯಲ್ಲಿ ಭಾಗವಹಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕಥುವಾ ಸಂತ್ರಸ್ತೆಯ ಪರವಾಗಿ ವಾದ ಮಾಡಿದ್ದ ವಕೀಲೆ ಮತ್ತು ಕಾಂಗ್ರೆಸ್ ಪಕ್ಷದ ವಕ್ತಾರೆ ದೀಪಕ್ ಪುಷ್ಕರ್ ನಾಥ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.
ಕಳೆದ ವರ್ಷ ನವೆಂಬರ್ನಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಲಾಲ್ ಸಿಂಗ್, ಅವರ ಪತ್ನಿ ಮತ್ತು ಮಾಜಿ ಶಾಸಕ ಕಾಂತಾ ಅಂಡೋತ್ರಾ ನಡೆಸುತ್ತಿದ್ದ ಶೈಕ್ಷಣಿಕ ಟ್ರಸ್ಟ್ಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಿತ್ತು.
ಈ ವರ್ಷದ ಮಾರ್ಚ್ನಲ್ಲಿ ಲಾಲ್ ಸಿಂಗ್ಗೆ ಮರು ಸೇರ್ಪಡೆಗೊಂಡಾಗ, ಕಾಂಗ್ರೆಸ್ ವಿರುದ್ದ ತೀವ್ರ ಟೀಕೆ ವ್ಯಕ್ತವಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ್ದ ಮಾಜಿ ಕಾಂಗ್ರೆಸ್ ನಾಯಕ ಹಾಗೂ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಾರ್ಟಿ (ಡಿಪಿಎಪಿ) ಮುಖ್ಯಸ್ಥ ಗುಲಾಂ ನಬಿ ಆಜಾದ್, “ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಗೆ ಲಾಲ್ ಸಿಂಗ್ ಅನ್ನು ಪಕ್ಷಕ್ಕೆ ಸ್ವಾಗತಿಸಿದ್ದಕ್ಕೆ ನಾಚಿಕೆಯಾಗಬೇಕು. 8 ವರ್ಷದ ಬಾಲಕಿಯ ಅತ್ಯಾಚಾರಿಗಳನ್ನು ಬೆಂಬಲಿಸಿದ ಲಾಲ್ ಸಿಂಗ್ ಅನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಕಾಂಗ್ರೆಸ್ ತನ್ನ ಮೂಲ ತತ್ವಗಳು ಮತ್ತು ಸಿದ್ಧಾಂತಗಳಿಗೆ ದ್ರೋಹ ಬಗೆದಿದೆ” ಎಂದಿದ್ದರು.
ಲಾಲ್ ಸಿಂಗ್ಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿರುವುದು ಹಿಂದೂ ಪ್ರಾಬಲ್ಯದ ಪ್ರದೇಶದಲ್ಲಿ ಬಿಜೆಪಿಯನ್ನು ಸೋಲಿಸಲು ಎಂದು ಹೇಳಲಾಗುತ್ತಿದೆ. ಆದರೆ, ಈ ಹಿಂದೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿ. ಸಚಿವರಾಗಿದ್ದಾಗಲೇ ಅತ್ಯಾಚಾರ ಆರೋಪಿಗಳನ್ನು ಬೆಂಬಲಿಸಿ ನಡೆದ ರ್ಯಾಲಿಯಲ್ಲಿ ಪಾಲ್ಗೊಂಡಿರುವ, ಹಿಂದುತ್ವದ ಪ್ರತಿಪಾದಕನಿಗೆ ಟಿಕೆಟ್ ಕೊಟ್ಟಿರುವ ಕಾಂಗ್ರೆಸ್ ನಡೆ ಆಕ್ರೋಶಕ್ಕೆ ಕಾರಣವಾಗಿದೆ.
ದೇಶವನ್ನು ತಲ್ಲಣಗೊಳಿಸಿದ್ದ ಅತ್ಯಾಚಾರ ಪ್ರಕರಣ
ಜನವರಿ 2018ರಲ್ಲಿ ಎಂಟು ವರ್ಷದ ಬಾಲಕಿಯನ್ನು ಅಪಹರಿಸಿ ವಾರಗಳ ಕಾಲ ದೇವಸ್ಥಾನದೊಳಗೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಆಕೆಯ ಗರ್ಭಕೋಶ ಖಾಸಗಿ ಭಾಗದಿಂದ ಹೊರಬರುವಷ್ಟು ಕ್ರೂರವಾಗಿ ಹಿಂಸಿಸಲಾಗಿತ್ತು.
ಜನವರಿ 10, 2018ರಂದು ಕಥುವಾದ ರಸ್ಸಾನ ಗ್ರಾಮದ ಹೊಲವೊಂದರಲ್ಲಿ ಕುದುರೆಗಳನ್ನು ಮೇಯಿಸುತ್ತಿದ್ದಾಗ ಬಾಲಕಿ ನಾಪತ್ತೆಯಾಗಿದ್ದಳು. ಈ ಸಂಬಂಧ ಆಕೆಯ ತಂದೆ ಯೂಸುಫ್ ಜನವರಿ 12ರಂದು ಸ್ಥಳೀಯ ಹಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವಾರದ ಬಳಿಕ ಜನವರಿ 17ರಂದು ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ವೈದ್ಯಕೀಯ ಪರೀಕ್ಷೆಯಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದು ದೃಢಪಟ್ಟಿತ್ತು. ಈ ಘಟನೆ ದೇಶದಾದ್ಯಂತ ಜನಾಕ್ರೋಶಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ : ಜಮ್ಮು ಕಾಶ್ಮೀರ ಚುನಾವಣೆ : ಸಂಸದ ಇಂಜಿನಿಯರ್ ರಶೀದ್ಗೆ ಮಧ್ಯಂತರ ಜಾಮೀನು


