ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕಲ್ಪಿಸುವ ಸಂಬಂಧ ಸೂಕ್ತ ಶಿಫಾರಸುಗಳೊಂದಿಗೆ ವರದಿ ಸಲ್ಲಿಸಲು ನಿವೃತ್ತ ನ್ಯಾ. ಎಚ್.ಎನ್. ನಾಗಮೋಹನ್ ದಾಸ್ ಅಧ್ಯಕ್ಷತೆಯ ಏಕ ಸದಸ್ಯ ಆಯೋಗಕ್ಕೆ ನಿಯಮ ಮತ್ತು ನಿಬಂಧನೆ ನಿಗದಿಪಡಿಸಿ, 2 ತಿಂಗಳ ಒಳಗಾಗಿ ವರದಿ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆ ಆದೇಶಿಸಿದೆ.
ಆಯೋಗಕ್ಕೆ ನಿಗದಿ ಮಾಡಿರುವ ಹೊಣೆಗಾರಿಕೆಯನ್ನು ನಿಭಾಯಿಸಲು ಅನುಕೂಲವಾಗುವಂತೆ ಕಚೇರಿ ವ್ಯವಸ್ಥೆ, ವಾಹನ, ಸಿಬ್ಬಂದಿ ಮತ್ತು ಇತರ ವ್ಯವಸ್ಥೆಗಳನ್ನು ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ಒದಗಿಸಿಕೊಡಲಿದ್ದಾರೆ ಎಂದು ಆದೇಶ ಹೇಳಿದೆ.
ವರದಿ ಸಿದ್ದಪಡಿಸಲು ಅಗತ್ಯವಿರುವ ದಾಖಲೆಗಳನ್ನು ಮತ್ತು ಪುರಾವೆಗಳನ್ನು ವಿಚಾರಣಾ ಆಯೋಗಕ್ಕೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಸಲ್ಲಿಸಬೇಕು ಮತ್ತು ಅಗತ್ಯ ಸಹಕಾರ ನೀಡಬೇಕು ಎಂದು ಸೂಚಿಸಿದೆ.
ನಿಯಮ ಮತ್ತು ನಿಬಂಧನೆಗಳಲ್ಲಿ ಉಲ್ಲೇಖಿಸಲಾದ ಎಲ್ಲ ಅಂಶಗಳ ಬಗ್ಗೆ ದತ್ತಾಂಶಗಳು ಮತ್ತು ಅಗತ್ಯ ಶಿಫಾರಸುಗಳನ್ನು ನೀಡಬೇಕು. ಆಯೋಗವು ಅಧಿಕಾರ ವಹಿಸಿಕೊಂಡ 60 ದಿನಗಳೊಳಗೆ ವರದಿ ಸಲ್ಲಿಸಬೇಕು ಎಂದಿದೆ.
ರಾಜ್ಯದಲ್ಲಿ ಲಭ್ಯವಿರುವ ದತ್ತಾಂಶ ಮತ್ತು 2011ರ ಜನಗಣತಿ ಆಧಾರದಲ್ಲಿ ಪರಿಶಿಷ್ಟ ಜಾತಿಗಳಲ್ಲಿ ವೈಜ್ಞಾನಿಕ ಮತ್ತು ತರ್ಕಬದ್ಧ ಒಳಮೀಸಲಾತಿ ನೀಡುವ ಬಗ್ಗೆ ಪರಿಶೀಲನೆ ಮಾಡಬೇಕು. ಸರಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳ ಪ್ರವೇಶಾತಿಯಲ್ಲಿ ಎಸ್ ಸಿಯಲ್ಲಿನ ಉಪ ಗುಂಪುಗಳಲ್ಲಿ ‘ಅಂತರ ಹಿಂದುಳಿದಿರುವಿಕೆ’ ಕುರಿತು ದತ್ತಾಂಶ ಸಂಗ್ರಹಿಸಬೇಕು. ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಎಂಬ ಹೆಸರುಗಳಷ್ಟೇ ರಾಜ್ಯದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿವೆ. ಜನಸಂಖ್ಯೆಯನ್ನು ಹೀಗೆ ವಿಂಗಡಿಸಲಾಗಿದೆ. ಈ ಮೂರೂ ಹೆಸರುಗಳಡಿ ಇರುವ ಉಪ ಜಾತಿಗಳ ಹೆಸರು ಮತ್ತು ಅವುಗಳ ಜನಸಂಖ್ಯೆಯ ಪರಿಣಾಮಕಾರಿ ಅನುಷ್ಠಾನ ವಿಧಾನದ ಪರಿಶೀಲನೆ ಹಾಗೂ ಪರಿಶಿಷ್ಟ ಜಾತಿಗಳ ವಿವಿಧ ಉಪ ಗುಂಪುಗಳು ಮೀಸಲು ಪ್ರಯೋಜನವನ್ನು ಸಮಾನವಾಗಿ ಪಡೆಯುತ್ತಿವೆಯೇ ಎಂಬುದರ ಪರಿಶೀಲನೆ ಮಾಡಬೇಕು ಎಂದು ಸೂಚಿಸಲಾಗಿದೆ.
ನಿಯಮ ನಿಬಂಧನೆಗಳು
*ರಾಜ್ಯದಲ್ಲಿ ಲಭ್ಯವಿರುವ ದತ್ತಾಂಶ ಮತ್ತು 2011ರ ಜನಗಣತಿ ಆಧಾರದಲ್ಲಿ, ಪರಿಶಿಷ್ಟ ಜಾತಿಗಳಲ್ಲಿ ವೈಜ್ಞಾನಿಕ ಮತ್ತು ತರ್ಕಬದ್ಧ ಒಳಮೀಸಲಾತಿ ನೀಡುವ ಬಗ್ಗೆ ಪರಿಶೀಲನೆ
*ಪರಿಶಿಷ್ಟ ಜಾತಿಗಳ ಉಪುಗುಂಪುಗಳಲ್ಲಿ ‘ಅಂತರ್ ಹಿಂದುಳಿದಿರುವಿಕೆ’’ಗುರುತಿಸುವುದು ಮತ್ತು ಇದಕ್ಕಾಗಿ ದತ್ತಾಂಶ ಸಂಗ್ರಹ
*ಮೀಸಲಾತಿ ಪ್ರಮಾಣ ನಿಗದಿಪಡಿಸುವ ಬಗ್ಗೆ ಪರಿಶೀಲನೆ
*ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಎಂಬ ಹೆಸರುಗಳ ಅಡಿ ಇರುವ ಉಪ ಜಾತಿಗಳ ಹೆಸರು ಮತ್ತು ಅವುಗಳ ಜನಸಂಖ್ಯೆಯ ದತ್ತಾಂಶಗಳ ಸಂಗ್ರಹ
*ಒಳಮೀಸಲಾತಿಯ ಪರಿಣಾಮಕಾರಿ ಜಾರಿಯ ಪರಿಶೀಲನೆ
*ಪರಿಶಿಷ್ಟ ಜಾತಿಯಲ್ಲಿ ಉಪ ಗುಂಪುಗಳ ಮೀಸಲಾತಿಯ ಪ್ರಯೋಜನ ಪಡೆಯುತ್ತಿರುವ ಕುರಿತು ಪರಿಶೀಲನೆ
ಇದನ್ನೂ ಓದಿ…ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಲೈಂಗಿಕ ದೌರ್ಜನ್ಯ: ಆಂತರಿಕ ದೂರು ಸಮಿತಿ ರಚಿಸಿ: ಸುಪ್ರೀಂ ಕೋರ್ಟ್



Hi