ಕಳೆದ ಭಾನುವಾರ (ಡಿ.8, 2024) ಅಧ್ಯಕ್ಷ ಬಶರ್ ಅಲ್ ಅಸಾದ್ ಪಲಾಯನಗೈದು ದೇಶ ಬಂಡುಕೋರರ (ಹೋರಾಟಗಾರರ) ವಶವಾದ ಬಳಿಕ, ಸಿರಿಯಾ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಮಧ್ಯಂತರ ಸರ್ಕಾರ ರಚನೆ ಕಸರತ್ತು ಗರಿಗೆದರಿದೆ.
ಕೆಲ ತಿಂಗಳ ಹಿಂದೆ ಬಾಂಗ್ಲಾದೇಶದಲ್ಲಿ ರಾಜಕೀಯ ಅರಾಜಕತೆ ಉಂಟಾಗಿ ಪ್ರಧಾನಿ ಶೇಖ್ ಹಸೀನಾ ದೇಶ ಬಿಟ್ಟು ಪಲಾಯನ ಮಾಡಿದ ಬಳಿಕ ನೋಬೆಲ್ ಪುರಸ್ಕತ ಮುಹಮ್ಮದ್ ಯೂನುಸ್ ಅವರ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚನೆಯಾಗಿದೆ. ಅದೇ ರೀತಿಯ ಬೆಳವಣಿಗೆ ಸಿರಿಯಾದಲ್ಲಿ ನಡೆಯುವ ಸಾಧ್ಯತೆ ಇದೆ.
ಪ್ರಸ್ತುತ ಸಿರಿಯಾ ಹಯಾತ್ ತಹ್ರೀರ್ ಅಲ್-ಶಾಮ್ ಎಂಬ ಗುಂಪಿನ ವಶದಲ್ಲಿದೆ. ಭಯೋತ್ಪಾದಕ ಗುಂಪು ಅಲ್-ಖೈದಾ ಮತ್ತು ಮಿತ್ರ ಬಣಗಳ ಬೆಂಬಲಿತ ಈ ಗುಂಪನ್ನು ‘ಅಲ್-ನುಸ್ರಾ ಫ್ರಂಟ್’ ಎಂದೂ ಕರೆಯಲಾಗುತ್ತದೆ. ಬಂಡುಕೋರರ ಈ ಗುಂಪಿಗೆ ಸಿರಿಯಾದ ಪ್ರತಿಪಕ್ಷಗಳ ಬೆಂಬಲವೂ ಇದೆ ಎನ್ನಲಾಗಿದೆ.
ಬಂಡುಕೋರರ ಗುಂಪಿನ ಕಮಾಂಡರ್ ಅಬು ಮೊಹಮ್ಮದ್ ಅಲ್-ಜುಲಾನಿ ಅವರು ಪ್ರಧಾನಿ ಮೊಹಮ್ಮದ್ ಘಾಝಿ ಅಲ್ ಜಲಾಲಿ ಮತ್ತು ಉಪಾಧ್ಯಕ್ಷ ಫೈಸಲ್ ಮೆಕ್ದಾದ್ ಅವರನ್ನು ಸೋಮವಾರ ಭೇಟಿಯಾಗಿ ಮಧ್ಯಂತರ ಸರ್ಕಾರ ರಚನೆ ಕುರಿತು ಚರ್ಚೆ ನಡೆಸಿದ್ದಾರೆ.
ವರದಿಗಳ ಪ್ರಕಾರ, ಬಂಡುಕೋರರ ನಿಯಂತ್ರಣದಲ್ಲಿದ್ದ ಸಣ್ಣ ಪ್ರದೇಶವೊಂದರ ಆಡಳಿತ ನಡೆಸುತ್ತಿದ್ದ ಮೊಹಮ್ಮದ್ ಅಲ್ ಬಶೀರ್ ಅವರು ಮಧ್ಯಂತರ ಸರ್ಕಾರದ ನೇತೃತ್ವ ವಹಿಸುವ ಸಾಧ್ಯತೆ ಇದೆ.
ಸಹಜ ಸ್ಥಿತಿಯತ್ತ ಸಿರಿಯಾ :
ಅಧ್ಯಕ್ಷ ಬಶರ್ ಅಲ್ ಅಸಾದ್ ಪಲಾಯನಗೈದ ಬಳಿಕ ದೇಶ ಸಹಜ ಸ್ಥಿತಿಯತ್ತ ಮರಳುತ್ತಿದೆ. ಜನರು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಸರ್ಕಾರದ ಕಚೇರಿಗಳು ಕಾರ್ಯನಿರ್ವಹಿಸುತ್ತಿದೆ. ಶೀಘ್ರದಲ್ಲೇ ಮಧ್ಯಂತರ ಸರ್ಕಾರ ರಚನೆ ಬಗ್ಗೆ ನಿರ್ಧರಿಸಲಾಗುವುದು ಎಂದು ಪ್ರಧಾನಿ ಮೊಹಮ್ಮದ್ ಘಾಝಿ ಅಲ್ ಜಲಾಲಿ ಹೇಳಿದ್ದಾರೆ.
ಹೋರಾಟಗಾರರ ಗುಂಪಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ. ನನ್ನ ಸರ್ಕಾರ ಇನ್ನುಮುಂದೆ ಹೋರಾಟಗಾರರ ಸರ್ಕಾರವಾಗಿ ಬದಲಾಗಲಿದೆ ಎಂದು ಜಲಾಲಿ ತಿಳಿಸಿದ್ದಾರೆ.
ಸಿರಿಯಾ ಕರೆನ್ಸಿ ಮುಂದುವರಿಕೆ
ಸಿರಿಯಾದ ಬ್ಯಾಂಕ್ಗಳು ಮಂಗಳವಾರದಿಂದ ಪುನಃ ಕಾರ್ಯಾರಂಭ ಮಾಡಲಿವೆ. ಕಚೇರಿಗೆ ಹಿಂದಿರುಗುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ. ಸಿರಿಯಾ ಕರೆನ್ಸಿ ಮುಂದುವರಿಯಲಿದೆ ಎಂದು ಸಿರಿಯಾ ಸೆಂಟ್ರಲ್ ಬ್ಯಾಂಕ್ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.
ಇರಾಕ್ ಪ್ರವೇಶಿಸಿದ 4 ಸಾವಿರ ಸೈನಿಕರು
ಬಂಡುಕೋರರು ಅಥವಾ ಹೋರಾಟಗಾರರು ರಾಜಧಾನಿ ಡಮಾಸ್ಕಸ್ ಅನ್ನು ವಶಪಡಿಸಿಕೊಂಡ ಬಳಿಕ ಸಿರಿಯಾದ 4 ಸಾವಿರಕ್ಕೂ ಅಧಿಕ ಸೈನಿಕರು ಗಡಿದಾಟಿ ಇರಾಕ್ ಪ್ರವೇಶಿಸಿದ್ದಾರೆ ಎಂದು ಇರಾಕ್ ಸೇನಾ ಮೂಲಗಳನ್ನು ಉಲ್ಲೇಖಿಸಿ ವರದಿಗಳು ಹೇಳಿವೆ.
ಶಸ್ತ್ರಾಸ್ತ್ರಗಳು, ಮದ್ದು ಗುಂಡುಗಳು ಮತ್ತು ಶಸ್ತ್ರ ಸಜ್ಜಿತ ವಾಹನಗಳೊಂದಿಗೆ ಸಿರಿಯಾದ ಸೈನಿಕರು ಇರಾಕ್ ಪ್ರವೇಶಿಸಿದ್ದಾರೆ. ಅವರನ್ನು ಶಿಬಿರಗಳಲ್ಲಿ ಇರಿಸಲಾಗುವುದು ಎಂದು ಇರಾಕ್ನ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿಗಳು ಮಾಹಿತಿ ನೀಡಿವೆ.
ಮಾಸ್ಕೋದಲ್ಲಿ ಆಶ್ರಯ ಪಡೆದ ಅಸದ್, ಕುಟುಂಬ
ದೇಶ ಬಂಡುಕೋರರ ವಶವಾದ ಬಳಿಕ ಪಲಾಯನ ಮಾಡಿರುವ ಪದಚ್ಯುತ ಅಧ್ಯಕ್ಷ ಬಶರ್ ಅಲ್ ಅಸಾದ್ ಮತ್ತು ಕುಟುಂಬ (ಪತ್ನಿ, ಮೂವರು ಮಕ್ಕಳು) ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಮಾನವೀಯ ನೆಲೆಯಲ್ಲಿ ಅಸದ್ ಮತ್ತು ಕುಟುಂಬಕ್ಕೆ ಆಶ್ರಯ ನೀಡಿದ್ದೇವೆ ಎಂದು ರಷ್ಯಾ ಅಧ್ಯಕ್ಷರ ಕಚೇರಿಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ದಾಳಿ ಶುರು ಮಾಡಿದ ಅಮೆರಿಕ, ಇಸ್ರೇಲ್
ಸಿರಿಯಾ ಅಧ್ಯಕ್ಷ ಸ್ಥಾನದಿಂದ ಬಶರ್ ಅಲ್ ಅಸಾದ್ ಕೆಳಗಿಳಿಯುತ್ತಿದ್ದಂತೆ ಅಮೆರಿಕ ಮತ್ತು ಇಸ್ರೇಲ್ ತಮ್ಮ ಬೇಳೆ ಬೇಯಿಸಿಕೊಳ್ಳಲು ಶುರುಮಾಡಿದೆ. ಸಿರಿಯಾದ ಪರಿಸ್ಥಿತಿಯ ಲಾಭ ಪಡೆದುಕೊಂಡು ಮರು ಸಂಘಟನೆಗೊಳ್ಳಲು ಐಸಿಸ್ಗೆ ಅವಕಾಶ ನೀಡುವುದಿಲ್ಲ ಎಂದಿರುವ ಅಮೆರಿಕ ಸೋಮವಾರ (ಡಿ.9) ವೈಮಾನಿಕ ದಾಳಿ ನಡೆಸಿದೆ.
ಅಮೆರಿಕದ ಸೆಂಟ್ರಲ್ ಕಮಾಂಡ್ ಪಡೆಗಳು ಬಿ-52, ಎಫ್-15 ಹಾಗೂ ಎ-10 ಬಾಂಬರ್ ವಿಮಾನಗಳನ್ನು ಬಳಸಿ ಐಸಿಸ್ನ 75 ನೆಲೆಗಳ ಮೇಲೆ ದಾಳಿ ನಡೆಸಿದೆ.
ಮತ್ತೊಂದೆಡೆ ಇಸ್ರೇಲ್ ಕೂಡ ರಾಜಧಾನಿ ಡಮಾಸ್ಕಸ್ ಸೇರಿದಂತೆ ಸಿರಿಯಾದಾದ್ಯಂತ ವೈಮಾನಿಕ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಸುಮಾರು 100 ಕ್ಷಿಪಣಿಗಳನ್ನು ಇಸ್ರೇಲ್ ಹಾರಿಸಿದೆ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ : ಲೋಕಸಭೆ | ನಾಯ್ಡು, ಪವಾರ್ರನ್ನು ಸ್ವಚ್ಛಗೊಳಿಸಿದ ‘ವಾಶಿಂಗ್ ಮೆಷಿನ್’ ಕುರಿತು ಚರ್ಚೆಗೆ ನಿಲುವಳಿ ಸೂಚನೆ


