ಭಾರತೀಯ ರಿಸರ್ವ್ ಬ್ಯಾಂಕಿನ 26ನೇ ಗವರ್ನರ್ ಆಗಿ ಸಂಜಯ್ ಮಲ್ಹೋತ್ರ ಅವರು ಬೆಳ್ಳುಳ್ಳಿ ದರ ರೂ 500 ರ ಗಡಿ ದಾಟುತ್ತಿರುವಂತಹ ಸಂದರ್ಭದಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ. ಅಂಕೆಗೆ ಸಿಗದ ಹಣದುಬ್ಬರದ ದಿನಮಾನದಲ್ಲಿ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡ ಸಂಜಯ್ ಮಲ್ಹೋತ್ರ ಆರ್ಥಿಕ ಸ್ಥಿರತೆಯ ಜಪ ಮಾಡುತ್ತಾ ಜನರ ನಂಬಿಕೆ ಕಾಪಾಡಲು ಬದ್ಧ ಎಂದಿದ್ದಾರೆ.
ಅಧಿಕಾರ ವಹಿಸಿಕೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಾ ದೇಶದ ಜನರು ಏನನ್ನು ಎದುರು ನೋಡುತ್ತಿದ್ದಾರೆ ಎಂಬ ಸ್ಪಷ್ಟ ಅರಿವಿದೆ. ಅವರ ನಂಬಿಕೆ ಬಗ್ಗೆಯೂ ತಿಳಿದಿದೆ. ಯಾವುದು ಆರ್ಥಿಕ ಬೆಳವಣಿಗೆ ಯಾವುದು ಸ್ಥಿರ ಹಾಗೂ ನಿಶ್ಚಿತ ನೀತಿ ಎನ್ನುವ ತಿಳುವಳಿಕೆ ಇದೆ. ಈ ಗುರಿ ಸಾಧನೆಯ ಹಾದಿಯಲ್ಲಿ ಜನರ ಹಿತಾಸಕ್ತಿ ಕಾಪಾಡಲು ಒತ್ತು ನೀಡುವುದಾಗಿ ಹೇಳಿಕೊಂಡಿದ್ದಾರೆ.
ಸುಮಾರು 33 ವರ್ಷಗಳ ಹಣಕಾಸು ಇಲಾಖೆಗೆ ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಇರುವ ವಿಜಯ ಮಲೋಹೋತ್ರ ಅವರು ರಾಜಸ್ಥಾನ್ ಕೇಡರ್ ನ 1990 ಬ್ಯಾಚ್ಐಎಎಸ್ ಅಧಿಕಾರಿ. ಅವರು ಕಾನ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಯಿಂದ ಕಂಪ್ಯೂಟರ್ ಸೈನ್ಸ್ ನಲ್ಲಿ ಇಂಜಿನಿಯರಿಂಗ್ ಪದವಿ ಮತ್ತು ಅಮೆರಿಕಾದ ಪ್ರಿನ್ಸ್ ಟೌನ್ ವಿಶ್ವವಿದ್ಯಾನಿಲಯದಿಂದ ಸಾರ್ವಜನಿಕ ನೀತಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಇವರು ರಾಜಸ್ಥಾನ್ದ ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಂತರ ಕಂದಾಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಭಾರತದಲ್ಲಿ ಇಂದು ಜಾರಿಯಾಗಿರುವ ಹೊಸ ತೆರಿಗೆ ನೀತಿ ಜಿಎಸ್ಟಿಯ ಮಾಸ್ಟರ್ ಮೈಂಡ್ ಇವರೇ. ಭಾರತದಲ್ಲಿನ ನೇರ ಆಗ ಪರೋಕ್ಷ ತೆರಿಗೆಗಳಿಗೆ ಸಂಬಂಧಿಸಿದಂತೆ ಹೊಸ ತೆರಿಗೆ ನೀತಿ ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.
ವಿಜಯ್ ಮಲ್ಹೋತ್ರರಿಗೆ ಆರ್ಥಿಕ ವಿಚಾರಕ್ಕೆ ಸಂಬಂಧ ಪಟ್ಟಂತೆ ಸಾಕಷ್ಟು ಅನುಭವ ಇದ್ದರೂ ನರೇಂದ್ರ ಮೋದಿಯಂತಹ ಸರ್ವಾಧಿಕಾರಿ ಮನೋಭಾವದ ವ್ಯಕ್ತಿಯೊಬ್ಬ ಪ್ರದಾನಿಯಾಗಿರುವ ಹಾಗು ದೇಶದ ಎಲ್ಲ ಸ್ವಾಯತ್ತ ಸಂಸ್ಥೆಗಳ ಸ್ವಾಯತ್ತತೆಯನ್ನು ಸರ್ವನಾಶ ಮಾಡಿರುವ ದೇಶದ ಸಂದರ್ಭದಲ್ಲಿ ಹೊಸ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡು ಮೋದಿ ಅವರ ಅಣತಿಯಂತೆ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಆದ್ದರಿಂದ ಆರ್ಥಿಕ ಸ್ಥಿರತೆಯ ಕುರಿತು ಬಾಲಿಸತನದಿಂದ ಕೂಡಿದ ಜಪ ಮಾಡುತ್ತಿದ್ದಾರೆ ಹಾಗು ಹೇಳಿಕೆ ನೀಡುತ್ತಿದ್ದಾರೆ. ಹೀಗೆ ಆರ್ಥಿಕ ಸ್ಥಿರತೆ ಕುರಿತು ಜಪಿಸುತ್ತಿರುವ ಹೊಸ ಗವರ್ನರ್ ಗೆ ಅಥವಾ ಅವರ ನೇತೃತ್ವದ ಆರ್ ಬಿ ಐಗೆ ಇಂದು ಬೆಳ್ಳುಳ್ಳಿಯ ಬೆಲೆ ರೂ.500ರ ಗಡಿ ದಾಟುತ್ತಿರುವಾಗ ಇದನ್ನು ತಡೆಯಲು ಸಾಧ್ಯವಾಗಬಹುದಾದ ಯಾವುದಾದರೂ ಮಾರ್ಗೋಪಾಯಗಳನ್ನು ರೂಪಿಸಲು ಸಾದ್ಯ ಇದೆಯೇ….. ಅಥವಾ ಬೆಲೆಯೇರಿಕೆಯನ್ನು ನಿಯಂತ್ರಿಸಲು ಸಾದ್ಯವಿದೆಯೇ….?
ಹವಾನಿಯಂತ್ರಿತ ಕೊಠಡಿಯೊಳಗೆ ಕುಳಿತು ನೀಡಬಹುದಾದ ನಿರ್ದೇಶನಗಳು, ಸಲಹೆಗಳು ಈ ರೀತಿಯ ಬೆಲೆಯೇರಿಕೆಯನ್ನು ತಡೆಯಬಲ್ಲುದೇ….!? ಈ ಕುರಿತು ಅವಲೋಕನ ನಡೆಸಿದಾಗ ಕೆಲವೊಂದು ಸತ್ಯ ಗೋಚರಿಸುತ್ತದೆ. ಆರ್ಬಿಐಯ ಬಳಿ ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳಲು ಇರುವ ಸೂತ್ರ ರೆಪೋ ದರವನ್ನು ಏರಿಸುವ ಇಳಿಸುವ ಹಾಗೂ ನಗದು ಮೀಸಲು ಅನುಪಾತವನ್ನು (CRR- Cash Reserve Ratio-ನಗದು ಮೀಸಲು ಅನುಪಾತ. ಮೇಲ್ನೋಟಕ್ಕೆ ಇವರೆಡೂ ಬೇರೆ ಬೇರೆ ಎನಿಸಿದರೂ ಮೂಲದಲ್ಲಿ ಒಂದೇ ಆಗಿದೆ. ರೇಪೋ ಜನರನ್ನು ಸಾಲ ತೆಗೆದುಕೊಳ್ಳದಂತೆ ತಡೆದು ನಿಲ್ಲಿಸಿದರೆ CRR ಹೆಚ್ಚಳ ಹೆಚ್ಚು ಸಾಲ ನೀಡದಂತೆ ಬ್ಯಾಂಕ್ ಗಳ ಕೈ ಕಟ್ಟಿ ಹಾಕುತ್ತದೆ ) ಹೆಚ್ಚಿಸುವ -ತಗ್ಗಿಸುವ ಕೆಲಸ ಮಾಡುವುದು. ಇದನ್ನು ಹೊರತುಪಡಿಸಿದರೆ ಇನ್ನೊಂದು ಯೋಜನೆ ನಮಗೆ ಕಾಣುತ್ತಿಲ್ಲ. ಹಣದುಬ್ಬರ ಉಂಟಾದಾಗ ಆರ್ಬಿಐ ರೆಪೋ ದರ ಏರಿಸುತ್ತದೆ . ರೆಪೋ ದರವನ್ನು ಏರಿಸಿದರೆ ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿ ಹೆಚ್ಚಾಗುತ್ತದೆಯಂತೆ. ಆರ್ ಬಿ ಐ ತನ್ನ ಈ ಕ್ರಮಕ್ಕೆ ಬ್ಯಾಂಕ್ ” ಸಾಲಗಳ ಮೇಲಿನ ಬಡ್ಡಿ ಕಡಿಮೆಯಾದರೆ ಜನತೆ ಹೆಚ್ಚು ಹೆಚ್ಚು ಸಾಲ ಪಡೆದುಕೊಳ್ಳಲು ಮುಂದಾಗುತ್ತಾರೆ ಮತ್ತು ಅದರಿಂದ ಮಾರುಕಟ್ಟೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ ಹಾಗೂ ಇದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತದೆ. ಬೇಡಿಕೆ ಹೆಚ್ಚಾದರೆ ಗ್ರಾಹಕ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಇದೇ ಹಣದುಬ್ಬರ. ಬಡ್ಡಿದರ ಹೆಚ್ಚಾದರೆ ಜನತೆಗೆ ಸಾಲ ಪಡೆಯುವ ಆಸಕ್ತಿ ಕುಂದುತ್ತದೆ ಹಾಗೂ ಮಾರುಕಟ್ಟೆಯಲ್ಲಿ ಹಣದ ಹರಿವು ಕಡಿಮೆಯಾಗುತ್ತದೆ ಮತ್ತು ಇದರಿಂದ ಗ್ರಾಹಕವಸ್ತುಗಳ ಬೇಡಿಕೆ ತಗ್ಗುತ್ತದೆ. ಈ ಮೂಲಕ ಬೆಲೆ ಏರಿಕೆಯನ್ನು ತಡೆಗಟ್ಟಬಹುದು ಎಂಬ ಸಿದ್ದ ಉತ್ತರ ನೀಡುತ್ತದೆ.
ವಾಸ್ತವದಲ್ಲಿ ಹಣದುಬ್ಬರವೆಂದರೆ ಬೆಲೆ ಏರಿಕೆ ಎಂಬುದು ನಿಜ. ಆದರೆ ಆರ್ಬಿಐ ಹೇಳುವಂತೆ ಹೆಚ್ಚಾಗುವ ಹಣದ ಹರಿವಿನ ಕಾರಣದಿಂದ ಹೆಚ್ಚುವ ಬೇಡಿಕೆ ಮಾತ್ರ ಬೆಲೆ ಏರಿಕೆಗೆ ಕಾರಣವಾಗುತ್ತದೆ ಎಂಬುದು ಶುದ್ಧ ಸುಳ್ಳು. ಹಣದುಬ್ಬರ ಉಂಟಾಗಲು ಮಾರುಕಟ್ಟೆಯಲ್ಲಿ ಹಣದ ಹೆಚ್ಚುವರಿ ಹರಿವು ಮಾತ್ರ ಕಾರಣವಾಗಲು ಸಾಧ್ಯವಿಲ್ಲ. ಬೇಡಿಕೆಗೆ ತಕ್ಕಂತೆ ವಸ್ತುಗಳ ಪೂರೈಕೆಯಾಗದಿದ್ದರೂ ವಸ್ತುಗಳ ಬೆಲೆ ಏರಿಕೆ ಕಂಡು ಬರುತ್ತದೆ ಹಾಗೂ ಈ ಮೂಲಕ ಹಣದುಬ್ಬರ ಉಂಟಾಗುತ್ತದೆ. ಉದಾಹರಣೆಗೆ ಬೆಳ್ಳುಳ್ಳಿ ದರ ರೂ ಐದುನೂರು ದಾಟುತ್ತಿರುವುದು ಬೇಡಿಕೆಯಷ್ಟು ಬೆಳ್ಳುಳ್ಳಿ ಲಭ್ಯತೆ ಇರದಿರುವುದರರಿಂದ. ಅಕಾಲಿಕ ಅಥವಾ ಹೆಚ್ಚಾದ ಮಳೆಯಿಂದ ಬೆಳ್ಳುಳ್ಳಿ ಇಳುವರಿ ಕುಸಿತಕ್ಕೆ ಕಾರಣವಾಗಿದೆ. ಇಂತಹ ಸಂದರ್ಭದಲ್ಲಿ . ಆರ್ ಬಿ ಐ ಯ ರೆಪೋ ದರ ಏರಿಸುವಂತಹ ಕಾರ್ಯಗಳು ಕಾರ್ಯಸಾಧುವಾಗುತ್ತದೆಯೇ…..?. ಕೇವಲ ರೆಪೋ ದರ ಏರಿಸುವ ಅಥವಾ ಇಳಿಸುವ ಕ್ರಮ ಕೈಗೊಂಡ ಮಾತ್ರಕ್ಕೆ ಎಲ್ಲವೂ ಸರಿ ಆಗುವುದಿಲ್ಲ. ಹಾಗೆ ಆಗುವುದಿದ್ದರೆ ಟೊಮ್ಯಾಟೊ, ಮೆಣಸಿನ ಕಾಯಿ ಬೆಳೆಯುವಂತಹ ರೈತರು ತಮ್ಮ ಬೆಳೆಗೆ ಸೂಕ್ತ ಬೆಲೆ ಸಿಗಧಿಧ್ಧಾಗ ತಮ್ಮ ಬೆಳೆಯನ್ನು ರಸ್ತೆಗಳಲ್ಲಿ ಚಲ್ಲಿ ಹೋಗುವಂತಹ ಪ್ರಸಂಗ ಬರುತ್ತಿರಲಿಲ್ಲ. ಇವುಗಳನ್ನು ಅರ್ಥಮಾಡಿಕೊಂಡರೆ ಆರ್ಬಿಐ ಸಮರ್ಥನೆ ಬರಿ ಬೂಸಿ ಅಷ್ಟೇ ಎನಿಸುವುದಿಲ್ಲವೇ?
ಮೇಲಾಗಿ ಆರ್ ಬಿ ಐ ಒಂದು ಬಂಡವಾಳಶಾಹಿ ನಿರ್ದೇಶಿತ ಸಂಸ್ಥೆ. ಅದರ ಕರ್ತವ್ಯಗಳು ಬಂಡವಾಳ ವ್ಯವಸ್ಥೆಯ ಬೆಳವಣಿಗೆಗೆ ಬೇಕಾದ ಅನುಕೂಲಕರ ವಾತಾವರಣ ನಿರ್ಮಿಸುವುದಾಗಿದೆ. ಕೇಂದ್ರದ ಬಂಡವಾಳಶಾಹಿಪರ ನೀತಿ ನಿಯಮಾವಳಿಗಳನ್ನು ಶಿರಸಾವಹಿಸಿ ಅನುಷ್ಠಾನಕ್ಕೆ ತರುವುದಷ್ಟೇ ಅದರ ಕರ್ತವ್ಯವಾಗಿದೆ. ಸದ್ಯದ ಚಿಲ್ಲರೆ ವಿಚಾರವನ್ನೇ ತೆಗೆದುಕೊಳ್ಳಿ. ಮಾರುಕಟ್ಟೆಯಲ್ಲಿ ಚಿಲ್ಲರೆ ಹಣದ ಅಭಾವ ತೀವ್ರವಾಗಿದೆ. ಇಂತಹ ಸಂದರ್ಭದಲ್ಲಿ ಸಮರ್ಪಕ ಚಲಾವಣೆಗೆ ಬೇಕಾಗುವಷ್ಟು ಚಿಲ್ಲರೆ ಹಣ ಮುದ್ರಿಸಿ ಕೊರತೆ ನೀಗಲು ಗಮನ ಹರಿಸದೆ ಜಾಣ ಕುರುಡುತನ ಪ್ರದರ್ಶಿಸುತ್ತಿದೆ. ಚಿಲ್ಲರೆ ಅಭಾವವನ್ನು ಖುದ್ದು ಆರ್ಬಿಐಯೇ ಮಾಡುತ್ತಿದೆ. ಈ ಮೂಲಕ ಜನತೆ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಡಿಜಿಟಲ್ ಹಣ ವರ್ಗಾವಣೆಗೆ ತೊಡಗಿಸಿಕೊಳ್ಳುತ್ತಿದ್ದಾರೆ. ಇದನ್ನು ನಾವು ಡಿಜಿಟಲ್ ಹಣ ವರ್ಗಾವಣೆಗೆ ಜನತೆಯನ್ನು ತೊಡಗುವಂತೆ ಮಾಡುತ್ತಿರುವ ಬಲತ್ಕಾರ ಎಂದು ವ್ಯಾಖ್ಯಾನಿಸದೆ ಇರಲು ಸಾದ್ಯವಿದೆಯೆ….? .
ಡಿಜಿಟಲ್ ಹಣ ವರ್ಗಾವಣೆ ಎಂಬುದು ಒಂದು ಸಾಮ್ರಾಜ್ಯವಾದಿ ಮಾರುಕಟ್ಟೆ, ಭಾರತದ ಈ ಅಗಾಧ ಜನ ಸಮೂಹ ನಗದು ಚಲಾವಣೆಯನ್ನು ತೊರೆದು ಡಿಜಿಟಲ್ ಹಣ ವರ್ಗಾವಣೆಗೆ ತೊಡಗಿಸಿಕೊಂಡರೆ ಅದೊಂದು ಅಗಾದವಾದ ಮಾರುಕಟ್ಟೆಯನ್ನು ನಿರ್ಮಿಸುತ್ತದೆ. ಹೀಗೆ ಜನತೆಯನ್ನು ಗ್ರಾಹಕರನ್ನಾಗಿ ಮಾಡುವ ಹೊಣೆಗಾರಿಕೆಯನ್ನು ಆರ್ ಬಿ ಐ ಯೇ ಖುದ್ದು ತಾನೇ ಹೊತ್ತುಕೊಂಡಿದೆ. ಸ್ವಾವಲಂಬಿ ಜೀವಿಗಳು ತಮ್ಮ ನಿತ್ಯ ಬದುಕಿನ ಅವಶ್ಯಕತೆಗಾಗಿ ಮಾರುಕಟ್ಟೆಯನ್ನು ಅವಲಂಬಿಸಿ ಗ್ರಾಹಕರಾಗಿ ರೂಪುಗೊಂಡರೆಂದರೆ ಅದು ಹಣದುಬ್ಬರಕ್ಕೆ ಮುನ್ನುಡಿ ಬರೆದಂತೆ ಆಗುತ್ತದೆ. ಹಣದುಬ್ಬರದ ಮೂಲ ಪೀಠಿಕೆ ಅಲ್ಲಿಂದಲೇ ಆರಂಭಗೊಳ್ಳುತ್ತದೆ. ಹಾಗಾಗಿ ಹಣದುಬ್ಬರ ತರುವ ಮೇಲುಸ್ತುವಾರಿಯನ್ನು ಖುದ್ದು ಆರ್ ಬಿ ಐಯೇ ಹೊತ್ತುಕೊಂಡಿದೆ.
ಹಾಗಿದ್ದರೆ ರೆಪೋ ದರ ಏರಿಸುವ ಇಳಿಸುವ ಆರ್ ಬಿಐನ ಕ್ರಮ ಪ್ರಸ್ತುತ ಆರ್ಥಿಕತೆಯ ಮೇಲೆ ಬೀರಬಹುದಾದ ಪರಿಣಾಮವಾದರೂ ಏನಿರಬಹುದು …?
ರೆಪೋ ದರ ಏರಿಸಿ ಆ ಮೂಲಕ ಸಾಲದ ಮೇಲಿನ ಬಡ್ಡಿದರ ಹೆಚ್ಚಿಸುವ ಕ್ರಮ ಸಹ ಹಣದುಬ್ಬರ ತಡೆಯುವ ನೆಪ ಹೇಳಿ ಬಂಡವಾಳಿಗರಿಗೆ ಲಾಭ ತಂದು ಕೊಡುವ ಕೆಲಸವನ್ನು ಮಾಡುತ್ತಿರುವುದನ್ನುಗಮನಿಸಬೇಕಿದೆ. ಮಾರುಕಟ್ಟೆಯಲ್ಲಿ ಹೆಚ್ಚು ಹಣ ಚಲಾವಣೆಯನ್ನು ತಡೆಯಬೇಕೆನ್ನುವ ಉದ್ದೇಶದಿಂದ ಹೊಸದಾಗಿ ಪಡೆಯುವ ಕಾಲದ ಮೇಲಿನ ಬಡ್ಡಿದರ ಏರಿಸುವುದೇನೋ ಖರೆ. ಆದರೆ ಹಳೆಯ ಸಾಲದ ಮೇಲಿನ ಬಡ್ಡಿದರ ಹೆಚ್ಚಿಸುವ ಉದ್ದೇಶವಾದರೂ ಏನು…!?
ಉದ್ದೇಶ ಇಷ್ಟೇ. ಹಣಕಾಸು ಸಂಸ್ಥೆಗಳನ್ನು ಈ ದೇಶದಲ್ಲಿ ತೆರೆದು ಸಾಲ ನೀಡುತ್ತಿರುವವರು ದೊಡ್ಡ ದೊಡ್ಡ ಬಂಡವಾಳಿಗರೆ ಆಗಿದ್ದಾರೆ. ಈ ರೀತಿ ಬಡ್ಡಿ ಏರಿಸುವುದರಿಂದ ಹೆಚ್ಚುವುದು ಈ ಬಂಡವಾಳಿಗರ ಲಾಭವೇ ಆಗುತ್ತದೆ. ಇನ್ನೊಂದು ನೆಲೆಯಿಂದ ಹೇಳಬೇಕೆಂದರೆ ಹಳೆಯ ಸಾಲದ ಮೇಲಿನ ಬಡ್ಡಿದರ ಹೆಚ್ಚಿಸುವುದರಿಂದ ಮಾರುಕಟ್ಟೆಗೆ ಹೆಚ್ಚಿನ ಹಣ ಹರಿದು ಬರುವಂತೆ ಆಗುತ್ತದೆ. ಹಾಗು ಆ ಮೂಲಕ ಹಣದುಬ್ಬರವುಂಟಾಗುತ್ತದೆ. ಆದುದರಿಂದ ಮೇಲ್ನೋಟಕ್ಕೆ ರೆಪೋ ದರ ಏರಿಸುವ ಆರ್ ಬಿ ಐ ಈ ಕ್ರಮ ವಿವೇಚನಾರಹಿತವಾದದ್ದು ಮತ್ತು ವಂಚನೆ ಎಂದು ತೋರುತ್ತದೆ. ನಿತ್ಯ ಏರುತ್ತಿರುವ ಬೆಲೆ ಏರಿಕೆಯಿಂದಾಗಿ ಉಂಟಾಗಬಹುದಾದ ಜನಾಕ್ರೋಶವನ್ನು ತಣ್ಣಗಾಗಿಸುವ ನಿಟ್ಟಿನಲ್ಲಿ ಆರ್ಬಿಐ ಈ ಒಂದು ಸುಂದರ ನಾಟಕವನ್ನು ಆಡುತ್ತಿದೆ. ಬಂಡವಾಳಶಾಹಿ ವ್ಯವಸ್ಥೆಯ ಸೂತ್ರದ ಗೊಂಬೆಯಂತೆ ಕುಣಿಯುತ್ತಿದೆ ಅಷ್ಟೇ.


