ಮಡಿಕೇರಿ: 200 ವರ್ಷಕ್ಕೂ ಹೆಚ್ಚು ಹಳೆಯ ಮಸೀದಿಯೊಂದು ಶಿಥಿಲಾವಸ್ಥೆಯಲ್ಲಿದ್ದಾಗ, ಅದರ ಅಭಿವೃದ್ಧಿಗೆ ಮುಸ್ಲಿಮರೊಂದಿಗೆ 50ರಷ್ಟು ಹಿಂದೂಗಳು ಹಾಗೂ 8ಕ್ಕೂ ಅಧಿಕ ಕ್ರೈಸ್ತರು ಸೇರಿ ನವೀಕರಿಸಿ, ವಿಶಿಷ್ಟ ಶೈಲಿಯ ಮಸೀದಿಯಾಗಿ ಉದ್ಘಾಟನೆಗೊಂಡಿದೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಎಲ್ಲ ಧರ್ಮದವರ ಸಹಕಾರದೊಂದಿಗೆ ಶಾಫಿ ಜುಮಾ ಮಸೀದಿ ಶನಿವಾರದಂದು ಉದ್ಘಾಟನೆಗೊಂಡಿತು.
ಬಿಬಿಎಂಪಿ ಮಾಜಿ ಸದಸ್ಯ ಬಿಜೆಪಿಯ ನಾರಾಯಣರಾಜು ಅವರು ಮಸೀದಿಗಾಗಿ 2.5 ರೂ. ಲಕ್ಷವನ್ನು ದೇಣಿಗೆ ನೀಡಿದ್ದಾರೆ. ಸುರೇಶ್ ಎಂಬುವವರು ಮಸೀದಿಗೆ ಬೇಕಾದ ಪೀಠೋಪಕರಣಗಳನ್ನು ತಯಾರಿಸಿದ್ದಾರೆ. ಕ್ರೈಸ್ತ ಧರ್ಮದ ರಾಜು ಪಿಳ್ಳೆ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು ಎಂದು ಪ್ರಜಾವಾಣಿ ದಿನಪತ್ರಿಕೆ ವರದಿ ಮಾಡಿದೆ.
ಇಂತಹ ಅಪರೂಪದ ಕೋಮುಸೌಹಾರ್ದದ ಶಾಫಿ ಜುಮಾ ಮಸೀದಿಯು ಮಿನಾರ್ ರಹಿತ ವಿಭಿನ್ನವಾದ ಅರಾಧನಾಲಯವಾಗಿದೆ. ನಿರ್ಮಾಣಕ್ಕೆ ರೂ. 2 ಕೋಟಿಗೂ ಅಧಿಕ ವೆಚ್ಚವಾಗಿದೆ. ಏಕಕಾಲಕ್ಕೆ 600 ಮಂದಿ ಪ್ರಾರ್ಥನೆ ಸಲ್ಲಿಸಬಹುದಾದಷ್ಟು ವಿಸ್ತಾರವಾಗಿರುವ ಇದು ಪೊನ್ನಂಪೇಟೆ ತಾಲ್ಲೂಕಿನಲ್ಲೇ ಅತ್ಯಂತ ದೊಡ್ಡ ಮಸೀದಿ ಎಂಬ ಹೆಸರು ಪಡೆದಿದೆ.
ಮಸೀದಿಯು ಈ ಭಾಗದಲ್ಲಿ ಇದುವರೆಗೂ ಸಹಾಯ ಕೇಳಿ ಬಂದವರಿಗೆ ಇಲ್ಲ ಎಂದಿಲ್ಲ. ಯಾವುದೇ ಧರ್ಮದವರು ಸಹಾಯ ಕೇಳಿ ಬಂದಲ್ಲಿ ಅವರಿಗೆ ಸಹಾಯ ಮಾಡುವ ಮೂಲಕ ಎಲ್ಲ ಧರ್ಮೀಯರ ವಿಶ್ವಾಸಕ್ಕೆ ಮಸೀದಿ ಪಾತ್ರವಾಗಿದೆ.
ಭ್ರಾತೃತ್ವದ ಸಂಕೇತದಂತಿರುವ ಮಸೀದಿಯನ್ನು ಸಮಸ್ತ ಕೇಂದ್ರ ಮುಶಾವರದ ಅಧ್ಯಕ್ಷ ಸೈಯದ್ ಜಿಫ್ರಿ ಮುತ್ತುಕೋಯ ತಂಗಳ್ ಅವರು ಶನಿವಾರ ಉದ್ಘಾಟಿಸಿ ಪ್ರಾರ್ಥನೆಗೆ ಮುಕ್ತಗೊಳಿಸಿದರು ಎಂದು ಈ ಪತ್ರಿಕೆ ವರದಿ ಮಾಡಿದೆ.


