ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದ್ದು, ಇನ್ನೂ ಯಾವುದೇ ಪಕ್ಷಗಳು ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿಲ್ಲ. ಈ ಮಧ್ಯೆ ಇಂದು ಪ್ರಧಾನಿ ಮೋದಿ ಅವರನ್ನು ಎನ್ಸಿಪಿ ನಾಯಕ ಶರದ್ ಪವಾರ್ ಭೇಟಿಯಾಗಲಿದ್ದಾರೆ. ಮಹಾರಾಷ್ಟ್ರ ರೈತರು ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಹೀಗಾಗಿ ಶರದ್ ಪವಾರ್ ಮೋದಿ ಅವರೊಂದಿಗೆ ಮಧ್ಯಾಹ್ನ ಚರ್ಚೆ ನಡೆಸಲಿದ್ದಾರೆ.
ಮಹಾರಾಷ್ಟ್ರ ರೈತರ ಸಂಕಷ್ಟ, ಹಾನಿ, ನೆರೆ, ಮಳೆಯಿಂದ ಬೆಳೆ ನಷ್ಟ ಆಗಿದೆ. ಇದೆಲ್ಲ ಸಂಕಷ್ಟಗಳಿಂದ ಅನ್ನದಾತರು ಹೈರಾಣಾಗಿದ್ದಾರೆ. ಉಭಯ ನಾಯಕರು ಮಧ್ಯಾಹ್ನ ಸಂಸತ್ತಿನಲ್ಲಿ ಸಭೆ ನಡೆಸಲಿದ್ದಾರೆ. ರಾಜ್ಯದಲ್ಲಿ ಯಾವುದೇ ಪಕ್ಷ ಅಧಕಾರಕ್ಕೆ ಬರಬೇಕಾದ್ರೂ ಎನ್ಸಿಪಿ ಬೆಂಬಲ ಬೇಕೇ ಬೇಕು. ಈಗ ಎನ್ಸಿಪಿಗೆ ಹೆಚ್ಚು ಬೇಡಿಕೆಯಿದೆ. ಹೀಗಾಗಿ ಸಭೆ ಹೆಚ್ಚು ಮಹತ್ವ ಪಡೆದುಕೊಂಡಿದೆ.
ಸರ್ಕಾರ ರಚನೆಯಲ್ಲಿ ಹೊಂದಾಣಿಕೆಯಾಗದೇ ತನ್ನ ದೀರ್ಘಕಾಲದ ಸ್ನೇಹಿತ ಬಿಜೆಪಿ ಜತೆ ಶಿವಸೇನೆ ಮೈತ್ರಿ ಕೊನೆಗೊಳಿಸಿತು. ಇನ್ನು ಶಿವಸೇನೆ ಜತೆ ಸರ್ಕಾರ ರಚಿಸಲು ಈಗಾಗಲೇ ರೂಪುರೇಷೆ ತಯಾರಿಸಿ, ಪಾಲುದಾರಿಕೆ ಮಾಡಿಕೊಳ್ಳಲು ಎನ್ಸಿಪಿ, ಶಿವಸೇನೆ, ಕಾಂಗ್ರೆಸ್ ರೆಡಿ ಆಗಿವೆ. ಇಂದು ಸಂಜೆ ಎನ್ಸಿಪಿ ಮತ್ತು ಕಾಂಗ್ರೆಸ್ ಸಂಜೆ ಸಭೆ ಸೇರಲಿವೆ.
ಇದನ್ನೂ ಓದಿ: ಮುಂದುವರೆದ ಮಹಾರಾಷ್ಟ್ರ ಸರ್ಕಾರ ರಚನೆ ಹಗ್ಗ-ಜಗ್ಗಾಟ: ಯಾವ ಪಕ್ಷ ಅಧಿಕಾರಕ್ಕೆ..!?
ಸೇನಾ ಪ್ರತಿಸ್ಪರ್ಧಿ ಎನ್ಸಿಪಿ ಮತ್ತು ಕಾಂಗ್ರೆಸ್ ಬೆಂಬಲ ಹಾಗೂ ಮೈತ್ರಿ ಮೂಲಕ ಸರ್ಕಾರ ರಚಿಸುವ ಆಶಯ ಹೊಂದಿದೆ. ಆದರೆ ಎರಡು ವಿರೋಧ ಪಕ್ಷಗಳು ತಮ್ಮ ನಿರ್ಧಾರ ಪ್ರಕಟಿಸುವಲ್ಲಿ ವಿಳಂಬ ಮಾಡುತ್ತಿವೆ.
ಇತ್ತ ರಾಜ್ಯಸಭೆಯ 250 ನೇ ಅಧಿವೇಶನ ಹಿನ್ನೆಲೆ ನಡೆದ ಚರ್ಚೆಯ ವೇಳೆ ಪ್ರಧಾನಿ ಮೋದಿ, ಎನ್ಸಿಪಿಯನ್ನು ಶ್ಲಾಘಿಸಿದರು. ಎನ್ಸಿಪಿ ಮತ್ತು ಬಿಜೆಡಿ (ನವೀನ್ ಪಟ್ನಾಯಕ್ನ ಬಿಜು ಜನತಾದಳ) ಪಕ್ಷಗಳನ್ನು ನಾನು ಪ್ರಶಂಸಿಸುತ್ತೇನೆ. ಸಂಸತ್ತಿನ ಮಾನದಂಡಗಳನ್ನು ಎರಡೂ ಪಕ್ಷಗಳೂ ಅತ್ಯಧ್ಬುತವಾಗಿ ಪಾಲಿಸಿವೆ. ಪ್ರತಿಭಟಿಸದೇ, ತಮ್ಮ ತಮ್ಮ ಅಭಿಪ್ರಾಯಗಳನ್ನು ಪರಿಣಾಮಕಾರಿಯಾಗಿ ಹೇಳಿದ್ದಾರೆ. ಬಿಜೆಪಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳೂ ಅವರಿಂದ ಕಲಿಯಬೇಕು ಎಂದು ಶ್ಲಾಘಿಸಿದ್ದರು.