ಅಕ್ರಮ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಹಾಲಿ ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಗೆ ಮತ್ತೆ ಸಂಕಷ್ಟ ಎದುರಾಗಿದೆ.
ಅಕ್ರಮ ಡಿನೋಟಿಫಿಕೇಶನ್ಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆ ನೀಡುವಂತೆ ಕೋರಿ ಕುಮಾರಸ್ವಾಮಿ ಸಲ್ಲಿಸಿದ್ದ ಮನವಿಯನ್ನು 2020ರಲ್ಲಿ ಹೈಕೋರ್ಟ್ ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಕುಮಾರಸ್ವಾಮಿ ಸುಪ್ರೀಂ ಕೋರ್ಟ್ಗೆ ವಿಶೇಷ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿಯನ್ನು ಪರಿಗಣಿಸಲು ನ್ಯಾಯಮೂರ್ತಿಗಳಾದ ದೀಂಪಕರ್ ದತ್ತಾ ಮತ್ತು ರಾಜೇಶ್ ಬಿಂದಾಲ್ ಅವರ ಸುಪ್ರೀಂ ಕೋರ್ಟ್ ಪೀಠ ಮಂಗಳವಾರ (ಫೆ.25) ನಿರಾಕರಿಸಿದೆ.
“ಅಕ್ರಮ ಡಿನೋಟಿಫಿಕೇಶನ್ ಮತ್ತು ಅಧಿಕಾರ ದುರುಪಯೋಗ ಆರೋಪವನ್ನು ವಿಚಾರಣೆ ಇಲ್ಲದೆ ಬಿ ರಿಪೋರ್ಟ್ ಹಾಕಲು ಸಾಧ್ಯವಿಲ್ಲವೆಂದು” ನ್ಯಾಯಲಯವು ಅಭಿಪ್ರಾಯಪಟ್ಟಿದೆ ಎಂದು ವರದಿಯಾಗಿದೆ.
ಪ್ರಕರಣದ ವಿವರಣೆ : ಬೆಂಗಳೂರಿನ ಬನಶಂಕರಿ 5ನೇ ಹಂತದ ಹಳ್ಳಗೆ ವಡೇರಹಳ್ಳಿ ಗ್ರಾಮದ ಸರ್ವೆ ನಂಬರ್ 128 ಮತ್ತು 137 (ಒಟ್ಟು 2 ಎಕರೆ 24 ಗುಂಟೆ) ಅಕ್ರಮ ಡಿ ನೋಟಿಫಿಕೇಶನ್ಗೆ ಸಂಬಂಧಿಸಿದೆ. 1997ರ ಸೆಪ್ಟೆಂಬರ್ 12ರಂದು ಕರ್ನಾಟಕ ಸರ್ಕಾರ ಈ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. 1998ರ ಎಪ್ರಿಲ್ 28 ರಂದು ಈ ಕುರಿತು ಆದೇಶ ಹೊರಡಿಸಿತ್ತು. ನಂತರ 1999ರ ಸಪ್ಟೆಂಬರ್ 29ರಂದು, ಈ ಜಾಗವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಗೆ ಅಭಿವೃದ್ಧಿ ಯೋಜನೆಗಳಿಗಾಗಿ ಹಸ್ತಾಂತರಿಸಲಾಗಿತ್ತು. ಈ ಮಧ್ಯೆ ಭೂಮಿಯ ಮೂಲ ಮಾಲಕರಾಗಿದ್ದ ಪದ್ಮಾ ಎಂಬವರು, ಭೂಮಿಯನ್ನು ಮೂರನೇ ವ್ಯಕ್ತಿಗೆ ಮಾರಾಟ ಮಾಡಿದ್ದರು.
ಕಾನೂನು ಬಾಹಿರವಾಗಿ ಮೂರನೇ ವ್ಯಕ್ತಿಗೆ ಮಾರಾಟ ಮಾಡಿದ ಪದ್ಮಾ ಅವರು ಆಗಿನ ಮುಖ್ಯಮಂತ್ರಿಯವರ ಬಳಿ ಭೂಮಿಯನ್ನು ಡಿನೋಟಿಫೈ ಮಾಡುವಂತೆ ಮನವಿ ಸಲ್ಲಿಸಿದ್ದರು. ಈ ಬಗ್ಗೆ 2005ರ ಡಿಸೆಂಬರ್ 30ರಂದು, ಭೂಮಿಯು ತನ್ನ ಸ್ವಾಧೀನದಲ್ಲಿರುವುದರಿಂದ, ಡಿನೋಡಿಫೈ ಪ್ರಸ್ತಾವನೆಗೆ ಬಿಡಿಎ ತೀವ್ರ ವಿರೋಧ ವ್ಯಕ್ತಪಡಿಸಿತ್ತು. 2007ರ ಅಕ್ಟೋಬರ್ 10ರಂದು ಆಗಿನ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು, ಭೂಮಿಯನ್ನು ಡಿನೋಟಿಫಿಕೇಶನ್ ಮಾಡುವ ಸಮಿತಿಯ ಮುಂದಿಡದೇ ಏಕಪಕ್ಷೀಯವಾಗಿ ಡಿನೋಟಿಫಿಕೇಶನ್ ಮಾಡಲು ಆದೇಶಿಸಿದ ಆರೋಪವಿದೆ. ಈ ಅಕ್ರಮ ಡಿನೋಟಿಫಿಕೇಶನ್ ಆದ ಬಳಿಕ 2010ರ ಮಾರ್ಚ್ 10ರಂದು ಭೂಮಿಯನ್ನು 4.14 ಕೋಟಿ ರೂ.ಗೆ ಮೂರನೇ ವ್ಯಕ್ತಿಗಳಿಗೆ ಮಾರಾಟ ಮಾಡಲಾಗಿದೆ.
ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಈ ಕುರಿತು 2012ರ ಜುಲೈ 4ರಂದು ಹೆಚ್.ಡಿ ಕುಮಾರಸ್ವಾಮಿಯವರ ವಿರುದ್ಧ ಖಾಸಗಿ ದೂರು ದಾಖಲಿಸಲಾಗಿತ್ತು. ನ್ಯಾಯಾಲಯ ಪ್ರಕರಣವನ್ನು ತನಿಖೆ ಮಾಡುವಂತೆ ಲೋಕಾಯುಕ್ತ ಪೊಲೀಸರಿಗೆ ಆದೇಶ ನೀಡಿತ್ತು. ಅದರಂತೆ ಕುಮಾರಸ್ವಾಮಿಯವರ ವಿರುದ್ಧ ಜುಲೈ 10, 2012ರಂದು ಐಪಿಸಿ ಸೆಕ್ಷನ್ 120 ಬಿ ಯಡಿ 420, 463, 468, 471 ಹಾಗೂ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ 13 1c, 13 1dಯ ಅಡಿ ಆರೋಪಗಳನ್ನು ಹೊರಿಸಿ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ಲೋಕಾಯುಕ್ತ ಪೊಲೀಸ್ ದಾಖಲಿಸಿದ್ದ ಎಫ್ಐಆರ್ ಪ್ರಶ್ನಿಸಿ ಹೆಚ್.ಡಿ ಕುಮಾರಸ್ವಾಮಿ ಹೈಕೋರ್ಟ್ ಮೊರೆ ಹೋಗಿದ್ದರು. 2015ರ ಜುಲೈ 27ರಂದು ಹೈಕೋರ್ಟ್ ತನ್ನ ಆದೇಶದಲ್ಲಿ ಎಫ್ಐಆರ್ ರದ್ದುಪಡಿಸಲು ನಿರಾಕರಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಅಕ್ಟೋಬರ್ 3,2016ರಂದು ತಿರಸ್ಕರಿಸಿತ್ತು.
ಆ ಬಳಿಕ ಮೇ 23, 2018ರಿಂದ ಜುಲೈ 23, 2019ರ ಅವಧಿಯಲ್ಲಿ ಕುಮಾರಸ್ವಾಮಿಯವರು ಎರಡನೇ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಈ ವೇಳೆ ತಮ್ಮ ಪ್ರಭಾವ ಬಳಸಿ ಪ್ರಕರಣವನ್ನು ಮುಕ್ತಾಯಗೊಳಿಸುವ ಬಿ ರಿಪೋರ್ಟ್ ಸಲ್ಲಿಸಲಾಗಿತ್ತು ಎಂದು ಆರೋಪಿಸಲಾಗಿದೆ.
ಆದರೆ, 2019ರ ಸಪ್ಟೆಂಬರ್ 4 ರಂದು ಜನಪ್ರತಿನಿಧಿಗಳ ನ್ಯಾಯಾಲಯದ ವಿಶೇಷ ನ್ಯಾಯಾಧೀಶರು ಬಿ ರಿಪೋರ್ಟ್ ತಿರಸ್ಕರಿಸಿ, ಹೆಚ್.ಡಿ ಕುಮಾರಸ್ವಾಮಿಯವರ ವಿಚಾರಣೆಗೆ ಆದೇಶ ನೀಡಿದ್ದರು. ಕೆಳ ನ್ಯಾಯಾಲಯದ ಸಮನ್ಸ್ ಅನ್ನು ಕುಮಾರಸ್ವಾಮಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದಾಗ, “ಪ್ರಕರಣ ಗಂಭೀರವಾಗಿದ್ದು, ಈ ಹಂತದಲ್ಲಿ ವಿಚಾರಣೆಗೆ ತಡೆ ನೀಡಲು ನ್ಯಾಯಾಲಯವು ಮಧ್ಯ ಪ್ರವೇಶಿಸುವುದಿಲ್ಲ” ಎಂದು ಹೈಕೋರ್ಟ್ ಹೇಳಿತ್ತು.
ಹೈಕೋರ್ಟ್ ಆದೇಶ ಪ್ರಶ್ನಿಸಿ, ತಮ್ಮ ವಕೀಲ ಮುಕುಲ್ ರೋಹಟಗಿಯವರ ಮೂಲಕ ಕುಮಾರಸ್ವಾಮಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. 1988 ರ ಭ್ರಷ್ಟಾಚಾರ ತಡೆ ಕಾಯ್ದೆಯ 2018ರ ತಿದ್ದುಪಡಿಯನ್ನು (ಪೂರ್ವಾನುಮತಿ ಪಡೆಯುವುದು) ಗಮನದಲ್ಲಿಟ್ಟುಕೊಂಡು ಪ್ರಕರಣವನ್ನು ರದ್ದುಪಡಿಸಬೇಕು ಎಂದು ಕೋರಿದ್ದರು.
ಈ ಕುರಿತು ಮಂಗಳವಾರ (ಫೆ.25) ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಆರೋಪಗಳ ಗಂಭೀರತೆ ಹಾಗೂ ಮುಖ್ಯಮಂತ್ರಿ ಹುದ್ದೆಯನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ದುರುಪಯೋಗಪಡಿಸಿಕೊಂಡಿರುವುದನ್ನು ಗಮನಿಸಿ ಅರ್ಜಿಯನ್ನು ತಿರಸ್ಕರಿಸಿದೆ.
ಪ್ರಕರಣದಿಂದ ರಕ್ಷಣೆ ಪಡೆಯಲು 2018ರ ತಿದ್ದುಪಡಿಯನ್ನು ಬಳಸಲು ಸಾಧ್ಯವಿಲ್ಲ. ಪ್ರಕರಣವು ತಿದ್ದುಪಡಿ ಜಾರಿಗೆ ಬರುವ ಮೊದಲು ನಡೆದಿದೆ ಎಂದು ಕರ್ನಾಟಕ ಸರ್ಕಾರದ ಪರ ಹಿರಿಯ ವಕೀಲ ಹರಿನ್ ರಾವಲ್, ಅಸಿಸ್ಟೆಂಟ್ ಅಡ್ವೊಕೇಟ್ ಜನರಲ್ ಅಮನ್ ಪವಾರ್ ಅವರು ಸುಪ್ರೀಂ ಕೋರ್ಟ್ನಲ್ಲಿ ವಾದ ಮಂಡಿಸಿದ್ದರು.


