ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್ನಲ್ಲಿ ಕೃಷಿಕರ ಸಮಸ್ಯೆಗಳಿಗೆ ಪರಿಹಾರ ಇಲ್ಲ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯುತ್ತಿರುವ ‘ಜನ ಚಳವಳಿಗಳ ಬಜೆಟ್ ಅಧಿವೇಶನ’ದ ಎರಡನೇ ದಿನದ ಮೊದಲ ಗೋಷ್ಠಿಯಲ್ಲಿ ಮಾತನಾಡಿದ ಅವರು, “ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಮಹಿಳೆಯರು ಈ ಬಾರಿಯ ಬಜೆಟ್ ಜನಪರವಾಗಿರಬೇಕು ಎಂದು ಹಲವು ಬೇಡಿಕೆಗಳನ್ನು ಇಟ್ಟಿದ್ದರು. ಆದರೆ, ಎಲ್ಲವೂ ಈಡೇರಿದೆ ಎಂದು ಅನಿಸುತ್ತಿಲ್ಲ” ಎಂದು ಹೇಳಿದರು.
“ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್ನಲ್ಲಿ ರೈತರಿಗೆ ಇನ್ನಷ್ಟು ಹೆಚ್ಚು ಒತ್ತು ಕೊಡಬಹುದಿತ್ತು; ಮುಂದಿನ ದಿನಗಳಲ್ಲಿ ಬಜೆಟ್ನಲ್ಲಿ ರೈತರಿಗೆ, ಕೃಷಿಕರಿಗೆ ಮೀಸಲಿಡಬೇಕಾದಂತಹ ಹಣ ನಿಗಧಿ ಮಾಡಬೇಕು. ದೇಶದ ಮತ್ತು ರಾಜ್ಯದ ಜಿಡಿಪಿ ಅಭಿವೃದ್ಧಿಯಾಗಬೇಕೆಂದರೆ, ರೈತರ ಆದಾಯ ಹೆಚ್ಚಾಗಬೇಕು. ರೈತರ ಆದಾಯ ಹೆಚ್ಚಾಗದೇ ದೇಶದ ಅಭಿವೃದ್ದಿ ಸಾಧ್ಯವಿಲ್ಲ. ರೈತರನ್ನು ನಗರಗಳಿಗೆ ಕರೆತಂದು ಕೆಲಸ ಕೊಡಲು ಸಾಧ್ಯವಿಲ್ಲ” ಎಂದು ಹೇಳಿದರು.
“ನೀರಾವರಿಗೆ ಅನುದಾನ ಹೆಚ್ಚು ಮಾಡಬೇಕಿತ್ತು; ಬೇಸಿಗೆ ಪ್ರಾರಂಭವಾಗುವುದಕ್ಕಿಂತ ಮೊದಲೇ ರೈತರಿಗೆ ವಿದ್ಯುತ್, ಟ್ರಾನ್ಸ್ಫಾರ್ಮ್ಗಳಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಇನ್ನು ಸಂಪೂರ್ಣವಾಗಿ ಬೇಸಿಗೆ ಪ್ರಾರಂಭವಾದರೆ ರೈತರ ಪರಿಸ್ಥಿತಿ ಏನು ಅನ್ನುವುದರ ಬಗ್ಗೆ ಸರ್ಕಾರ ಯೋಚನೆ ಮಾಡಬೇಕಿತ್ತು. ನೀರಾವರಿಗೆ ಬಜೆಟ್ ಜಾಸ್ತಿ ಮಾಡಬೇಕು. ಸರ್ಕಾರ ರೈತರಿಗೆ, ಕಾರ್ಮಿಕರಿಗೆ ಬೆಂಬಲ ಕೊಡವ ರೀತಿಯಲ್ಲಿ ಬಜೆಟ್ಗಳನ್ನು ಮಂಡಿಸಬೇಕು” ಎಂದು ಹೇಳಿದರು.
ಕಾರ್ಮಿಕ ಮುಖಂಡರಾದ ಮೈತ್ರೇಯಿ ಕೃಷ್ಣನ್ ಮಾತನಾಡಿ, “ವರ್ಡ್ ಇನ್ ಇಕ್ವಾಲಿಟಿ ಲ್ಯಾಬ್’ ಪ್ರಕಾರ, ದೇಶಕ್ಕೆ ಸ್ವಾತಂತ್ರ್ಯ ಬರುವುದಕ್ಕೆ ಮೊದಲಿದ್ದ ಪರಿಸ್ಥಿತಿಯೇ ಈಗಲೂ ಇದೆ. ಕಳೆದ 15 ವರ್ಷಗಳಲ್ಲಿ ಅಸಮಾನತೆ ಇನ್ನೂ ಹೆಚ್ಚಾಗಿದೆ. ಇದೇ ಸಂದರ್ಭದಲ್ಲಿ ದೇಶದಲ್ಲಿ 271 ಜನ ಬಿಲೇನಿಯರ್ಗಳಿದ್ದಾರೆ. ದೇಶದ ಬಡತನ ಕೂಡ ಹೆಚ್ಚಾಗಿದೆ ಎಂದು ವರದಿ ಹೇಳುತ್ತದೆ” ಎಂದರು.
“ಶೇ. 10 ಜನರಲ್ಲಿ ಬಳಿ ಶೇ.77ರಷ್ಟು ಆಸ್ತಿ ಇದೆ. ಶೇ.73 ರಷ್ಟು ಜನರ ಬಳಿ ಉಳಿದ ಆಸ್ತಿ ಇದೆ. ಈ ಬಗ್ಗೆ ಸರ್ಕಾರದ ಕ್ರಮಗಳು ಏನಿರಬೇಕು ಎಂಬುದು ಮುಖ್ಯವಾಗುತ್ತದೆ. ಅಸಮಾನತೆಯನ್ನು ಹೆಚ್ಚು ಮಾಡುವ ನೀತಿಗಳನ್ನು ಜಾರಿ ಮಾಡಲಾಗುತ್ತದೆ. ‘ಬ್ಲೂಮ್ ವರದಿ’ ಪ್ರಕಾರ, ದೇಶದ ಒಂದು ಬಿಲಿಯನ್ ಜನರಿಗೆ ಅತ್ಯವಶ್ಯಕ ವಸ್ತುಗಗಳನ್ನು ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ. ಅಂದರೆಮ ದೇಶದ 10 ಜನರಲ್ಲಿ 9 ಜನರಿಗೆ ತಮಗೆ ಬೇಕಾಗಿರುವದನ್ನು ಕೊಳ್ಳುವ ಶಕ್ತಿ ಇಲ್ಲ” ಎಂದು ವಿವರಿಸಿದರು.

“ಕೇಂದ್ರ ಸರ್ಕಾರದ ಬಜೆಟ್ನ ಆರ್ಥಿಕ ಸಮೀಕ್ಷೆ ಪ್ರಕಾರ, ದೇಶದ ಕಂಪನಿಗಳು ನೆಲದ ಕಾನೂನುಗಳನ್ನು ಪಾಲನೆ ಮಾಡಿ ಬೆಳೆಯುವುದಕ್ಕೆ ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಕಾರ್ಮಿಕ ಕಾನೂನುಗಳನ್ನು ಇನ್ನಷ್ಟು ಸಡಿಲಗೊಳಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಹೊಸ 4 ಕಾರ್ಮಿಕ ಕಾನೂನುಗಳಲ್ಲಿ ಸಂಪೂರ್ಣವಾಗಿ ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಮುಖ್ಯವಾಗಿ, ಈವರಗೆ ಇದ್ದ ಕಾಯ್ದೆ ಪ್ರಕಾರ 100 ಜನ ಇದ್ದರೆ ಕಾನೂನು ಅನ್ವಯ ಆಗುತ್ತದೆ; ಅದನ್ನು 300 ಜನಕ್ಕೆ ಏರಿಕೆ ಮಾಡಬೇಕು ಎಂದು ಹೊಸ ಕಾನೂನು ಹೇಳುತ್ತದೆ. ಇದರಿಂದ, ಶೇ.85 ಕಂಪನಿಗಳು ಈ ಕಾನೂನಿನಿಂದ ಹೊರಬರುತ್ತವೆ” ಎಂದರು.
“ಕಳೆದ 10 ವರ್ಷಗಳಲ್ಲಿ ಖಾಯಂ ಕೆಲಸ ತುಂಬಾ ಕಡಿಮೆಯಾಗಿ, ಗುತ್ತಿಗೆ ಪದ್ಧತಿ ಹೆಚ್ಚಾಗಿದೆ. ಇದಕ್ಕೆ ಹೊಸ ಹೆಸರುಗಳನ್ನು ನೀಡಲಾಗಿದೆ. ಅವರಿಗೆ ಕೆಲಸ, ವೇತನ ಹಾಗೂ ಸಾಮಾಜಿಕ ಭದ್ರತೆ ಕೊಡುತ್ತಿಲ್ಲ. ಕೇಂದ್ರದ ಆರ್ಥಿಕ ಸಮೀಕ್ಷೆಯಲ್ಲಿ ಇಷ್ಟೆಲ್ಲಾ ಮಾಡಲಾಗುತ್ತಿದೆ” ಎಂದು ವಿವರಿಸಿದರು.
“ರಾಜ್ಯ ಬಜೆಟ್ ಕೂಡ ಕೇಂದ್ರಕ್ಕಿಂತ ಭಿನ್ನವಾಗೇನೂ ಇಲ್ಲ, ಪಿಪಿಪಿ (ಪಬ್ಲಿಕ್ ಫಂಡ್ಸ್ ಫಾರ್ ಪ್ರೈವೇಟ್) ಮೂಲಕ ಎಲ್ಲ ವಲಯದಲ್ಲಿ ಇದನ್ನೇ ಪಾಲಿಸಿದ್ದಾರೆ. ರಾಜ್ಯದಲ್ಲಿ 24 ಲಕ್ಷ ಸಂಘಟಿತ ಕಾರ್ಮಿಕರಿದ್ದಾರೆ. ಇವರ ಸಂಖ್ಯೆಯಲ್ಲಿ ಹೆಚ್ಚಳ ಆಗಿಲ್ಲ ಎಂದು ಕರ್ನಾಟಕ ಆರ್ಥಿಕ ಸಮೀಕ್ಷೆ ಹೇಳುತ್ತದೆ. ಇ-ಶ್ರಮ್ ಪ್ರಕಾರ ಅಸಂಘಟಿತ ಕಾರ್ಮಿಕರು 1.6 ಲಕ್ಷ ಜನರಿದ್ದಾರೆ. ಮತ್ತೊಂದು ಕಡೆ ಕೇವಲ 24 ಲಕ್ಷ ಸಂಘಟಿತ ಕಾರ್ಮಿಕರಿದ್ದಾರೆ. ಉದ್ಯೋಗ ಸೃಷ್ಠಿಯೇ ಆಗುತ್ತಿಲ್ಲ. ಆದರೆ, ಫಾಕ್ಸ್ಕಾನ್ ನಂತಹ ಕಂಪನಿಗಳಿಗೆ ಸಾಕಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಫಾಕ್ಸ್ಕಾನ್ ಕಂಪನಿ ರಾಜ್ಯಕ್ಕೆ ಬರಲಿ ಎಂಬ ಕಾರಣಕ್ಕೆ ಕಾರ್ಮಿಕರ ದುಡಿಯುವ ಸಮಯವನ್ನು ಎಂಟರಿಂದ ಒಂಬತ್ತು ಗಂಟೆಗೆ ಹೆಚ್ಚಿಸಲಾಯಿತು. ರಾಜ್ಯದಲ್ಲಿ ಕಾರ್ಪೊರೇಟ್ ನೀತಿಗಳನ್ನು ಜಾರಿ ಮಾಡಲಾಗುತ್ತಿದೆ” ಎಂದು ಹೇಳಿದರು.
ಕೇಂದ್ರ ಸರ್ಕಾರ ಜನಪರ ವಿಚಾರಗಳಿಗೆ ಸ್ಪಂದಿಸುತ್ತಿಲ್ಲ
ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಎಐಟಿಯುಸಿ ರಾಜ್ಯ ಉಪಾಧ್ಯಕ್ಷರಾದ ಕೆ.ವಿ. ಭಟ್ ಮಾತನಾಡಿ, “ಕೇಂದ್ರ ಸರ್ಕಾರದ ಬಜೆಟ್ ಕಾರ್ಮಿಕ, ವಿದ್ಯಾರ್ಥಿ, ಯುವಜನರ ವಿರೋಧಿ ನೀತಿಯಾಗಿದೆ. ಕಾರ್ಮಿಕರ ಅಭಿವೃದಿಗೆ ಸೇರಿದಂತೆ ಹಲವು ಜನಪರ ಯೋಜನೆಗಳಿಗೆ ಹಣ ನೀಡದೇ ಸಾವಿರಾರೂ ಕೋಟಿ ರೂಪಾಯಿ ಕಡಿತ ಮಾಡಿದ್ದಾರೆ. ವ್ಯಾಪಾರಸ್ಥರ ಅನುಕೂಲಕ್ಕಾಗಿ ಬಹುರಾಷ್ಟ್ರೀಯ ಕಂಪೆನಿಗಳಿಗೆ ಸಾವಿರಾರೂ ಕೋಟಿ ರೂ.ಗಳನ್ನು ಕೊಟ್ಟಿದ್ದಾರೆಯೇ ಹೊರತು, ಕೇಂದ್ರ ಸರ್ಕಾರ ಯಾವ ರೂಪದಲ್ಲೂ ಜನಪರ ವಿಚಾರಗಳಿಗೆ ಸ್ಪಂದಿಸುವ ರೀತಿಯಲ್ಲಿ ಮಾಡಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಕರಾಳ ಕೃಷಿ ಕಾಯಿದೆಗಳನ್ನು ವಾಪಸ್ ಪಡೆದುಕೊಳ್ಳಬೇಕೆಂದು ಆಗ್ರಹಿಸಿ, ಒಂದು ವರ್ಷಗಳ ಕಾಲ ರೈತರು ದಿಲ್ಲಿಯಲ್ಲಿ ಹೋರಾಟ ಮಾಡಿದ್ದರು. ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಕರಾಳ ಕೃಷಿ ಕಾಯಿದೆಗಳನ್ನು ವಾಪಸ್ಸು ಪಡೆದುಕೊಳ್ಳುತ್ತೇವೆಂದು ಹೇಳಿದ್ದಕ್ಕಾಗಿ, ಹೋರಾಟವನ್ನು ವಾಪಸ್ಸು ಪಡೆದುಕೊಂಡರು. ಆದರೆ, ಸರ್ಕಾರ ನೀಡಿದ ಭರವಸೆಯಂತೆ ಯಾವುದನ್ನು ವಾಪಸ್ಸು ಪಡೆದುಕೊಂಡಿಲ್ಲ. ಅಷ್ಟೇ ಅಲ್ಲದೇ ವಿದ್ಯುತ್ ಕಾಯಿದೆಯನ್ನು ಅಂಗೀಕರಿಸಿ ಹಲವು ರೈತರಿಗೆ ಕಿರುಕಳ ಕೊಡುವುದಕ್ಕೆ ಪ್ರಾರಂಭಿಸಿದ್ದಾರೆ. ಇದರ ವಿರುದ್ಧ ರೈತರು ದಂಗೇಳುತ್ತಿದ್ದಾರೆ” ಎಂದರು.
“ರಾಜ್ಯ ಸರ್ಕಾರದ ಬಜೆಟ್ ಕಾರ್ಮಿಕರ ಪರವಾಗಿಲ್ಲ. ಅದರಲ್ಲಿ ಯಾವುದೇ ರೀತಿಯ ಕನಿಷ್ಠ ವೇತನ ಹೆಚ್ಚಿಸುವುದಾಗಲಿ, ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸುವುದರ ಬಗೆಯಾಗಲಿ ಮಾತಿಲ್ಲ. ಅಷ್ಟೇ ಅಲ್ಲದೇ ಸಾವಿರಾರು ಎಕರೆ ಜಮೀನನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಜಾಗತಿಕ ಹೂಡಿಕೆ ಮೂಲಕ ವ್ಯವಹಾರ ಮಾಡುತ್ತಿದ್ದಾರೆ. ಈ ಎಲ್ಲ ಅನ್ಯಾಯದ ವಿರುದ್ಧ ಜನ ದಂಗೇಳಬೇಕಾದ ಅವಶ್ಯಕತೆ ಇದೆ. ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಹೋರಾಟ ಅನಿವಾರ್ಯವಾಗಿದೆ” ಎಂದು ಹೇಳಿದರು.
‘ಬಹುಜನ’ ಎಂದರೆ ಬಿಜೆಪಿಗೆ ಹಿಂದೂಗಳು, ನಮಗೆ ದುಡಿಯುವ ಜನ: ಮೀನಾಕ್ಷಿ ಸುದರಂ


