ದಲಿತ ಯುವಕರಿಬ್ಬರನ್ನು ರಸ್ತೆಯ ಮಧ್ಯೆ ಅಡ್ಡಗಟ್ಟಿ ಜಾತಿ ನಿಂದನೆ ಮಾಡಿರುವ ಘಟನೆ ಯಾದರಿಗಿ ಜಿಲ್ಲೆಯ ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೂನ್ 17ರ ಮಂಗಳವಾರ ನಡೆದಿದೆ ಎಂದು ವರದಿಯಾಗಿದೆ. ಈ ಬಗ್ಗೆ ಇಬ್ಬರು ದುಷ್ಕರ್ಮಿಗಳ ವಿರುದ್ಧ ಬುಧವಾರ ಎಫ್ಐಆರ್ ದಾಖಲಾಗಿದೆ. ಅಲ್ಲದೆ, ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಯಾದಗಿರಿ | ರಸ್ತೆಯ ಮಧ್ಯೆ
ವೈರಲ್ ವಿಡಿಯೊದಲ್ಲಿ ದುಷ್ಕರ್ಮಿಗಳು ದಲಿತ ಯುವಕರಿಬ್ಬರನ್ನು ಅಡ್ಡಗಟ್ಟಿ, “ನಿನ್ ಜಾತಿ ಯಾವ್ದು..? ನಿನ್ನ ಜಾತಿ ಯಾವ್ದು ಹೇಳಲೇ? ನೀನು ಮಾದಾರನ್ (ಮಾದಿಗ) ಹೌದೋ, ಅಲ್ವೋ? ನಾವು ಕುರುಬರು” ಎಂದು ಹೇಳುವುದು ದಾಖಲಾಗಿದೆ. ದುಷ್ಕರ್ಮಿಗಳ ವಿರುದ್ಧ ದಾಖಲಾದ ಎಫ್ಐಅರ್ ನಾನುಗೌರಿ.ಕಾಂಗೆ ಲಭ್ಯವಾಗಿದ್ದು, ಆರೋಪಿಗಳನ್ನು ಕುರುಬ ಸಮುದಾಯದ ಮಲ್ಲಯ್ಯ ಮತ್ತು ಅರ್ಜಿನ ಎಂದು ಎಫ್ಐಆರ್ನಲ್ಲಿ ಗುರುತಿಸಲಾಗಿದೆ.
ಏನಿದು ಘಟನೆ?
ವೃತ್ತಿಯಲ್ಲಿ ವಕೀಲರಾಗಿದ್ದು, ಮಾದಿಗ ಸಮುದಾಯಕ್ಕೆ ಸೇರಿದ ದುರ್ಗಪ್ಪ ಅವರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ. ಸುರಪುರ ತಾಲ್ಲೂಕಿನ ನಾಗರಾಳ ಗ್ರಾಮದ ನಿವಾಸಿಯಾದ ದುರ್ಗಪ್ಪ ಅವರು 17ನೇ ತಾರೀಖಿನಂದು ತಮ್ಮ ಗ್ರಾಮಕ್ಕೆ ತೆರಳಿದ್ದಾಗ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ದುರ್ಗಪ್ಪ ಅವರ ಜೊತೆಗೆ ಅವರ ಮಾವ ವಿಜಯಕುಮಾರ್ ಕೂಡಾ ಜೊತೆಯಲ್ಲಿದ್ದರು ಎಂದು ಎಫ್ಐಆರ್ನಲ್ಲಿ ಉಲ್ಲೇಖಿಲಾಗಿದೆ. “ಊರಿನ ಕ್ರಾಸ್ ಹತ್ತಿರದಲ್ಲಿನ ಬಲಭೀಮ ಎಂಬವರ ಅಂಗಡಿ ಬಳಿ ನಡೆದುಕೊಂಡು ಹೋಗುತ್ತಿದ್ದಾಗ, ಕುರುಬ ಜಾತಿಗೆ ಸೇರಿದ ಮಲ್ಲಯ್ಯ ಮತ್ತು ಅರ್ಜುನ್ ಎಂಬವರು ತಮ್ಮನ್ನು ಕಂಡ ಕೂಡಲೇ ದಾರಿಗೆ ಅಡ್ಡಗಟ್ಟಿ ನಿಂತು ಜಾತಿ ನಿಂದನೆ ಮಾಡಿದ್ದಾರೆ” ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿಯು, “ನಮ್ಮ ಎದುರಿಗೆ ಹೋಗುವುದಕ್ಕೆ ಎಷ್ಟು ಸೊಕ್ಕು? …. ಮಕ್ಕಳೇ ಇಲ್ಲಿ ತಿರುಗಾಡಿದರೆ ನಿಮ್ಮ ಕಾಲು ಕಡಿಯುತ್ತೇವೆ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ” ಎಂದು ದುರ್ಗಪ್ಪ ಅವರು ಹೇಳಿದ್ದಾರೆ.
ಅಲ್ಲದೆ, ಆರೋಪಿ ಅರ್ಜುನ, ನನ್ನ ಶರ್ಟ್ ಹಿಡಿದು ದೈಹಿಕ ಹಲ್ಲೆ ಕೂಡಾ ಮಾಡಿದ್ದು, ಮತ್ತೊಬ್ಬ ಆರೋಪಿ ಮಲ್ಲಯ್ಯ ತನ್ನ ಎಡಗಾಲಿನ ಚಪ್ಪಲಿ ಬಿಚ್ಚಿ ತಲೆಗೆ ಹೊಡೆದಿದ್ದಾರೆ ಎಂದು ದುರ್ಗಪ್ಪ ಅವರು ಹೇಳಿದ್ದಾರೆ. ದುರ್ಗಪ್ಪ ಅವರ ಜೊತೆಯಲ್ಲಿದ್ದ ವಿಜಯಕುಮಾರ್ ಅವರು ಬಿಡಿಸಲು ಹೋದಾಗ, ಮಲ್ಲಯ್ಯ ಅವರು ವಿಜಯಕುಮಾರ್ ಅವರ ಶರ್ಟ್ ಹಿಡಿದು ಹರಿದು ಹಾಕಿದ್ದಾರೆ ಎಂದು ದುರ್ಗಪ್ಪ ಅವರು ದೂರಿದ್ದಾರೆ.
ಘಟನೆ ಬಳಿಕ ಸಂತ್ರಸ್ತರು ಸುರಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಚೇತರಿಸಿಕೊಂಡ ನಂತರ ಸುರಪುರ ಠಾಣೆಗೆ ಹಾಜರಾಗಿ ದೂರು ಕೊಟ್ಟಿದ್ದಾರೆ. ದೂರಿನ ಅನ್ವಯ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 115(2), 118(1), 126(2), 133, 352, 351(2), 3(5) ಮತ್ತು ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 3(1)(s), 3(2)(v-a) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
“ಇನ್ನೂ ಜಾತಿ ವೈಷಮ್ಯಗಳು ಭಾರತದಲ್ಲಿ ಜೀವಂತವಾಗಿವೆ ಎಂಬುದನ್ನು ಇಂತಹ ಘಟನೆಗಳು ತೋರಿಸುತ್ತವೆ. ಸರ್ಕಾರ ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮತ್ತಷ್ಟು ಬಿಗಿಯಾದ ಕಾನೂನನ್ನು ತರಬೇಕು. ವಕೀಲನಾದ ನನಗೆಯೇ ಈ ರೀತಿ ಆಗುತ್ತಿದೆ ಅಂದರೆ, ಜನಸಾಮಾನ್ಯರ ಗತಿ ಏನಾಗಬಹುದು?” ಎಂದು ಸಂತ್ರಸ್ತ ದುರ್ಗಪ್ಪ ಹೇಳಿರುವುದಾಗಿ ‘ಈ ದಿನ ಡಾಟ್ ಕಾಮ್’ ವರದಿ ಮಾಡಿದೆ.
“ಹಿಂದುಳಿದ ಯಾದಗಿರಿ ಜಿಲ್ಲೆಯಲ್ಲಿ ಅಸ್ಪೃಶ್ಯತೆ ತಾಂಡವವಾಡುತ್ತಿದೆ. ಈ ಅಸ್ಪೃಶ್ಯತೆಯನ್ನು ಬೇರು ಸಹಿತ ಕಿತ್ತು ಹಾಕಬೇಕಾದರೆ ಎಲ್ಲರ ಸಹಕಾರ ಬೇಕು. ಆರೋಪಿಗಳನ್ನು ಬಂಧಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆಂಬ ಮಾಹಿತಿಯೂ ಇದೆ” ಎಂದು ಅವರು ಹೇಳಿದ್ದಾರೆ ಎಂದು ವರದಿ ಹೇಳಿದೆ. ಯಾದಗಿರಿ | ರಸ್ತೆಯ ಮಧ್ಯೆ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಅಮಿತ್ ಶಾ ಇಂಗ್ಲಿಷ್ ವಿರೋಧಿ ಹೇಳಿಕೆ | ಸಂಕುಚಿತ ಮನಸ್ಸಿನ ರಾಜಕೀಯ ದೃಷ್ಟಿಕೋನ ಎಂದ ಕೇರಳ ಸಚಿವರು
ಅಮಿತ್ ಶಾ ಇಂಗ್ಲಿಷ್ ವಿರೋಧಿ ಹೇಳಿಕೆ | ಸಂಕುಚಿತ ಮನಸ್ಸಿನ ರಾಜಕೀಯ ದೃಷ್ಟಿಕೋನ ಎಂದ ಕೇರಳ ಸಚಿವರು

