ಬೆಂಗಳೂರು: ದೇವನಹಳ್ಳಿ ತಾಲ್ಲೂಕಿನ ರೈತರ ಭೂಸ್ವಾಧೀನ ವಿವಾದದಲ್ಲಿ ರಾಜ್ಯ ಸರ್ಕಾರ ರೈತಪರ ತೀರ್ಪು ಕೈಗೊಳ್ಳಲು ಕಾಂಗ್ರೆಸ್ ಹೈಕಮಾಂಡ್ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿ, 65ಕ್ಕೂ ಹೆಚ್ಚು ವಿದ್ವಾಂಸರು, ವಿಜ್ಞಾನಿಗಳು, ಸಾರ್ವಜನಿಕ ಬುದ್ಧಿಜೀವಿಗಳು, ಬರಹಗಾರರು, ಕಲಾವಿದರು ಮತ್ತು ನಾಗರಿಕ ಸಮಾಜದ ಮುಖಂಡರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಮೂರು ವರ್ಷಗಳ ರೈತರ ಅಚಲ ಹೋರಾಟ: ಬೆಂಗಳೂರು ವಿಮಾನ ನಿಲ್ದಾಣದ ಉತ್ತರಕ್ಕಿರುವ ದೇವನಹಳ್ಳಿ ತಾಲ್ಲೂಕಿನ 13 ಗ್ರಾಮಗಳ ರೈತರು ಕಳೆದ ಮೂರು ವರ್ಷಗಳಿಂದ, ಅಂದರೆ ಏಪ್ರಿಲ್ 2022ರಿಂದ, ತಮ್ಮ ಫಲವತ್ತಾದ ಭೂಮಿಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಪ್ರಸ್ತಾಪಿಸಿರುವ 1,777 ಎಕರೆ ಕೃಷಿ ಭೂಮಿಯನ್ನು ‘ಹೈಟೆಕ್ ರಕ್ಷಣಾ ಮತ್ತು ಏರೋಸ್ಪೇಸ್ ಪಾರ್ಕ್’ಗಾಗಿ ಸ್ವಾಧೀನಪಡಿಸಿಕೊಳ್ಳುವ ವಿರುದ್ಧ ಅವರ ಪ್ರತಿರೋಧ ಅಚಲವಾಗಿದೆ. ಈ ಚಳುವಳಿಗೆ ರೈತರು, ಕಾರ್ಮಿಕರು, ದಲಿತರು, ಮಹಿಳೆಯರು ಮತ್ತು ಯುವಕರಂತಹ ತಳಮಟ್ಟದ ಸಂಘಟನೆಗಳು ಸಕ್ರಿಯ ಬೆಂಬಲ ನೀಡುತ್ತಿವೆ. ಈ ಪ್ರದೇಶವು ಬೆಂಗಳೂರಿಗೆ ತರಕಾರಿಗಳು, ಹಣ್ಣುಗಳು, ಹಾಲು ಮತ್ತು ಇತರ ಅಗತ್ಯ ಆಹಾರ ಪದಾರ್ಥಗಳನ್ನು ಪೂರೈಸುವ ಮೂಲಕ ಆಹಾರ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. “ನಾವು ಸಾಯಲು ಸಿದ್ಧ, ಆದರೆ ನಮ್ಮ ಭೂಮಿಯನ್ನು ಬಿಟ್ಟುಕೊಡಲು ಸಿದ್ಧರಿಲ್ಲ” ಎಂಬ ರೈತರ ಸಾಮೂಹಿಕ ಸಂಕಲ್ಪವನ್ನು ಡೆಕ್ಕನ್ ಹೆರಾಲ್ಡ್ ವರದಿ ಪ್ರತಿಬಿಂಬಿಸಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರವು ಜುಲೈ 4ರಂದು ರೈತ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಜುಲೈ 15ರೊಳಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿತ್ತು. ಆದರೆ, ಸರ್ಕಾರದ ಕೆಲವು ವಲಯಗಳಿಂದ, ರೈತರ ಬೇಡಿಕೆಗಳನ್ನು ಈಡೇರಿಸಿದರೆ ‘ಅಭಿವೃದ್ಧಿಗೆ ಅಡ್ಡಿಯಾಗಬಹುದು’ ಎಂಬ ಆತಂಕದ ಮಾತುಗಳು ಕೇಳಿಬರುತ್ತಿವೆ. ಈ ನಿರೂಪಣೆಯು ಭರವಸೆಯಿಂದ ಹಿಂದೆ ಸರಿಯುವ ಅಥವಾ ವಿಳಂಬ ಮಾಡುವ ಪ್ರಯತ್ನದಂತೆ ಕಾಣುತ್ತಿದೆ. ಇಂತಹ ಹಿನ್ನಡೆಯು ರಾಜ್ಯ ಸರ್ಕಾರದ ವಿಶ್ವಾಸಾರ್ಹತೆಯನ್ನು ಕುಗ್ಗಿಸುವುದಲ್ಲದೆ, ಗ್ರಾಮೀಣ ಸಮುದಾಯಗಳಲ್ಲಿ ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಗಂಭೀರ ಹಾನಿ ಉಂಟುಮಾಡಲಿದೆ ಎಂದು ಬಹಿರಂಗ ಪತ್ರದಲ್ಲಿ ಸ್ಪಷ್ಟವಾಗಿ ಎಚ್ಚರಿಸಲಾಗಿದೆ.
2013ರ ಭೂಸ್ವಾಧೀನ ಕಾಯಿದೆ ಅಡಿಯಲ್ಲಿ 70% ಭೂಮಾಲೀಕರ ಸಮ್ಮತಿ ಅಗತ್ಯವಿದ್ದರೂ, KIADB ಯ 2022ರ ಸಮೀಕ್ಷೆಯು ದೇವನಹಳ್ಳಿಯಲ್ಲಿ 80% ಕ್ಕಿಂತ ಹೆಚ್ಚು ರೈತರು ಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಬಹಿರಂಗಪಡಿಸಿದೆ. ಸಮ್ಮತಿಯಿಲ್ಲದೆ ಮುಂದುವರಿಯುವುದು ಕಾನೂನುಬಾಹಿರವಾಗಿದೆ. ಇಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಭೂಮಿಯನ್ನು ಕಿತ್ತುಕೊಳ್ಳಲು ಹೊರಟಿರುವುದು ಕಾಂಗ್ರೆಸ್ ಪಕ್ಷ ಎತ್ತಿಹಿಡಿದಿರುವ ಸಾಮಾಜಿಕ ನ್ಯಾಯದ ತತ್ವಕ್ಕೆ ತಿಲಾಂಜಲಿ ಯಾಗಿದೆ. ಇವೆಲ್ಲವನ್ನೂ ಸರಿಪಡಿಸುವ ಭರವಸೆಯನ್ನು ವಿರೋಧ ಪಕ್ಷದಲ್ಲಿದ್ದ ಹಾಲಿ ಮುಖ್ಯಮಂತ್ರಿಗಳು ನೀಡಿದ್ದರು. ರಾಜ್ಯದ ಭೂ ಸುಧಾರಣೆ ಕಾಯ್ದೆಗೆ ಹಿಂದಿನ ಸರ್ಕಾರ ತಂದಿರುವ ಮಾರಕ ತಿದ್ದುಪಡಿಗಳನ್ನು ಸರಿಪಡಿಸಿ ರೈತಪರ ನೀತಿ ನಿಲುವುಗಳನ್ನು ರೂಪಿಸುವ ಭರವಸೆಯನ್ನು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಲಾಗಿರುತ್ತದೆ. ಹಾಗಿದ್ದರೂ ಎರಡುವರೆ ವರ್ಷಗಳ ಅವಧಿ ಮುಗಿದರು ಸರ್ಕಾರ ಗಮನಹರಿಸದೆ ಕೊಟ್ಟಿರುವ ವಚನವನ್ನು ಪಾಲಿಸುತ್ತಿಲ್ಲ ಇತ್ಯಾದಿ ವಿಚಾರಗಳನ್ನು ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.
KIADB ಕರ್ನಾಟಕದಾದ್ಯಂತ ಗಣನೀಯ ಪ್ರಮಾಣದ ಬಳಕೆಯಾಗದ ಭೂಮಿ ಹೊಂದಿದ್ದರೂ, ಫಲವತ್ತಾದ ಕೃಷಿಭೂಮಿಯ ಸ್ವಾಧೀನಕ್ಕೆ ಮುಂದಾಗಿರುವುದು ಪಾರದರ್ಶಕತೆ ಮತ್ತು ಭೂಬಳಕೆ ಯೋಜನೆಯ ಸಮಗ್ರತೆಯ ಬಗ್ಗೆ ಕಳವಳ ಮೂಡಿಸಿದೆ. CAG ವರದಿಯು KIADBಯ ಸ್ವಾಧೀನ ಮತ್ತು ಹಂಚಿಕೆ ಪದ್ಧತಿಗಳಲ್ಲಿನ ಲೋಪಗಳನ್ನು ಎತ್ತಿ ತೋರಿಸಿದೆ. ಇತ್ತೀಚೆಗೆ, ISRO ಯೋಜನೆ ಮತ್ತು NICE ಯೋಜನೆಗಳಲ್ಲಿನ ವಿಳಂಬಕ್ಕೆ ಹೈಕೋರ್ಟ್ KIADB ವಿರುದ್ಧ ತೀರ್ಪು ನೀಡಿದೆ. ದೇವನಹಳ್ಳಿ ಪ್ರಕರಣದಲ್ಲಿ ಮೂರು ವರ್ಷಗಳ ವಿಳಂಬ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಕೂಡ ಪತ್ರವು ತಿಳಿಸಿದೆ.
ಹಾಗೆಯೇ, ರೈತರು ಮತ್ತು ಕೈಗಾರಿಕಾ ವಲಯಗಳ ಅಭಿಪ್ರಾಯ ಸಲಹೆ ಸೂಚನೆ ಪಡೆದು ರಾಜ್ಯದ ಆಹಾರ ಭದ್ರತೆ ಮತ್ತು ರೈತರ ಹಿತಕ್ಕೆ ಧಕ್ಕೆ ಬರದ ರೀತಿಯಲ್ಲಿ ಕೈಗಾರಿಕೆಗೆ ಅತ್ಯಗತ್ಯವಾಗಿರುವ ಭೂ ಖರೀದಿ ವ್ಯವಹಾರದ ನಿಟ್ಟಿನಲ್ಲಿ ಸಮಗ್ರ ನೀತಿ ರೂಪಿಸಿ, ಮತ್ತು ಈ ಮೂಲಕ ದೇಶಕ್ಕೆ ಒಂದು ಮಾದರಿ ನೀತಿಯನ್ನು ಕರ್ನಾಟಕ ಸರ್ಕಾರ 15 ರಂದು ಮುಂದಿಡಲಿ ಎಂದು ಆಗ್ರಹಿಸಲಾಗಿದೆ.
ಈ ಮನವಿಯ ಪ್ರತಿಯನ್ನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ವೇಣುಗೋಪಾಲ್, ಜೈರಾಮ್ ರಮೇಶ್, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಎಂ.ಬಿ. ಪಾಟೀಲ್, ರಣದೀಪ್ ಸಿಂಗ್ ಸುರ್ಜೆವಾಲಾ ಹಾಗೂ ಕರ್ನಾಟಕದ ಕಾಂಗ್ರೆಸ್ ಸಂಸದರಿಗೆ ರವಾನಿಸಲಾಗಿದೆ.
ಸಹಿ ಮಾಡಿದವರ ಪಟ್ಟಿ (ಪ್ರಮುಖರು): ಪ್ರೊ. ರಾಮಚಂದ್ರ ಗುಹಾ (ಇತಿಹಾಸಕಾರ, ಪರಿಸರವಾದಿ), ದೇವನೂರ ಮಹಾದೇವ (ಪದ್ಮಶ್ರೀ ಪುರಸ್ಕೃತ ಕನ್ನಡ ಬರಹಗಾರರು), ಡಾ. ಎ.ಎನ್.ಯಲ್ಲಪ್ಪ ರೆಡ್ಡಿ (ಪರಿಸರವಾದಿ), ಬಿ.ಜಯಶ್ರೀ (ರಂಗಭೂಮಿ ಕಲಾವಿದೆ), ಪ್ರೊ. ಕೆ. ನಾರಾಯಣ ಗೌಡ (ಮಾಜಿ ಉಪಕುಲಪತಿ, UAS), ಡಾ. ಜಿ. ಎನ್. ದೇವ್ಯ (ಭಾಷಾಶಾಸ್ತ್ರಜ್ಞ, ಸಾಹಿತ್ಯ ವಿಮರ್ಶಕ), ಗಿರೀಶ್ ಕಾಸರವಳ್ಳಿ (ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕರು), ಅರುಂಧತಿ ನಾಗ (ಪ್ರಶಸ್ತಿ ವಿಜೇತ ನಟಿ), ಡಾ. ಸುಧೀರ್ ವೋಂಬತ್ಕೆರೆ, ಪ್ರೊ. ವಿ. ಕೆ. ಗೌರ್, ಪ್ರೊ. ವಿನೋದ್ ವ್ಯಾಸಲು, ಪ್ರೊ. ದೀಪಕ್ ಮಾಲ್ಘಾನ್, ಕಿಶೋರ್ ಕುಮಾರ್ ಜಿ, ಸುರೇಶ್ ಹೆಬ್ಳೀಕರ್, ಪಾಂಡುರಂಗ ಹೆಗಡೆ ಸೇರಿದಂತೆ ಒಟ್ಟು 65 ವಿದ್ವಾಂಸರು, ವಿಜ್ಞಾನಿಗಳು, ಬುದ್ಧಿಜೀವಿಗಳು, ಬರಹಗಾರರು, ಕಲಾವಿದರು ಮತ್ತು ನಾಗರಿಕ ಸಮಾಜದ ಮುಖಂಡರು ಈ ಬಹಿರಂಗ ಪತ್ರಕ್ಕೆ ಸಹಿ ಮಾ
ಡಿದ್ದಾರೆ.



