ರಾಷ್ಟ್ರೀಯ ರಾಜಧಾನಿ ಪ್ರದೇಶದ (ಎನ್ಸಿಆರ್) ವ್ಯಾಪ್ತಿಗೆ ಬರುವ ಗಾಝಿಯಾಬಾದ್ನ ಕವಿ ನಗರದಲ್ಲಿ ಯಾರಿಗೂ ಅನುಮಾನ ಬರದಂತೆ ನಕಲಿ ರಾಯಭಾರ ಕಚೇರಿಯನ್ನು ನಡೆಸುತ್ತಿದ್ದ ಹರ್ಷವರ್ಧನ್ ಜೈನ್ ಎಂಬಾತನನ್ನು ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ (ಎಸ್ಟಿಎಫ್) ಮಂಗಳವಾರ ಬಂಧಿಸಿದೆ.
ಐಷಾರಾಮಿ ಬಂಗಲೆಯಲ್ಲಿ ನಕಲಿ ರಾಯಭಾರ ಕಚೇರಿ ತೆರೆದಿದ್ದ ಹರ್ಷವರ್ಧನ್ ಜೈನ್, ಅದರ ಹೊರಗೆ ಆಡಿ, ಮರ್ಸಿಡೀಸ್ ಬೆನ್ಝ್ ಸೇರಿದಂತೆ ಲಕ್ಷಾಂತರ ಮೌಲ್ಯದ ಕಾರುಗಳನ್ನು ನಿಲ್ಲಿಸಿದ್ದ. ಅವುಗಳಿಗೆ ಸೂಕ್ತವಾದ ನಕಲಿ ನಂಬರ್ ಪ್ಲೇಟ್ಗಳನ್ನೂ ಅಳವಡಿಸಿದ್ದ. ಕಚೇರಿಯ ಹೊರಗೆ ಸಾರ್ವಭೌಮ ರಾಷ್ಟ್ರಗಳೆಂದು ಗುರುತಿಸದ ದೇಶಗಳ ಹೆಸರಿನಲ್ಲಿ ನಕಲಿ ಧ್ವಜ ನೆಟ್ಟಿದ್ದ. ಈ ರೀತಿ ಸುಮಾರು 7 ವರ್ಷಗಳಿಂದ ಜನರು, ಕಂಪನಿಗಳು ಮತ್ತು ಅಧಿಕಾರಿಗಳನ್ನು ಯಾಮಾರಿಸಿದ್ದ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಹೇಳಿದೆ.
ಪಶ್ಚಿಮ ಆರ್ಕ್ಟಿಕಾ, ಸಬೋರ್ಗಾ, ಪೌಲ್ವಿಯಾ ಮತ್ತು ಲೊಡೋನಿಯಾದ ದೇಶಗಳ ಹೆಸರಿನಲ್ಲಿ ಹರ್ಷವರ್ಧನ್ ಜೈನ್ ರಾಯಭಾರ ಕಚೇರಿ ನಡೆಸುತ್ತಿದ್ದ.
ಪಶ್ಚಿಮ ಆರ್ಕ್ಟಿಕಾ ಒಂದು ಮೈಕ್ರೋನೇಷನ್ ಆಗಿದ್ದು, ಯಾವುದೇ ದೇಶಗಳ ಸರ್ಕಾರ ಇದನ್ನು ಸಾರ್ವಭೌಮ ರಾಷ್ಟ್ರವೆಂದು ಅಧಿಕೃತವಾಗಿ ಗುರುತಿಸಿಲ್ಲ. ಹಾಗಾಗಿ, ಇದೊಂದು ಸ್ವಯಂಘೋಷಿತ ದೇಶವಾಗಿದೆ. ಇದು ಅಂಟಾರ್ಕ್ಟಿಕಾದಲ್ಲಿ ಭೂಮಿಯನ್ನು ಹೊಂದಿದೆ ಮತ್ತು ಹವಾಮಾನ ಕ್ರಮಕ್ಕಾಗಿ ಪ್ರತಿಪಾದಿಸುವ ಲಾಭರಹಿತ ಸಂಸ್ಥೆ ಎಂದು ಹೆಸರುವಾಸಿಯಾಗಿದೆ. ಇದನ್ನು ಮಾಜಿ ಯುಎಸ್ ನೌಕಾಪಡೆಯ ಅಧಿಕಾರಿಯೊಬ್ಬರು ಸ್ಥಾಪಿಸಿದ್ದು, ಅಂತಾರಾಷ್ಟ್ರೀಯ ಮನ್ನಣೆ ಹೊಂದಿಲ್ಲ.
ಸಬೋರ್ಗಾ ಒಂದು ಮಾನ್ಯತೆ ಪಡೆದ ದೇಶ ಅಥವಾ ಮೈಕ್ರೋನೇಷನ್ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ವರದಿಗಳ ಪ್ರಕಾರ, ಇದು ಹರ್ಷವರ್ಧನ್ ಜೈನ್ ಸೃಷ್ಟಿಸಿದ ನಕಲಿ ದೇಶದ ಹೆಸರಾಗಿದೆ. ಪೌಲ್ವಿಯಾ ಕೂಡ ಸಬೋರ್ಗಾದಂತೆ ಮಾನ್ಯತೆ ಪಡೆದ ದೇಶ ಅಥವಾ ಪ್ರಸಿದ್ದಿ ಹೊಂದಿರುವ ಮೈಕ್ರೋನೇಷನ್ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ. ಇದೂ ಕೂಡ ಹರ್ಷವರ್ಧನ್ನ ನಕಲಿ ಸೃಷ್ಟಿಯಾಗಿದೆ.
ಇನ್ನು ಲೊಡೋನಿಯಾ ದಕ್ಷಿಣ ಸ್ವೀಡನ್ನಲ್ಲಿರುವ ಒಂದು ಮೈಕ್ರೋನೇಷನ್ ಎಂದು ಕೆಲ ಮಾಹಿತಿ ಮೂಲಗಳು ಹೇಳುತ್ತವೆ. ಆದರೆ ಇದು ಅಧಿಕೃತವಾಗಿ ಗುರುತಿಸಲ್ಪಟ್ಟ ಸಾರ್ವಭೌಮ ರಾಷ್ಟ್ರವಲ್ಲ. ಹಾಗಾಗಿ, ಇದು ಕೂಡ ಹರ್ಷವರ್ಧನ್ ಸೃಷ್ಟಿಸಿದ ನಕಲಿ ದೇಶವಾಗಿದೆ.
ಹರ್ಷವರ್ಧನ್ ಜೈನ್ ಯಾರು?
ಹರ್ಷವರ್ಧನ್ ಜೈನ್ ಲಂಡನ್ ಕಾಲೇಜ್ ಆಫ್ ಅಪ್ಲೈಡ್ ಸೈನ್ಸ್ ಮತ್ತು ಗಾಝಿಯಾಬಾದ್ನ ಐಟಿಎಸ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ ಎಂಬಿಎ ಪದವೀಧರ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಗಾಝಿಯಾಬಾದ್ನ ಉದ್ಯಮಿಯೊಬ್ಬರ ಮಗನಾದ ಈತನ ಕುಟುಂಬವು ರಾಜಸ್ಥಾನದಲ್ಲಿ ಅಮೃತಶಿಲೆಯ ಗಣಿ ಹೊಂದಿತ್ತು. ತಂದೆಯ ನಿಧನದ ನಂತರ ಕುಟುಂಬವು ತೀವ್ರ ಆರ್ಥಿಕ ಸಮಸ್ಯೆಗೆ ಸಿಲುಕಿತ್ತು. ಆಗ ಹರ್ಷವರ್ಧನ್ ಜೈನ್ ವಿವಾದಾತ್ಮಕ ದೇವಮಾನವ ಚಂದ್ರಸ್ವಾಮಿಯನ್ನು ಭೇಟಿಯಾಗಿದ್ದ. ಬಳಿಕ ಆತನ ಸಹಾಯದಿಂದ ಲಂಡನ್ಗೆ ತೆರಳಿ ಹಲವು ಕಂಪನಿಗಳನ್ನು ತೆರೆದಿದ್ದ.
ತನಿಖಾ ಸಂಸ್ಥೆಗಳ ಪ್ರಕಾರ, ಈ ಕಂಪನಿಗಳನ್ನು ಲೆಕ್ಕವಿಲ್ಲದ ಹಣವನ್ನು ಮರೆಮಾಚಲು ಬಳಸಲಾಗುತ್ತಿತ್ತು ಎಂದು ಇಂಡಿಯಾ ಟುಡೇ ವರದಿ ತಿಳಿಸಿದೆ.
ಹರ್ಷವರ್ಧನ್ ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ವ್ಯಾಪಾರಿ ಅದ್ನಾನ್ ಖಶೋಗ್ಗಿ ಜೊತೆಗೂ ಸಂಪರ್ಕ ಹೊಂದಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ವರದಿ ಹೇಳಿದೆ.
ಚಂದ್ರಸ್ವಾಮಿಯ ಮರಣದ ನಂತರ ಗಾಝಿಯಾಬಾದ್ಗೆ ಮರಳಿದ ಜೈನ್, ಜನರನ್ನು ವಂಚಿಸಲು ನಕಲಿ ರಾಯಭಾರ ಕಚೇರಿಯನ್ನು ತೆರೆದಿದ್ದ. ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರಂತಹ ಪ್ರಮುಖ ರಾಜಕೀಯ ವ್ಯಕ್ತಿಗಳೊಂದಿಗೆ ತನ್ನ ಫೋಟೋಗಳನ್ನು ಮಾರ್ಫ್ ಮಾಡಿ ಜನರನ್ನು ಯಾಮಾರಿಸುತ್ತಿದ್ದ.
ಜೈನ್ ವಿರುದ್ದ ಪ್ರಕರಣ ದಾಖಲಾಗಿದ್ದು ಇದೇ ಮೊದಲಲ್ಲ. 2011ರಲ್ಲಿ, ಅಕ್ರಮ ಸ್ಯಾಟಲೈಟ್ ಫೋನ್ ಪತ್ತೆಯಾದ ಬಳಿಕ ಗಾಝಿಯಾಬಾದ್ನ ಕವಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಯುಪಿ ಪೊಲೀಸ್ ಹೆಚ್ಚುವರಿ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅಮಿತಾಭ್ ಯಶ್ ತಿಳಿಸಿದ್ದಾರೆ.
ಜೈನ್ ನಕಲಿ ರಾಯಭಾರ ಕಚೇರಿಯನ್ನು ಏಕೆ ನಡೆಸುತ್ತಿದ್ದ?
ಜೈನ್ ನಕಲಿ ರಾಯಭಾರ ಕಚೇರಿ ತೆರೆದು ಉದ್ಯೋಗ ವಂಚನೆ ಮತ್ತು ಹವಾಲಾ ದಂಧೆ ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ. ನಕಲಿ ರಾಯಭಾರ ಕಚೇರಿಯ ಮೂಲಕ ಜೈನ್ ನಡೆಸುತ್ತಿದ್ದ ಪ್ರಮುಖ ಚಟುವಟಿಕೆಗಳಲ್ಲಿ ಕಂಪನಿಗಳು ಮತ್ತು ವ್ಯಕ್ತಿಗಳಿಗೆ ವಿದೇಶದಲ್ಲಿ ಕೆಲಸ ಮಾಡಲು ದಲ್ಲಾಳಿ ಒಪ್ಪಂದಗಳು ಮತ್ತು ಶೆಲ್ ಕಂಪನಿಗಳ ಮೂಲಕ ಹವಾಲಾ ದಂಧೆ ನಡೆಸುವುದು ಸೇರಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಜನರು ಮತ್ತು ಕಂಪನಿಗಳಿಗೆ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ, ಜೈನ್ ಅವರನ್ನು ವಂಚಿಸುತ್ತಿದ್ದ ಎಂದು ಇಂಡಿಯಾ ಟುಡೇ ವರದಿ ತಿಳಿಸಿದೆ. ಜನರ ವಿಶ್ವಾಸ ಗಳಿಸಲು ಮತ್ತು ಮೋಸದ ಉದ್ಯೋಗಗಳು ಅಥವಾ ವ್ಯಾಪಾರ ಅವಕಾಶಗಳ ಮೂಲಕ ವಂಚಿಸಲು ಆತ ತನ್ನ ನಕಲಿ ರಾಜತಾಂತ್ರಿಕ ವ್ಯಕ್ತಿತ್ವವನ್ನು ಬಳಸಿಕೊಂಡಿದ್ದ ಎಂದು ಆರೋಪಿಸಲಾಗಿದೆ.
ಎಟಿಎಸ್ ದಾಳಿಯಲ್ಲಿ ಪತ್ತೆಯಾಗಿದ್ದು ಏನು?
ಹರ್ಷವರ್ಧನ್ ಜೈನ್ ಬಳಿ ನಕಲಿ ದಾಖಲೆಗಳು, ವಿದೇಶಿ ಕರೆನ್ಸಿ ಮತ್ತು ಹಲವಾರು ಇತರ ಸಾಮಗ್ರಿಗಳು ಪತ್ತೆಯಾಗಿದ್ದು, ಅವುಗಳನ್ನು ಆತ ಹವಾಲಾ ದಂಧೆಗೆ ಬಳಸುತ್ತಿದ್ದ ಎಂದು ಶಂಕಿಸಲಾಗಿದೆ. ಎಸ್ಟಿಎಫ್ ನೋಯ್ಡಾ ಘಟಕವು ರೂ. 44 ಲಕ್ಷಕ್ಕೂ ಹೆಚ್ಚು ಹಣ ಮತ್ತು ಹಲವಾರು ದೇಶಗಳ ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಂಡಿದೆ. ರಾಜತಾಂತ್ರಿಕ ನಂಬರ್ ಪ್ಲೇಟ್ಗಳನ್ನು ಹೊಂದಿರುವ ನಾಲ್ಕು ವಾಹನಗಳು, 18 ರಾಜತಾಂತ್ರಿಕ ನಂಬರ್ ಪ್ಲೇಟ್ಗಳು ಮತ್ತು ಮೈಕ್ರೋನೇಷನ್ಗಳ 12 ರಾಜತಾಂತ್ರಿಕ ಪಾಸ್ಪೋರ್ಟ್ಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.
ಭಾರತದ ವಿದೇಶಾಂಗ ಸಚಿವಾಲಯದ ಸೀಲ್ ಇರುವ ನಕಲಿ ದಾಖಲೆಗಳು, ಎರಡು ನಕಲಿ ಪ್ಯಾನ್ ಕಾರ್ಡ್ಗಳು, ವಿವಿಧ ದೇಶಗಳು ಮತ್ತು ಕಂಪನಿಗಳ 34 ಸೀಲುಗಳು, ಎರಡು ನಕಲಿ ಪ್ರೆಸ್ ಕಾರ್ಡ್ಗಳು ಮತ್ತು ವಿವಿಧ ಕಂಪನಿಗಳ ದಾಖಲೆಗಳು ಕೂಡ ಎಸ್ಟಿಎಫ್ ದಾಳಿ ವೇಳೆ ಪತ್ತೆಯಾಗಿದೆ.
ಹಣ ಅಕ್ರಮ ವರ್ಗಾವಣೆ ಆರೋಪ: ನ್ಯೂಸ್ ಕ್ಲಿಕ್ನ ಪ್ರಬೀರ್ ಪುರ್ಕಾಯಸ್ಥಗೆ ನಿರೀಕ್ಷಣಾ ಜಾಮೀನು


