ಬಿಹಾರದಲ್ಲಿ ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ 65 ಲಕ್ಷ ಹೆಸರುಗಳು ಮತ್ತು ಅದಕ್ಕೆ ಕಾರಣವನ್ನು ಬಹಿರಂಗಪಡಿಸುವಂತೆ ಚುನಾವಣಾ ಆಯೋಗಕ್ಕೆ ಗುರುವಾರ (ಆ.14) ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಪಾಲಿಸುವ ಬದಲು ಚುನಾವಣಾ ಆಯೋಗ ಸಮಜಾಯಿಷಿ ನೀಡುವುದನ್ನು ಮುಂದುವರಿಸಿದ್ದು, ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು ವಿರೋಧಿಸಿ ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ‘ವೋಟ್ ಅಧಿಕಾರ್ ಯಾತ್ರಾ’ ಭಾನುವಾರ (ಆ.17) ಬಿಹಾರದಲ್ಲಿ ಪ್ರಾರಂಭಗೊಳ್ಳಲಿದೆ.
ಇದಕ್ಕೂ ಮುನ್ನ ಶನಿವಾರ (ಆ.16) ಹೇಳಿಕೆ ಬಿಡುಗಡೆ ಮಾಡಿರುವ ಚುನಾವಣಾ ಆಯೋಗ, “ಕಾನೂನು, ನಿಯಮಗಳು ಮತ್ತು ಮಾರ್ಗಸೂಚಿಗಳ ಪ್ರಕಾರ ಅತ್ಯಂತ ಪಾರದರ್ಶಕತೆಯು ಮತದಾರರ ಪಟ್ಟಿ ಪರಿಷ್ಕರಣೆಯ ‘ಹಾಲ್ ಮಾರ್ಕ್’ ಎಂದು ಹೇಳಿದೆ.
ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ಅಕ್ರಮಗಳ ಕುರಿತ ಕಾಂಗ್ರೆಸ್ನ ಆರೋಪಗಳನ್ನು ಪರೋಕ್ಷವಾಗಿ ಉಲ್ಲೇಖಿಸಿದ ಚುನಾವಣಾ ಆಯೋಗ,”ಕೆಲ ರಾಜಕೀಯ ಪಕ್ಷಗಳು ಮತ್ತು ಅವುಗಳ ಬೂತ್-ಮಟ್ಟದ ಏಜೆಂಟ್ಗಳು (ಬಿಎಲ್ಎಗಳು) ಸೂಕ್ತ ಸಮಯದಲ್ಲಿ ಮತದಾರರ ಪಟ್ಟಿಯನ್ನು ಪರಿಶೀಲಿಸಲಿಲ್ಲ ಮತ್ತು ದೋಷಗಳಿದ್ದರೆ, ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ಗಳು /ಚುನಾವಣಾ ನೋಂದಣಿ ಅಧಿಕಾರಿಗಳು, ಜಿಲ್ಲಾ ಚುನಾವಣಾ ಅಧಿಕಾರಿಗಳು ಅಥವಾ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಸೂಚಿಸಿಲ್ಲ ಎಂದು ತೋರುತ್ತದೆ” ಎಂದಿದೆ.
ಈ ಮೂಲಕ ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಸಮರ್ಥಿಸಿಕೊಂಡಿದೆ. ಆದರೆ, ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳು ಎತ್ತಿರುವ ಗಂಭೀರ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನ ಮಾಡಿಲ್ಲ.
ಚುನಾವಣಾ ಆಯೋಗದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್,”ಮತ ಕಳ್ಳತನ ಮತ್ತು ಸಾಮೂಹಿಕ ಅಕ್ರಮಗಳ ಗಂಭೀರ ಆರೋಪಗಳ ನಡುವೆಯೂ, ಚುನಾವಣಾ ಆಯೋಗವು ತನ್ನ ಎಲ್ಲಾ ಜವಾಬ್ದಾರಿಗಳನ್ನು ನಿರ್ಲಕ್ಷಿಸುವ ಮೂಲಕ ನಾಚಿಕೆಯಿಲ್ಲದೆ ಮಿತಿಗಳನ್ನು ಮೀರಿದೆ. ಸಾಂವಿಧಾನಿಕ ಅಧಿಕಾರಿಗಳು ಪ್ರಾಮಾಣಿಕತೆಯ ಸಂಕೇತವಾಗಿರಬೇಕು. ತಮ್ಮ ತಪ್ಪನ್ನು ಮರೆಮಾಚಲು ಪ್ರಜಾಪ್ರಭುತ್ವವನ್ನು ನಾಶಮಾಡುವ ಅಸ್ಪಷ್ಟ ಪತ್ರಿಕಾ ಹೇಳಿಕೆಗಳ ಹಿಂದೆ ಅಡಗಿಕೊಳ್ಳಬಾರದು” ಎಂದಿದ್ದಾರೆ.
“ಪತ್ರಿಕಾ ಹೇಳಿಕೆಯ ಸ್ವರ ಮತ್ತು ಸ್ವರೂಪವು, ಬಿಜೆಪಿ ನಿಯಂತ್ರಿತ ಚುನಾವಣಾ ಸಂಸ್ಥೆಯಿಂದ ನಡೆದಿದೆ ಎನ್ನಲಾದ ಸಾಮೂಹಿಕ ಮತದಾನ ವಂಚನೆಯ ಬಗ್ಗೆ ಸಾರ್ವಜನಿಕರ ಗಂಭೀರ ಕಳವಳಗಳನ್ನು ಪರಿಹರಿಸಲು ಚುನಾವಣಾ ಆಯೋಗ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂಬ ಹೆಚ್ಚಿನ ಅನುಮಾನಗಳನ್ನು ಹುಟ್ಟುಹಾಕುತ್ತದೆ” ಎಂದು ಕೆ.ಸಿ ವೇಣುಗೋಪಾಲ್ ಹೇಳಿದ್ದಾರೆ.
“ಚುನಾವಣಾ ಆಯೋಗ ಮತದಾರರ ಪಟ್ಟಿಯ ಪರಿಶೀಲನೆಯನ್ನು ಸ್ವಾಗತಿಸುತ್ತದೆ ಎಂದಾದರೆ, ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಅಧಿಕಾರಿಗಳು ಪಕ್ಷಗಳಿಗೆ ಮೆಶಿನ್ ರೀಡೇಬಲ್ ಮತದಾರರ ಪಟ್ಟಿಯನ್ನು ನೀಡಲು ಏಕೆ ನಿರಾಕರಿಸುತ್ತಿದ್ದಾರೆ? ಸಿಸಿಟಿವಿ ದೃಶ್ಯಾವಳಿಗಳನ್ನು ಏಕೆ ಅಳಿಸಲಾಗುತ್ತಿದೆ ಎಂಬುದರ ಕುರಿತು ಸ್ಪಷ್ಟನೆ ನೀಡಬೇಕು” ಎಂದು ವೇಣುಗೋಪಾಲ್ ಆಗ್ರಹಿಸಿದ್ದಾರೆ.
ಶುದ್ಧ ಮತದಾರರ ಪಟ್ಟಿಗಳು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತವೆ.ರಾಜಕೀಯ ಪಕ್ಷಗಳು ಅವುಗಳ ತಯಾರಿಕೆಯ ಪ್ರತಿಯೊಂದು ಹಂತದಲ್ಲೂ ತೊಡಗಿಸಿಕೊಂಡಿವೆ ಎಂದು ಚುನಾವಣಾ ಆಯೋಗ ತನ್ನ ಹೇಳಿಕೆಯಲ್ಲಿ ಪುನರುಚ್ಚರಿಸಿದೆ.
“ಯಾವುದಾದರೂ ದೋಷಗಳಿದ್ದರೆ ಅವುಗಳನ್ನು ಸರಿಪಡಿಸಲು ಮತದಾರರು ಮತ್ತು ರಾಜಕೀಯ ಪಕ್ಷಗಳಿಗೆ ಸೂಕ್ತ ಸಮಯ ಮತ್ತು ಅವಕಾಶವನ್ನು ನೀಡಲಾಗುತ್ತದೆ. ಭಾರತದಲ್ಲಿ ಸಂಸತ್ತು ಮತ್ತು ವಿಧಾನಸಭಾ ಚುನಾವಣೆಗಳಿಗೆ ಚುನಾವಣಾ ವ್ಯವಸ್ಥೆಯು ಕಾನೂನು ಹೇಳಿದಂತೆ ಬಹು-ಹಂತದ ವಿಕೇಂದ್ರೀಕೃತ ರಚನೆಯಾಗಿದೆ” ಎಂದಿದೆ.
ಭಾರತ ಚುನಾವಣಾ ಆಯೋಗ ಹೊರಡಿಸಿದ ಮಾರ್ಗಸೂಚಿಗಳ ಆಧಾರದ ಮೇಲೆ, ಎಸ್ಡಿಎಂ ಮಟ್ಟದ ಅಧಿಕಾರಿಗಳಾಗಿರುವ ಚುನಾವಣಾ ನೋಂದಣಿ ಅಧಿಕಾರಿಗಳು (ಇಆರ್ಒ) ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್ಒ) ಸಹಾಯದಿಂದ ಮತದಾರರ ಪಟ್ಟಿಯನ್ನು ಸಿದ್ಧಪಡಿಸುತ್ತಾರೆ ಮತ್ತು ಅಂತಿಮಗೊಳಿಸುತ್ತಾರೆ. ಮತದಾರರ ಪಟ್ಟಿಯ ನಿಖರತೆಯ ಜವಾಬ್ದಾರಿಯನ್ನು ಇಆರ್ಒ ಮತ್ತು ಬಿಎಲ್ಒ ವಹಿಸಿಕೊಳ್ಳುತ್ತಾರೆ ಎಂದು ಚುನಾವಣಾ ಆಯೋಗದ ಹೇಳಿಕೆಯಲ್ಲಿ ಸೇರಿಸಲಾಗಿದೆ.
“ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ ನಂತರ, ಅದರ ಡಿಜಿಟಲ್ ಮತ್ತು ಭೌತಿಕ ಪ್ರತಿಗಳನ್ನು ಎಲ್ಲಾ ರಾಜಕೀಯ ಪಕ್ಷಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ. ಯಾರು ಬೇಕಾದರು ನೋಡುವಂತೆ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಹಾಕಲಾಗುತ್ತದೆ. ಕರಡು ಪಟ್ಟಿಯನ್ನು ಪ್ರಕಟಿಸಿದ ನಂತರ, ಅಂತಿಮ ಪಟ್ಟಿಯನ್ನು ಪ್ರಕಟಿಸುವ ಮೊದಲು ವಾದ ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಮತದಾರರು ಮತ್ತು ರಾಜಕೀಯ ಪಕ್ಷಗಳಿಗೆ ಪೂರ್ಣ ಒಂದು ತಿಂಗಳ ಅವಧಿ ಸಮಯವಿದೆ” ಎಂದು ಚುನಾವಣಾ ಆಯೋಗ ತಿಳಿಸಿದೆ.
“ಎಲ್ಲಾ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳೊಂದಿಗೆ ಮತದಾರರ ಪಟ್ಟಿಗಳ ಡಿಜಿಟಲ್ ಮತ್ತು ಭೌತಿಕ ಪ್ರತಿಗಳನ್ನು ಹಂಚಿಕೊಳ್ಳಲಾಗುತ್ತದೆ. ಅಂತಿಮ ಮತದಾರರ ಪಟ್ಟಿಯ ಪ್ರಕಟಣೆಯ ನಂತರ, ಎರಡು ಹಂತದ ಮೇಲ್ಮನವಿ ಪ್ರಕ್ರಿಯೆ ಲಭ್ಯವಿದೆ. ಇದರಲ್ಲಿ ಮೊದಲ ಮೇಲ್ಮನವಿಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಮತ್ತು ಎರಡನೇ ಮೇಲ್ಮನವಿಯನ್ನು ಪ್ರತಿ ರಾಜ್ಯ/ಕೇಂದ್ರಾಡಳಿತ ಪ್ರದೇಶದ ಸಿಇಒ ಅವರಿಗೆ ಸಲ್ಲಿಸಬಹುದು. ಕಾನೂನು, ನಿಯಮಗಳು ಮತ್ತು ಮಾರ್ಗಸೂಚಿಗಳ ಪ್ರಕಾರ ಮತದಾರರ ಪಟ್ಟಿಯ ತಯಾರಿಕೆಯ ವಿಶಿಷ್ಟ ಲಕ್ಷಣವೆಂದರೆ ಅತ್ಯಂತ ಪಾರದರ್ಶಕತೆ” ಎಂದು ಹೇಳಿದೆ.
“ಮತದಾರರ ಪಟ್ಟಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಎತ್ತಲು ಸೂಕ್ತ ಸಮಯವೆಂದರೆ ಅದು ವಾದಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಅವಧಿ. ಇದು ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳೊಂದಿಗೆ ಮತದಾರರ ಪಟ್ಟಿಯನ್ನು ಹಂಚಿಕೊಳ್ಳುವುದರ ಹಿಂದಿನ ಉದ್ದೇಶವಾಗಿದೆ. ಸರಿಯಾದ ಸಮಯದಲ್ಲಿ ಈ ಸಮಸ್ಯೆಗಳನ್ನು ಸರಿಯಾದ ಮಾರ್ಗಗಳ ಮೂಲಕ ಎತ್ತಿದ್ದರೆ, ಸಂಬಂಧಪಟ್ಟ ಎಸ್ಡಿಎಂ/ಇಆರ್ಒಗಳು ಆ ಚುನಾವಣೆಗಳಿಗೆ ಮೊದಲು ತಪ್ಪುಗಳನ್ನು ಸರಿಪಡಿಸಲು ಅನುವು ಮಾಡಿಕೊಡುತ್ತಿತ್ತು. ರಾಜಕೀಯ ಪಕ್ಷಗಳು ಮತ್ತು ಯಾವುದೇ ಮತದಾರರಿಂದ ಮತದಾರರ ಪಟ್ಟಿಯ ಪರಿಶೀಲನೆಯನ್ನು ಇಸಿಐ ಸ್ವಾಗತಿಸುತ್ತಲೇ ಇದೆ. ಇದು ಎಸ್ಡಿಎಂ/ಇಆರ್ಒಗಳು ದೋಷಗಳನ್ನು ಸರಿಪಡಿಸಲು ಮತ್ತು ಮತದಾರರ ಪಟ್ಟಿಯನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ, ಇದು ನಮ್ಮ ಉದ್ದೇಶವಾಗಿದೆ” ಎಂದು ಚುನಾವಣಾ ಆಯೋಗ ತನ್ನ ಹೇಳಿಕೆಯಲ್ಲಿ ವಿವರಿಸಿದೆ.
ನಿಷೇಧಿತ ‘ಸಿಮಿ’ ಜೊತೆ ಸಂಪರ್ಕ ಆರೋಪ: 18 ವರ್ಷಗಳ ಬಳಿಕ 8 ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ


