ಕೊಚ್ಚಿ: ಮುಸ್ಲಿಂ ಸಮುದಾಯ ಮತ್ತು ಅದರ ಧಾರ್ಮಿಕ ಮುಖಂಡರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಹಾಗೂ ಕೋಮು ಪ್ರಚೋದನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಕ್ಕಾಗಿ ಕೇರಳದ ಹಿಂದೂ ಐಕ್ಯ ವೇದಿಕೆಯ ರಾಜ್ಯ ಅಧ್ಯಕ್ಷ ಆರ್.ವಿ. ಬಾಬು ವಿರುದ್ಧ ಕೊಚ್ಚಿಯ ತ್ರಿಕ್ಕಾಕರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮುಸ್ಲಿಂ ಸಮುದಾಯವನ್ನು ಮಾದಕವಸ್ತು ಕಳ್ಳಸಾಗಣೆ ಮತ್ತು ಭಯೋತ್ಪಾದನೆಗೆ ಲಿಂಕ್ ಮಾಡುವ ಮೂಲಕ ಇಸ್ಲಾಮೋಫೋಬಿಕ್ ಹಾಗೂ ಮಾನನಷ್ಟ ಹೇಳಿಕೆಗಳನ್ನು ನೀಡಿದ ಆರೋಪ ಇವರ ಮೇಲಿದೆ.
ಕೇರಳ ಪೊಲೀಸರು ರಾಜ್ಯಾದ್ಯಂತ ಹಮ್ಮಿಕೊಂಡಿರುವ ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನ ‘ಆಪರೇಷನ್ ತೂಫಾನ್’ ಹಿನ್ನೆಲೆಯಲ್ಲಿ ಈ ವಿವಾದ ಭುಗಿಲೆದ್ದಿದೆ. ಈ ಅಭಿಯಾನದ ಭಾಗವಾಗಿ ಕೇರಳದ ಗೃಹ ಸಚಿವರಾದ ರಮೇಶ್ ಚೆನ್ನಿತ್ತಲ ಅವರು ಪ್ರಮುಖ ಮುಸ್ಲಿಂ ಧಾರ್ಮಿಕ ಸಂಘಟನೆಯಾದ ‘ಸಮಸ್ತ’ದ ಅಧ್ಯಕ್ಷರಾದ ಜಿಫ್ರಿ ಮುತ್ತುಕೋಯ ತಂಗಲ್ ಅವರ ಬೆಂಬಲವನ್ನು ಕೋರಿದ್ದರು. ಗೃಹ ಸಚಿವರ ಈ ಕ್ರಮವನ್ನು ಉಲ್ಲೇಖಿಸಿ ಆರ್.ವಿ. ಬಾಬು ತಮ್ಮ ಫೇಸ್ಬುಕ್ ಖಾತೆಯಲ್ಲಿ ವಿವಾದಾತ್ಮಕ ಬರಹವೊಂದನ್ನು ಪೋಸ್ಟ್ ಮಾಡಿದ್ದರು.
ವಿವಾದಾತ್ಮಕ ಫೇಸ್ಬುಕ್ ಪೋಸ್ಟ್ನಲ್ಲೇನಿತ್ತು?
ಆರ್.ವಿ. ಬಾಬು ತಮ್ಮ ಪೋಸ್ಟ್ನಲ್ಲಿ, “ಕೇರಳವನ್ನು ಮಾದಕ ದ್ರವ್ಯ ಮುಕ್ತಗೊಳಿಸಲು ಗೃಹ ಇಲಾಖೆ ಜಾರಿಗೆ ತಂದಿರುವ ‘ಆಪರೇಷನ್ ತೂಫಾನ್’ ಅಭಿಯಾನವನ್ನು ಬೆಂಬಲಿಸುವಂತೆ ಗೃಹ ಸಚಿವರು ಸಮಸ್ತ ನಾಯಕ ಜಿಫ್ರಿ ಮುತ್ತುಕೋಯ ತಂಗಲ್ ಅವರ ಸಹಾಯ ಕೋರಿರುವುದು ಒಳ್ಳೆಯ ನಡೆ. ಆದರೆ, ಇತರ ಸಮುದಾಯಗಳ ನಾಯಕರಿಗಿಂತ ಹೆಚ್ಚಾಗಿ ಈ ವಿಷಯದಲ್ಲಿ ಸಮಸ್ತದ ನಾಯಕರು ಮತ್ತು ಅವರ ಸಹಚರರೇ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಬೇಕಾಗಿದೆ. ಏಕೆಂದರೆ ರಾಜ್ಯದಲ್ಲಿ ಮಾದಕ ದ್ರವ್ಯಗಳ ವ್ಯಾಪಕ ಮಾರಾಟ ಮತ್ತು ಕೇರಳಕ್ಕೆ ಅವುಗಳನ್ನು ಕಳ್ಳಸಾಗಣೆ ಮಾಡುವಲ್ಲಿ ತೊಡಗಿರುವವರಲ್ಲಿ ಹೆಚ್ಚಿನವರು ಇದೇ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇದು ಆ ಸಮುದಾಯಕ್ಕೆ ನಾಚಿಕೆಗೇಡಿನ ವಿಷಯ. ಅದು ಮಾದಕ ದ್ರವ್ಯ ಕಳ್ಳಸಾಗಣೆಯಾಗಿರಲಿ ಅಥವಾ ಭಯೋತ್ಪಾದನೆಯಾಗಿರಲಿ, ‘ನಮ್ಮ ಜನರು’ (ಮುಸ್ಲಿಮರನ್ನು ಉಲ್ಲೇಖಿಸಲು ಬಳಸುವ ಆಡುಮಾತು) ಎಂಬ ಪದದ ಅರಿವಿಲ್ಲದೆ ಇಲ್ಲಿ ಏನೂ ನಡೆಯುವುದಿಲ್ಲ” ಎಂದು ಗಂಭೀರ ಆರೋಪ ಮಾಡಿದ್ದರು.
ಪಿಡಿಪಿ ನಾಯಕನಿಂದ ದೂರು ದಾಖಲು: ಆರ್.ವಿ. ಬಾಬು ಅವರ ಈ ಸೋಷಿಯಲ್ ಮೀಡಿಯಾ ಪೋಸ್ಟ್ ಮುಸ್ಲಿಂ ಸಮುದಾಯ ಮತ್ತು ಧಾರ್ಮಿಕ ನಾಯಕರ ತೇಜೋವಧೆ ಮಾಡುವ ಉದ್ದೇಶವನ್ನು ಹೊಂದಿದೆ ಹಾಗೂ ಸಮಾಜದಲ್ಲಿ ಕೋಮು ಸಂಘರ್ಷ ಮತ್ತು ದ್ವೇಷವನ್ನು ಪ್ರಚೋದಿಸುವಂತಿದೆ ಎಂದು ಆರೋಪಿಸಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಕೇಂದ್ರ ಸಮಿತಿಯ ನಾಯಕ ಅಶ್ರಫ್ ವಝಕ್ಕಲ ಅವರು ತ್ರಿಕ್ಕಾಕರ ಅಸಿಸ್ಟೆಂಟ್ ಪೊಲೀಸ್ ಕಮಿಷನರ್ಗೆ ಅಧಿಕೃತ ದೂರು ನೀಡಿದ್ದರು.
ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್: ದೂರಿನ ಆಧಾರದ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ತ್ರಿಕ್ಕಾಕರ ಪೊಲೀಸರು, ಹಿಂದೂ ಐಕ್ಯ ವೇದಿಕೆಯ ನಾಯಕನ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (BNS) ಮತ್ತು ಕೇರಳ ಪೊಲೀಸ್ ಕಾಯ್ದೆಯ ಸಂಬಂಧಿತ ಕಠಿಣ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿವಿಧ ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು, ಸಮಾಜದಲ್ಲಿ ಸುಳ್ಳು ಮಾಹಿತಿಯನ್ನು ಹರಡುವುದು ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತಂದಿರುವ ಆರೋಪಗಳನ್ನು ಎಫ್ಐಆರ್ನಲ್ಲಿ ದಾಖಲಿಸಲಾಗಿದೆ. ತನಿಖೆಯ ಭಾಗವಾಗಿ ಶೀಘ್ರದಲ್ಲೇ ಆರ್.ವಿ. ಬಾಬು ಅವರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೇರಳದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸಂಯೋಜಿತ ಹಿಂದುತ್ವ ಸಂಘಟನೆಯಾಗಿರುವ ಹಿಂದೂ ಐಕ್ಯ ವೇದಿಕೆಯ ಪ್ರಮುಖ ನಾಯಕರಾಗಿರುವ ಆರ್.ವಿ. ಬಾಬು, ಈ ಹಿಂದೆಯೂ ಸಹ ಇಸ್ಲಾಮೋಫೋಬಿಕ್ ಮತ್ತು ಕೋಮು ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಿದ ಹಿನ್ನೆಲೆಯಲ್ಲಿ ಹಲವು ಕಾನೂನು ಕಾನೂನು ಪ್ರಕ್ರಿಯೆಗಳನ್ನು ಎದುರಿಸುತ್ತಿದ್ದಾರೆ. ಸದ್ಯ ಮಾದಕ ದ್ರವ್ಯದಂತಹ ಗಂಭೀರ ಸಾಮಾಜಿಕ ಪಿಡುಗನ್ನು ನಿರ್ದಿಷ್ಟ ಸಮುದಾಯಕ್ಕೆ ಲಿಂಕ್ ಮಾಡಿರುವುದಕ್ಕೆ ಕೇರಳದ ವಿವಿಧ ಸಾಮಾಜಿಕ ಹಾಗೂ ರಾಜಕೀಯ ವಲಯಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.


