ಪರಿಶಿಷ್ಟ ಜಾತಿ (ಎಸ್ಸಿ) ಒಳಮೀಸಲಾತಿಯಲ್ಲಿ ‘ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಲಿ’ ಎಂದು ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಪತ್ರ ಬರೆದಿದ್ದಾರೆ.
ಈ ಬಗ್ಗೆ ಬರಗೂರು ರಾಮಚಂದ್ರಪ್ಪ ಬರೆದಿರುವ ಪತ್ರ ‘ನಾನುಗೌರಿ.ಕಾಮ್’ಗೆ ಲಭ್ಯವಾಗಿದ್ದು, “ದಲಿತ ಸಮುದಾಯಗಳ ಒಳಮೀಸಲಾತಿ ಕುರಿತು ಸಲ್ಲಿಕೆಯಾದ ಜಸ್ಟೀಸ್ ನಾಗಮೋಹನದಾಸ್ ಅವರ ವರದಿಯನ್ನು ಒಪ್ಪಿ, ಕೆಲವು ಮಾರ್ಪಾಟುಗಳೊಂದಿಗೆ ಜಾರಿಗೊಳಿಸುತ್ತಿರುವುದು ಮೊದಲಿಗೆ ಅಭಿನಂದನೀಯ ಕ್ರಮವಾಗಿದೆ” ಎಂದು ಹೇಳಿದ್ದಾರೆ.
“ಎಡಗೈ ದಲಿತ ಸಮುದಾಯವು ಮೂರು ದಶಕಗಳಿಂದ ಒಳಮೀಸಲಾತಿಗಾಗಿ ನಡೆಸುತ್ತಾ ಬಂದ ಹೋರಾಟಕ್ಕೆ ಕಡೆಗೂ ಜಯವಾಗಿದೆ; ನ್ಯಾಯ ಸಿಕ್ಕಿದೆ. ಜೊತೆಗೆ ಬಲಗೈ ದಲಿತ ಸಮುದಾಯ ಮತ್ತು ಸ್ಪೃಶ್ಯ ಪರಿಶಿಷ್ಟ ಜಾತಿಗಳಿಗೂ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಸಮತೋಲನದ ಪ್ರಯತ್ನ ಮಾಡಲಾಗಿದೆ. ಪರಿಶಿಷ್ಟ ಜಾತಿಗಳಿಗಾಗಿ ಶಾಶ್ವತ ಆಯೋಗ ರಚಿಸುವ ತೀರ್ಮಾನ ಮಾಡಲಾಗಿದೆ. ಇವೆಲ್ಲ ಕ್ರಮಗಳೂ ಸ್ವಾಗತಾರ್ಹವಾಗಿವೆ” ಎಂದಿದ್ದಾರೆ.
“ಆದರೆ, ಇಷ್ಟೆಲ್ಲ ನ್ಯಾಯ ಒದಗಿಸುವ ನಿರ್ಣಯದಲ್ಲಿ ಅಲೆಮಾರಿ ಸಮುದಾಯಗಳಿಗೆ ಸೂಕ್ತ ಸಾಮಾಜಿಕ ನ್ಯಾಯವನ್ನು ಒದಗಿಸಿಲ್ಲವೆಂಬ ಅ೦ಶ ಮುನ್ನೆಲೆಗೆ ಬಂದಿದೆ. ಅಲೆಮಾರಿ ಸಮುದಾಯಗಳು ಬೇರೆ ಶೋಷಿತ ಸಮುದಾಯಗಳಿಗಿ೦ತ ಭಿನ್ನವಾದ ಜೀವನ ವಿಧಾನವನ್ನು ಒಳಗೊಂಡಿವೆ. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಬೇರೆ ಯಾವುದೇ ಶೋಷಿತ ಸಮುದಾಯದ ಜೊತೆಗೆ ಸ್ಪರ್ಧೆ ಮಾಡಲಾಗದಂಥ ಸ್ಥಿತಿಯಲ್ಲಿವೆ. ಈ ವಾಸ್ತವವನ್ನು ಪರಿಗಣಿಸಿಯೇ ಜಸ್ಟೀಸ್ ನಾಗಮೋಹನದಾಸ್ ಆಯೋಗವು ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕವಾಗಿ ಒಳಮೀಸಲಾತಿಗೆ ಶಿಫಾರಸು ಮಾಡಿತ್ತು” ಎಂದು ವಿವರಿಸಿದ್ದಾರೆ.
“ಸಾಮಾಜಿಕ ನ್ಯಾಯಕ್ಕೆ ಬದ್ಧರಾದವರೆಂದೇ ಹೆಸರಾದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಲೆಮಾರಿಗಳಿಗಾದ ‘ಅನ್ಯಾಯ’ವನ್ನು ಸರಿಪಡಿಸಲು ಪರ್ಯಾಯ ಪರಿಹಾರ ಮಾರ್ಗಗಳನ್ನು ಹುಡುಕಬೇಕೆಂದೂ, ನ್ಯಾಯ ಒದಗಿಸಬೇಕೆಂದೂ ಒತ್ತಾಯ ಪೂರ್ವಕವಾಗಿ ವಿನಂತಿಸುತ್ತೇನೆ. ಈ ಸಂಬ೦ಧವಾಗಿ ಅಲೆಮಾರಿ ಸಂಘಟನೆಗಳ ನೇತಾರರನ್ನು ಮಾತುಕತೆಗೆ ಆಹ್ವಾನಿಸುವುದು ಅಗತ್ಯವೆಂದು ಭಾವಿಸುತ್ತೇನೆ” ಎಂದು ಆಗ್ರಹಿಸಿದ್ದಾರೆ.
ಒಳಮೀಸಲಾತಿ ಧರಣಿ| ಆಹ್ವಾನವಿಲ್ಲದೆ ವೇದಿಕೆಗೆ ಬಂದ ಬಿಜೆಪಿ ನಾಯಕರು; ಕೆಳಗಿಳಿಸಿದ ಹೋರಾಟಗಾರರು


