ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಕೈಗೆತ್ತಿಕೊಂಡಾಗ ನಾಲ್ಕರಿಂದ ಐದು ಲಕ್ಷ ‘ಮಿಯಾ ಮತದಾರರ’ ಹೆಸರುಗಳನ್ನು ಅಳಿಸಲಾಗುವುದು, ಅವರಿಗೆ ತೊಂದರೆ ಕೊಡುವುದೇ ನನ್ನ ಕೆಲಸ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಈ ಮೂಲಕ ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿ ಒಂದು ಸಮುದಾಯದ ಜನರ ವಿರುದ್ದ ನೇರ ದ್ವೇಷ ಕಾರಿದ್ದಾರೆ.
“ನಮಗೆ ಮತಗಳ್ಳತನ ಅಂದರೆ ಏನು? ಹೌದು, ನಾವು ಕೆಲವು ಮಿಯಾ ಮತಗಳನ್ನು ಕದಿಯಲು ಪ್ರಯತ್ನಿಸುತ್ತಿದ್ದೇವೆ. ನಿಜವಾಗಿ ಅವರಿಗೆ ಅಸ್ಸಾಂನಲ್ಲಿ ಮತ ಚಲಾಯಿಸಲು ಅವಕಾಶ ನೀಡಬಾರದು. ಅವರು ಬಾಂಗ್ಲಾದೇಶದಲ್ಲಿ ಮತ ಚಲಾಯಿಸಬೇಕು” ಎಂದು ಸಿಎಂ ಶರ್ಮಾ ಹೇಳಿದ್ದಾರೆ.
ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯ ದಿಗ್ಬೋಯ್ನಲ್ಲಿ ಮಂಗಳವಾರ (ಜ.27) ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಶರ್ಮಾ ದ್ವೇಷದ ಹೇಳಿಕೆ ನೀಡಿದ್ದಾರೆ.
ಅಸ್ಸಾಂನಲ್ಲಿ, ‘ಮಿಯಾ’ ಎಂಬುವುದು ಬಂಗಾಳಿ ಮುಸ್ಲಿಮರನ್ನು ಉಲ್ಲೇಖಿಸಲು ಬಳಸುವ ಅವಹೇಳನಕಾರಿ ಪದವಾಗಿದೆ. ಬಂಗಾಳಿ ಭಾಷೆ ಮಾತನಾಡುವ ಮುಸ್ಲಿಮರಿಗೆ ಬಲಪಂಥೀಯರು ಅಥವಾ ಹಿಂದುತ್ವವಾದಿಗಳು ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರೆಂದು ಹಣೆಪಟ್ಟಿ ಕಟ್ಟುತ್ತಾರೆ.
“ಅವರು (ಮಿಯಾಗಳು) ಅಸ್ಸಾಮಿನಲ್ಲಿ ಮತ ಚಲಾಯಿಸಲು ಸಾಧ್ಯವಾಗದಂತೆ ನಾವು ವ್ಯವಸ್ಥೆಗಳನ್ನು ಮಾಡಿದ್ದೇವೆ. ಆದರೆ, ಇದು ಪ್ರಾಥಮಿಕವಷ್ಟೇ. ಅಸ್ಸಾಮಿನಲ್ಲಿ ಎಸ್ಐಆರ್ ನಡೆಸುವಾಗ ನಾಲ್ಕರಿಂದ ಐದು ಲಕ್ಷ ಮಿಯಾ ಮತಗಳನ್ನು ಕಡಿತಗೊಳಿಸಬೇಕಾಗುತ್ತದೆ” ಎಂದು ಸಿಎಂ ಶರ್ಮಾ ಹೇಳಿದ್ದಾರೆ.
“ಕಾಂಗ್ರೆಸ್ ನನ್ನನ್ನು ಎಷ್ಟು ಬೇಕಾದರೂ ನಿಂದಿಸಲಿ, ಆದರೆ ಮಿಯಾಗಳಿಗೆ ಸಂಕಷ್ಟವನ್ನುಂಟು ಮಾಡುವುದು ನನ್ನ ಕೆಲಸವಾಗಿದೆ” ಎಂದು ಶರ್ಮಾ ಹೇಳಿದ್ದಾರೆ.
ಭಾರತೀಯ ಚುನಾವಣಾ ಆಯೋಗವು ಎರಡನೇ ಹಂತದಲ್ಲಿ ಎಸ್ಐಆರ್ ನಡೆಸುತ್ತಿರುವ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಸ್ಸಾಂ ಸೇರಿಲ್ಲ. ಬದಲಿಗೆ, ಚುನಾವಣಾ ಆಯೋಗವು ರಾಜ್ಯದಲ್ಲಿ ‘ವಿಶೇಷ ಪರಿಷ್ಕರಣೆ’ ಎಂಬ ಪ್ರಕ್ರಿಯೆ ಕೈಗೊಂಡಿದೆ. ಇದು ಸಾಮಾನ್ಯವಾಗಿ ನಡೆಯುವ ಮತದಾರರ ಪಟ್ಟಿಯ ನಿಯಮಿತ ನವೀಕರಣ ಅಥವಾ ರೂಟೀನ್ ಅಪ್ಡೇಟ್ಗಳಂತೆಯೇ ಇರುತ್ತದೆ.
ಸಿಎಂ ಶರ್ಮಾ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಅಮನ್ ವಾದುದ್, ಶರ್ಮಾ ಅವರು ಅಸ್ಸಾಂನಲ್ಲಿ ‘ಸಂವಿಧಾನವನ್ನು ಸಂಪೂರ್ಣವಾಗಿ ನಿಷ್ಪರಿಣಾಮಕಾರಿಯನ್ನಾಗಿ ಮಾಡಿದ್ದಾರೆ’ ಎಂದು ಹೇಳಿದ್ದಾರೆ.
ಕೆಲ ದಿನಗಳ ಹಿಂದೆ, ರಾಜ್ಯದಲ್ಲಿ ಮತದಾರರ ಪಟ್ಟಿಯ “ವಿಶೇಷ ಪರಿಷ್ಕರಣೆ”ಯ ಅಡಿಯಲ್ಲಿ ಮಿಯಾ ಮುಸ್ಲಿಮರಿಗೆ ಮಾತ್ರ ನೋಟಿಸ್ ನೀಡಲಾಗುತ್ತಿದೆ ಎಂದು ಶರ್ಮಾ ಹೇಳಿದ್ದರು. “ನಾವು ಅವರಿಗೆ ತೊಂದರೆ ನೀಡುತ್ತಿದ್ದೇವೆ” ಎಂದಿದ್ದರು.


