ದೆಹಲಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್ಯು) ಸಂಶೋಧನಾ ವಿದ್ಯಾರ್ಥಿ ಶಾರ್ಜೀಲ್ ಇಮಾಮ್ ಅವರಿಗೆ ನ್ಯಾಯಾಲಯ ಸೋಮವಾರ (ಮಾ.9) 10 ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ತನ್ನ ಸಹೋದರನ ಮದುವೆಯಲ್ಲಿ ಪಾಲ್ಗೊಳ್ಳಲು ಮತ್ತು ಅನಾರೋಗ್ಯ ಪೀಡಿತ ತಾಯಿಯನ್ನು ನೋಡಿಕೊಳ್ಳಲು ಇಮಾಮ್ ಅವರಿಗೆ ಜಾಮೀನು ನೀಡಲಾಗಿದೆ ಎಂದು barandbench.com ವರದಿ ಮಾಡಿದೆ.
ದೆಹಲಿಯ ಕರ್ಕಾರ್ಡೂಮಾ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸಮೀರ್ ಬಾಜ್ಪೈ ಅವರು ಮಾರ್ಚ್ 20ರಿಂದ 30ರವರೆಗೆ ಇಮಾಮ್ಗೆ ಜಾಮೀನು ನೀಡಿದ್ದಾರೆ.
ಜಾಮೀನಿನ ಮೇಲೆ ಇರುವಾಗ ಇಮಾಮ್ ಮಾಧ್ಯಮಗಳನ್ನು ಸಂಪರ್ಕಿಸಬಾರದು ಮತ್ತು ಸಾಮಾಜಿಕ ಮಾಧ್ಯಮಗಳನ್ನು ಬಳಸಬಾರದು. ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಮಾತ್ರ ಸಂವಹನ ನಡೆಸಬೇಕೆಂದು ನ್ಯಾಯಾಲಯವು ಸೂಚಿಸಿದೆ.
“ನ್ಯಾಯವಾದಿಗಳು ಉಲ್ಲೇಖಿಸಿದ ಮತ್ತು ಪ್ರಾಸಿಕ್ಯೂಷನ್ನಿಂದ ಪರಿಶೀಲಿಸಲ್ಪಟ್ಟ ಸತ್ಯಾಂಶಗಳನ್ನು ಪರಿಗಣಿಸಿ, ಅರ್ಜಿದಾರರಿಗೆ 20.03.2026 ರಿಂದ 30.03.2026 ರವರೆಗೆ ಅಪೇಕ್ಷಿತ ಪರಿಹಾರವನ್ನು (ಜಾಮೀನು) ನೀಡುವುದು ಸೂಕ್ತವೆಂದು ನ್ಯಾಯಾಲಯವು ಭಾವಿಸುತ್ತದೆ. ಈ ಅವಧಿಗೆ ಅರ್ಜಿದಾರರು 50,000 ರೂ. ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಇಬ್ಬರು ಶೂರಿಟಿಗಳನ್ನು (ಜಾಮೀನುದಾರರನ್ನು) ಒದಗಿಸಬೇಕು” ಎಂದು ನ್ಯಾಯಾಲಯ ಹೇಳಿರುವುದಾಗಿ barandbench.com ವರದಿ ಉಲ್ಲೇಖಿಸಿದೆ.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ (ಎನ್ಆರ್ಸಿ) ವಿರುದ್ಧದ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಹಲವಾರು ಪ್ರಕರಣಗಳು ದಾಖಲಾದ ನಂತರ, ಇಮಾಮ್ ಜನವರಿ 2020 ರಿಂದ ಜೈಲಿನಲ್ಲಿದ್ದಾರೆ. ಅವರಿಗೆ ಇತರ ಪ್ರಕರಣಗಳಲ್ಲಿ ಜಾಮೀನು ನೀಡಲಾಗಿದೆಯಾದರೂ, ದೆಹಲಿ ಗಲಭೆ ಪಿತೂರಿ ಪ್ರಕರಣದಲ್ಲಿ ಇನ್ನೂ ಬಂಧನದಲ್ಲಿದ್ದಾರೆ. ಈ ಪ್ರಕರಣದಲ್ಲಿ ದೆಹಲಿ ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯನ್ನು (ಯುಎಪಿಎ) ಪ್ರಯೋಗಿಸಿದ್ದಾರೆ.
ಈ ಪ್ರಕರಣದಲ್ಲಿ ಇಮಾಮ್ ಅವರಿಗೆ ಸೆಪ್ಟೆಂಬರ್ 2, 2025ರಂದು ದೆಹಲಿ ಹೈಕೋರ್ಟ್ ನಿಯಮಿತ ಜಾಮೀನು ನಿರಾಕರಿಸಿತ್ತು. ಈ ಆದೇಶವನ್ನು ಜನವರಿ 5, 2026 ರಂದು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.


