ಲೋಕಸಭೆಯ ಎಂಟು ವಿಪಕ್ಷ ಸಂಸದರ ಅಮಾನತನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಸ್ಪೀಕರ್ ಓಂ ಬಿರ್ಲಾ ಮಂಗಳವಾರ (ಮಾ.17) ವಾಪಸ್ ಪಡೆದಿದ್ದಾರೆ. ಅಶಿಸ್ತಿನ ಕಾರಣ ನೀಡಿ ಫೆಬ್ರವರಿ 8ರಂದು ಸಂಸದರನ್ನು ಅಮಾನತು ಮಾಡಲಾಗಿತ್ತು.
ಅಮಾನತು ವಾಪಸ್ ಪಡೆಯುವ ವೇಳೆ, ಸದನದ ಒಳಗೆ ಅಥವಾ ಸಂಸತ್ತಿನ ಸಂಕೀರ್ಣದಲ್ಲಿ ಯಾವುದೇ ರೀತಿಯ ಫಲಕಗಳು, ಪೋಸ್ಟರ್ಗಳು, ಫೋಟೋಗಳು ಅಥವಾ ಕೃತಕ ಬುದ್ಧಿಮತ್ತೆಯಿಂದ ರಚಿತವಾದ ಚಿತ್ರಗಳನ್ನು ಪ್ರದರ್ಶಿಸಬಾರದು ಎಂದು ಸ್ಪೀಕರ್ ಒತ್ತಿ ಹೇಳಿದರು.
ಎಂಟು ವಿರೋಧ ಪಕ್ಷದ ಸಂಸದರ ಅಮಾನತು ಮರು ಪರಿಶೀಲಿಸುವಂತೆ ಕಾಂಗ್ರೆಸ್ ಸದಸ್ಯ ಕೆ. ಸುರೇಶ್ ಸದನಕ್ಕೆ ಮನವಿ ಮಾಡಿದ್ದರು. ಸದನದಲ್ಲಿ ಏನೇ ನಡೆದಿದ್ದರೂ ಅದು ವಿಷಾದನೀಯ. ಸದನದ ಸುಗಮ ಕಾರ್ಯನಿರ್ವಹಣೆಗೆ ತಮ್ಮ ಪಕ್ಷ ಸಹಕರಿಸಲು ಸಿದ್ಧವಾಗಿದೆ ಎಂದರು.
ಹಲವು ವಿಪಕ್ಷ ಸಂಸದ ಮನವಿಗಳ ಹಿನ್ನೆಲೆ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಸದನದ ಸುಗಮ ಕಾರ್ಯನಿರ್ವಹಣೆಗೆ ‘ಲಕ್ಷ್ಮಣ ರೇಖೆ’ಯನ್ನು ಎಳೆಯುವ ಅವಶ್ಯಕತೆಯಿದೆ ಎಂದು ಹೇಳಿದರು. ಇದನ್ನು ಆಡಳಿತ ಮತ್ತು ವಿರೋಧ ಪಕ್ಷಗಳು ಒಪ್ಪಿಕೊಂಡವು.
ಸದನದಲ್ಲಿ ಅಥವಾ ಸಂಸತ್ತಿನ ಸಂಕೀರ್ಣದ ಒಳಗೆ ಯಾವುದೇ ಫಲಕಗಳು, ಪೋಸ್ಟರ್ಗಳು, ಫೋಟೋಗಳು ಅಥವಾ ಕೃತಕ ಬುದ್ಧಿಮತ್ತೆ (ಎಐ) ರಚಿತ ಚಿತ್ರಗಳನ್ನು ಪ್ರದರ್ಶಿಸದಂತೆ ನೋಡಿಕೊಳ್ಳುವ ಅಗತ್ಯವಿದೆ ಎಂದು ಸ್ಪೀಕರ್ ಬಿರ್ಲಾ ಹೇಳಿದರು.
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಸಂಸತ್ತಿನ ಕಲಾಪಗಳು ಸುಗಮವಾಗಿ ನಡೆಯಬೇಕು ಮತ್ತು ಎಲ್ಲರೂ ಸಹಕರಿಸಬೇಕು ಎಂಬುವುದು ಎಲ್ಲರ ಅಭಿಪ್ರಾಯವಾಗಿದೆ ಎಂದರು.
ನಂತರ ರಿಜಿಜು ಅವರು ಏಳು ಕಾಂಗ್ರೆಸ್ ಸಂಸದರು ಮತ್ತು ಒಬ್ಬರು ಸಿಪಿಐ-ಎಂ ಸಂಸದ ಅಮಾನತು ರದ್ದುಗೊಳಿಸುವ ನಿರ್ಣಯವನ್ನು ಮಂಡಿಸಿದರು, ಅದನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.
ಕಾಂಗ್ರೆಸ್ ಸಂಸದರಾದ ಹೈಬಿ ಈಡನ್, ಸಿ ಕಿರಣ್ ಕುಮಾರ್ ರೆಡ್ಡಿ, ಗುರ್ಜೀತ್ ಸಿಂಗ್ ಔಜ್ಲಾ, ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಮಾಣಿಕ್ಕಂ ಟ್ಯಾಗೋರ್, ಪ್ರಶಾಂತ್ ಪಡೋಲೆ ಮತ್ತು ಡೀನ್ ಕುರಿಯಾಕೋಸ್ ಹಾಗೂ ಪಿಐ(ಎಂ) ಎಸ್. ವೆಂಕಟೇಶನ್ ಅಮಾನತುಗೊಂಡಿದ್ದರು.
ಸಂಸತ್ತಿನ ಬಜೆಟ್ ಅಧಿವೇಶನದ ಮೊದಲ ಹಂತದಲ್ಲಿ ಲೋಕಸಭೆ ಅಂಗೀಕರಿಸಿದ ನಿರ್ಣಯಗಳ ವಿರುದ್ದ ಪ್ರತಿಭಟಿಸುವಾಗ ಅಶಿಸ್ತು ತೋರಿದ್ದಾರೆ ಎಂಬ ಕಾರಣ ನೀಡಿ ಸಂಸದರನ್ನು ಅಮಾನತು ಮಾಡಲಾಗಿತ್ತು.
ಏಪ್ರಿಲ್ 12ರಂದು ಕೊನೆಗೊಳ್ಳುವ ಬಜೆಟ್ ಅಧಿವೇಶನ ಸಂಪೂರ್ಣ ಅವಧಿಗೆ ಸಂಸದರನ್ನು ಅಮಾನತುಗೊಳಿಸಲಾಗಿತ್ತು.


