ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಸಂಬಂಧಿಸಿದ ಇಂಧನ ಕೊರತೆಯ ವದಂತಿಗಳು ಹರಡುತ್ತಿದ್ದಂತೆ ಗುರುವಾರ ಕಾಶ್ಮೀರದಾದ್ಯಂತ ಪೆಟ್ರೋಲ್ ಪಂಪ್ಗಳು ಭಾರಿ ಜನದಟ್ಟಣೆಯಾಯಿತು; ಭೀತಿಯಿಂದ ಜನ ಖರೀದಿಗೆ ಮುಗಿಬಿದ್ದರು. ಇಂಧನ ಸರಬರಾಜು ಸಾಕಷ್ಟು ಲಭ್ಯವಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದರೂ ಸಹ ಜನ ಕೇಳಿಸಿಕೊಂಡಿಲ್ಲ.
ಶ್ರೀನಗರ ಮತ್ತು ಕಣಿವೆ ರಾಜ್ಯದ ಇತರ ಭಾಗಗಳಲ್ಲಿನ ಇಂಧನ ಕೇಂದ್ರಗಳಲ್ಲಿ ದೀರ್ಘ ಸರತಿ ಸಾಲುಗಳು ಕಂಡುಬಂದವು. ಜನರು ವಾಹನಗಳಲ್ಲಿ ಆಗಮಿಸಿ, ಇಂಧನ ಸಂಗ್ರಹಿಸಲು ಡಬ್ಬಿಗಳು ಮತ್ತು ಬಾಟಲಿಗಳನ್ನು ಹೊತ್ತೊಯ್ಯುತ್ತಿದ್ದರು. ಬೇಡಿಕೆಯ ಹೆಚ್ಚಳವು ಭಾರಿ ಸರತಿ ಸಾಲುಗಳಿಗೆ ಕಾರಣವಾಯಿತು, ಅನೇಕ ಜನರು ತಮ್ಮ ಟ್ಯಾಂಕ್ ತುಂಬಿಸಿಕೊಳ್ಳಲು ಗಂಟೆಗಟ್ಟಲೆ ಕಾಯುತ್ತಿದ್ದರು.
ಹಲವಾರು ಇಂಧನ ಕೇಂದ್ರಗಳು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಮುಚ್ಚಬೇಕಾಯಿತು. ಬೇಡಿಕೆಯಲ್ಲಿ ಹಠಾತ್ ಏರಿಕೆಯ ನಡುವೆ ಇಂಧನ ಖಾಲಿಯಾದ ನಂತರ ಬಾಗಿಲು ಹಾಕುವುದು ಅನಿವಾರ್ಯವಾಯಿತು.
“ಅಗಾಧ ದಟ್ಟಣೆಯಿಂದಾಗಿ ನಾನು ಒಂದು ಗಂಟೆಗೂ ಹೆಚ್ಚು ಕಾಲ ಕಾಯಬೇಕಾಯಿತು, ಆದರೆ ಅಂತಿಮವಾಗಿ ನಾನು ಪೆಟ್ರೋಲ್ ಅನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದೆ. ಇಂಧನ ಕೊರತೆ ಮತ್ತು ಇಂಧನ ಬಿಕ್ಕಟ್ಟಿನಿಂದ ಸಂಭಾವ್ಯ ಲಾಕ್ಡೌನ್ ಬಗ್ಗೆ ವ್ಯಾಪಕ ವದಂತಿಗಳು ನಿವಾಸಿಗಳಲ್ಲಿ ಭೀತಿಯನ್ನು ಹೆಚ್ಚಿಸಿವೆ” ಎಂದು ” ಎಂದು ಶ್ರೀನಗರ ನಿವಾಸಿ ಓವೈಸ್ ಅಹ್ಮದ್ ಹೇಳಿದರು.
“ಸಾಮಾಜಿಕ ಮಾಧ್ಯಮವು ಇಂತಹ ವದಂತಿಗಳಿಂದ ತುಂಬಿದೆ, ಇದು ಜನರಲ್ಲಿ ಆತಂಕವನ್ನುಂಟುಮಾಡಿದೆ. ಅಂತಹ ಭೀತಿ ಉಂಟಾದಾಗಲೆಲ್ಲಾ, ಕಾಶ್ಮೀರಿಗಳು ಮೊದಲು ಪೆಟ್ರೋಲ್ ಪಂಪ್ಗಳಿಗೆ ಧಾವಿಸುತ್ತಾರೆ” ಎಂದು ಅವರು ಹೇಳಿದರು.
ಗಂದೇರ್ಬಾಲ್ ಜಿಲ್ಲೆಯ ಪೆಟ್ರೋಲ್ ಪಂಪ್ ಮಾಲೀಕರೊಬ್ಬರು ಈ ಭೀತಿ ಹೆಚ್ಚಾಗಿ ಅನಗತ್ಯವಾಗಿತ್ತು, ಇದರಿಂದಾಗಿ ಹಲವಾರು ಔಟ್ಲೆಟ್ಗಳು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕಾಯಿತು ಎಂದರು.
“ಇಂಧನ ಪೂರೈಕೆಯ ಕೊರತೆಯಿಲ್ಲ. ಆದರೂ ವಿಪರೀತ ಜನದಟ್ಟಣೆಯಿಂದಾಗಿ, ನಾವು ಬೇಗನೆ ಮುಚ್ಚಬೇಕಾಯಿತು. ಕೆಲವು ಪಂಪ್ಗಳು ಮತ್ತು ಇಂಧನ ಏಜೆನ್ಸಿಗಳು ಸಾಕಷ್ಟು ಸ್ಟಾಕ್ ಅನ್ನು ಕಾಯ್ದುಕೊಳ್ಳಲು ಮಾರಾಟವನ್ನು ಸೀಮಿತಗೊಳಿಸುತ್ತಿವೆ” ಎಂದು ಅವರು ಹೇಳಿದರು.
ಅಧಿಕಾರಿಗಳು, ಸಾರ್ವಜನಿಕರು ಶಾಂತವಾಗಿರುವ ಜೊತೆಗೆ ಖರೀದಿಯನ್ನು ತಪ್ಪಿಸಲು ಪದೇ ಪದೇ ಒತ್ತಾಯಿಸಿದ್ದಾರೆ. ಕಣಿವೆಯಾದ್ಯಂತ ಸಾಕಷ್ಟು ಪ್ರಮಾಣದಲ್ಲಿ ಎಲ್ಪಿಜಿ ಮತ್ತು ಪೆಟ್ರೋಲಿಯಂ ಉತ್ಪನ್ನಗಳು ಲಭ್ಯವಿದೆ, ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ನಿಯಮಿತವಾಗಿ ಮರುಪೂರಣ ಮಾಡಲಾಗುತ್ತಿದೆ ಎಂದು ಕಾಶ್ಮೀರ ವಿಭಾಗೀಯ ಆಯುಕ್ತ ಅನ್ಶುಲ್ ಗರ್ಗ್ ಹೇಳಿದರು.
ವದಂತಿಗಳಿಂದ ದಾರಿ ತಪ್ಪದಂತೆ ನಿವಾಸಿಗಳಿಗೆ ಅವರು ಮನವಿ ಮಾಡಿದರು. ತಪ್ಪು ಮಾಹಿತಿ ಹರಡುವ ಅಥವಾ ಭಯಭೀತರಾಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.
ಕಣಿವೆಯಾದ್ಯಂತ ಸ್ಥಳೀಯ ಆಡಳಿತ ಸಹ ಪರಿಸ್ಥಿತಿಯನ್ನು ಪರಿಶೀಲಿಸಿದೆ. ಸುಗಮ ಮತ್ತು ಸಮಾನ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಇಂಧನ ಕೇಂದ್ರಗಳಲ್ಲಿ ಅನಗತ್ಯ ಜನಸಂದಣಿಯನ್ನು ತಪ್ಪಿಸಲು ಜನರಿಗೆ ಕರೆ ನೀಡಿದೆ.


