ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ.
2021ರಲ್ಲಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ.
ಚಿಲ್ಲರೆ ಮಾರುಕಟ್ಟೆಯಲ್ಲಿ 13 ರೂಪಾಯಿಗೆ ಸಿಗುತ್ತಿದ್ದ ಬಟ್ಟೆ ಚೀಲವನ್ನು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಿಂದ (ಕೆಎಚ್ಡಿಸಿ) ಪ್ರತಿ ಚೀಲಕ್ಕೆ 52 ರೂಪಾಯಿ ನೀಡಿ ಖರೀದಿಸಲು ರೋಹಿಣಿ ಸಿಂಧೂರಿ ಅನುಮೋದನೆ ನೀಡಿದ್ದಾರೆ. ಈ ಮೂಲಕ ಸರ್ಕಾರದ ಖಜಾನೆಗೆ ಒಟ್ಟು 5.88 ಕೋಟಿ ರೂಪಾಯಿಗಳ ನಷ್ಟ ಉಂಟುಮಾಡಿದ್ದಾರೆ ಎಂಬ ಆರೋಪವಿದೆ.
ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ, “ಇಲಾಖಾ ವಿಚಾರಣೆಯಲ್ಲಿ ಅಧಿಕಾರಿಯನ್ನು ದೋಷಮುಕ್ತಗೊಳಿಸಿದ ಮಾತ್ರಕ್ಕೆ, ಅದೇ ಸತ್ಯಾಂಶಗಳ ಆಧಾರದ ಮೇಲೆ ಕ್ರಿಮಿನಲ್ ತನಿಖೆಯನ್ನು ಪ್ರಾರಂಭಿಸುವುದನ್ನು ತಡೆಯಲು ಸಾಧ್ಯವಿಲ್ಲ” ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಹೇಳಿದ್ದಾರೆ.
“ದಾಖಲಾದ ದೂರು ಅಸ್ಪಷ್ಟವಾಗಲಿ ಅಥವಾ ಕೇವಲ ಊಹಾಪೋಹದಿಂದ ಕೂಡಿದ್ದಾಗಲಿ ಆಗಿರಲಿಲ್ಲ. ಅದು ಸ್ಪಷ್ಟತೆ ಮತ್ತು ದಾಖಲೆಗಳ ಬೆಂಬಲದೊಂದಿಗೆ, ಮೇಲ್ನೋಟಕ್ಕೆ ಅಧಿಕಾರ ದುರುಪಯೋಗ ಮತ್ತು ರಾಜ್ಯಕ್ಕೆ ಹಣಕಾಸಿನ ನಷ್ಟ ಉಂಟಾಗಿರುವುದನ್ನು ಬಹಿರಂಗಪಡಿಸುವ ಆರೋಪವನ್ನು ಒಳಗೊಂಡಿತ್ತು. ಇಂತಹ ಮಾಹಿತಿಯು ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17ಎ ಅಡಿಯಲ್ಲಿ ತನಿಖೆ ಆರಂಭಿಸಲು ಅನುಮೋದನೆ ನೀಡಲು ಅರ್ಹವಲ್ಲದಿದ್ದರೆ, ಬೇರೆ ಯಾವುದು ಅರ್ಹವಾಗುತ್ತದೆ ಎಂದು ಯೋಚಿಸಲು ಈ ನ್ಯಾಯಾಲಯವು ಬದ್ಧವಾಗಿದೆ. ಸೆಕ್ಷನ್ 17ಎ ಅಡಿಯಲ್ಲಿನ ಶಾಸನಬದ್ಧ ರಕ್ಷಣೆಯು ಭ್ರಷ್ಟಾಚಾರದ ಗಂಭೀರ ಆರೋಪಗಳ ಬಗ್ಗೆ ನಡೆಯುವ ಕಾನೂನುಬದ್ಧ ವಿಚಾರಣೆಯನ್ನು ಹತ್ತಿಕ್ಕಲು ಉದ್ದೇಶಿಸಿಲ್ಲ; ಇದನ್ನು ಕ್ಷುಲ್ಲಕ ಕಿರುಕುಳವನ್ನು ತಡೆಯಲು ವಿನ್ಯಾಸಗೊಳಿಸಲಾಗಿದೆಯೇ ಹೊರತು, ಹೊಣೆಗಾರಿಕೆಯನ್ನು ತಡೆಯಲು ಅಲ್ಲ” ಎಂದು ನ್ಯಾಯಮೂರ್ತಿ ತಿಳಿಸಿದ್ದಾರೆ.
ಅಧಿಕಾರಿಯೊಬ್ಬರು ತನ್ನ ಅಧಿಕೃತ ಕರ್ತವ್ಯ ನಿರ್ವಹಣೆಯ ಸಂದರ್ಭದಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ಸಂಬಂಧಿಸಿದ ಆರೋಪಗಳಿದ್ದಾಗ, ಎಫ್ಐಆರ್ ದಾಖಲಿಸಲು ಭ್ರಷ್ಟಾಚಾರ ತಡೆ ಕಾಯ್ದೆ, 1988ರ ಸೆಕ್ಷನ್ 17ಎ ಅಡಿಯಲ್ಲಿ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.
ಮೈಸೂರಿನ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಸಲ್ಲಿಸಿದ್ದ ದೂರಿನಲ್ಲಿ, ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಎನ್. ಆರ್ ರವಿಚಂದ್ರೇಗೌಡ ಅವರು, ಬಟ್ಟೆ ಚೀಲಗಳನ್ನು ಕೆಎಚ್ಡಿಸಿಯಿಂದ ತಲಾ 52 ರೂಪಾಯಿಗೆ ಖರೀದಿಸಲಾಗಿತ್ತು. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಅವು ಕೇವಲ 13 ರೂಪಾಯಿಗೆ ಮಾರಾಟವಾಗುತ್ತಿದ್ದವು ಎಂದು ತಿಳಿಸಿದ್ದರು. ಇದರ ಪರಿಣಾಮವಾಗಿ ಸರ್ಕಾರಿ ಖಜಾನೆಗೆ 5.88 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಅವರು ಆರೋಪಿಸಿದ್ದರು.
ಮುಂದುವರಿದು, ಗ್ರಾಮ ಪಂಚಾಯತಿಗಳಲ್ಲಿ ಬಡವರಿಗಾಗಿ ಮೀಸಲಿಟ್ಟಿದ್ದ ಕ್ಷೇಮಾಭಿವೃದ್ಧಿ ಯೋಜನೆಗಳ ಹಣವನ್ನು ಈ ಚೀಲಗಳ ಖರೀದಿಗೆ ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂದು ಅವರು ಹೇಳಿದ್ದರು.
ಈ ಕುರಿತು ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಎಸಿಬಿಗೆ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17ಎ ಅಡಿಯಲ್ಲಿ ಸರ್ಕಾರದ ಅನುಮತಿಯನ್ನು ಕೋರಲಾಗಿತ್ತು. ಆದರೆ, 2022ರ ಸೆಪ್ಟೆಂಬರ್ 19ರಂದು ಸರ್ಕಾರ ಈ ಮನವಿಯನ್ನು ತಿರಸ್ಕರಿಸಿತ್ತು. ದೂರುದಾರರು ಇದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಪೀಠ, 2025ರ ಫೆಬ್ರವರಿಯಲ್ಲಿ ಈ ವಿಷಯವನ್ನು ಮರುಪರಿಶೀಲಿಸುವಂತೆ ಮತ್ತು ಕಾನೂನಿನ ಪ್ರಕಾರ ಹೊಸದಾಗಿ ಆದೇಶ ಹೊರಡಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಹಾಗಿದ್ದರೂ, ಸರ್ಕಾರವು 2025ರ ಮೇ 26ರಂದು ಮತ್ತೆ ಅನುಮತಿಯನ್ನು ನಿರಾಕರಿಸಿತ್ತು. ವಿಶೇಷವೆಂದರೆ, ಅಧಿಕಾರಿಯನ್ನು ಇಲಾಖಾ ವಿಚಾರಣೆಯಲ್ಲಿ ದೋಷಮುಕ್ತಗೊಳಿಸಲಾಗಿದೆ ಎಂಬ ಅಂಶವನ್ನು ಹೊರತುಪಡಿಸಿ, ಈ ಹೊಸ ಆದೇಶವು ಹಳೆಯ ಆದೇಶದಂತೆಯೇ ಅಕ್ಷರಶಃ ಇತ್ತು. ಇದನ್ನು ಗಮನಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರು, ಮೇಲ್ನೋಟಕ್ಕೆ ಭ್ರಷ್ಟಾಚಾರದ ಅಂಶಗಳನ್ನು ಹೊಂದಿರುವ ದೂರಿನ ಮೇಲೆ ತನಿಖೆಗೆ ಅನುಮತಿ ಕೋರಲಾಗಿದೆ ಎಂದು ಉಲ್ಲೇಖಿಸಿದ್ದರು.
“ಪ್ರಸ್ತುತ ವ್ಯಾಜ್ಯದಲ್ಲಿ ಪರಿಗಣನೆಗೆ ಬಂದಿರುವ ವಿವಾದವು ಸಾರ್ವಜನಿಕ ಪ್ರಾಮಾಣಿಕತೆಯ ಬುಡಕ್ಕೇ ಕೈಹಾಕುವಂತದ್ದಾಗಿದೆ. ಇದು ಭ್ರಷ್ಟಾಚಾರದ ಆರೋಪಗಳು ಮತ್ತು ಅದರ ಪರಿಣಾಮವಾಗಿ ಸರ್ಕಾರಿ ಖಜಾನೆಗೆ ಉಂಟಾದ ನಷ್ಟಕ್ಕೆ ಸಂಬಂಧಿಸಿದ್ದಾಗಿದೆ. ಇಲ್ಲಿ ಬಿಂಬಿತವಾಗಿರುವುದು ಕೇವಲ ಆಡಳಿತಾತ್ಮಕ ಲೋಪವಲ್ಲ, ಬದಲಿಗೆ ಸಾರ್ವಜನಿಕ ನಿಧಿಗೆ ಗಂಭೀರ ಆರ್ಥಿಕ ಹಾನಿ ಉಂಟುಮಾಡಿದ ನಿರ್ಧಾರವಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಕೇವಲ 13 ರೂಪಾಯಿಗೆ ಲಭ್ಯವಿರುವ ಬಟ್ಟೆ ಚೀಲವನ್ನು, ಜಿಲ್ಲಾಧಿಕಾರಿಯ ನಿರ್ಧಾರದಂತೆ ತಲಾ 52 ರೂಪಾಯಿಯಂತೆ ಹೆಚ್ಚಿನ ದರದಲ್ಲಿ ಖರೀದಿಸಲು ಪ್ರಯತ್ನಿಸಲಾಗಿದೆ” ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರು ಅಭಿಪ್ರಾಯಪಟ್ಟಿದ್ದಾರೆ.
“ಇಲಾಖಾ ವಿಚಾರಣೆಗಳು ಮತ್ತು ಕ್ರಿಮಿನಲ್ ಮೊಕದ್ದಮೆಗಳು ವಿಭಿನ್ನ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತವೆ ಹಾಗೂ ಅವುಗಳು ಸಾಕ್ಷ್ಯಾಧಾರಗಳ ವಿಭಿನ್ನ ಮಾನದಂಡಗಳು ಮತ್ತು ಉದ್ದೇಶಗಳಿಂದ ನಿಯಂತ್ರಿಸಲ್ಪಡುತ್ತವೆ ಎಂದು ನ್ಯಾಯಾಲಯ ತಿಳಿಸಿದೆ. ಅಲ್ಲದೆ, ಈ ವಿಷಯವನ್ನು ಮತ್ತೊಮ್ಮೆ ಮರುಪರಿಶೀಲನೆಗೆ ಕಳುಹಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಮತ್ತು ಇದು ನ್ಯಾಯದ ಹಿತದೃಷ್ಟಿಯಿಂದ ಪ್ರಕ್ರಿಯೆಯನ್ನು ಮತ್ತಷ್ಟು ವಿಳಂಬಗೊಳಿಸುತ್ತದೆ” ಎಂದಿದೆ.
ವರದಿಗಳ ಸಾಮಾನ್ಯವಾಗಿ, ಹೊಸದಾಗಿ ಪರಿಶೀಲಿಸಲು ಈ ವಿಷಯವನ್ನು ಸರ್ಕಾರಕ್ಕೆ ಮರಳಿ ಕಳುಹಿಸುವುದು ಸೂಕ್ತವೆಂದು ನ್ಯಾಯಾಲಯ ಭಾವಿಸುತ್ತಿತ್ತು. ಆದರೆ, ಈ ಪ್ರಕರಣದ ವಿಶೇಷ ಸನ್ನಿವೇಶಗಳಲ್ಲಿ ಅಂತಹ ಕ್ರಮವು ಅನಗತ್ಯ ಮತ್ತು ಅಸಮರ್ಥನೀಯವಾಗಿದೆ” ಎಂದು ತಿಳಿಸಿದೆ.


