ಹಿರಿಯ ಜಾನಪದ ಕಲಾವಿದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಚಂದ್ರಮ್ಮ ಸೇರಿದಂತೆ ಐದು ಜನ ಹಿರಿಯ ಸಾಧಕರು 2026ನೇ ಸಾಲಿನ ಬಾಬು ಜಗಜೀವನ್ ರಾಮ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ರಾಯಚೂರು ಜಿಲ್ಲೆಯ ಹಿರಿಯ ದಲಿತ ಹೋರಾಟಗಾರ ಹಾಗೂ ಜಾನಪದ ಕಲಾವಿದರಾದ ಡಿಂಗ್ರಿ ನರಸಪ್ಪ, ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತೆ ಚಂದ್ರಮ್ಮ, ಹಿರಿಯ ಪತ್ರಕರ್ತರಾದ ಬೆಳಗಾವಿಯ ಸರಜೂ ಕಾಟ್ಕರ್, ಮೈಸೂರು ನಗರದ ಮಾಜಿ ಮೇಯರ್ ನಾರಾಯಣ, ತುಮಕೂರಿನ ನಗರಸಭೆ ಮಾಜಿ ಸದಸ್ಯ ನರಸೀಯಪ್ಪ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ರಚಿಸಿದ್ದ ಉನ್ನತಮಟ್ಟದ ಆಯ್ಕೆ ಸಮಿತಿಯು ಶಿಫಾರಸು ಮಾಡಿದ್ದ ಅರ್ಹರ ಪಟ್ಟಿಯನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದೆ.
ಪ್ರಶಸ್ತಿಯು ತಲಾ ₹5 ಲಕ್ಷ ನಗದು, 20 ಗ್ರಾಂ ಚಿನ್ನದ ಪದಕ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಮಾಜಿ ಉಪಪ್ರಧಾನಿ ದಿವಂಗತ ಬಾಬು ಜಗಜೀವನ್ ರಾಮ್ ಅವರ ಜನ್ಮದಿನವಾದ ಏ.5ರಂದು ಬೆಂಗಳೂರಿನ ವಿಧಾನಸೌಧ ಪೂರ್ವ ದ್ವಾರದ ಮೆಟ್ಟಿಲುಗಳ ಮೇಲೆ ನಡೆಯುವ ಕಾರ್ಯಕ್ರಮದಲ್ಲಿ ಐವರು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಅಯುಕ್ತ ರಾಕೇಶ್ಕುಮಾರ್ ಮಾಹಿತಿ ನೀಡಿದ್ದಾರೆ.
ಪ್ರಶಸ್ತಿ ಪುರಸ್ಕೃತರ ಕುರಿತು:
ಬೆಂಗಳೂರಿನ ಚಂದ್ರಮ್ಮ ಅವರು ಸಾವಿತ್ರಿಭಾ ಫುಲೆ ಸಂಘದ ಅಧ್ಯಕ್ಷರಾಗಿದ್ದು, ನಗರದ ಹಕ್ಕಿ ಪಿಕ್ಕಿ ಜನಾಂಗದ ಕೊಳೆಗೇರಿಗಳಲ್ಲಿ ವಾಸಿಸುವ ದಲಿತ ಮಹಿಳೆಯರಿಗೆ ಭೂಮಿ ಹಾಗೂ ವಸತಿ ಗಾಗಿ ಹೋರಾಡುತ್ತಿದ್ದಾರೆ. ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವುದು ಸೇರಿದಂತೆ ವಿದ್ಯಾರ್ಥಿವೇತನ ನೀಡುವುದರ ಮುಖಾಂತರ ದಲಿತ ಕುಟುಂಬಗಳಿಗೆ ಸೇವೆ ಮಾಡುತ್ತಾ ಬಂದಿರುತ್ತಾರೆ.
ತಮ್ಮ 18ನೇ ವಯಸ್ಸಿನಲ್ಲೇ ದಲಿತ ಚಳವಳಿಗೆ ದುಮುಕಿದ ಡಿಂಗ್ರಿ ನರಸಪ್ಪ, ತಮಟೆ ವಾದ್ಯದಲ್ಲಿ ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿದ್ದಾರೆ. ಅವರು ಶ್ರುತಿ ಸಂಸ್ಕೃತಿ ಸಂಸ್ಥೆ ಕಟ್ಟಿ ಕಿಶೋರಿಯರಿಗೆ ತಮಟೆ, ಹಾಡುಗಾರಿಕೆ ಹಾಗೂ ಬೀದಿನಾಟಕ ಕಲಿಕಾ ತರಬೇತಿ ಕಾರ್ಯಗಾರಗಳನ್ನು ನಡೆಸಿದ್ದಾರೆ. ನಲವತ್ತು ವರ್ಷಗಳಿಂದ ತಮಟೆ, ಹಾಡುಗಾರಿಕೆ ಹಾಗೂ ಬೀದಿನಾಟಕಗಳಲ್ಲಿ ತೊಡಗಿಸಿಕೊಂಡಿರುವ ಅವರ ಸೇವೆ ಅನನ್ಯವಾದುದು.
ಡಾ.ಸರಜೂ ಕಾಟ್ಕರ್ ಅವರು ದಲಿತ ಬಂಡಾಯ ಸಾಹಿತ್ಯ ಸಂಘಟನೆ ಹಾಗೂ ಚಳವಳಿಗಳಲ್ಲಿ ತೊಡಗಿಸಿಕೊಂಡು ಸಾಮಾಜಿಕ ನ್ಯಾಯಕ್ಕಾಗಿ ದುಡಿದವರು. ಪತ್ರಕರ್ತರಾಗಿ ಅಂಬೇಡ್ಕರ್ ಚಿಂತನೆಗಳನ್ನು ಪ್ರಸಾರ ಮಾಡಿ, ವಿದ್ಯಾರ್ಥಿ ದೆಸೆಯಿಂದಲೇ ಶೋಷಿತರ ಪರಧ್ವನಿ ಎತ್ತಿದವರು.
ನಾರಾಯಣ ಅವರು ಪೌರಕಾರ್ಮಿಕ ಸಮುದಾಯದವರು. ಆ ಸಮುದಾಯವು ಅನುಭವಿಸುತ್ತಿದ್ದ ಕಷ್ಟ ಕಾರ್ಪಣ್ಯಗಳನ್ನು ಬಾಲ್ಯದಿಂದಲೂ ಕಣ್ಣಾರೆ ಕಂಡವರು. ಸ್ವತಃ ಅವರೇ ಆ ಸಮುದಾಯದ ನೋವುಗಳನ್ನು ಅನುಭವಿಸಿದ್ದರು. ಪೌರಕಾರ್ಮಿಕನಾಗಿ ವೃತ್ತಿಜೀವನವನ್ನು ಆರಂಭಿಸಿ ವಸತಿರಹಿತರಿಗೆ ಸೂರು ಕಲ್ಪಿಸಿ ಹಾಗೂ ದೌರ್ಜನ್ಯ ಮತ್ತು ದಬ್ಬಾಳಿಕೆಯ ವಿರುದ್ಧ ನ್ಯಾಯಾಯುತ ಹಕ್ಕುಗಳಿಗಾಗಿ ಹಲವಾರು ಯಶಸ್ವಿಯ ಹೋರಾಟಗಳನ್ನು ಮಾಡುತ್ತಾ ಸಮಾಜದ ಮುಖ್ಯವಾಹಿನಿಗೆ ತಂದು ಕೊಳೆಗೇರಿ ನಿವಾಸಿಗಳ ಬದುಕಿಗೆ ಹೊಸಬೆಳಕನ್ನು ನೀಡಿದರು. ಮೈಸೂರು ಮಹಾನಗರ ಪಾಲಿಕೆಯ ಸದಸ್ಯರು, ಮೇಯರ್ ಆಗಿ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡವರು.
ನರಸೀಯಪ್ಪ ಅವರು ಬಡತನ ಮತ್ತು ಅಸ್ಪೃಶ್ಯತೆ ಕಾರಣದಿಂದಾಗಿ ವಿದ್ಯಾಭ್ಯಾಸವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ಮೂಟೆ ಹೊರುವ ಹಮಾಲಿಯಾಗಿ ದುಡಿಯಲು ಆರಂಭಿಸಿದರು. ಅನುಭವಿಸಿದ ಅವಮಾನ, ಸಂಕಟ ಮತ್ತು ನೋವುಗಳನ್ನು ಸಾಧನಗಳನ್ನಾಗಿ ಮಾಡಿಕೊಂಡು ನಾಯಕತ್ವದ ಗುಣಗಳನ್ನು ಯುವಕನಿದ್ದಾಗಲೇ ರೂಪಿಸಿಕೊಂಡು ಹಮಾಲಿಗಳ ಬದುಕನ್ನು ಹಸನುಗೊಳಿಸಲು ಹಮಾಲಿಗಳ ಸಂಘ ಸ್ಥಾಪಿಸಿ ಹೋರಾಟದ ಮತ್ತು ಸಾರ್ವಜನಿಕ ಬದುಕಿಗೆ ಕಾಲಿಟ್ಟವರು. ಕರ್ನಾಟಕದ ಸಾಮಾಜಿಕ ಚಳವಳಿಯಿಂದ ದಲಿತ ಸಂಘರ್ಷ ಸಮಿತಿ ಹುಟ್ಟು ಮತ್ತು ಬೆಳವಣಿಗೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆ.


