ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ.
ಭೂಸ್ವಾಧೀನದ ವಿರುದ್ಧ ತಿರುಗಿಬಿದ್ದ ಬಿಡದಿ ರೈತರು ಕಳೆದ ಒಂದು ವರ್ಷದಿಂದ ನಿರಂತರ ಧರಣಿ ನಡೆಸುತ್ತಿದ್ದಾರೆ. ಬಿಎಂಆರ್ಡಿಎ (ಅಥವಾ ಜಿಬಿಎ) ಟೌನ್ಶಿಪ್ಗಾಗಿ ಬೈರಮಂಗಲ, ಕೆಂಚಗಾರನಹಳ್ಳಿ ಗ್ರಾಮ ಪಂಚಾಯಿತಿಗಳ 26 ಹಳ್ಳಿಗಳ ಸುಮಾರು 9600 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಸ್ಥಳೀಯ ರೈತರು ಗಟ್ಟಿ ಧ್ವನಿಯಲ್ಲಿ ವಿರೋಧಿಸುತ್ತಿದ್ದಾರೆ. ವಾಸ್ತವವಾಗಿ ಇಲ್ಲಿನ ಬಹುಪಾಲು ಕುಟುಂಬಗಳು ರೈತಾಪಿ ಕುಟುಂಬಗಳಾಗಿದ್ದು, ವೃಷಭಾವತಿ ಜಲಾಶಯಕ್ಕೆ (ರಿಸರ್ವಾಯರ್) ಹೊಂದಿಕೊಂಡಂತಿರುವ ಈ ಭೂಮಿಗಳಲ್ಲಿ ತೋಟಗಾರಿಕೆ ಬೆಳೆಗಳಾದ ತೆಂಗು, ಅಡಿಕೆ, ಮಾವು ಸೇರಿದಂತೆ ರೇಷ್ಮೆಯಂತಹ ವಾಣಿಜ್ಯ ಬೆಳೆಗಳು, ಹಲವು ಬಗೆಯ ಸೊಪ್ಪು, ಹಣ್ಣು, ತರಕಾರಿಗಳು ಹೇರಳವಾಗಿ ಬೆಳೆಯುವ ಪ್ರದೇಶವಾಗಿದೆ. ಹಾಲು ಇಲ್ಲಿನ ಮತ್ತೊಂದು ಬಹುಮುಖ್ಯ ಕೃಷಿ ಉತ್ಪಾದನೆಯಾಗಿದೆ.
ಕಳೆದ 20 ವರ್ಷಗಳಿಂದಲೂ ಸುದ್ದಿಯಲ್ಲಿರುವ ಈ ಟೌನ್ಶಿಪ್ ಯೋಜನೆಯು ಎಲ್ಲಾ ಪಕ್ಷಗಳ ಸರ್ಕಾರಗಳ ಅವಧಿಯನ್ನೂ ದಾಟಿ ಬಂದಿದ್ದು, ಇದೇ ಕಾರಣಕ್ಕೆ ಪರಸ್ಪರ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾಗಿದೆ.
ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರು ಭೂಸ್ವಾಧೀನಕ್ಕೆ ನೋಟಿಫಿಕೇಶನ್ ಮಾಡಿದ್ದು, ಆ ಭೂಮಿಯನ್ನು ಕೆಂಪು ವಲಯವಾಗಿ ಮೀಸಲಿರಿಸಿ ಯಾವುದೇ ರೀತಿಯ ಅಭಿವೃದ್ಧಿಯಾಗದಂತೆ ತಡೆ ಹಿಡಿದಿದ್ದರು. ಆದರೆ, ಇಂದು “ನಾವು ರೈತರ ಪರ, ಭೂಮಿ ಉಳಿಸುತ್ತೇವೆ” ಎಂದು ಸರಣಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದಾರೆ. ಇದನ್ನೇ ದಾಳವಾಗಿ ಬಳಸಿಕೊಳ್ಳುತ್ತಿರುವ ಪ್ರಭಾವಿ ರಾಜಕಾರಣಿ, ಜಿಬಿಎ ನೇತೃತ್ವ ವಹಿಸಿರುವ ಡಿಕೆಶಿ, “ಟೌನ್ಶಿಪ್ ಮಾಡಿಯೇ ಸಿದ್ದ” ಎಂದು ಮುನ್ನುಗ್ಗುತ್ತಿದ್ದಾರೆ.
ಎರಡೂ ಪಕ್ಷಗಳು ಪ್ರತಿದಿನ ಒಂದಿಲ್ಲೊಂದು ದಾಳ ಉರುಳಿಸುತ್ತಿವೆ. ಡಿಕೆಶಿ ಕೆಲವು ರೈತರನ್ನು ಕರೆದು “ಭೂಮಿ ನೀಡಲು ಸಿದ್ಧ” ಎಂದು ಹೇಳಿಕೆ ಕೊಡಿಸಿ, “80% ರೈತರು ಭೂಸ್ವಾಧೀನಕ್ಕೆ ಒಪ್ಪಿದ್ದಾರೆ” ಎಂದು ಪತ್ರಿಕಾಗೋಷ್ಠಿ ನಡೆಸಿದರೆ, ಜೆಡಿಎಸ್ ನಾಯಕರು ಗ್ರಾಮಗಳಿಗೆ ಭೇಟಿ ನೀಡಿ ಜನಾಭಿಪ್ರಾಯ ಸಂಗ್ರಹಣೆ ನಡೆಸುವ ನೆಪದಲ್ಲಿ ರೋಡ್ ಶೋ ನಡೆಸಿ, “ರೈತರು ಭೂಸ್ವಾಧೀನದ ವಿರುದ್ಧವಿದ್ದಾರೆ, ನಾವು ಅವರ ಜೊತೆಗಿದ್ದೇವೆ” ಎಂದಿದ್ದಾರೆ. ರೈತರು ಮಾತ್ರ, “ಡಿಕೆಶಿ ಸುಳ್ಳು ಹೇಳುತ್ತಿದ್ದಾರೆ, ಅವರ ಮಾತು ನಿಜವಾಗಿದ್ದರೆ ಭೂಮಿ ನೀಡಲು ಒಪ್ಪಿರುವ 80% ರೈತರ ಪಟ್ಟಿಯನ್ನು ಬಿಡುಗಡೆ ಮಾಡಲಿ” ಎಂದು ಸವಾಲು ಹಾಕಿದ್ದಾರೆ.ದಿಯ ಈ ಟೌನ್ಶಿಪ್ ಯೋಜನೆ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದ್ದರೆ, ಈ ರಾಜಕಾರಣಿಗಳ ಪ್ರತಿಷ್ಠೆಯ ಬರಾಟೆಯ ಮಧ್ಯೆ ನಲುಗುತ್ತಿರುವುದು ಮಾತ್ರ ಸಾಮಾನ್ಯ ರೈತರು.
ಇಲ್ಲಿರುವುದು ಸಣ್ಣ ಮತ್ತು ಅತಿ ಸಣ್ಣ ರೈತರಾದರೂ, ಮೊದಲಿನಿಂದಲೂ ನೀರಾವರಿ ಪ್ರದೇಶವಾಗಿರುವುದರಿಂದ ಮತ್ತು ಬೆಂಗಳೂರಿಗೆ ಹೊಂದಿಕೊಂಡಂತಿರುವುದರಿಂದ, ಈ ಭಾಗದ ಬಹುಪಾಲು ಕುಟುಂಬಗಳು ಆರ್ಥಿಕವಾಗಿ ಸದೃಢವಾಗಿವೆ.
ಇವೆಲ್ಲವುಗಳ ಮಧ್ಯೆ ರೈತರು ಯಾವುದೇ ಕಾರಣಕ್ಕೂ ಭೂಮಿಯನ್ನು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಬಿಡದಿ ರೈತರಿಗೆ ರಾಜ್ಯದಾದ್ಯಂತ ಬೆಂಬಲ ವ್ಯಕ್ತವಾಗುತ್ತಿದ್ದು, ಕರ್ನಾಟಕ ಪ್ರಾಂತ್ಯ ರೈತಸಂಘ, ಕರ್ನಾಟಕ ರಾಜ್ಯ ರೈತಸಂಘ, ಕಾರ್ಮಿಕ ಸಂಘಟನೆಗಳು ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳು, ರಾಜಕೀಯ ಪಕ್ಷಗಳು ಸೇರಿದಂತೆ ಹೋರಾಟಗಾರರು, ಬರಹಗಾರರು, ಪ್ರಗತಿಪರರು ರೈತರ ಈ ಹೋರಾಟಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ. ಪ್ರತಿದಿನ ಹೋರಾಟದ ಕಾವು ಹೆಚ್ಚುತ್ತಿದ್ದು ಇದು ನೇರವಾಗಿ ಡಿಕೆಶಿ ವಿರುದ್ಧ ತಿರುಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.

ರಮೇಶ್ ಚೀಮಾಚನಹಳ್ಳಿ
ದೇವನಹಳ್ಳಿ ಭೂ ಸ್ವಾದೀನ ವಿರೋಧಿ ಹೋರಾಟದ ಮುಂಚೂಣಿ ನಾಯಕರು ಹಾಗೂ ಸಾಮಾಜಿಕ ಕಾರ್ಯಕರ್ತರು


