Homeಮುಖಪುಟ'ಕೂಡಿ ಹಾಕಿ ಥಳಿಸುತ್ತಿದ್ದರು, ತಪ್ಪಿಸಿಕೊಳ್ಳದಂತೆ ನಾಯಿ ಬಿಟ್ಟಿದ್ದರು': ಭೀಕರ ಶೋಷಣೆಯಿಂದ 12 ಜೀತ ಕಾರ್ಮಿಕರ ರಕ್ಷಣೆ

‘ಕೂಡಿ ಹಾಕಿ ಥಳಿಸುತ್ತಿದ್ದರು, ತಪ್ಪಿಸಿಕೊಳ್ಳದಂತೆ ನಾಯಿ ಬಿಟ್ಟಿದ್ದರು’: ಭೀಕರ ಶೋಷಣೆಯಿಂದ 12 ಜೀತ ಕಾರ್ಮಿಕರ ರಕ್ಷಣೆ

- Advertisement -
- Advertisement -

ಮೂರು ತಿಂಗಳ ಕಾಲ 68 ವರ್ಷದ ಮೆಹರ್ಬಾನ್ ಶಾ ಅನಿಶ್ಚಿತತೆಯಲ್ಲಿ ಜೀವನ ನಡೆಸುತ್ತಿದ್ದರು. ದುಡಿಯಲು ಹೋಗಿದ್ದ ಅವರ ಕಿರಿಯ ಮಗ ದಿಲ್ಶಾದ್ ಮೊಹಮ್ಮದ್ ಜೀವಂತವಾಗಿದ್ದಾನಾ?, ಇಲ್ಲಾ ಮರಣ ಹೊಂದಿದ್ದಾನಾ? ಎಂಬುವುದು ಅವರಿಗೆ ಗೊತ್ತಿರಲಿಲ್ಲ.

24 ವರ್ಷದ ಯುವಕ ದಿಲ್ಶಾದ್ ಮೊಹಮ್ಮದ್ ದುಡಿದು ತನ್ನ ಕುಟುಂಬವನ್ನು ಸಲಹುವ ಸಲುವಾಗಿ ಕಳೆದ ಐದು ತಿಂಗಳ ಹಿಂದೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ ತನ್ನ ಮನೆ ತೊರೆದಿದ್ದ. ಮೊದಲ ಕೆಲ ವಾರಗಳ ಕಾಲ ಆತ ತನ್ನ ಪತ್ನಿ ಗುಲಿಸ್ತಾ ಬೇಗಮ್‌ಗೆ ನಿರಂತರ ಕರೆ ಮಾಡಿ ಮಾತನಾಡುತ್ತಿದ್ದ. ಆದರೆ, ಒಂದು ದಿನ ಆತನ ಕರೆ ಹಠಾತ್ ನಿಂತು ಹೋಗಿತ್ತು. ಆ ಬಳಿಕ ದಿಲ್ಶಾದ್ ಎಲ್ಲಿಗೆ ಹೋದ ಎಂಬುವುದು ಗೊತ್ತಾಗಿರಲಿಲ್ಲ.

ಕುಟುಂಬಸ್ಥರು ದಿಲ್ಶಾದ್‌ಗಾಗಿ ಎಲ್ಲೆಡೆ ಹುಡುಕಾಡಿದ್ದರು. ಆತನನ್ನು ಸಂಪರ್ಕಿಸುವ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದರು. ಆದರೆ, ಅದು ಯಾವುದೂ ಸಫಲವಾಗದಿದ್ದಾಗ ದೇವರ ಮೇಲೆ ಭಾರ ಹಾಕಿ ಸುಮ್ಮನಾಗಿದ್ದರು. ದಿಲ್ಶಾದ್‌ನ ಪತ್ನಿ ಕೂಡ ತನ್ನ ಗಂಡನಿಗಾಗಿ ಕಾದು ಕಾದು ಕೊನೆಗೆ ಭರವಸೆ ಕಳೆದುಕೊಂಡಿದ್ದಳು. ಆತನಿಗೆ ಏನಾದರು ಆಗಿರಬಹುದು ಎಂದು, ತನ್ನ ಪುಟ್ಟ ಮಗನ ಜೊತೆ ತವರು ಮನೆ ಸೇರಿದ್ದಳು.

ಈ ನಡುವೆ ಕಳೆದ ಗುರುವಾರ ಮೆಹರ್ಬಾನ್ ಶಾ ಅವರ ಪೋನ್ ರಿಂಗಣಿಸಿದೆ. ಕರೆ ಸ್ವೀಕರಿಸಿದಾಗ ಆ ಕಡೆಯಿಂದ ತನ್ನ ಪ್ರೀತಿಯ ಮಗ ದಿಲ್ಶಾದ್ ಮಾತನಾಡುವುದು ಕೇಳಿಸಿದೆ.

ಹೌದು, ಕುಟುಂಬಸ್ಥರು ಭರವಸೆ ಕಳೆದುಕೊಂಡಿದ್ದ ದಿಲ್ಶಾದ್ ಬದುಕಿದ್ದಾನೆ..

ಮುಝಫ್ಫರ್‌ನಗರದ ತಿತಾವಿ ಪ್ರದೇಶದಲ್ಲಿ ಹಾಳೆ, ಎಲೆಯ ತಟ್ಟೆ ತಯಾರಿಸುವ ಕಾರ್ಖಾನೆಯೊಂದರಿಂದ ದಿಲ್ಶಾದ್ ಮತ್ತು ಇತರ 11 ಜನರನ್ನು ಸೋಮವಾರ ಪೊಲೀಸರು ರಕ್ಷಿಸಿದ್ದಾರೆ. ಇವರನ್ನು ಅಲ್ಲಿ ಜೀತದಾಳುಗಳಾಗಿ ಇರಿಸಲಾಗಿತ್ತು ಎಂದು ಆರೋಪಿಸಲಾಗಿದೆ.

ಕಾರ್ಖಾನೆಯಲ್ಲಿ ಕಾರ್ಮಿಕರನ್ನು ತಿಂಗಳುಗಟ್ಟಲೆ ಕೂಡಿಡಲಾಗಿತ್ತು, ದಿನಕ್ಕೆ 20 ಗಂಟೆಗಳವರೆಗೆ ಬಲವಂತವಾಗಿ ಕೆಲಸ ಮಾಡಿಸಲಾಗುತ್ತಿತ್ತು ಮತ್ತು ನಿರಂತರವಾಗಿ ದೈಹಿಕ ದೌರ್ಜನ್ಯಕ್ಕೆ ಒಳಪಡಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

“ನನ್ನ ಮಗನ ಧ್ವನಿ ಕೇಳಿದಾಗ ನನಗೆ ಎಷ್ಟೊಂದು ಭಾವುಕತೆಯಾಯಿತು ಎಂದರೆ ಕೆಲವು ಕ್ಷಣಗಳ ಕಾಲ ನನಗೆ ಮಾತನಾಡಲು ಸಾಧ್ಯವಾಗಲಿಲ್ಲ” ಎಂದು ಮೆಹರ್ಬಾನ್ ನೆನಪಿಸಿಕೊಂಡಿದ್ದಾರೆ. “ನಾನು ಅವನಲ್ಲಿ ಕೇಳಿದ ಮೊದಲ ಪ್ರಶ್ನೆ ಅವನು ಎಲ್ಲಿದ್ದಾನೆ ಎಂಬುವುದಾಗಿತ್ತು. ಅವನು ಮುಝಫ್ಫರ್ ನಗರ ಎಂದಾಗ, ನಾನು ತಕ್ಷಣ ಅವನಿಗೆ ಮನೆಗೆ ಬರುವಂತೆ ಹೇಳಿದೆ” ಎಂದು ಮೆಹರ್ಬಾನ್ ಶಾ ವಿವರಿಸಿದ್ದಾರೆ.

ಮನೆಯವರಿಂದ ಸಂಪರ್ಕ ಕಳೆದುಕೊಂಡ ಮೂರು ತಿಂಗಳ ಕಾಲ ದಿಲ್ಶಾದ್‌ ಕಾರ್ಖಾನೆಯಲ್ಲಿ ನರಕಯಾತನೆ ಅನುಭವಿಸಿದ್ದ ಎಂದು ವರದಿಗಳು ಹೇಳಿವೆ.

ದಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ಜೊತೆ ಮಾತನಾಡಿರುವ ದಿಲ್ಶಾದ್‌, “ನಾವು ಕಾರ್ಖಾನೆ ಆವರಣದಿಂದ ಹೊರಗೆ ಹೋಗಲು ಅವಕಾಶ ಇರಲಿಲ್ಲ. ಯಾರಾದರೂ ಮನೆಗೆ ಹೋಗಲು ಕೇಳಿದರೆ, ಅಲ್ಲಿನ ಪರಿಸ್ಥಿತಿಗಳನ್ನು ಪ್ರಶ್ನಿಸಿದರೆ ಅಥವಾ ಮೂರು-ನಾಲ್ಕು ಗಂಟೆಗಳಿಗಿಂತ ಹೆಚ್ಚು ಕಾಲ ನಿದ್ರಿಸಿದರೆ, ಅವರನ್ನು ಥಳಿಸಲಾಗುತ್ತಿತ್ತು ಮತ್ತು ಹಿಂಸಿಸಲಾಗುತ್ತಿತ್ತು. ಅವರು ನನ್ನ ಮೊಬೈಲ್ ಫೋನ್ ಕಿತ್ತುಕೊಂಡಿದ್ದರು. ಹಾಗಾಗಿ, ನಾವು ಅನುಭವಿಸುತ್ತಿದ್ದ ಕಷ್ಟಗಳ ಬಗ್ಗೆ ನನ್ನ ಕುಟುಂಬಕ್ಕಾಗಲಿ ಅಥವಾ ಹೊರಗಿನ ಯಾರಿಗಾದರೂ ತಿಳಿಸಲು ನನಗ ಯಾವುದೇ ದಾರಿಯೇ ಇರಲಿಲ್ಲ” ಎಂದು ಹೇಳಿಕೊಂಡಿದ್ದಾರೆ.

ವರದಿಗಳ ಪ್ರಕಾರ, ಕಾರ್ಖಾನೆಯಿಂದ ತಪ್ಪಿಸಿಕೊಂಡು ಬಂದಿದ್ದ ವ್ಯಕ್ತಿಯೊಬ್ಬರಿಂದ ಮಾಹಿತಿ ಪಡೆದ ಪೊಲೀಸರು, ಜಿಲ್ಲಾಡಳಿತ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳು, ಸೋಮವಾರ ಮಂಡಿ ಗ್ರಾಮದಲ್ಲಿದ್ದ ಕಾರ್ಖಾನೆ ಮೇಲೆ ಜಂಟಿ ದಾಳಿ ನಡೆಸಿ ಜೀತದಾಳುಗಳಾಗಿದ್ದ ಕಾರ್ಮಿಕರನ್ನು ರಕ್ಷಿಸಿದೆ.

ಬಿಹಾರ, ಉತ್ತರ ಪ್ರದೇಶ, ಉತ್ತರಾಖಂಡ, ಛತ್ತೀಸ್‌ಗಢ, ಹರಿಯಾಣ ಮತ್ತು ರಾಜಸ್ಥಾನದ 16 ರಿಂದ 44 ವರ್ಷದೊಳಗಿನವರನ್ನು ರಕ್ಷಣೆ ಮಾಡಲಾಗಿದೆ.

ಪ್ರಕರಣ ಸಂಬಂಧ ಕಾರ್ಖಾನೆಯ ಮಾಲೀಕ ಅಂಕಿತ್ ಬಲ್ಯಾನ್‌ನ ತಂದೆ ಪ್ರದೀಪ್ ಬಲ್ಯಾನ್ ಮತ್ತು ಅಂಕಿತ್‌ನ ಸಹವರ್ತಿ ಶಿವ ತ್ಯಾಗಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅಂಕಿತ್ ಪರಾರಿಯಾಗಿದ್ದಾನೆ. ಆತನನ್ನು ಬಂಧಿಸಲು ಹಲವು ತಂಡಗಳನ್ನು ರಚಿಸಿರುವ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.

ಆರೋಪಿಗಳ ವಿರುದ್ಧ ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯಿದೆ, 1986, ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ, 2015 ಮತ್ತು ಜೀತಪದ್ಧತಿ (ನಿರ್ಮೂಲನೆ) ಕಾಯಿದೆ, 1976ರ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.

ಖಾಯಂ ಕೆಲಸ, ಉತ್ತಮ ವೇತನ, ಉಚಿತ ವಸತಿ ಮತ್ತು ಊಟದ ಭರವಸೆ ನೀಡಿ ಅಂಕಿತ್ ಮತ್ತು ಇತರರು ರೈಲ್ವೆ ನಿಲ್ದಾಣ ಹಾಗೂ ಇತರ ಸಾರ್ವಜನಿಕ ಸ್ಥಳಗಳಿಂದ ನಮ್ಮನ್ನು ಪುಸಲಾಯಿಸಿ ಕರೆತಂದಿದ್ದರು. ಇದರಿಂದಾಗಿ ನಾವು ಕಾರ್ಖಾನೆ ಒಳಗೆ ಸಿಲುಕಿಕೊಳ್ಳುವಂತೆ ಆಯಿತು ಎಂದು ಕಾರ್ಮಿಕರು ತಿಳಿಸಿದ್ದಾರೆ.

ಕಾರ್ಖಾನೆಯ ಒಳಗಡೆ ಆರೋಪಿಗಳು ಹಿಂಸೆ, ಬೆದರಿಕೆ ಮತ್ತು ನಿಂದನೆಗಳ ಮೂಲಕ ಕಾರ್ಮಿಕರನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿದ್ದರು. ಅವರು ಆವರಣದಿಂದ ಹೊರಹೋಗದಂತೆ ತಡೆದು, ಅವರನ್ನು ಅಮಾನವೀಯ ಜೀವನ ಮತ್ತು ಕೆಲಸದ ಪರಿಸ್ಥಿತಿಗಳಿಗೆ ದೂಡಿದ್ದರು ಎಂದು ಆರೋಪಿಸಲಾಗಿದೆ.

ಆರೋಪಗಳ ಸಮಗ್ರ ತನಿಖೆ ನಡೆಸಲು ಪೊಲೀಸ್ ವರಿಷ್ಠಾಧಿಕಾರಿ ಮಹಾದಿಕ್ ಅಕ್ಷಯ್ ಸಂಜಯ್ ನೇತೃತ್ವದ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ ಎಂದು ಮುಝಫ್ಫರ್‌ನಗರ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್ ತಿಳಿಸಿದ್ದಾರೆ.

“ಫೋನ್‌ ಕಿತ್ತುಕೊಂಡಿದ್ದು, ನಮ್ಮನ್ನು ಭಯಭೀತಗೊಳಿಸಲು ಪಿಟ್‌ಬುಲ್ ನಾಯಿಗಳನ್ನು ಬಳಸಿದ್ದರು”

ಸಂಕಷ್ಟದಿಂದ ಪಾರಾದ ಬಳಿಕ ಕಾರ್ಮಿಕರು ಕಾರ್ಖಾನೆಯೊಳಗೆ ಅನುಭವಿಸಿದ ನರಕಯಾತನೆಯನ್ನು ವಿವರಿಸಿದ್ದಾರೆ. ಕಡಿಮೆ ಆಹಾರ ಕೊಡುತ್ತಿದ್ದರು. ಪ್ರತಿನಿತ್ಯ ಥಳಿಸುತ್ತಿದ್ದರು. ನಮ್ಮನ್ನು ಭಯಭೀತಗೊಳಿಸಲು ಪಿಟ್‌ಬುಲ್ ನಾಯಿಗಳನ್ನು ಬಳಸುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ.

“ಎಂಟು ಗಂಟೆಗಳ ಕೆಲಸಕ್ಕೆ ತಿಂಗಳಿಗೆ 14,000 ರೂಪಾಯಿ ಸಂಬಳ, ಉಚಿತ ಊಟ ಮತ್ತು ವಸತಿಯ ಭರವಸೆ ನೀಡಿ ಅಂಬಾಲಾದಿಂದ ನನ್ನನ್ನು ಇಲ್ಲಿಗೆ ಕರೆತಂದಿದ್ದರು” ಎಂದು ಆಗ್ರಾದ 42 ವರ್ಷದ ಸೋನು ಚೌಹಾಣ್ ದಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ. ಅವರು ಕಳೆದ ಎರಡು ತಿಂಗಳಿನಿಂದ ಈ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

“ಕಾರ್ಖಾನೆಗೆ ಕರೆತಂದ ತಕ್ಷಣ ನನ್ನ ಮೊಬೈಲ್ ಫೋನ್ ಕಿತ್ತುಕೊಂಡರು. ಕಿರುಕುಳ ಅಲ್ಲಿಂದಲೇ ಪ್ರಾರಂಭವಾಯಿತು. ನಮಗೆ ದಿನಕ್ಕೆ ಒಂದು ಹೊತ್ತು ಮಾತ್ರ ಊಟ ನೀಡುತ್ತಿದ್ದರು. ಸಾಮಾನ್ಯವಾಗಿ ಒಣ ರೊಟ್ಟಿ ಕೊಡುತ್ತಿದ್ದರು. ನಾವು ನಮ್ಮ ಕೂಲಿ ಕೇಳಿದಾಗ ಅಥವಾ ಕೆಲಸ ಬಿಡುವುದಾಗಿ ಹೇಳಿದಾಗ ದೊಣ್ಣೆಯಿಂದ ಹೊಡೆದು ನಿಂದಿಸುತ್ತಿದ್ದರು. ನಮ್ಮನ್ನು ಬಂಧಿತ ಕಾರ್ಮಿಕರಂತೆ ಕೆಲಸ ಮಾಡಲು ಒತ್ತಾಯಿಸಿದ್ದರು” ಎಂದು ಸೋನು ಚೌಹಾಣ್ ಹೇಳಿಕೊಂಡಿದ್ದಾರೆ.

“ನಮ್ಮ ಫೋನ್‌ಗಳನ್ನು ಅವರು (ಆರೋಪಿಗಳು) ಕಿತ್ತುಕೊಂಡಿದ್ದರು. ಅವರ ಬಳಿ ಕಬ್ಬಿಣದ ರಾಡ್‌ ಮತ್ತು ಭಾರವಾದ ಕೋಲುಗಳು ಸೇರಿದಂತೆ ಹಲವಾರು ವಸ್ತುಗಳಿವೆ. ಅವುಗಳಿಂದ ನಮ್ಮ ಮೇಲೆ ಹಲ್ಲೆ ಮಾಡುತ್ತಿದ್ದರು” ಎಂದು ಚೌಹಾಣ್ ಆರೋಪಿಸಿದ್ದಾರೆ.

ಕಾರ್ಖಾನೆ ಮಾಲೀಕ ಅಂಕಿತ್ ನಮ್ಮ ಮೇಲೆ ಸದಾ ಕಣ್ಗಾವಲಿಡಲು ಮತ್ತು ತಾವು ಪ್ರತಿಭಟಿಸಿದಾಗ ಅಥವಾ ಹೊರಹೋಗಲು ಯತ್ನಿಸಿದಾಗ ಹಲ್ಲೆ ನಡೆಸಲು ಶಿವ ಎಂಬಾತನನ್ನು ನೇಮಿಸಿದ್ದ ಎಂದು ಕಾರ್ಮಿಕರು ಹೇಳಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಮುಝಫ್ಫರ್‌ನಗರ ಸರ್ಕಲ್ ಆಫೀಸರ್ ವಿಶ್ವಜೀತ್ ಸಿಂಗ್ ಮಾತನಾಡಿ, ದಾಳಿಯ ಸಂದರ್ಭದಲ್ಲಿ ಕಾರ್ಖಾನೆಯೊಳಗೆ ಸರಪಳಿಯಿಂದ ಕಟ್ಟ ಹಾಕಲಾಗಿದ್ದ ಪಿಟ್‌ಬುಲ್ ನಾಯಿಯೊಂದು ಪೊಲೀಸರಿಗೆ ಪತ್ತೆಯಾಗಿದೆ ಎಂದು ಹೇಳಿದ್ದಾರೆ.

“ತಮ್ಮನ್ನು ಹೆದರಿಸಲು ಮತ್ತು ತಾವು ತಪ್ಪಿಸಿಕೊಳ್ಳದಂತೆ ತಡೆಯಲು ಈ ನಾಯಿಯನ್ನು ಬಳಸಲಾಗುತ್ತಿತ್ತು ಎಂದು ರಕ್ಷಿಸಲ್ಪಟ್ಟ ಕಾರ್ಮಿಕರು ಪೊಲೀಸರಿಗೆ ತಿಳಿಸಿದ್ದಾರೆ. ಕಾರ್ಮಿಕರನ್ನು ಕಾರ್ಖಾನೆ ಹಿಂಭಾಗದ ಎರಡು ಸಣ್ಣ ಕೋಣೆಗಳಲ್ಲಿ ಕೂಡಿಡಲಾಗುತ್ತಿತ್ತು ಮತ್ತು ನಾಯಿಯನ್ನು ಪ್ರತಿ ರಾತ್ರಿ ಕಾರ್ಖಾನೆಯ ಆವರಣದಲ್ಲಿ ಗಸ್ತು ತಿರುಗಲು ಮುಕ್ತವಾಗಿ ಬಿಡಲಾಗುತ್ತಿತ್ತು” ಎಂದು ಪೊಲೀಸರು ವಿವರಿಸಿದ್ದಾರೆ.

ಕೊಲೆ ಆರೋಪ

ಟೋಪಿ ಅಲಿಯಾಸ್ ಅರ್ಜುನ್ ಎಂಬ ನಮ್ಮ ಸಹ ಕಾರ್ಮಿಕ ಕಾರ್ಖಾನೆಯೊಳಗೆ ಹಲ್ಲೆಗೊಳಗಾಗಿ ಸಾವನ್ನಪ್ಪಿದ್ದಾನೆ ಎಂದು ಕಾರ್ಮಿಕರು ಹೇಳಿಕೆ ನೀಡಿದ ನಂತರ ಪೊಲೀಸರು ಕಾರ್ಖಾನೆ ಮಾಲೀಕ ಅಂಕಿತ್ ಮತ್ತು ಆತನ ಸಹಚರ ಶಿವ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.

“ಸುಮಾರು ಏಳು ತಿಂಗಳ ಹಿಂದೆ ತೀವ್ರವಾಗಿ ಥಳಿಸಿದ ಬಳಿಕ ಕಾರ್ಮಿಕನೊಬ್ಬ ಸಾವನ್ನಪ್ಪಿದ್ದ. ಆತನ ಶವವನ್ನು ಗೋಣಿ ಚೀಲಕ್ಕೆ ತುಂಬಿ ಹೊರಗೆ ಎಸೆದಿದ್ದೇವೆ ಎಂದು ಕಾರ್ಖಾನೆ ಮಾಲೀಕ ಅಂಕಿತ್ ನಮೆ ಹೇಳಿದ್ದಾನೆ. ಇದು ನಿಜವೋ, ಇಲ್ಲಾ ನಮ್ಮನ್ನು ಭಯಭೀತಗೊಳಿಸಲು ಹೇಳಿದ ಕಥೆಯೋ ಎಂಬುವುದು ನಮಗೆ ಗೊತ್ತಿಲ್ಲ. ಆತ ಹೇಳಿರುವುದು ಕೇಳಿ ನಮಗೆ ಭಯ ಆಗಿತ್ತು. ಹಾಗಾಗಿ, ನಾವು ಅಲ್ಲಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿರಲಿಲ್ಲ. ಅವರು ಬಂದೂಕು ಹಿಡಿದು ನಮ್ಮನ್ನು ಬೆದರಿಸುತ್ತಿದ್ದರು” ಎಂದು ಕಾರ್ಮಿಕರು ಪೊಲೀಸರು ಮುಂದೆ ಹೇಳಿಕೊಂಡಿದ್ದಾರೆ. ಈ ಹೇಳಿಕೆ ಆಧರಿಸಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದು, ತನಿಖೆ ಕೈಗೊಂಡಿದ್ದಾರೆ.

ಕಳೆದ ವರ್ಷದ ನವೆಂಬರ್‌ನಲ್ಲಿ ಗ್ರಾಮದಲ್ಲಿ ಗೋಣಿಚೀಲದಲ್ಲಿ ತುಂಬಿದ್ದ ಅಪರಿಚಿತ ವ್ಯಕ್ತಿಯ ಶವವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಸರ್ಕಲ್ ಆಫೀಸರ್ ಸಿಂಗ್ ಹೇಳಿದ್ದಾರೆ. ಆದರೆ, ಆ ಸಮಯದಲ್ಲಿ ಅವರ ಗುರುತನ್ನು ಸ್ಥಾಪಿಸಲು ಅವರಿಗೆ ಸಾಧ್ಯವಾಗಿಲ್ಲ. ಕಾನೂನು ಪ್ರಕ್ರಿಯೆಗಳ ನಂತರ ದೇಹವನ್ನು ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಟೋಪಿ ಪ್ರಕರಣದ ಬಗ್ಗೆ ಕೇಳಿದಾಗ, ತಿಟಾವಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಪ್ರಮೋದ್ ಕುಮಾರ್, ಟೋಪಿ ಮತ್ತು ಅವರ ಕುಟುಂಬವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ರಕ್ಷಿಸಲ್ಪಟ್ಟವರಲ್ಲಿ ಸಂತೋಷ್ ಹೆಂಬ್ರಾಮ್ ಎಂಬ 38 ವರ್ಷದ ವ್ಯಕ್ತಿ 10 ತಿಂಗಳಿನಿಂದ ಕಾರ್ಖಾನೆಯಲ್ಲಿದ್ದರು.

ಸಂತೋಷ್‌ ಅವರನ್ನು ಬಿಹಾರದ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದ ಸೋದರ ಮಾವ ಚೋಟ್ಟೆ ಲಾಲ್ ದಿ ಇಂಡಿಯನ್‌ ಎಕ್ಸ್‌ಪ್ರೆಸ್ ಜೊತೆ ಮಾತನಾಡಿ, “ಸಂತೋಷ್ ಕೆಲಸ ಹುಡುಕಿಕೊಂಡು ಅಂಬಾಲಕ್ಕೆ ಹೋಗಿದ್ದ. ಅಲ್ಲಿಂದ ಅಂಕಿತ್ ಉತ್ತಮ ಸಂಬಳದ ಕೆಲಸ ನೀಡುವ ಭರವಸೆಯೊಂದಿಗೆ ಮುಝಫ್ಫರ್‌ನಗರಕ್ಕೆ ಕರೆದೊಯ್ದು, ಆತನ ಕಾರ್ಖಾನೆಯಲ್ಲಿ ಬಂಧಿಸಿಟ್ಟಿದ್ದ” ಎಂದು ಹೇಳಿದ್ದಾರೆ.

“ನಾವು ಅವನನ್ನು (ಸಂತೋಷ್‌) ಹುಡುಕುತ್ತಾ ಕಳೆದ ಒಂಬತ್ತು ತಿಂಗಳುಗಳಲ್ಲಿ ಹಲವಾರು ಬಾರಿ ಅಂಬಾಲಾಕ್ಕೆ ಹೋಗಿದ್ದೆ. ಮಂಗಳವಾರ, ನನ್ನ ಸಹೋದರಿ ಸುನೀತಾ ದೇವಿ ಕರೆ ಮಾಡಿ ಸಂತೋಷ್ ಅವಳನ್ನು ಸಂಪರ್ಕಿಸಿದ್ದಾಗಿ ತಿಳಿಸಿದಳು. ಅವನನ್ನು ಮರಳಿ ಕರೆದುಕೊಂಡು ಬರುವಂತೆ ನನಗೆ ಕೇಳಿಕೊಂಡಲು. ಹಾಗಾಗಿ, ಇಲ್ಲಿಗೆ ಬಂದೆ ಎಂದು ತಿಳಿಸಿದ್ದಾರೆ.

ಸಂತೋಷ್‌ಗೆ ಕುಟುಂಬದೊಂದಿಗೆ ಮತ್ತೆ ಒಂದಾಗುವುದನ್ನು ಬಿಟ್ಟು ಸದ್ಯಕ್ಕೆ ಬೇರೇನೂ ಬಯಸಿಲ್ಲ. ಹೆಂಡತಿ, ನಾಲ್ಕು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗನಿಂದ ಆತನ ದೂರವಾಗಿದ್ದ. ನಾನೂ ಅಂಬಾಲಾದಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲೇ ನನ್ನ ಜೊತೆಗಿದ್ದ ಸಂತೋಷನನ್ನು ಕೆಲಸ ಕೊಡಿಸುವ ಭರವಸೆ ನೀಡಿ ಮುಝಫ್ಫರ್‌ನಗರಕ್ಕೆ ಕರೆದೊಯ್ದು, ಅಲ್ಲಿ ಊಹಿಸಲಾಗದಷ್ಟು ಕಷ್ಟ ಕೊಟ್ಟಿದ್ದಾರೆ ಎಂದು ನೋವು ತೋಡಿಕೊಂಡಿದ್ದಾರೆ.

ಎಲ್ಲಾ 12 ಕಾರ್ಮಿಕರ ದೇಹದಲ್ಲಿ ಗಾಯದ ಗುರುತುಗಳಿವೆ. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರು ಅನುಭವಿಸಿದ ಆಘಾತದಿಂದ ಚೇತರಿಸಿಕೊಳ್ಳಲು ಆಪ್ತ ಸಮಾಲೋಚನೆಯನ್ನೂ ನೀಡಲಾಗುತ್ತಿದೆ. ಎಲ್ಲರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದ್ದು, ಎಂಟು ಮಂದಿಯ ಸಂಬಂಧಿಕರು ಬುಧವಾರದ ವೇಳೆಗೆ ಮುಝಫ್ಫರ್‌ನಗರ ತಲುಪಿದ್ದಾರೆ. ನ್ಯಾಯಾಲಯದ ಮುಂದೆ ಹೇಳಿಕೆಯನ್ನು ದಾಖಲಿಸಿಕೊಳ್ಳುವಂತಹ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಎಲ್ಲರನ್ನು ಮನೆಗೆ ಕಳಿಸಿಕೊಡುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಮಿಕರು ಪುನರ್ವಸತಿ ನೆರವು ಮತ್ತು ಇತರ ಸರ್ಕಾರಿ ಕಲ್ಯಾಣ ಯೋಜನೆ ಪ್ರಯೋಜನಗಳನ್ನು ಪಡೆಯುವಂತೆ ಮಾಡಲು ಸಂಬಂಧಿಸಿದ ಸರ್ಕಾರಿ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಂತೋಷ್ ಅವರಂತೆಯೇ ದಿಲ್ಶಾದ್ ಕೂಡ ತಮ್ಮ ಕುಟುಂಬವನ್ನು ನೋಡುವ ಹಂಬಲ ಹೊಂದಿದ್ದಾರೆ. “ಈಗ ನಾನು ರಕ್ಷಿಸಲ್ಪಟ್ಟಿದ್ದೇನೆ, ಮನೆಗೆ ಹಿಂದಿರುಗಲು ಮತ್ತು ನನ್ನ ಜೀವನವನ್ನು ಪುನರ್ನಿರ್ಮಿಸಲು ನನಗೆ ಬೇರೇನೂ ಬೇಕಾಗಿಲ್ಲ” ಎಂದು ದಿಲ್ಶಾದ್ ಹೇಳಿದ್ದಾರೆ ಎಂದು ದಿ ಇಂಡಿಯನ್‌ ಎಕ್ಸ್‌ಪ್ರೆಸ್ ವರದಿಯಲ್ಲಿ ಉಲ್ಲೇಖಿಸಿದೆ.

Courtesy : indianexpress.com

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: 2ಲಕ್ಷ ಮತದಾರರಲ್ಲಿ ಬಸವನಗುಡಿಯಲ್ಲಿ ಉಳಿಯುವುದು 88 ಸಾವಿರ ಮಾತ್ರಾ?: SIR ಪರಿಷ್ಕರಣೆಯ ಆಘಾತಕಾರಿ ಲೆಕ್ಕಾಚಾರ

2023ರ ಚುನಾವಣೆಯಲ್ಲಿ ಬಸವನಗುಡಿಯಲ್ಲಿ 1.28 ಲಕ್ಷ ಮತಗಳು ಚಲಾಯಿಸಲ್ಪಟ್ಟಿದ್ದವು. ಆದರೆ ಪ್ರಸ್ತುತ SIR ಪ್ರಕ್ರಿಯೆಯಲ್ಲಿ 1.13 ಲಕ್ಷ ಜನರನ್ನು ಹೊರಗಿಟ್ಟು, ಕರಡು ಪಟ್ಟಿಯಲ್ಲಿ ಕೇವಲ 1.35 ಲಕ್ಷ ಮತದಾರರನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಇದರ...

ಕರ್ನಾಟಕ ಎಸ್ಐಆರ್: 43.81 ಲಕ್ಷ ಜನರಿಗೆ SIR ನೋಟಿಸ್: ಗಣ್ಯರ ಹೆಸರು ಸರಿಪಡಿಸುವ ಚುನಾವಣಾ ಆಯೋಗಕ್ಕೆ ಜನ-ಸಾಮಾನ್ಯರ ನೋವು ಕಾಣುತ್ತಿಲ್ಲವೇ?

ಕರ್ನಾಟಕದಲ್ಲಿ SIR ವೇಳೆ 43.81 ಲಕ್ಷ ಮತದಾರರ ಪ್ರಕರಣಗಳಿಗೆ ನೋಟಿಸ್‌ಗಳನ್ನು ಸೃಷ್ಟಿಸಲಾಗಿದ್ದು, ಅವರ ದಾಖಲೆಗಳ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ 23.45 ಲಕ್ಷ ಪ್ರಕರಣಗಳಲ್ಲಿ 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಆಗದಿರುವುದು...

ಪಿಣರಾಯಿ ವಿಜಯನ್ ವಿರುದ್ಧ ಎಫ್‌ಐಆರ್‌ಗೆ ಇಡಿ ಪತ್ರ: ಕಾನೂನು ಪರಿಶೀಲನೆ ನಡೆಸಲಾಗುವುದು ಎಂದ ಸಿಎಂ ವಿ.ಡಿ. ಸತೀಶನ್

ಆರೋಪಿತ ಸಿಎಂಆರ್‌ಎಲ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ(ಎಂ) ಹಿರಿಯ ನಾಯಕ ಪಿಣರಾಯಿ ವಿಜಯನ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲು ಜಾರಿ ನಿರ್ದೇಶನಾಲಯ (ಇಡಿ) ನೀಡಿರುವ ಪತ್ರವನ್ನು ಕಾನೂನುಬದ್ಧವಾಗಿ ಪರಿಶೀಲಿಸಲಾಗುವುದು, ಅದರ ನಂತರ...

‘ಸಿಇಸಿ ಜ್ಞಾನೇಶ್ ಕುಮಾರ್ ಮಗಳು’ : ನೋಯ್ಡಾ ಜಿಲ್ಲಾಧಿಕಾರಿಗೆ ಅಲಹಾಬಾದ್ ಹೈಕೋರ್ಟ್ ತಪರಾಕಿ ಬೆನ್ನಲ್ಲೇ ವಿಪಕ್ಷ ನಾಯಕರ ವಾಗ್ದಾಳಿ

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (NSA) ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದಿದ್ದಕ್ಕಾಗಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಮಗಳು ಹಾಗೂ ನೋಯ್ಡಾ ಜಿಲ್ಲಾಧಿಕಾರಿ ಮೇಧಾ ರೂಪಮ್ ಅವರನ್ನು...

ಮಲ್ಲಿಕಾರ್ಜುನ ಖರ್ಗೆ ಸಭೆಯ ನಂತರ ‘ಶುದ್ಧೀಕರಣ’ ವಿವಾದ: ಅಪರಿಚಿತರ ವಿರುದ್ಧ ಎಫ್‌ಐಆರ್, ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್!

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆ ನಡೆದ ನಂತರ, ಆ ಮೈದಾನವನ್ನು 'ಶುದ್ಧೀಕರಣ' (ಶುದ್ಧೀಕರಣ ಯಜ್ಞ) ಗೊಳಿಸಿದ ವಿವಾದಾತ್ಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ದ್ವಾನಿಯ ಕೊತ್ವಾಲಿ...

ದೆಹಲಿ ಮತದಾರರ ಪಟ್ಟಿಗೆ ರಾಘವ್ ಚಡ್ಡಾ ಹೆಸರು ಸೇರ್ಪಡೆ; ಸೂಕ್ತ ಪ್ರಕ್ರಿಯೆ ಅನುಸರಿಸಿಲ್ಲ ಎಂದು ಎಎಪಿ ಆರೋಪ

ರಾಷ್ಟ್ರ ರಾಜಧಾನಿಯ ಮತದಾರರ ಪಟ್ಟಿಯ ಪ್ರಸ್ತುತ ನಡೆಯುತ್ತಿರುವ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಅಡಿಯಲ್ಲಿ, ಪಂಜಾಬ್‌ನ ಬಿಜೆಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರನ್ನು ದೆಹಲಿಯ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಚುನಾವಣಾ...

ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ವೇದಿಕೆ ‘ಶುದ್ಧೀಕರಣ’ : 29 ದಿನಗಳ ನಂತರ ಎಫ್‌ಐಆರ್ ದಾಖಲು

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಉತ್ತರಾಖಂಡದ ಹಲ್ದ್ವಾನಿಯ ವೇದಿಕೆಯೊಂದರಲ್ಲಿ 'ಶುದ್ಧೀಕರಣ' ನಡೆದ ಇಪ್ಪತ್ತೊಂಬತ್ತು ದಿನಗಳ ನಂತರ, ಪೊಲೀಸರು ಮಂಗಳವಾರ (ಸೆಪ್ಟೆಂಬರ್ 8) ಎಸ್‌ಸಿ/ಎಸ್‌ಟಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ...

‘ಪ್ರೊ. ಸಿಎನ್ಆರ್ ರಾವ್‌ ಅವರಿಗೆ ನೋಟಿಸ್ ಕೊಟ್ಟಿಲ್ಲ..’; ಚುನಾವಣಾ ಆಯೋಗದ ಸ್ಪಷ್ಟನೆ

ಕರ್ನಾಟಕದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ವೇಳೆ ಹೆಸರಿನ ಕಾಗುಣಿತದಲ್ಲಿನ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ, ದೇಶದ ಪ್ರಸಿದ್ಧ ವಿಜ್ಞಾನಿಗಳಲ್ಲಿ ಒಬ್ಬರಾದ ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ತಮ್ಮ ಗುರುತನ್ನು ಸಾಬೀತುಪಡಿಸಲು...

‘ಬಂಗಾಳಿಗಳು ಮೀನು ಇಲ್ಲದೆ ಬದುಕಲು ಸಾಧ್ಯವಿಲ್ಲ’; ಆಹಾರ ಪದ್ಧತಿ ನಿರ್ಧಾರ ಬಿಜೆಪಿ ಕೆಲಸವಲ್ಲ: ಬಿಜೆಪಿ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ 

ಕೊಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ದುರ್ಗಾ ಪೂಜೆ ಮತ್ತು ನವರಾತ್ರಿ ಆಚರಣೆಗಳ ಸಂದರ್ಭದಲ್ಲಿ ಆಹಾರ ಪದ್ಧತಿಯ ಕುರಿತು ಕೆಲವು ಧಾರ್ಮಿಕ ನಾಯಕರು ಹಾಗೂ ವಿಶ್ವ ಹಿಂದೂ...

ಮತದಾರ ಇರುವುದು ವಿದೇಶದಲ್ಲಿ, ಆದರೆ ವಿಚಾರಣೆ ನಡೆಯುತ್ತಿರುವುದು ಇಲ್ಲಿ: ಕರ್ನಾಟಕ SIR ತಂದಿಟ್ಟ ಧರ್ಮಸಂಕಟ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದ ಅನೇಕ ಅನಿವಾಸಿ ಕನ್ನಡಿಗರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೆಸರಿನಲ್ಲಿನ ವ್ಯತ್ಯಾಸ, ವಯಸ್ಸಿನ ವ್ಯತ್ಯಾಸ...