ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡಿದ 1 ಕೋಟಿ ರೂಪಾಯಿ ದೇಣಿಗೆಗೆ ತಮ್ಮ ಪಕ್ಷ ಶಿವಸೇನೆ (ಯುಬಿಟಿ) ರಸೀದಿಯನ್ನು ಸ್ವೀಕರಿಸಿಲ್ಲ ಎಂದು ಸಂಜಯ್ ರಾವತ್ ಶುಕ್ರವಾರ (ಜೂ.26) ಹೇಳಿದ್ದಾರೆ.
ರಾಮ ಮಂದಿರದ ದೇಣಿಗೆ ಮತ್ತು ಚಿನ್ನಾಭರಣಗಳ ಹಗರಣ ಸಂಬಂಧ 8 ಜನರ ಬಂಧನವಾಗಿ, ದೇಶದಾದ್ಯಂತ ದೊಡ್ಡ ಮಟ್ಟದ ಚರ್ಚೆಯಾಗುತ್ತಿರುವ ನಡುವೆ ರಾವತ್ ಗಂಭೀರ ಆರೋಪ ಮಾಡಿದ್ದಾರೆ.
ತಮ್ಮ ಪಕ್ಷ ಟ್ರಸ್ಟ್ಗೆ ನೀಡಿದ ಬೆಳ್ಳಿ ಇಟ್ಟಿಗೆಗೆ ರಸೀದಿಯನ್ನು ಸ್ವೀಕರಿಸಲಿಲ್ಲ ಎಂದು ರಾವತ್ ಹೇಳಿದ್ದಾರೆ.
“1 ಕೋಟಿಗೆ ರಸೀದಿ ಬಂದಿಲ್ಲ, ಟ್ರಸ್ಟ್ ರಚನೆಯಾದಾಗ 1 ಕೋಟಿ ಚೆಕ್ ನೀಡಿದ್ದೆವು, 25 ಕೆಜಿಗೂ ಅಧಿಕ ತೂಕದ ಮೊದಲ ಬೆಳ್ಳಿಯ ಇಟ್ಟಿಗೆಯನ್ನೂ ನೀಡಿದ್ದೇವೆ” ಎಂದಿದ್ದಾರೆ.
ಈ ಪ್ರಕರಣದ ಎಫ್ಐಆರ್ನಲ್ಲಿ ರಾಮ್ ಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್ ಹೆಸರಿದ್ದು, ಈತ ರಾಜೀನಾಮೆ ನೀಡಿರುವ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಮಾಜಿ ಚಾಲಕ ಎಂದು ವರದಿಯಾಗಿದೆ.
ರಾಮ ಮಂದಿರದಿಂದ ದುರುಪಯೋಗಪಡಿಸಿಕೊಂಡ ಹಣವನ್ನು ಸಂಸದರು ಮತ್ತು ಶಾಸಕರನ್ನು “ಖರೀದಿ” ಮಾಡಲು ಬಳಸಲಾಗಿದೆ ಎಂದು ರಾವತ್ ಆರೋಪಿಸಿದ್ದಾರೆ.
ಚಂಪತ್ ರಾಯ್ ಮತ್ತು ಸ್ಥಳೀಯ ಬಿಜೆಪಿ ಪದಾಧಿಕಾರಿಗಳನ್ನು ರಕ್ಷಿಸಲು ಪ್ರಯತ್ನಿಸಲಾಗಿದೆ. ಅವರು ಕಡಿಮೆ ದರದಲ್ಲಿ ಭೂಮಿ ಖರೀದಿಸಿ ಹೆಚ್ಚಿನ ದರಕ್ಕೆ ಟ್ರಸ್ಟ್ಗೆ ಮಾರಾಟ ಮಾಡಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಆರೋಪಿಸಿದ್ದಾರೆ.


