ಅಹಮದಾಬಾದ್: ಗುಜರಾತ್ನ ಸೂರತ್ನ ನಾಸಿರ್ ನಗರದಲ್ಲಿ ನಡೆದ ಮನೆಗಳ ಧ್ವಂಸ ಕಾರ್ಯಾಚರಣೆಯನ್ನು ತೀವ್ರವಾಗಿ ಖಂಡಿಸಿರುವ ಗುಜರಾತ್ ಹೈಕೋರ್ಟ್, ಇದನ್ನು “ಸಂಪೂರ್ಣ ಕಾನೂನುಬಾಹಿರ” ಎಂದು ಕರೆದಿದೆ. ಮೇ 30 ರಂದು ನಡೆದ ಈ “ಅನಧಿಕೃತ” ನೆಲಸಮ ಕಾರ್ಯಾಚರಣೆಯಿಂದಾಗಿ ನಿರಾಶ್ರಿತರಾದ 100 ಕ್ಕೂ ಹೆಚ್ಚು ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವುದು ಸೂರತ್ ಮುನ್ಸಿಪಲ್ ಕಾರ್ಪೊರೇಷನ್ (ಎಸ್ಎಂಸಿ) ಕರ್ತವ್ಯವಾಗಿದೆ ಎಂದು ನ್ಯಾಯಾಲಯ ಗುರುವಾರ ಸ್ಪಷ್ಟಪಡಿಸಿದೆ. ಸಂತ್ರಸ್ತರ ಮನೆಗಳನ್ನು ಅದೇ “ಸ್ಥಳದಲ್ಲೇ” ಪುನರ್ನಿರ್ಮಿಸುವ ಮೂಲಕ ಅಥವಾ ಬೇರೆಡೆ ಪರ್ಯಾಯ ವಸತಿ ಕಲ್ಪಿಸುವ ಮೂಲಕ ಅವರಿಗೆ ಸೂಕ್ತ ಆಶ್ರಯ ನೀಡಬೇಕು ಎಂದು ಕೋರ್ಟ್ ಹೇಳಿರುವುದಾಗಿ ‘ಲೈವ್ ಲಾ’ ವರದಿ ಮಾಡಿದೆ.
ಧ್ವಂಸ ಕಾರ್ಯಾಚರಣೆಯಿಂದ ಸಂತ್ರಸ್ತರಾದ 26 ನಿವಾಸಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಿಖಿಲ್ ಎಸ್. ಕರಿಯೆಲ್ ಅವರ ಪೀಠವು ಈ ಆದೇಶ ನೀಡಿದೆ. ಸ್ಥಳಾಂತರಗೊಂಡ ಕುಟುಂಬಗಳಿಗೆ ಹೇಗೆ ಪುನರ್ವಸತಿ ಕಲ್ಪಿಸಲಾಗುವುದು ಎಂಬುದರ ಕುರಿತು ಸಿದ್ಧಪಡಿಸಿದ ಸವಿಸ್ತಾರ ಪ್ರಸ್ತಾವನೆಯನ್ನು ಜುಲೈ 9 ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಎಸ್ಎಂಸಿ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ. ಇದರೊಂದಿಗೆ, ಈ ಇಡೀ ಘಟನೆಯ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸುವ ಅಫಿಡವಿಟ್ ಸಲ್ಲಿಸುವಂತೆ ಗುಜರಾತ್ ಸರ್ಕಾರಕ್ಕೂ ನ್ಯಾಯಾಲಯ ಸೂಚಿಸಿದೆ.
ಎಸ್ಎಂಸಿ ಆಯುಕ್ತರು ಸಲ್ಲಿಸಿದ ಅಫಿಡವಿಟ್ ಅನ್ನು ಉಲ್ಲೇಖಿಸಿದ ಹೈಕೋರ್ಟ್, ಡೆವಲಪರ್ಗಳ (ಅಭಿವೃದ್ಧಿಪಡಿಸುವವರ) ಕೋರಿಕೆಯ ಮೇರೆಗೆ ಪ್ರಾರಂಭಿಸಲಾದ ಜಾಗದ ಗಡಿ ಗುರುತಿಸುವಿಕೆ (Demarcating) ಕಾರ್ಯದ ಸಮಯದಲ್ಲಿ ಈ ಕೆಡವುವಿಕೆ ನಡೆದಿದೆ ಎಂಬುದನ್ನು ಗಮನಿಸಿದೆ.
ಅಫಿಡವಿಟ್ ಪ್ರಕಾರ, ನಿಗಮದ ಕೇಂದ್ರ ವಲಯದ ಅಧಿಕಾರಿಗಳು ಪ್ರಸ್ತಾವಿತ ಗಡಿ ಗುರುತಿಸುವಿಕೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ, ಕಟ್ಟಡಗಳನ್ನು ಕೆಡವಲು ಅಧಿಕಾರ ನೀಡುವ ಯಾವುದೇ “ಮೂಲ ನಿರ್ಧಾರ ಅಥವಾ ಅಧಿಕೃತ ಆದೇಶವಿಲ್ಲದೆ” ಕೇವಲ ಪೊಲೀಸ್ ಭದ್ರತೆಯನ್ನು ಕೋರಿದ್ದರು. ಈ ಹಿನ್ನೆಲೆಯಲ್ಲಿ “ಈ ಧ್ವಂಸ ಕಾರ್ಯಾಚರಣೆಯು ಸಂಪೂರ್ಣವಾಗಿ ಕಾನೂನುಬಾಹಿರ” ಎಂದು ಆಯುಕ್ತರ ಅಫಿಡವಿಟ್ನಲ್ಲೇ ಒಪ್ಪಿಕೊಳ್ಳಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಈ ಪ್ರಕರಣದ ಪ್ರಾಥಮಿಕ ತನಿಖಾ ಸಮಿತಿಯ ವರದಿಯನ್ನು ಪರಿಶೀಲಿಸಿದ ನ್ಯಾಯಾಲಯವು, ಇದರಲ್ಲಿ ಭಾಗಿಯಾಗಿರುವ ಅಧಿಕಾರಿಗಳು “ವಿವರಗಳನ್ನು ಸತ್ಯವಾಗಿ ಬಹಿರಂಗಪಡಿಸುತ್ತಿಲ್ಲ” ಮತ್ತು ಸತ್ಯವನ್ನು ಮರೆಮಾಚುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿತು. ಹೀಗಾಗಿ ಅವರ ಪಾತ್ರಗಳ ಬಗ್ಗೆ ಹೆಚ್ಚಿನ ತನಿಖೆಯ ಅಗತ್ಯವಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಜೂನ್ 30 ರಂದು ಸಮಿತಿ ಸಲ್ಲಿಸಿದ ವರದಿಯ ಆಧಾರದ ಮೇಲೆ ಈಗಾಗಲೇ ಐದು ಪುರಸಭೆ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಎಸ್ಎಂಸಿ ಆಯುಕ್ತರು ನ್ಯಾಯಾಲಯಕ್ಕೆ ತಿಳಿಸಿದರು.
ವಿಚಾರಣೆಯ ಸಮಯದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿ ಕರಿಯೆಲ್, ಸುಮಾರು 100 ಕುಟುಂಬಗಳು ತಮ್ಮ ಆಶ್ರಯ ಕಳೆದುಕೊಂಡು ಬೀದಿಗೆ ಬಂದಿರುವಾಗ, ಕೇವಲ ಅಧಿಕಾರಿಗಳನ್ನು ಅಮಾನತುಗೊಳಿಸುವುದು ಸಾಕಾಗುತ್ತದೆಯೇ ಎಂದು ಪ್ರಶ್ನಿಸಿದರು.
“ಇದು ಯಾವುದೇ ನಿಸ್ಸಂದೇಹವಿಲ್ಲದೆ ಸಂಪೂರ್ಣ ಅಕ್ರಮ. ಸುಮಾರು 100 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಕೇವಲ ಅಮಾನತು ಮಾಡಿದರೆ ಸರಿಯೇ? ಕಾನೂನಿನ ಅಧಿಕಾರವಿಲ್ಲದೆ ವ್ಯಕ್ತಿಯ ನಿವಾಸವನ್ನು ಕೆಡವಲಾಗಿದೆ. ಆದ್ದರಿಂದ, ಈ ಪ್ರಶ್ನೆ ಕೇವಲ ನಿಗಮಕ್ಕಲ್ಲ, ನೇರವಾಗಿ ರಾಜ್ಯ ಸರ್ಕಾರಕ್ಕಿದೆ,” ಎಂದು ನ್ಯಾಯಾಧೀಶರು ಮೌಖಿಕವಾಗಿ ತರಾಟೆಗೆ ತೆಗೆದುಕೊಂಡರು.
ಮನೆಗಳನ್ನು ಕೆಡವಿ ಒಂದು ತಿಂಗಳಿಗೂ ಹೆಚ್ಚು ಸಮಯ ಕಳೆದಿದ್ದರೂ, ಅದಕ್ಕೆ ಕಾರಣರಾದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಇದುವರೆಗೆ ಯಾವುದೇ ಕ್ರಿಮಿನಲ್ ದೂರು (ಎಫ್ಐಆರ್) ದಾಖಲಾಗದಿರುವುದನ್ನು ನ್ಯಾಯಾಲಯ ಗಂಭೀರವಾಗಿ ಪ್ರಶ್ನಿಸಿತು.
ಪೊಲೀಸ್ ಇಲಾಖೆಯ ಅಫಿಡವಿಟ್ ಅನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಮೂರ್ತಿ ಕರಿಯೆಲ್, ಒಮ್ಮೆ ಪೊಲೀಸರಿಗೆ ಗಡಿ ಗುರುತಿಸುವಿಕೆಯ ಕೆಲಸವನ್ನು ಮೀರಿ ಅಲ್ಲಿ ಕಾನೂನುಬಾಹಿರವಾಗಿ ಮನೆಗಳನ್ನು ಕೆಡವಲಾಗುತ್ತಿದೆ ಎಂದು ತಿಳಿದ ಮೇಲೆಯೂ ಅವರು ನಿಷ್ಕ್ರಿಯರಾಗಿರಲು ಸಾಧ್ಯವಿಲ್ಲ ಎಂದು ಹೇಳಿದರು.
“ಅಲ್ಲಿ ಕೇವಲ ಗಡಿ ಗುರುತಿಸುವ ಕೆಲಸ ನಡೆಯಬೇಕಾಗಿದ್ದರೆ, ಅದು ಮನೆಗಳನ್ನು ಕೆಡವುವ ಹಂತಕ್ಕೆ ಹೇಗೆ ತಲುಪಿತು? ಪೊಲೀಸರು ಕ್ರಿಯಾಶೀಲರಾಗಿರಬೇಕಿತ್ತು. ಪೊಲೀಸರು ಕೇವಲ ರಕ್ಷಣಾತ್ಮಕ ಯಂತ್ರವಲ್ಲ. ಇಲ್ಲಿ ಅವರ ಕ್ರಿಯಾಶೀಲತೆ ಎಲ್ಲಿದೆ?” ಎಂದು ನ್ಯಾಯಾಧೀಶರು ಪ್ರಶ್ನಿಸಿದರು.
ಆದರೆ, ಈ ಬಗ್ಗೆ ಸಮರ್ಥನೆ ನೀಡಲು ಪ್ರಯತ್ನಿಸಿದ ಸೂರತ್ ಪೊಲೀಸ್ ಆಯುಕ್ತರು, ಸ್ಥಳದಲ್ಲಿ ಸಂಭಾವ್ಯ ಅಶಾಂತಿ ಉಂಟಾಗಬಹುದು ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಕೇವಲ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮಾತ್ರ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು ಎಂದು ತಮ್ಮ ಅಫಿಡವಿಟ್ನಲ್ಲಿ ತಿಳಿಸಿದ್ದಾರೆ.
ನಾಸಿರ್ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕ್ರಿಮಿನಲ್ ಹಿನ್ನೆಲೆ ಹೊಂದಿರುವವರು ಮತ್ತು ಈ ಹಿಂದೆ ಗುರುತಿಸಲಾದ ಬಾಂಗ್ಲಾದೇಶಿ ನುಸುಳುಕೋರರು ವಾಸಿಸುತ್ತಿದ್ದಾರೆ ಎಂದು ರಾಜ್ಯ ಸರ್ಕಾರ ಕೋರ್ಟ್ಗೆ ತಿಳಿಸಿತು. ಆದರೆ ಸರ್ಕಾರದ ಈ ವಾದವನ್ನು ತಳ್ಳಿಹಾಕಿದ ಹೈಕೋರ್ಟ್, “ಯಾವುದೇ ವ್ಯಕ್ತಿಗಳ ಹಿನ್ನೆಲೆಯನ್ನು ಕಾನೂನುಬಾಹಿರವಾಗಿ ಕಟ್ಟಡ ಅಥವಾ ನಿವಾಸಗಳನ್ನು ಕೆಡವಲು ಸಮರ್ಥನೆಯಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿತು. ಗಡಿ ಗುರುತಿಸುವಿಕೆಯ ನೆಪದಲ್ಲಿ ಅಕ್ರಮ ಕೆಡವುವಿಕೆ ಪ್ರಾರಂಭವಾದ ತಕ್ಷಣ, ಪೀಡಿತ ನಿವಾಸಿಗಳು ಸಲ್ಲಿಸಿದ ದೂರುಗಳ ಮೇಲೆ ತಕ್ಷಣ ಕ್ರಮ ಕೈಗೊಳ್ಳುವುದು ಪೊಲೀಸರ ಪ್ರಾಥಮಿಕ ಕರ್ತವ್ಯವಾಗಿತ್ತು ಎಂದು ಹೈಕೋರ್ಟ್ ನೆನಪಿಸಿತು.
ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 9 ಕ್ಕೆ ಮುಂದೂಡಲಾಗಿದೆ. ಆ ವೇಳೆಗೆ ಎಸ್ಎಂಸಿ ಆಯುಕ್ತರು ಮತ್ತು ಗುಜರಾತ್ ಸರ್ಕಾರ ಇಬ್ಬರೂ ಸ್ಥಳಾಂತರಗೊಂಡ ಕುಟುಂಬಗಳ ಪುನರ್ವಸತಿ, ಅಕ್ರಮ ಧ್ವಂಸ ಕಾರ್ಯಾಚರಣೆ ಮತ್ತು ಅದಕ್ಕೆ ಕಾರಣರಾದ ಅಧಿಕಾರಿಗಳ ಹೊಣೆಗಾರಿಕೆಯ ಕುರಿತು ಕೈಗೊಂಡ ಕ್ರಮಗಳ ವಿವರವಾದ ಅಫಿಡವಿಟ್ಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ.


