ಕೇಂದ್ರ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ವಿರುದ್ಧ ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ ಹಕ್ಕುಚ್ಯುತಿ ನೋಟಿಸ್ ನೀಡಿದೆ.
ಕಾಂಗ್ರೆಸ್ ಸಂಸದ ಕೆ. ಸಿ. ವೇಣುಗೋಪಾಲ್ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಈ ಕುರಿತು ಪತ್ರ ಬರೆದಿದ್ದು, ರಕ್ಷಣಾ ಸಚಿವರು ಸಂಸತ್ತಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
‘ಆಪರೇಷನ್ ಸಿಂಧೂರ್’ ಸೇನಾ ಕಾರ್ಯಾಚರಣೆಗೆ ಸಂಬಂಧಿಸಿದಂತೆ ರಾಜ್ನಾಥ್ ಸಿಂಗ್ ಅವರು ಕಳೆದ ವರ್ಷ ಜುಲೈ 28ರಂದು ಲೋಕಸಭೆಯಲ್ಲಿ ಹೇಳಿಕೆ ನೀಡುವಾಗ, “ನಮ್ಮ ಯಾವುದೇ ಸೈನಿಕರು ಈ ಕಾರ್ಯಾಚರಣೆಯಲ್ಲಿ ಮೃತಪಟ್ಟಿಲ್ಲ” ಎಂದು ತಿಳಿಸಿದ್ದರು.
ಇತ್ತೀಚೆಗೆ ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದ ಗೋಡೆಯ ಮೇಲೆ ಇದೇ ಕಾರ್ಯಾಚರಣೆಯಲ್ಲಿ ಸಾವಿಗೀಡಾದ ಆರು ಯೋಧರ (ಐವರು ಭೂಸೇನೆ ಹಾಗೂ ಒಬ್ಬರು ವಾಯುಪಡೆ) ಹೆಸರುಗಳನ್ನು ಕೆತ್ತಲಾಗಿದೆ.
ಸರ್ಕಾರದ ಈ ದ್ವಂದ್ವ ನಿಲುವನ್ನು ಕಟುವಾಗಿ ಟೀಕಿಸಿರುವ ಕಾಂಗ್ರೆಸ್, ಸಚಿವರು ಸದನಕ್ಕೆ ಸುಳ್ಳು ಮಾಹಿತಿ ನೀಡಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧರಿಗೆ ಮತ್ತು ಸಂಸತ್ತಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಅವರ ರಾಜೀನಾಮೆಗೆ ಆಗ್ರಹಿಸಿದೆ.
ಈ ವಿವಾದಕ್ಕೆ ಸಂಬಂಧಿಸಿದಂತೆ ರಕ್ಷಣಾ ಸಚಿವಾಲಯ ಸ್ಪಷ್ಟನೆ ನೀಡಿದ್ದು, ಅಂದು ಹರಡುತ್ತಿದ್ದ ತಪ್ಪು ವದಂತಿಗಳಿಗೆ ಕೌಂಟರ್ ನೀಡಲು ರಕ್ಷಣಾ ಸಚಿವರು ಆ ಸಂದರ್ಭಕ್ಕೆ ತಕ್ಕಂತೆ ಆ ಹೇಳಿಕೆ ನೀಡಿದ್ದರೇ ಹೊರತು, ಸಂಸತ್ತನ್ನು ದಾರಿ ತಪ್ಪಿಸುವ ಯಾವುದೇ ಉದ್ದೇಶ ಅವರಿಗಿರಲಿಲ್ಲ ಎಂದು ಹೇಳಿದೆ. ಅಲ್ಲದೆ ಯೋಧರ ತ್ಯಾಗವನ್ನು ಗೌರವಿಸಿ ನಿಯಮಾವಳಿಗಳ ಪ್ರಕಾರವೇ ಯುದ್ಧ ಸ್ಮಾರಕದಲ್ಲಿ ಹೆಸರು ಕೆತ್ತಲಾಗಿದೆ ಸಮರ್ಥಿಸಿಕೊಂಡಿದೆ.
“ಕಳೆದ ವರ್ಷದ ಜುಲೈ 28ರಂದು ಲೋಕಸಭೆಯಲ್ಲಿ ಮಾತನಾಡಿದ್ದ ರಾಜನಾಥ್ ಸಿಂಗ್, ಆಪರೇಷನ್ ಸಿಂಧೂರ್ನಲ್ಲಿ ಯಾವುದೇ ಭಾರತೀಯ ಸೈನಿಕರು ಮೃತಪಟ್ಟಿಲ್ಲ ಎಂದು ತಿಳಿಸಿದ್ದರು. ಆದರೆ, ಇತ್ತೀಚೆಗೆ ಕೇಂದ್ರ ಸರ್ಕಾರವೇ ಆ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಆರು ಯೋಧರ ಹೆಸರನ್ನು ಅಧಿಕೃತವಾಗಿ ಬಹಿರಂಗಪಡಿಸಿದೆ” ಎಂದು ವೇಣುಗೋಪಾಲ್ ತಮ್ಮ ನೋಟಿಸ್ನಲ್ಲಿ ಉಲ್ಲೇಖಿಸಿದ್ದಾರೆ.
“ಆಪರೇಷನ್ ಸಿಂಧೂರ್ ವೇಳೆ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ರಕ್ಷಣಾ ಸಚಿವರು ಸಂಸತ್ತಿನಲ್ಲಿ ಹೇಳಿದ್ದರು. ಆದರೆ, ಈಗ ಆರು ಯೋಧರು ಮೃತಪಟ್ಟಿರುವುದನ್ನು ಸರ್ಕಾರವೇ ಒಪ್ಪಿಕೊಂಡಿದೆ. ಇದರಿಂದ ಸಚಿವರು ಸಂಸತ್ತಿಗೆ ತಪ್ಪು ಮಾಹಿತಿ ನೀಡಿರುವುದು ಅಥವಾ ಮಾಹಿತಿಯನ್ನು ಮರೆಮಾಚಿರುವುದು ಸ್ಪಷ್ಟವಾಗುತ್ತದೆ” ಎಂದು ವೇಣುಗೋಪಾಲ್ ಹೇಳಿದ್ದಾರೆ.
“ಸಂಸತ್ತಿನಲ್ಲಿ ಸಚಿವರು ತಪ್ಪು ಮಾಹಿತಿ ನೀಡುವುದು ಅಥವಾ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡುವುದು ಹಕ್ಕುಚ್ಯುತಿ ಮತ್ತು ಸದನದ ಅವಮಾನಕ್ಕೆ ಸಮಾನವಾಗಿದೆ. ಆದ್ದರಿಂದ, ರಾಜನಾಥ್ ಸಿಂಗ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಅವರು ಲೋಕಸಭೆಯ ಸ್ಪೀಕರ್ ಅವರನ್ನು ಕೋರಿದ್ದಾರೆ.


