ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣದ ಹೆಜ್ಜೆ ಇಡಲು ಮುಂದಾಗಿದ್ದ ಟಾಟಾ ಪವರ್ ಕಂಪನಿಗೆ ಭಾರಿ ಹಿನ್ನಡೆಯಾಗಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (KERC) ಮುಂದೆ ರಾಜ್ಯದ 19 ಕಂದಾಯ ಜಿಲ್ಲೆಗಳಿಗೆ ಸಂಬಂಧಿಸಿದಂತೆ ತಾನು ಸಲ್ಲಿಸಿದ್ದ ‘ಸಮಾನಾಂತರ ವಿದ್ಯುತ್ ವಿತರಣಾ ಪರವಾನಗಿ’ ಅರ್ಜಿಯನ್ನು ಕಂಪನಿಯು ಶುಕ್ರವಾರ ಅಧಿಕೃತವಾಗಿ ಹಿಂಪಡೆದಿದೆ. ವಿದ್ಯುತ್ ಖಾಸಗೀಕರಣದ ವಿರುದ್ಧ ನಿರಂತರವಾಗಿ ಹೋರಾಡುತ್ತಿದ್ದ ಕೆಇಬಿ ಎಂಜಿನಿಯರ್ಸ್ ಅಸೋಸಿಯೇಷನ್, ವಿವಿಧ ಕಾರ್ಮಿಕ ಮತ್ತು ಜನಪರ ಸಂಘಟನೆಗಳಿಗೆ ಇದು ಸಿಕ್ಕ ಮಹತ್ವದ ಒಗ್ಗಟ್ಟಿನ ಗೆಲುವಾಗಿದೆ.
ಕೆಇಆರ್ಸಿ ಮೂಲಗಳ ಪ್ರಕಾರ, ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಆರಂಭವಾದ ಕಲಾಪದಲ್ಲಿ ಟಾಟಾ ಪವರ್ ಕಂಪನಿಯ ಪ್ರತಿನಿಧಿಯು ಅರ್ಜಿಯನ್ನು ಹಿಂಪಡೆಯುವ ಮನವಿ ಸಲ್ಲಿಸಿದರು. ಈ ವಿಚಾರಣೆಯ ವೇಳೆ ಅರ್ಜಿಯಲ್ಲಿ ಕೆಲವು ತಾಂತ್ರಿಕ ಲೋಪಗಳು ಇರುವುದನ್ನು ಕೆಇಆರ್ಸಿ ಅಧ್ಯಕ್ಷರು ಗಮನಿಸಿದರು. ತದನಂತರ ಅರ್ಜಿ ಹಿಂಪಡೆಯಲು ಕಂಪನಿ ಸಲ್ಲಿಸಿದ್ದ ಅಧಿಕೃತ ಮನವಿಯನ್ನು ಆಯೋಗವು ಅಂಗೀಕರಿಸಿತು.
ಟಾಟಾ ಕಂಪನಿಗೆ ವಿದ್ಯುತ್ ವಿತರಣಾ ಪರವಾನಗಿ ನೀಡದಂತೆ ರಾಜ್ಯಾದ್ಯಂತ ತೀವ್ರ ಸಾರ್ವಜನಿಕ ಆಕ್ಷೇಪ ವ್ಯಕ್ತವಾಗಿತ್ತು. ಸಿಪಿಐ(ಎಂ) ನೇತೃತ್ವದಲ್ಲಿ ಎಡಪಕ್ಷಗಳು ಬೆಂಗಳೂರಿನಲ್ಲಿ ವಿದ್ಯುತ್ ಖಾಸಗೀಕರಣ ವಿರೋಧಿಸಿ ರಾಜ್ಯ ಮಟ್ಟದ ಬೃಹತ್ ಸಮಾವೇಶವನ್ನು ನಡೆಸಿದ್ದವು. ಇದರ ಭಾಗವಾಗಿ ರಾಜ್ಯದ ಜನಸಾಮಾನ್ಯರಿಂದ ಸಾವಿರಾರು ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದು, ಇದು ಕಂಪನಿಯ ಮೇಲೆ ತೀವ್ರ ಒತ್ತಡ ಹೇರಿತ್ತು.
ಇದು ಒಗ್ಗಟ್ಟಿನ ವಿಜಯ – ಕೆಇಬಿ ಎಂಜಿನಿಯರ್ಸ್ ಅಸೋಸಿಯೇಷನ್
“ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲ ಸ್ನೇಹಿತರು, ಸಂಘಟನೆಗಳು ಹಾಗೂ ಸಾರ್ವಜನಿಕರಿಗೆ ಅಭಿನಂದನೆಗಳು. ಎಲ್ಲರ ನಿರಂತರ ಬೆಂಬಲ, ಸಮೂಹ ಪ್ರಯತ್ನ ಮತ್ತು ಐಕ್ಯತೆಯ ಫಲವಾಗಿ ಈ ಯಶಸ್ಸು ಸಾಧ್ಯವಾಗಿದೆ. ಇದು ನಮ್ಮೆಲ್ಲರ ಒಗ್ಗಟ್ಟಿನ ವಿಜಯ,” ಎಂದು ಕೆಇಬಿ ಎಂಜಿನಿಯರ್ಸ್ ಅಸೋಸಿಯೇಷನ್ ತನ್ನ ಪ್ರಕಟಣೆಯಲ್ಲಿ ಸಂತಸ ವ್ಯಕ್ತಪಡಿಸಿದೆ.
ಈ ಬೆಳವಣಿಗೆಯನ್ನು ನವ ಉದಾರವಾದಿ ನೀತಿಗಳ ವಿರುದ್ಧದ ಮಹತ್ವದ ಜಯ ಎಂದು ಹೋರಾಟಗಾರರು ಬಣ್ಣಿಸಿದ್ದಾರೆ. ಇದೇ ವೇಳೆ, ವಿದ್ಯುತ್ ಕ್ಷೇತ್ರದಲ್ಲಿ ಖಾಸಗೀಕರಣಕ್ಕೆ ಮತ್ತಷ್ಟು ಹಾದಿ ಮಾಡಿಕೊಡಲಿರುವ ‘ವಿದ್ಯುತ್ ತಿದ್ದುಪಡಿ ಮಸೂದೆ–2025’ ಅನ್ನು ಕೇಂದ್ರ ಸರ್ಕಾರವು ಸಂಸತ್ತಿನಿಂದ ಸಂಪೂರ್ಣವಾಗಿ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಈ ಗುರಿ ಈಡೇರುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಸಂಘಟನೆಗಳು ಘೋಷಿಸಿವೆ.


