ದಲಿತ ಯುವಕರ ಮೇಲೆ ಮಧ್ಯಪ್ರದೇಶದಲ್ಲಿ ನಡೆದಿರುವ ಅಮಾನವೀಯ ಕೃತ್ಯವೊಂದರ ವಿಡಿಯೋ ಇದೀಗ ನಾಗರಿಕ ಸಮಾಜವನ್ನೇ ಆಘಾತಕ್ಕೀಡು ಮಾಡಿದೆ. ನೀರಿನ ಪಂಪ್ ಮೋಟಾರ್ ಕದ್ದಿದ್ದಾರೆ ಎಂಬ ಶಂಕೆಯ ಮೇಲೆ ಇಬ್ಬರು ದಲಿತ ಯುವಕರನ್ನು ಕಂಬಕ್ಕೆ ಕಟ್ಟಿ ವಿದ್ಯುತ್ ಶಾಕ್ ನೀಡಲಾಗಿದೆ.
ಈ ಘಟನೆ ಜೂನ್ 14 ರಂದು ರೈಸೇನ್ ಜಿಲ್ಲೆಯ ಕರ್ಮೋಡಿಯಾ ಗ್ರಾಮದಲ್ಲಿ ನಡೆದಿದ್ದರೂ, ಸುಮಾರು ಒಂದು ತಿಂಗಳ ನಂತರ ಜುಲೈ 12 ರ ಶನಿವಾರ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ.
https://www.facebook.com/share/r/1MSEXF8Caf/
ಟೈಮ್ಸ್ ಆಫ್ ಇಂಡಿಯಾ ಪ್ರಕಾರ, ದಲಿತರು ಯುವಕರು ಬೈರಾಗಿ ಸಮುದಾಯದವರು. ಅವರ ಮೇಲೆ ಜಮೀನಿಗೆ ನುಗ್ಗಿ ಮೋಟಾರ್ ಪಂಪ್ ಕದ್ದ ಆರೋಪ ಹೊರಿಸಲಾಗಿದೆ.
ಯುವಕರನ್ನು ಥಳಿಸಿ, ಚಿತ್ರಹಿಂಸೆ ನೀಡಿ, ವಿದ್ಯುತ್ ಶಾಕ್ ನೀಡಲಾಗಿದೆ. ವೀಡಿಯೊದಲ್ಲಿ, ಅವರು ನೋವಿನಿಂದ ಅಳುತ್ತಿರುವುದು, ಹಿಂಸೆ ನಿಲ್ಲಿಸುವಂತೆ ಬೇಡಿಕೊಳ್ಳುತ್ತಿರುವುದು ಕಂಡುಬರುತ್ತದೆ.
ರೈಸೇನ್ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅಶುತೋಷ್ ಮಾತನಾಡಿ, “ಆರೋಪಿಗಳಿಂದ ಹಲವಾರು ಕದ್ದ ಮೋಟಾರ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಶನಿವಾರ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಕಾಣಿಸಿಕೊಂಡ ನಂತರವೇ ಶಂಕಿತರನ್ನು ಚಿತ್ರಹಿಂಸೆ ನೀಡಿ ವಿದ್ಯುತ್ ಶಾಕ್ ನೀಡಲಾಗಿದೆ ಎಂಬ ಆರೋಪಗಳು ಹೊರಬಿದ್ದವು” ಎಂದು ಹೇಳಿದ್ದಾರೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ಎಚ್ಆರ್ಸಿ) ಈ ಘಟನೆಯನ್ನು ಗಮನಕ್ಕೆ ತೆಗೆದುಕೊಂಡಿತು.


