ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು ಮಾಡಿದರೆ ಅಪರಾಧ ಎನ್ನುವ ಹೊಸ ರಾಜಕೀಯ ಗಾದೆಗೆ ನರೇಂದ್ರ ಮೋದಿಯವರೇ ಜೀವಂತ ಉದಾಹರಣೆ ಎಂದು ಅವರು ಕಟುವಾಗಿ ಟೀಕಿಸಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಮಾಧ್ಯಮ ‘ಎಕ್ಸ್’ (X) ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರಧಾನಿಯವರ ಇತ್ತೀಚಿನ ಹೇಳಿಕೆಗಳು ಹಾಗೂ ಪೋಸ್ಟ್ಗಳನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ.
ಬೆಂಕಿ ಹಚ್ಚಿದವನೇ ಬಕೆಟ್ ಹಿಡಿದಂತೆ
ನನ್ನನ್ನೂ, ನನ್ನ ತಾಯಿಯನ್ನೂ ನಿಂದಿಸಿದವರನ್ನು ಕ್ಷಮಿಸಿದ್ದೇನೆ ಎಂದು ಹೇಳುತ್ತಿರುವ ಪ್ರಧಾನಿಯವರೇ, ದಶಕಗಳ ಕಾಲ ಮಹಿಳೆಯರ ವಿರುದ್ಧ ನಡೆದ ಅವಹೇಳನಕಾರಿ ಹೇಳಿಕೆಗಳು ಹಾಗೂ ವಿರೋಧಿಗಳ ಕುಟುಂಬಗಳ ಮೇಲಿನ ನಿಂದನೆಗೆ ನೀವು ಮೌನವಾಗಿದ್ದಿರಿ. ಇಂದು ಮಾತೃಗೌರವದ ಪ್ರವಚನ ಮಾಡುತ್ತಿರುವುದು ನೋಡಿದರೆ ‘ಬೆಂಕಿ ಹಚ್ಚಿದವನೇ ಬಕೆಟ್ ಹಿಡಿದು ಅಗ್ನಿಶಾಮಕನಂತೆ ಪೋಸ್ ಕೊಟ್ಟ ಹಾಗಿದೆ ಎಂದು ಹರಿಪ್ರಸಾದ್ ಎಕ್ಸ್ನಲ್ಲಿ ಟೀಕಿಸಿದ್ದಾರೆ.
ಗಾಂಧಿ ಕುಟುಂಬದ ತ್ಯಾಗ ಮತ್ತು ಕರುಣೆಯನ್ನು ನೆನಪಿಸಿದ ಹರಿಪ್ರಸಾದ್, ಅಜ್ಜಿ ಇಂದಿರಾ ಗಾಂಧಿಯವರ ದೇಹವನ್ನು ಗುಂಡುಗಳಿಂದ ಛಿದ್ರಗೊಳಿಸಿದ ಹತ್ಯೆಯ ನೋವು ಹಾಗೂ ತಂದೆ ರಾಜೀವ್ ಗಾಂಧಿಯವರ ದೇಹವನ್ನೇ ಛಿದ್ರಗೊಳಿಸಿದ ಭೀಕರ ನೋವನ್ನು ಅನುಭವಿಸಿದ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು, ‘ನನಗೆ ಯಾರ ಮೇಲೂ ಕೋಪ ಅಥವಾ ದ್ವೇಷವಿಲ್ಲ ನಾನು ಕ್ಷಮಿಸಿದ್ದೇನೆ’ ಎಂದು ಬಹಿರಂಗವಾಗಿ ಹೇಳಿದ್ದಾರೆ. ಇನ್ನು ತಂದೆಯ ಹಂತಕಿಯನ್ನೇ ಜೈಲಿನಲ್ಲಿ ಭೇಟಿಯಾದ ಪ್ರಿಯಾಂಕಾ ಗಾಂಧಿ ಅವರು ಪ್ರತೀಕಾರಕ್ಕಿಂತ ಮಾನವೀಯತೆಯನ್ನು ಆರಿಸಿಕೊಂಡರು. ಅದು ಕ್ಯಾಮೆರಾ ಮುಂದೆ ನಿರ್ಮಿಸಿದ ‘ರೀಲ್’ ಅಲ್ಲ, ತಮ್ಮ ಬದುಕನ್ನೇ ಛಿದ್ರಗೊಳಿಸಿದ ದುರಂತದ ನಡುವೆಯೂ ದ್ವೇಷವನ್ನು ನಿರಾಕರಿಸಿದ ನೈಜ ಸಂಸ್ಕಾರ ಎಂದು ತಿಳಿಸಿದ್ದಾರೆ.
ಅಂದು ಮಹಿಳೆಯರ ನಿಂದನೆಯಾದಾಗ ಆತ್ಮಸಾಕ್ಷಿ ಎಲ್ಲಿತ್ತು?
ಪ್ರಧಾನಿ ಮೋದಿಯವರ ಹಳೆಯ ಹೇಳಿಕೆಗಳನ್ನು ನೆನಪಿಸಿ ಪ್ರಶ್ನಿಸಿರುವ ಅವರು:
- ಸೋನಿಯಾ ಗಾಂಧಿಯವರನ್ನು ‘ಜರ್ಸಿ ಹಸು’ ಎಂದು ನಿಂದಿಸಿದಾಗ ನಿಮ್ಮ ಆತ್ಮಸಾಕ್ಷಿ ಎಲ್ಲಿತ್ತು?
- ತುಂಬಿದ ಸಂಸತ್ತಿನಲ್ಲಿ ಸಂಸದೆ ರೇಣುಕಾ ಚೌಧರಿಯವರ ನಗುವನ್ನು ‘ಶೂರ್ಪನಖಿ’ ಪಾತ್ರದ ನಗುವಿಗೆ ಹೋಲಿಸಿ ಇಡೀ ಸದನವನ್ನು ನಗಿಸಿದಾಗ ಮಹಿಳೆಯ ಗೌರವ ನೆನಪಾಗಲಿಲ್ಲವೇ?
- ಸುನಂದಾ ಪುಷ್ಕರ್ ಅವರನ್ನು ‘50 ಕೋಟಿ ರೂ. ಗರ್ಲ್ಫ್ರೆಂಡ್’ ಎಂದು ಸಾರ್ವಜನಿಕ ಸಭೆಯಲ್ಲಿ ಹೀಯಾಳಿಸಿದಾಗ ತಾಯಿ, ಸಹೋದರಿ, ಮಹಿಳಾ ಮರ್ಯಾದೆಯ ಪ್ರವಚನಗಳು ಯಾವ ಗುಹೆಯಲ್ಲಿ ತಪಸ್ಸು ಮಾಡುತ್ತಿದ್ದವು ಪ್ರಧಾನಿಗಳೇ? ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.
ಟ್ರೋಲ್ ಪಟಾಲಂಗೆ ಎಂದಾದರೂ ಕಿವಿಮಾತು ಹೇಳಿದ್ದೀರಾ?
2014ರ ನಂತರ ನಿಮ್ಮ ಹೆಸರಿನಲ್ಲಿ ಬೆಳೆದ ಸಾಮಾಜಿಕ ಜಾಲತಾಣದ ಅಂಧಭಕ್ತ ಪಡೆ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ವಿರೋಧ ಪಕ್ಷದ ನಾಯಕರ ತಾಯಿ, ಪತ್ನಿ ಮತ್ತು ಮಕ್ಕಳ ಚಿತ್ರಗಳನ್ನು ಮಾರ್ಫ್ ಮಾಡಿ, ಅತ್ಯಂತ ಕೀಳು ಭಾಷೆಯಲ್ಲಿ ನಿಂದಿಸುತ್ತಲೇ ಬಂದಿದೆ. ಆ ವಿಕೃತಿಗಳಿಗೆ ಎಂದಾದರೂ ಒಂದು ಕಿವಿಮಾತು ಹೇಳಿದ್ದೀರಾ? ‘ಮಹಿಳೆಯರನ್ನು ನಿಂದಿಸಬೇಡಿ’ ಎಂದು ನಿಮ್ಮ ಬೆಂಬಲಿಗರಿಗೆ ಎಂದಾದರೂ ಒಂದೇ ಒಂದು ವಿಡಿಯೊ/ರೀಲ್ ಮಾಡಿದ್ದೀರಾ? ಎಂದು ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ತಾಯಿಯ ಹೆಸರನ್ನು ರಾಜಕೀಯ ಮೈಲೇಜ್ಗೆ ಬಳಸುವುದು ನಿರ್ದಯ ವ್ಯಾಪಾರ
“ನೋಟು ಅಮಾನ್ಯೀಕರಣದ ಸಂಕಷ್ಟದ ಸಮಯದಲ್ಲಿ ಬ್ಯಾಂಕಿನ ಸಾಲಿನಲ್ಲಿ ನಿಂತಿದ್ದ ನಿಮ್ಮ ವಯೋವೃದ್ಧ ತಾಯಿಯ ಚಿತ್ರವೂ ರಾಜಕೀಯ ಪ್ರಚಾರದ ಸರಕಾಯಿತು. ಈಗ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಲಾಗದೆ, ಅವರ ಮೇಲಿನ ಲಾಠಿಪ್ರಹಾರ, ಬಂಧನ, ಪ್ರಕರಣ ಮತ್ತು ಶಿಕ್ಷಣ ವ್ಯವಸ್ಥೆಯ ವೈಫಲ್ಯದಿಂದ ಸಾರ್ವಜನಿಕರ ಗಮನ ಬೇರೆಡೆ ಸೆಳೆಯಲು ಮತ್ತೆ ತಾಯಿಯ ಹೆಸರನ್ನೇ ಭಾವನಾತ್ಮಕ ಗುರಾಣಿಯನ್ನಾಗಿ ಬಳಸುತ್ತಿದ್ದೀರಿ. ತಾಯಿಯ ಮೇಲಿನ ಪ್ರೀತಿ ಪವಿತ್ರವಾದದ್ದು, ಆದರೆ ತಾಯಿಯ ಹೆಸರನ್ನು ಪ್ರತಿಯೊಂದು ರಾಜಕೀಯ ಸಂಕಷ್ಟದಲ್ಲೂ ಮತಗಳ ಮೈಲೇಜ್ಗಾಗಿ ಬಳಸುವುದು ಪ್ರೀತಿಯಲ್ಲ, ಅದು ಅತ್ಯಂತ ನಿರ್ದಯವಾದ ರಾಜಕೀಯ ವ್ಯಾಪಾರ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳ ಬಳಿ ಕ್ಷಮೆ ಕೇಳಿ
ವಿದ್ಯಾರ್ಥಿಗಳ ಭವಿಷ್ಯವನ್ನೇ ನಾಶ ಮಾಡಿರುವ ಬಿಜೆಪಿ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಕ್ಷಮೆಯ ಅಗತ್ಯವೂ ಇಲ್ಲ, ಅನಿವಾರ್ಯತೆಯೂ ಇಲ್ಲ. ನಿಮ್ಮ ನಾಟಕೀಯತೆಯನ್ನು ಯುವಜನತೆ ಈಗಾಗಲೇ ತಿರಸ್ಕರಿಸಿದ್ದಾರೆ. ಕೂಡಲೇ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲಿನ ಪ್ರಕರಣಗಳನ್ನು ಹಿಂಪಡೆಯಿರಿ, ಪೊಲೀಸರ ದೌರ್ಜನ್ಯಕ್ಕೆ ಹೊಣೆ ಹೊತ್ತುಕೊಂಡು ದೇಶದ ವಿದ್ಯಾರ್ಥಿಗಳ ಎದುರು ಕ್ಷಮೆ ಕೇಳಿ ಎಂದು ಆಗ್ರಹಿಸಿದ್ದಾರೆ.
ಕ್ಯಾಮೆರಾ ಮುಂದೆ ಕಣ್ಣೀರು ಸುರಿಸುವುದು ಕ್ಷಮೆಯಲ್ಲ, ಅಧಿಕಾರದ ಕ್ರೌರ್ಯವನ್ನು ನಿಲ್ಲಿಸುವುದೇ ನಿಜವಾದ ಕ್ಷಮೆ. ತನ್ನ ನಾಲಿಗೆಯಿಂದ ಮಹಿಳೆಯರನ್ನು ಅವಮಾನಿಸಿ, ತನ್ನ ಬೆಂಬಲಿಗರ ನಾಲಿಗೆಯ ವಿಷಕ್ಕೆ ಮೌನವಾಗಿದ್ದು, ಈಗ ಮಾತೃಭಕ್ತಿಯ ಮುಖವಾಡ ಧರಿಸುವ ಈ ಭಂಡತನವನ್ನು ದೇಶ ಗುರುತಿಸಿದೆ. ನಿಮ್ಮ ರೀಲ್ಗಳಿಗೆ ನಿಮ್ಮ ಅಂಧಭಕ್ತರು ಮೆಚ್ಚುಗೆ ಸೂಚಿಸಬಹುದು, ಆದರೆ ಇತಿಹಾಸ ಮಾತ್ರ ನಿಮ್ಮನ್ನು ಕ್ಷಮಿಸುವುದಿಲ್ಲ ಎಂದು ಬಿ.ಕೆ. ಹರಿಪ್ರಸಾದ್ ತಮ್ಮ ಪೋಸ್ಟ್ ಮುಕ್ತಾಯಗೊಳಿಸಿದ್ದಾರೆ.


