ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ ‘ಈಸ್ಟರ್ ಸಂಡೇ’ ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ ಮಾಜಿ ಅಧಿಕಾರಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ.
ಪೊಲೀಸ್ ಮಾಜಿ ಮುಖ್ಯಸ್ಥ ಪೂಜಿತ್ ಜಯಸುಂದರ ಮತ್ತು ರಕ್ಷಣಾ ಸಚಿವಾಲಯದ ಮಾಜಿ ಕಾರ್ಯದರ್ಶಿ ಹೇಮಸಿರಿ ಫೆರ್ನಾಂಡೋ ಅವರಿಗೆ ಮೂವರು ಸದಸ್ಯರ ಹೈಕೋರ್ಟ್ ಪೀಠವು ಶುಕ್ರವಾರ 2-1ರ ಬಹುಮತದ ತೀರ್ಪಿನಲ್ಲಿ ಮರಣದಂಡನೆ ಘೋಷಿಸಿದೆ.
2022ರಲ್ಲಿ ಇಬ್ಬರನ್ನೂ ಖುಲಾಸೆಗೊಳಿಸಿದ್ದ ಕೆಳ ನ್ಯಾಯಾಲಯದ ತೀರ್ಪಿನ ವಿರುದ್ಧ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ವಿಶೇಷ ತ್ವರಿತ ನ್ಯಾಯಾಲಯ ಮರಣದಂಡನೆ ವಿಧಿಸಿ ಮಹತ್ವದ ತೀರ್ಪಿತ್ತಿದೆ.
2019ರಲ್ಲಿ ಮೂರು ಪ್ರವಾಸಿ ಹೋಟೆಲ್ಗಳು ಮತ್ತು ಮೂರು ಚರ್ಚ್ಗಳಲ್ಲಿ (ಎರಡು ಕ್ಯಾಥೊಲಿಕ್ ಮತ್ತು ಒಂದು ಪ್ರೊಟೆಸ್ಟಂಟ್) ಸರಣಿ ಬಾಂಬ್ ಸ್ಪೋಟ ನಡೆದಿತ್ತು. ಈ ದಾಳಿಯ ಬಗ್ಗೆ ಪದೇ ಪದೇ ಬಂದಿದ್ದ ಗುಪ್ತಚರ ಎಚ್ಚರಿಕೆಯ ಮೇರೆಗೆ ಕ್ರಮಕೈಗೊಳ್ಳಲು ಪೊಲೀಸ್ ಮತ್ತು ಗುಪ್ತಚರ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಸಂಸದೀಯ ಸಮಿತಿಯೊಂದು ಪತ್ತೆಹಚ್ಚಿತ್ತು.
ಮರಣದಂಡನೆ ಘೋಷಿಸಲ್ಪಟ್ಟ ಇಬ್ಬರು ಅಪರಾಧಿಗಳ ಪರ ವಕೀಲ ಚಮಿಂಡ ಅತುಕೋರಲೆ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿ, ಎರಡು ವಾರಗಳ ಒಳಗೆ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
“ಆರೋಪಿಗಳಿಬ್ಬರಿಗೂ ಕೊಲೆ ಮಾಡುವ ಯಾವುದೇ ಉದ್ದೇಶವಿರಲಿಲ್ಲ ಮತ್ತು ಬಾಂಬ್ ಸ್ಫೋಟದ ನಿಜವಾದ ಅಪರಾಧಿಗಳೊಂದಿಗೆ ಯಾವುದೇ ಸಂಪರ್ಕವಿರಲಿಲ್ಲ ಎಂದು ಒಬ್ಬರು ನ್ಯಾಯಾಧೀಶರ ಭಿನ್ನಾಭಿಪ್ರಾಯದ ತೀರ್ಪು ಹೇಳಿದೆ” ಎಂದು ವಕೀಲ ಅತುಕೋರಲೆ ಅವರು ಎಎಫ್ಪಿ ಸುದ್ದಿ ಸಂಸ್ಥೆ ಜೊತೆ ಮಾತನಾಡುವಾಗ ಹೇಳಿದ್ದಾರೆ.
ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ, ಭಾರತೀಯ ಗುಪ್ತಚರ ಸಂಸ್ಥೆಯು 2019ರ ಏಪ್ರಿಲ್ 4ರಂದೇ ಸಂಭಾವ್ಯ ಸರಣಿ ಆತ್ಮಹತ್ಯಾ ದಾಳಿಯ ಬಗ್ಗೆ ಶ್ರೀಲಂಕಾಕ್ಕೆ ಮುನ್ನೆಚ್ಚರಿಕೆ ನೀಡಿತ್ತು, ಆದರೆ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಲು ವಿಫಲರಾಗಿದ್ದರು ಎಂದು ತಿಳಿಸಲಾಗಿದೆ.
ಪ್ರಸ್ತುತ ಪ್ರಕರಣದ ತೀರ್ಪಿಗೂ ಮುನ್ನ ಮತ್ತೊಂದು ಸಿವಿಲ್ ಮೊಕದ್ದಮೆಯಲ್ಲಿ ಇಬ್ಬರು ಅಪರಾಧಿಗಳಾದ ಫೆರ್ನಾಂಡೋ ಮತ್ತು ಜಯಸುಂದರ ಅವರು ದಾಳಿಯಲ್ಲಿ ಬದುಕುಳಿದವರಿಗೆ 123 ಮಿಲಿಯನ್ ರೂಪಾಯಿಗಳನ್ನು (372,464 ಡಾಲರ್) ಪರಿಹಾರ ಪಾವತಿಸಲು ಆದೇಶಿಸಲಾಗಿತ್ತು.
ಈಸ್ಟರ್ ಭಾನುವಾರದ ಆತ್ಮಹತ್ಯಾ ಬಾಂಬ್ ದಾಳಿಗಳನ್ನು ನಡೆಸಿದ ಆರೋಪವನ್ನು ಶ್ರೀಲಂಕಾ ಮೂಲದ, ಐಸಿಸ್ (ಐಎಸ್ಐಎಲ್) ಪ್ರೇರಿತ ಎರಡು ಗುಂಪುಗಳ ಮೇಲೆ ಹೊರಿಸಲಾಗಿತ್ತು. ಈ ದಾಳಿಗಳಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ನಂಬಲಾದವರಲ್ಲಿ ಯಾರೊಬ್ಬರೂ ಈಗ ಬದುಕಿಲ್ಲ. ಅಪರಾಧಿಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎನ್ನಲಾದ ಇತರ ವ್ಯಕ್ತಿಗಳ ವಿರುದ್ಧ ಪ್ರತ್ಯೇಕ ವಿಚಾರಣೆಗಳು ನಡೆಯುತ್ತಿವೆ.
ಈ ದಾಳಿಗಳಲ್ಲಿ 45 ವಿದೇಶಿಯರು ಸೇರಿದಂತೆ ಒಟ್ಟು 279 ಜನರು ಸಾವನ್ನಪ್ಪಿದ್ದರು ಮತ್ತು 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದುವರೆಗೆ ಅಪರಾಧಿಗಳೆಂದು ಗುರುತಿಸಲ್ಪಟ್ಟವರು ಬಾಂಬ್ ಸ್ಫೋಟಗಳ ಹಿಂದಿನ ನಿಜವಾದ ಸಂಚುಕೋರರಲ್ಲ (ಮಾಸ್ಟರ್ಮೈಂಡ್ಗಳು) ಮತ್ತು ಈ ದಾಳಿಗಳ ಹಿಂದೆ ಇನ್ನೂ ದೊಡ್ಡ ಪಿತೂರಿ ಅಡಗಿದೆ ಎಂದು ಶ್ರೀಲಂಕಾದ ಕ್ಯಾಥೊಲಿಕ್ ಚರ್ಚ್ ಪ್ರತಿಪಾದಿಸಿದೆ.
ಶ್ರೀಲಂಕಾದಲ್ಲಿ ಮರಣದಂಡನೆ ಎಂದರೆ ಸಾಮಾನ್ಯವಾಗಿ ಜೀವಾವಧಿ ಶಿಕ್ಷೆ ಎಂದರ್ಥ, ಏಕೆಂದರೆ ದೇಶವು 1976ರಲ್ಲಿ ಮರಣದಂಡನೆ ಜಾರಿಗೆ ತಡೆ (ಮೊರಟೋರಿಯಂ) ನೀಡಿದೆ. ಪ್ರಸ್ತುತ ಅಧ್ಯಕ್ಷ ಅನುರ ಕುಮಾರ ದಿಸ್ಸಾನಾಯಕ ಅವರು ಈ ತಡೆಯನ್ನು ಮುಂದುವರಿಸುವುದನ್ನು ಹೇಳಿದ್ದಾರೆ. ಫೆಬ್ರವರಿಯಲ್ಲಿ ಸಂಸತ್ತಿನೊಂದಿಗೆ ಹಂಚಿಕೊಳ್ಳಲಾದ ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಕನಿಷ್ಠ 800 ಜನರು ಮರಣದಂಡನೆ ಶಿಕ್ಷೆ ಎದುರಿಸುತ್ತಿದ್ದು, ಅವರ ಶಿಕ್ಷೆಯನ್ನು ಸಾಮಾನ್ಯವಾಗಿ ಜೀವಾವಧಿ ಜೈಲು ಶಿಕ್ಷೆಯಾಗಿ ಪರಿವರ್ತಿಸಲಾಗುತ್ತದೆ.
ಸರಣಿ ಆತ್ಮಹತ್ಯಾ ಬಾಂಬ್ ದಾಳಿಗಳನ್ನು ಶ್ರೀಲಂಕಾ ಮೂಲದ ‘ನ್ಯಾಷನಲ್ ತೌಹೀದ್ ಜಮಾತ್’ (ಎನ್ಟಿಜೆ) ಮತ್ತು ‘ಜಾಮಿಅತುಲ್ ಮಿಲ್ಲಾತು ಇಬ್ರಾಹಿಂ’ ಎಂಬ ಎರಡು ಸ್ಥಳೀಯ ಉಗ್ರಗಾಮಿ ಗುಂಪುಗಳು ನಡೆಸಿದ್ದವು ಎಂದು ವರದಿಗಳು ಹೇಳುತ್ತವೆ.
ಈ ಗುಂಪುಗಳು ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯಾದ ಐಸಿಸ್ (ISIL/ISIS) ನಿಂದ ಪ್ರೇರಿತವಾಗಿದ್ದವು ಮತ್ತು ಐಸಿಸ್ ಕೂಡ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿತ್ತು. ದಾಳಿ ನಡೆಸಿದ ಒಂಬತ್ತು ಜನ ಆತ್ಮಹತ್ಯಾ ಬಾಂಬರ್ಗಳೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ದಾಳಿಯನ್ನು ಭಯೋತ್ಪಾದಕ ಗುಂಪು ನಡೆಸಿದರೂ, ಇದರ ಹಿಂದೆ ಶ್ರೀಲಂಕಾದ ಆಗಿನ ಪ್ರಭಾವಿ ರಾಜಕಾರಣಿಗಳು ಮತ್ತು ಗುಪ್ತಚರ ಇಲಾಖೆಯ ಉನ್ನತ ಅಧಿಕಾರಿಗಳ ದೊಡ್ಡ ಸಂಚು ಅಡಗಿತ್ತು ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಬ್ರಿಟನ್ನ ‘ಚಾನೆಲ್ 4’ ವಾಹಿನಿಯು ಬಿಡುಗಡೆ ಮಾಡಿದ ಸಾಕ್ಷ್ಯಚಿತ್ರದಲ್ಲಿ, ಆಗಿನ ರಾಜಪಕ್ಷ ಕುಟುಂಬವನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರೀಲಂಕಾದ ಮಿಲಿಟರಿ ಗುಪ್ತಚರ ಇಲಾಖೆಯೇ ಉಗ್ರರನ್ನು ಬಳಸಿಕೊಂಡು ದಾಳಿ ನಡೆಸಿತ್ತು ಎಂದು ಆರೋಪಿಸಲಾಗಿದೆ.
ತನಿಖೆಯ ಭಾಗವಾಗಿ ಶ್ರೀಲಂಕಾದ ಮಾಜಿ ಮಿಲಿಟರಿ ಗುಪ್ತಚರ ಮುಖ್ಯಸ್ಥ ಮೇಜರ್ ಜನರಲ್ ಸುರೇಶ್ ಸಲ್ಲೆ ಅವರನ್ನು ಬಂಧಿಸಲಾಗಿದ್ದು, ಅವರು ಉಗ್ರರೊಂದಿಗೆ ಪಿತೂರಿ ನಡೆಸಿ ದಾಳಿಗೆ ನಿರ್ದೇಶನ ನೀಡಿದ್ದರು ಎಂದು ಅಲ್ಲಿನ ಸಚಿವರು ಸಂಸತ್ತಿನಲ್ಲಿ ಅಧಿಕೃತವಾಗಿ ತಿಳಿಸಿದ್ದಾರೆ.
ಶ್ರೀಲಂಕಾದ ಕ್ಯಾಥೊಲಿಕ್ ಚರ್ಚ್ ಕೂಡ, “ಈಗ ಸಿಕ್ಕಿಬಿದ್ದಿರುವ ಉಗ್ರರು ಕೇವಲ ದಾಳಿ ನಡೆಸಿದ ದಾಳಾಳುಗಳಷ್ಟೇ, ಆದರೆ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯಲು ಇದರ ಹಿಂದೆ ಮಾಸ್ಟರ್ಮೈಂಡ್ಗಳಾಗಿ ಕೆಲಸ ಮಾಡಿದ ದೊಡ್ಡ ರಾಜಕೀಯ ಶಕ್ತಿಗಳು ಬೇರೆಯೇ ಇವೆ” ಎಂದು ನಿರಂತರವಾಗಿ ವಾದಿಸುತ್ತಾ ಬಂದಿದೆ.
ಈ ದಾಳಿಯ ನಂತರ ಶ್ರೀಲಂಕಾದಾದ್ಯಂತ ಇದ್ದ ಸಾಮಾನ್ಯ ಮುಸ್ಲಿಂ ಸಮುದಾಯವು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು.
ಶ್ರೀಲಂಕಾದ ಮುಸ್ಲಿಂ ಮುಖಂಡರು ಮತ್ತು ನಾಗರಿಕರು ಈ ಭೀಕರ ದಾಳಿಯನ್ನು ತೀವ್ರವಾಗಿ ಖಂಡಿಸಿದರಾದರೂ, ಸಿಂಹಳೀಯ ತೀವ್ರಗಾಮಿಗಳು ಇಡೀ ಮುಸ್ಲಿಂ ಸಮುದಾಯವನ್ನು ಅನುಮಾನದಿಂದ ನೋಡಲು ಪ್ರಾರಂಭಿಸಿದರು.
ದೇಶದ ಹಲವೆಡೆ ಮುಸ್ಲಿಮರ ಮನೆಗಳು, ಮಸೀದಿಗಳು ಮತ್ತು ಅಂಗಡಿಗಳ ಮೇಲೆ ಹಿಂಸಾತ್ಮಕ ದಾಳಿಗಳು ಹಾಗೂ ದೊಂಬೆಗಳು ನಡೆದಿದ್ದವು.


